Indian Railways: ಬೆಂಗಳೂರು, ಮೈಸೂರು, ಶಿವಮೊಗ್ಗ, ಅರಸೀಕೆರೆ ರೈಲುಗಳ ಸಂಚಾರ ಸಮಯದಲ್ಲಿ 4 ದಿನಗಳ ಕಾಲ ವ್ಯತ್ಯಯ
Indian Railways: ರೈಲ್ವೆ ನಿರ್ವಹಣೆ ಕಾರ್ಯ ಇರುವುದರಿಂದ ಬೆಂಗಳೂರು, ಮೈಸೂರು, ಶಿವಮೊಗ್ಗ ಸಹಿತ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ.

ಬೆಂಗಳೂರು: ನೈರುತ್ಯ ರೈಲ್ವೆ ವಲಯದ ವಿವಿಧ ಭಾಗಗಳಲ್ಲಿ ರೈಲ್ವೆ ಕಾಮಗಾರಿಗಳು ನಡೆಯುತ್ತಿರುವುದರಿಂದ ನಾಲ್ಕು ದಿನಗಳ ಮಟ್ಟಿಗೆ ಕೆಲವು ರೈಲುಗಳ ಸಂಚಾರ ಸಮಯದಲ್ಲಿ ವ್ಯತ್ಯಯವಾಗಲಿದೆ. ಬೆಂಗಳೂರು, ಮೈಸೂರು, ಶಿವಮೊಗ್ಗ, ಅರಸೀಕೆರೆ ಸೇರಿದಂತೆ ನಾನಾ ಭಾಗಗಳಿಂದ ಬಂದು ಹೋಗುವ ರೈಲುಗಳ ಸಮಯದಲ್ಲಿ ಕೊಂಚ ಹೆಚ್ಚು ಕಡಿಮೆ ಆಗಲಿದೆ. ಜನವರಿ 26 ರಿಂದ ನಾಲ್ಕು ದಿನಗಳ ಅವಧಿಯಲ್ಲಿ ಈ ಬದಲಾವಣೆಯಾಗಲಿದೆ ಎಂದು ನೈರುತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಂಜುನಾಥ ಕನಮಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಂಚಾರ ಸಮಯದಲ್ಲಿ ಬದಲಾವಣೆ ಆಗಲಿರುವ ಕೆಲವು ರೈಲುಗಳ ಮಾಹಿತಿ ಇಲ್ಲಿ ನೀಡಲಾಗಿದೆ.
I. ಉಧ್ನಾ ನಿಲ್ದಾಣದಲ್ಲಿ ಹಮ್ಸಫರ್ ಎಕ್ಸ್ ಪ್ರೆಸ್ ರೈಲಿನ ಸಮಯ ಪರಿಷ್ಕರಣೆ
ಸೂರತ್ ನಿಲ್ದಾಣ ಅಭಿವೃದ್ಧಿ ಕಾರ್ಯ-ಹಂತ 2 (ಪ್ಲಾಟ್ ಫಾರ್ಮ್ 02 ಮತ್ತು 03ರ ಬ್ಲಾಕ್) ಗೆ ಸಂಬಂಧಿಸಿದಂತೆ ಏರ್ ಕಾನ್ಕೋರ್ಸ್ ಕಾಮಗಾರಿದಿಂದಾಗಿ ಉದ್ನಾ ಜಂಕ್ಷನ್ ನಲ್ಲಿ ರೈಲು ಸಂಖ್ಯೆ 19668 ಮೈಸೂರು-ಉದಯಪುರ ಸಿಟಿ ಸಾಪ್ತಾಹಿಕ ಹಮ್ಸಫರ್ ಎಕ್ಸ್ ಪ್ರೆಸ್ ರೈಲಿನ ಆಗಮನ, ನಿರ್ಗಮನ ಸಮಯವನ್ನು ಪಶ್ಚಿಮ ರೈಲ್ವೆಯು ಪರಿಷ್ಕರಿಸಿದೆ.
ತಕ್ಷಣದಿಂದ ಜಾರಿಗೆ ಬರುವಂತೆ, ಈ ರೈಲು ಉಧ್ನಾ ಜಂಕ್ಷನ್ಗೆ 15:23 ಗಂಟೆಯ ಬದಲು 15:13 ಗಂಟೆಗೆ ಆಗಮಿಸಿ, 15:28 ಗಂಟೆಯ ಬದಲಾಗಿ 15:18 ಗಂಟೆಗೆ ಹೊರಡಲಿದೆ.
