ಬೀದಿ ಗುಡಿಸುವವರ ಮಕ್ಳೂ, ಡಿಸಿ, ರಾಜಕಾರಣಿಗಳ ಮಕ್ಳೂ ಒಂದೇ ಕೋಟಾದಡಿ ನೌಕರಿಗೆ ಸ್ಪರ್ಧಿಸುವುದೇ ಅಮಾನವೀಯ; ಮಂಗಳೂರಲ್ಲಿ ಒಳಮೀಸಲಾತಿ ಹಕ್ಕೊತ್ತಾಯ
ಕನ್ನಡ ಸುದ್ದಿ  /  ಕರ್ನಾಟಕ  /  ಬೀದಿ ಗುಡಿಸುವವರ ಮಕ್ಳೂ, ಡಿಸಿ, ರಾಜಕಾರಣಿಗಳ ಮಕ್ಳೂ ಒಂದೇ ಕೋಟಾದಡಿ ನೌಕರಿಗೆ ಸ್ಪರ್ಧಿಸುವುದೇ ಅಮಾನವೀಯ; ಮಂಗಳೂರಲ್ಲಿ ಒಳಮೀಸಲಾತಿ ಹಕ್ಕೊತ್ತಾಯ

ಬೀದಿ ಗುಡಿಸುವವರ ಮಕ್ಳೂ, ಡಿಸಿ, ರಾಜಕಾರಣಿಗಳ ಮಕ್ಳೂ ಒಂದೇ ಕೋಟಾದಡಿ ನೌಕರಿಗೆ ಸ್ಪರ್ಧಿಸುವುದೇ ಅಮಾನವೀಯ; ಮಂಗಳೂರಲ್ಲಿ ಒಳಮೀಸಲಾತಿ ಹಕ್ಕೊತ್ತಾಯ

ಕರ್ನಾಟಕ ಜಾತಿ ಗಣತಿ ವರದಿ ವಿಚಾರ ಚರ್ಚೆಯಲ್ಲಿದೆ. ಇದೇ ವೇಳೆ, ಬೀದಿ ಗುಡಿಸುವವರ ಮಕ್ಳೂ, ಡಿಸಿ, ರಾಜಕಾರಣಿಗಳ ಮಕ್ಳೂ ಒಂದೇ ಕೋಟಾದಡಿ ನೌಕರಿಗೆ ಸ್ಪರ್ಧಿಸುವುದೇ ಅಮಾನವೀಯ ಎಂಬುದರ ಕಡಗೆ ಗಮನಸೆಳದು ಮಂಗಳೂರಲ್ಲಿ ಒಳಮೀಸಲಾತಿ ಹಕ್ಕೊತ್ತಾಯ ಮಂಡನೆಯಾಗಿದೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

ಬೀದಿ ಗುಡಿಸುವವರ ಮಕ್ಳೂ, ಡಿಸಿ, ರಾಜಕಾರಣಿಗಳ ಮಕ್ಳೂ ಒಂದೇ ಕೋಟಾದಡಿ ನೌಕರಿಗೆ ಸ್ಪರ್ಧಿಸುವುದೇ ಅಮಾನವೀಯ ಎಂದು ಮಂಗಳೂರಲ್ಲಿ ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಸಂಘ ಸಂಸ್ಥೆ ಒಳಮೀಸಲಾತಿ ಹಕ್ಕೊತ್ತಾಯ ಮಂಡಿಸಿದೆ.
ಬೀದಿ ಗುಡಿಸುವವರ ಮಕ್ಳೂ, ಡಿಸಿ, ರಾಜಕಾರಣಿಗಳ ಮಕ್ಳೂ ಒಂದೇ ಕೋಟಾದಡಿ ನೌಕರಿಗೆ ಸ್ಪರ್ಧಿಸುವುದೇ ಅಮಾನವೀಯ ಎಂದು ಮಂಗಳೂರಲ್ಲಿ ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಸಂಘ ಸಂಸ್ಥೆ ಒಳಮೀಸಲಾತಿ ಹಕ್ಕೊತ್ತಾಯ ಮಂಡಿಸಿದೆ.

