ಕನ್ನಡ ಸುದ್ದಿ  /  Karnataka  /  International Women S Day Special Women S Votes Should Be Used To Bring Change Says Aap Leaders

International Women's Day 2023: ಅಂತಾರಾಷ್ಟ್ರೀಯ ಮಹಿಳಾ ದಿನ ವಿಶೇಷ; ಮಹಿಳೆಯರ ಮತಗಳು ಬದಲಾವಣೆ ತರಲು ಬಳಕೆಯಾಗಬೇಕು: ಎಎಪಿ ನಾಯಕಿಯರು

ರಾಜ್ಯದ ಸರ್ಕಾರಿ ಶಾಲಾ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಪ್ಯಾಡ್‌ ವಿತರಿಸುವ ಯೋಜನೆಯನ್ನ ಬಿಜೆಪಿ ಸರ್ಕಾರ ಸ್ಥಗಿತಗೊಳಿಸಿರುವುದು ದುರಾದೃಷ್ಟಕರ ಎಂದು ಎಎಪಿ ಮಹಿಳಾ ನಾಯಕಿಯರು ಹೇಳಿದ್ದಾರೆ.

ಆಮ್ ಆದ್ಮಿ ಪಕ್ಷದ ರಾಜ್ಯ ನಾಯಕಿಯರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಆಮ್ ಆದ್ಮಿ ಪಕ್ಷದ ರಾಜ್ಯ ನಾಯಕಿಯರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಬೆಂಗಳೂರು: ಪ್ರತಿ ವರ್ಷ ಮಾರ್ಚ್‌ 8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನವನ್ನಾಗಿ ಆಚರಿಸಲಾಗುತ್ತದೆ. ಮಹಿಳೆ ಎಲ್ಲಾ ಕ್ಷೇತ್ರಗಳಲ್ಲಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸುವ ಮೂಲಕ ಪುರುಷರಿಗಿಂತ ತಾನು ಕಡಿಮೆ ಇಲ್ಲ ಎಂಬುದನ್ನು ಸಾಬೀತು ಪಡಿಸುತ್ತಿದ್ದಾಳೆ.

ಸಮಾಜದ ಜವಾಬ್ದಾರಿಯುತ ಸ್ಥಾನಗಳಲ್ಲಿ ಮಹಿಳೆಯರು ಪ್ರಮುಖವಾಗಿ ಗುರುತಿಸಿಕೊಳ್ಳುತ್ತಿದ್ದು, ಈ ಸಂಖ್ಯೆಯೂ ಹೆಚ್ಚುತ್ತಿರುವುದು ವಿಶೇಷ. ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯದಲ್ಲಿ ನಾರಿಶಕ್ತಿ ಮತ್ತಷ್ಟು ಬಲಿಷ್ಠವಾಗಬೇಕಿದೆ. ಈ ನಿಟ್ಟಿನಲ್ಲಿ ಕೆಲವು ಪಕ್ಷಗಳು ಕೂಡ ಮಹಿಳೆಯರಿಗೆ ಉನ್ನತ ಜವಾಬ್ದಾರಿಗಳನ್ನು ನೀಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.

ಇನ್ನು ಇದೇ ವಿಚಾರವಾಗಿ ಇವತ್ತು ಆಮ್ ಆದ್ಮಿ ಪಾರ್ಟಿಯ ರಾಜ್ಯ ಮಹಿಳೆಯರು ತಮ್ಮ ಮನದಾಳವನ್ನು ಹಂಚಿಕೊಂಡಿದ್ದು, ಮಹಿಳೆಯರ ಮತಗಳು ಬದಲಾವಣೆ ತರಲು ಬಳಕೆಯಾಗಲಿ ಎಂದಿದ್ದಾರೆ.