ರೈಲುಗಳ ಸಂಚಾರ ಭಾಗಶಃ ರದ್ದು / ನಿಯಂತ್ರಣ
ಕೃಷ್ಣರಾಜನಗರ ನಿಲ್ದಾಣದ ರಸ್ತೆ ಸಂಖ್ಯೆ 2ರ ಎರಡೂ ಬದಿಗಳಲ್ಲಿ ಟ್ರ್ಯಾಕ್ ಮೆಷಿನ್ ಸೈಡಿಂಗ್ ಅನ್ನು ನಿಯೋಜಿಸಲು ಎಂಜಿನಿಯರಿಂಗ್ ಕಾಮಗಾರಿ ಕೈಗೊಳ್ಳುವ ಸಲುವಾಗಿ, ಈ ಕೆಳಗಿನ ರೈಲುಗಳ ಸಂಚಾರದಲ್ಲಿ ಬದಲಾವಣೆಗಳನ್ನು ಮಾಡಲಾಗುತ್ತಿದೆ:
ರೈಲುಗಳ ಸಂಚಾರ ಭಾಗಶಃ ರದ್ದು
1. ಜನವರಿ 28 ರಂದು ರೈಲು ಸಂಖ್ಯೆ 56267 ಅರಸೀಕೆರೆ-ಮೈಸೂರು ಡೈಲಿ ಪ್ಯಾಸೆಂಜರ್ ರೈಲು ಹಾಸನ ಮತ್ತು ಮೈಸೂರು ನಿಲ್ದಾಣಗಳ ಮಧ್ಯ ಭಾಗಶಃ ರದ್ದುಗೊಳ್ಳಲಿದೆ. ಈ ರೈಲು ಸಂಚಾರ ಹಾಸನದಲ್ಲಿ ಕೊನೆಗೊಳ್ಳುತ್ತದೆ.
2. ಜನವರಿ 29 ರಂದು ರೈಲು ಸಂಖ್ಯೆ 56268 ಮೈಸೂರು-ಅರಸೀಕೆರೆ ಡೈಲಿ ಪ್ಯಾಸೆಂಜರ್ ರೈಲು ಮೈಸೂರಿನ ಬದಲು ಹಾಸನದಿಂದ ನಿಗದಿತ ಸಮಯಕ್ಕೆ ಹೊರಡಲಿದೆ. ಈ ರೈಲು ಮೈಸೂರು ಮತ್ತು ಹಾಸನ ನಡುವೆ ಭಾಗಶಃ ರದ್ದಾಗಿದೆ.
3. ಜನವರಿ 28 ರೈಲು ಸಂಖ್ಯೆ 16225 ಮೈಸೂರು-ಶಿವಮೊಗ್ಗ ಟೌನ್ ಡೈಲಿ ಎಕ್ಸ್ ಪ್ರೆಸ್ ರೈಲು ಮೈಸೂರಿನ ಬದಲು ಹಾಸನದಿಂದ ನಿಗದಿತ ಸಮಯಕ್ಕೆ ಹೊರಡಲಿದೆ. ಈ ರೈಲು ಮೈಸೂರು ಮತ್ತು ಹಾಸನ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಿದೆ.
4. ಜನವರಿ 29 ರಂದು ರೈಲು ಸಂಖ್ಯೆ 16226 ಶಿವಮೊಗ್ಗ ಟೌನ್-ಮೈಸೂರು ಡೈಲಿ ಎಕ್ಸ್ ಪ್ರೆಸ್ ರೈಲು ಹಾಸನ ಮತ್ತು ಮೈಸೂರು ನಡುವೆ ಭಾಗಶಃ ರದ್ದುಗೊಂಡಿದೆ. ಈ ರೈಲು ಸಂಚಾರ ಹಾಸನದಲ್ಲಿ ಕೊನೆಗೊಳ್ಳುತ್ತದೆ.
ರೈಲುಗಳ ನಿಯಂತ್ರಣ
1. ಜನವರಿ 26 ರಂದು ತಮ್ಮ ಮೂಲ ನಿಲ್ದಾಣಗಳಿಂದ ಹೊರಡುವ ರೈಲು ಸಂಖ್ಯೆ 16221 ತಾಳಗುಪ್ಪ-ಮೈಸೂರು ಕುವೆಂಪು ಡೈಲಿ ಎಕ್ಸ್ ಪ್ರೆಸ್ ಮತ್ತು ರೈಲು ಸಂಖ್ಯೆ 16222 ಮೈಸೂರು-ತಾಳಗುಪ್ಪ ಕುವೆಂಪು ಡೈಲಿ ಎಕ್ಸ್ ಪ್ರೆಸ್ ರೈಲುಗಳನ್ನು ಮಾರ್ಗ ಮಧ್ಯದಲ್ಲಿ 45 ನಿಮಿಷಗಳ ಕಾಲ ಸಂಚಾರವನ್ನು ನಿಯಂತ್ರಿಸಲಾಗುವುದು.
2. ಜನವರಿ 29 ರಂದು ಯಶವಂತಪುರ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 16207 ಯಶವಂತಪುರ-ಮೈಸೂರು ಡೈಲಿ ಎಕ್ಸ್ ಪ್ರೆಸ್ ರೈಲು ಮಾರ್ಗ ಮಧ್ಯದಲ್ಲಿ 30 ನಿಮಿಷಗಳ ಕಾಲ ನಿಯಂತ್ರಿತವಾಗಲಿದೆ.