ಮಂಗಳೂರು: ಕರ್ನಾಟಕದಲ್ಲಿ ಜಾತಿಗಣತಿ, ಮೀಸಲಾತಿ ಸಹಿತ ಹಲವು ವಿಷಯಗಳ ಕುರಿತು ಚರ್ಚೆಗಳು ನಡೆಯುತ್ತಿರುವ ಹೊತ್ತಿಗೆ ಮಂಗಳೂರಿನಲ್ಲಿ ಒಳಮೀಸಲಾತಿ ಕುರಿತು ಹಕ್ಕೊತ್ತಾಯದ ಸಮಾಲೋಚನಾ ಸಭೆಯೊಂದು ನಡೆದಿದೆ. ಭಾನುವಾರ ಮಂಗಳೂರು ನಗರದಲ್ಲಿ ಪರಿಶಿಷ್ಟ ಜಾತಿಗಳ ನಡುವೆ ಒಳಮೀಸಲಾತಿ ಕುರಿತ ಸಮಾಲೋಚನಾ ಸಭೆಯೊಂದು ನಡೆಯಿತು.

ಬೀದಿ ಗುಡಿಸುವವರ ಮಕ್ಕಳು ಮತ್ತು ಜಿಲ್ಲಾಧಿಕಾರಿ ಮತ್ತು ಮಂತ್ರಿಗಳ ಮಕ್ಕಳು ಒಂದೇ ಕೋಟಾದಲ್ಲಿ ನೌಕರಿಗಾಗಿ ಸ್ಪರ್ಧೆ ನಡೆಸಬೇಕು ಎಂಬುದು ಅಮಾನವೀಯ ಎಂದು ಈ ಸಂದರ್ಭ ಮಾತನಾಡಿದ ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಸಂಘ ಸಂಸ್ಥೆಗಳ ಮಹಾಒಕ್ಕೂಟದ ಅಧ್ಯಕ್ಷ ಲೋಲಾಕ್ಷ ಅಭಿಪ್ರಾಯಪಟ್ಟರು.

ಪರಿಷ್ಕರಿಸಿ, ಅಥವಾ ತಿರಸ್ಕರಿಸಿ

ಶಿಕ್ಷಕರಿಲ್ಲದ, ಸರಿಯಾಗಿ ಪಠ್ಯ ಪುಸ್ತಕಗಳೇ ಇಲ್ಲದೆ, ಕಾಲಿಗೆ ಚಪ್ಪಲಿಯೂ ಇಲ್ಲದೆ ಸರಕಾರಿ ಶಾಲೆಗಳಲ್ಲಿ ಓದುವ ನಮ್ಮ ನಗರಗಳಲ್ಲಿ ಬೀದಿ ಗುಡಿಸುವ, ಚರಂಡಿ ಸ್ವಚ್ಛ ಮಾಡುವ ಬಡ ಪೌರ ಕಾರ್ಮಿಕರ ಮಕ್ಕಳು, ರಸ್ತೆ ಬದಿಗಳಲ್ಲಿ ಬೂಟ್ ಪಾಲಿಶ್ ಮಾಡುವವರ ಮಕ್ಕಳು ಮತ್ತು ಎಲ್ಲ ಸೌಲಭ್ಯ - ಸೌಕರ್ಯಗಳೊಂದಿಗೆ ಮೊಂಟೆಸ್ಸೋರಿ, ಸಿ ಬಿ ಎಸ್ ಸಿ ಮತ್ತು ಐ ಸಿ ಎಸ್ ಸಿ ಶಾಲೆಗಳಲ್ಲಿ ಓದುವ ಮತ್ತು ಐ ಎ ಎಸ್, ಐ ಪಿ ಎಸ್ ಅಧಿಕಾರಿಗಳು ಮತ್ತು ಮಂತ್ರಿಗಳ ಮಕ್ಕಳು, ಕೇವಲ ಅವರೆಲ್ಲರ ಜಾತಿ ಒಂದೇ ಎಂಬ ಕಾರಣಕ್ಕಾಗಿ, ಮೆಡಿಕಲ್, ಇಂಜಿನಿಯರಿಂಗ್ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ಮತ್ತು ಸರಕಾರಿ ನೌಕರಿ ಪಡೆಯಲು ಒಂದೇ ಕೋಟಾದಡಿಯಲ್ಲಿ ಸ್ಪರ್ಧೆ ಎದುರಿಸಬೇಕು ಎಂಬ ಚಿಂತನೆ ಮತ್ತು ಅಂತಹ ನೀತಿ ಮೂಲತಃ ಅತ್ಯಂತ ಅಮಾನವೀಯ. ಆದ್ದರಿಂದ ಪರಿಶಿಷ್ಟ ಜಾತಿಗಳ ನಡುವೆ ಒಳಮೀಸಲಾತಿ ಕಲ್ಪಿಸಲು ರಾಜ್ಯ ಸರಕಾರ ಮುಂದಾಗಿರುವ ಈ ಸಂದರ್ಭದಲ್ಲಿ, ಈ ಅಮಾನವೀಯ ಮೀಸಲಾತಿ ನೀತಿಯನ್ನು ಆಮೂಲಾಗ್ರ ವಾಗಿ ಪರಿಷ್ಕರಿಸಿ ಅಥವಾ ತಿರಸ್ಕರಿಸಿ, ಈ ಶೋಷಿತ ಜಾತಿಗಲ್ಲಿರುವ ಅತ್ಯಂತ ದುರ್ಬಲರೂ ಅಸಹಾಯಕರೂ ಆಗಿರುವ ಶ್ರಮಜೀವಿಗಳ ವರ್ಗಗಳಿಗೆ ವಿಶೇಷ ಆದ್ಯತೆ ಮತ್ತು ಸಂರಕ್ಷಣೆ ನೀಡುವ ವಿನೂತನ ಮೀಸಲಾತಿ ನೀತಿಯನ್ನು ರೂಪಿಸಲಾಗಿದೆ ಎಂದು ಲೋಲಾಕ್ಷ ಅಭಿಪ್ರಾಯಪಡುತ್ತಾರೆ.

ಪ.ಜಾತಿಗಳ ಪ್ರಸಕ್ತ ಸ್ಥಿತಿಗತಿ

ಪವರ್ ಪಾಯಿಂಟ್ ಮೂಲಕ ಪರಿಶಿಷ್ಟ ಜಾತಿಗಳ ಕುರಿತು ಸಂವಿಧಾನದ ಪರಿಕಲ್ಪನೆ, ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಕುರಿತು ಸಂವಿಧಾನದ ಆಶಯ ಮತ್ತು ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳ ಪ್ರಸಕ್ತ ಸ್ಥಿತಿ ಗತಿ ಕುರಿತು ಸಾಕಷ್ಟು ಸರಕಾರಿ ವರದಿಗಳನ್ನು, ದತ್ತಾಂಶಗಳನ್ನು ಪ್ರಸ್ತುತ ಪಡಿಸಲಾಯಿತು.

ಆಳುವ ವರ್ಗಗಳು ಸಿದ್ಧ ಪಡಿಸುವ ನೀತಿಗೆ ಪರ್ಯಾಯವಾಗಿ, ತಾವು ಸಿದ್ಧ ಪಡಿಸಿದ ಒಳಮೀಸಲಾತಿ ನೀತಿ ಮತ್ತು ಅದರ ಪರಿಣಾಮ ಕಾರಿ ಅನುಷ್ಠಾನ ಹೇಗೆ ಮತ್ತು ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳು ಎಂದು ಅಧಿಸೂಚಿತ 101 ಜಾತಿಗಳಲ್ಲಿರುವ ವಿವಿಧ ವರ್ಗಗಳ ಜನರ ಸಂರಕ್ಷಣೆ ಹೇಗೆ ಖಾತರಿ ಮಾಡ ಬಹುದು ಎಂಬುದನ್ನು 100 ಪಾಯಿಂಟ್ ರೋಸ್ಟರ್ ಮೂಲಕ ವಿವರಿಸಿ, ವಿಶ್ಲೇಷಣೆ ನಡೆಸಲಾಯಿತು.

ಈ ವೈಜ್ಞಾನಿಕ, ಸಂವಿಧಾನದ ಆಶಯಗಳಿಗೆ ಬದ್ಧವಾಗಿರುವ ಈ ವಿನೂತನ ಮೀಸಲಾತಿ ನೀತಿಯನ್ನು ರಾಜ್ಯದಲ್ಲಿ ಅನುಷ್ಠಾನಕ್ಕೆ ತರುವಲ್ಲಿ ನಮ್ಮ ಪ್ರಜ್ಞಾವಂತ ನಾಗರಿಕ ಸಮಾಜ ನಮಗೆ ನೆರವು ನೀಡಬೇಕು ಎಂದು ಮನವಿ ಮಾಡಿದ ಅವರು, ಈ ಬಗ್ಗೆ ಶೀಘ್ರದಲ್ಲಿ ಮಹಾಒಕ್ಕೂಟದ ನಿಯೋಗ ನಮ್ಮ ಜನಪ್ರತಿನಿದಿನಗಳನ್ನು ಭೇಟಿ ಮಾಡಿ ಚರ್ಚಿಸಲಿದೆ ಎಂದು ಲೋಲಾಕ್ಷ ಹೇಳಿದ್ದಾರೆ.

'ಸಂವಿಧಾನ (ಪರಿಶಿಷ್ಟ ಜಾತಿಗಳು) ಆದೇಶ, 1950 ಇರಬಹುದು ಅಥವಾ ದಿ. 27.07.1977 ರಂದು ಜಾರಿಗೆ ಬಂದಿರುವ ತಿದ್ದುಪಡಿ ಆದೇಶ (Act 108 of 1976- Govt of India) ಇರಬಹುದು, ಈ ಮೂರನ್ನೂ ಪರಿಶಿಷ್ಟ ಜಾತಿಗಳು ಎಂದೇ ಅಧಿಸೂಚಿಸಲಾಗಿದೆ. ಇವುಗಳನ್ನು 'ಜಾತಿಗಳ ಗುಂಪುಗಳು' ಎಂದು ಕರೆಯಲು, ಪರಿಗಣಿಸಲು ಆಯೋಗಕ್ಕಾಗಲಿ, ಸಚಿವರಿಗೆ ಆಗಲಿ ಯಾವುದೇ ಅಧಿಕಾರ ಇಲ್ಲ ಎಂದು ಲೋಲಾಕ್ಷ ತಿಳಿಸಿದರು

ಕರ್ನಾಟಕ ರಾಜ್ಯದ 101 ಪರಿಶಿಷ್ಟ ಜಾತಿಗಳನ್ನು ನಾಲ್ಕು ಗುಂಪುಗಳಲ್ಲಿ ವಿಂಗಡಿಸಿ, ಅದರಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ 13 ಜಾತಿಗಳು ಸೇರಿ, 89 ಅತ್ಯಂತ ದುರ್ಬಲ ಜಾತಿಗಳಿಗೆ ಶೇಕಡಾ 1 ಮೀಸಲಾತಿ ನಿಗದಿ ಗೊಳಿಸಿ, ಈ ಬಗ್ಗೆ ಸಂವಿಧಾಕ್ಕೆ ಸೂಕ್ತ ತಿದ್ದುಪಡಿ ಮಾಡಬೇಕು ಎಂದು ಬಸವರಾಜ ಬೊಮ್ಮಯಿ ನೇತೃತ್ವದ ರಾಜ್ಯ ಸರಕಾರ ದಿ. 27.03.2023 ರಂದು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಿತ್ತು. ಮಹಾಒಕ್ಕೂಟ ಇದನ್ನು ಆಗಲೇ ತೀವ್ರವಾಗಿ ವಿರೋಧಿಸಿತ್ತು. ಈ ವರ್ಷ ಏಪ್ರಿಲ್ 14 ರಂದು ತೆಲಂಗಾಣದ ಸರಕಾರ ಆ ರಾಜ್ಯದ 59 ಪರಿಶಿಷ್ಟ ಜಾತಿಗಳನ್ನು ಮೂರು ಗುಂಪುಗಳಾಗಿ ವಿಂಗಡಿಸಿ, ಅತೀ ಹೆಚ್ಚು ಹಿಂದುಳಿದಿರುವ 25 ಪರಿಶಿಷ್ಟ ಜಾತಿಗಳಿಗೆ ಶೇಕಡಾ 1 ಮೀಸಲಾತಿ ಕಲ್ಪಿಸಿ ಅಧಿಸೂಚನೆ ಹೊರಡಿಸಿದೆ.

ಈ ವರ್ಷದ ಏಪ್ರಿಲ್ 17 ರಂದು ಆಂಧ್ರ ಪ್ರದೇಶ ಸರಕಾರ ಆ ರಾಜ್ಯದ 59 ಪರಿಶಿಷ್ಟ ಜಾತಿಗಳನ್ನು ಮೂರು ಗುಂಪುಗಳಲ್ಲಿ ವಿಂಗಡಿಸಿ, ಅತ್ಯಂತ ಹಿಂದುಳಿದ 12 ಪರಿಶಿಷ್ಟ ಜಾತಿಗಳಿಗೆ ಶೇಕಡಾ 1 ಮೀಸಲಾತಿ ನಿಗದಿಗೊಳಿಸಿ Andhra Pradesh Scheduled Castes ( Sub Classification) Ordinance, 2025 ನ್ನು ಹೊರಡಿಸಿದೆ. ಇವೆಲ್ಲವೂ ಸಂವಿಧಾನದ ಆಶಯಕ್ಕೆ ವ್ಯತಿರಿಕ್ತವಾಗಿವೆ. ಇದರಿಂದ, ಪರಿಶಿಷ್ಟ ಜಾತಿಗಳನ್ನು ಒಡೆದು ಆಳುವ ನೀತಿಯನ್ನು ಈ ಮೂರೂ ರಾಜ್ಯಗಳ ಆಳುವ ವರ್ಗ ಅನುಸರಿಸುತ್ತಿರುವುದನ್ನು ನಾವು ಕಾಣಬಹುದಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.

'ಅಸಮಾನ ಶಿಕ್ಷಣದಿಂದ ಆತಂಕಕಾರಿ ಅಸಮಾನತೆ'

ಈ ಸಮಾಲೋಚನಾ ಸಭೆಯಲ್ಲಿ ತಮ್ಮ ಚಿಂತನೆಗಳನ್ನು ಪ್ರಸ್ತುತ ಪಡಿಸಿದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮಾಜಿ ಅಧ್ಯಕ್ಷ ಮತ್ತು ಮಕ್ಕಳ ಹಕ್ಕುಗಳ ಕುರಿತ ತಜ್ಞರಾದ ರೆನ್ನಿ ಡಿ' ಸೋಜ ಅವರು, ಸಮಾಜದಲ್ಲಿ ಇರುವ ಶ್ರೇಣೀಕೃತ ವ್ಯವಸ್ಥೆಯಂತೆಯೇ ಶಿಕ್ಷಣ ಪದ್ಧತಿಯಲ್ಲೂ ಶ್ರೇಣಿಕರಣ ಇದ್ದು, ಇದು ಪರಿಶಿಷ್ಟ ಜಾತಿಗಳಲ್ಲಿ ಆತಂಕಕಾರಿಯಾದ ಅಸಮಾನತೆಗೆ ಕಾರವಾಗುತ್ತಿದೆ ಎಂದು ಪಿ ಪಿ ಟಿ ಮೂಲಕ ಸಾಕಷ್ಟು ದತ್ತಾಂಶಗಳ ಮೂಲಕ ವಿವರಿಸಿ, ವಿಶ್ಲೇಷಣೆ ನಡೆಸಿದರು. ಈ ಸಮಾಲೋಚನಾ ಕಾರ್ಯಕ್ರಮವನ್ನು ವಿಶ್ರಾಂತ ಪೌರ ಕಾರ್ಮಿಕೆ ಪೂವಮ್ಮ ಉದ್ಘಾಟಿಸಿದರು.

ಬ್ಯಾರಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಬಿ ಎ ಎಂ ಹನೀಫ್, ಸುಳ್ಯ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕ, ಹಿರಿಯ ಪತ್ರಕರ್ತರಾದ ಎಸ್ ಜಯರಾಮ್ ಮತ್ತು ರಮೇಶ್ ಪೆರ್ಲ, ಮಾಜಿ ಕಾರ್ಪೂರೇಟರ್ ಪ್ರೇಮ್ ಬಲ್ಲಾಳ್ ಭಾಗ್, ಡಿ ಎಸ್ ಎಸ್ ಸಂಚಾಲಕ ಗಿರೀಶ್ ಉಳ್ಳಾಲ್, ಮಹಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕಾಂತಪ್ಪ ಅಲಂಗಾರ್, ಉಪಾಧ್ಯಕ್ಷರಾದ ಮೋಹನಾಂಗಯ್ಯ ಸ್ವಾಮಿ, ಸೀತಾರಾಮ್ ಕೊಂಚಾಡಿ, ಉಪ ಕಾರ್ಯದರ್ಶಿ ಪದ್ಮನಾಭ ಮೂಡಬಿದರೆ, ಪ್ರೊ. ಐಡಾ ಡಿ ಸೋಜ, ಜಿಲ್ಲಾ ಡಿ ಗ್ರೂಪ್ ನೌಕರರ ಸಂಘದ ಅಧ್ಯಕ್ಷ ಅನಿಲ್ ಕಂಕನಾಡಿ, ವಿ ವಿ ಯ ಶಿಕ್ಷಕ ಡಾ. ಅನಿಲ್ ಮತ್ತು ಜಿಲ್ಲೆಯ ವಿವಿಧ ಪರಿಶಿಷ್ಟ ಜಾತಿಗಳ ಸಂಘಟನೆಗಳ ನಾಯಕರು, ವಿವಿಧ ನೌಕರರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದು, ಸಮಾಲೋಚನೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.

(ವರದಿ- ಹರೀಶ್ ಮಾಂಬಾಡಿ, ಮಂಗಳೂರು)

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.