ಅಂತಾರಾಷ್ಟ್ರೀಯ ಮಹಿಳಾ ದಿನದ ಹಿಂದಿನ ದಿನವಾದ ಇಂದು (ಮಾರ್ಚ್ 7, ಮಂಗಳವಾರ) ಆಮ್‌ ಆದ್ಮಿ ಪಾರ್ಟಿಯ ಬೆಂಗಳೂರು ಮಹಿಳಾ ನಾಯಕಿಯರು ಒಟ್ಟಾಗಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ರಾಜ್ಯದಲ್ಲಿ ಮಹಿಳಾ ಮತದಾರರು ಸರಿಸುಮಾರು ಶೇ. 48ರಷ್ಟು ಇದ್ದಾರೆ. ಸಮಾಜಕ್ಕೆ, ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ನೆರವಾಗುವ ಪಕ್ಷಕ್ಕೆ ಈ ವಿಧಾನಸಭಾ ಚುನಾವಣೆಯಲ್ಲಿ ಮಹಿಳೆಯರು ಮತ ಚಲಾಯಿಸಬೇಕಿದೆ ಎಂದು ಮಹಾಲಕ್ಷ್ಮಿ ಲೇಔಟ್‌ ಕ್ಷೇತ್ರದ ಎಎಪಿ ಟಿಕೆಟ್ ಆಕಾಂಕ್ಷಿ ಶಾಂತಲಾ ದಾಮ್ಲೆ ಹೇಳಿದ್ದಾರೆ.

ಯಥಾಸ್ಥಿತಿಗೆ ಸವಾಲು ಹಾಕಿ ಬದಲಾವಣೆ ತರುವುದು ಈ ವರ್ಷದ ಮಹಿಳಾ ದಿನದ ಧ್ಯೇಯವಾಗಿದೆ. ಆದ್ದರಿಂದ ಕಳಪೆ ಸರ್ಕಾರಿ ಶಾಲೆಗಳು, ಆಸ್ಪತ್ರೆಗಳು, ಹಾಳಾಗಿರುವ ರಸ್ತೆಗಳು, ಭ್ರಷ್ಟಾಚಾರ, ಅಗತ್ಯ ವಸ್ತುಗಳ ಬೆಲೆ ಏರಿಕೆ ಮುಂತಾದವುಗಳನ್ನು ಪ್ರಶ್ನಿಸಿ ಬದಲಾವಣೆ ತರುವ ಬಗ್ಗೆ ಮಹಿಳೆಯರು ಯೋಚಿಸಿ ಮತದಾನ ಮಾಡಬೇಕು ಎಂದು ಕರೆ ನೀಡಿದ್ದಾರೆ.

ಆಮ್‌ ಆದ್ಮಿ ಪಾರ್ಟಿಯ ಬೆಂಗಳೂರು ನಗರ ಮಹಿಳಾ ಘಟಕದ ಅಧ್ಯಕ್ಷೆ ಕುಶಲಸ್ವಾಮಿ ಮಾತನಾಡಿ, ಮಹಿಳೆಯರು ತಮ್ಮ ಭಾವನೆಯನ್ನು ನಿರ್ಭೀತಿಯಿಂದ ಸಮಾಜದ ಮುಂದೆ ವ್ಯಕ್ತಪಡಿಸುವಂತಹ ವಾತಾವರಣ ನಿರ್ಮಾಣವಾದಾಗ ಮಹಿಳಾ ಸಬಲೀಕರಣ ಜಾರಿಗೆ ಬಂದಿದೆ ಎನ್ನಬಹುದು ಅಂತ ಹೇಳಿದ್ದಾರೆ.

ಮಹಿಳಾ ಸಬಲೀಕರಣಕ್ಕಾಗಿ ಎಎಪಿಯಿಂದ ಹಲವು ಯೋಜನೆಗಳು

ಆಮ್‌ ಆದ್ಮಿ ಪಾರ್ಟಿಯು ಮಹಿಳಾ ಸಬಲೀಕರಣಕ್ಕಾಗಿ ಹಲವು ಯೋಜನೆಗಳನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತಂದಿದೆ. 2015ರಲ್ಲಿ ದೆಹಲಿಯಲ್ಲಿ ಕೇಜ್ರಿವಾಲ್‌ ಸರ್ಕಾರವು ಮಹಿಳಾ ಸುರಕ್ಷಾ ದಳ ಆರಂಭಿಸಿ, ಇದಕ್ಕಾಗಿ ಪ್ರತಿ ಮತಗಟ್ಟೆ ವ್ಯಾಪ್ತಿಯಲ್ಲಿ 10 ರಿಂದ 15 ಕಾರ್ಯಕರ್ತೆಯರನ್ನು ನೇಮಕ ಮಾಡಿದ್ದಾರೆ. ಅಲ್ಲಿ ಮಹಿಳೆಯರಿಗೆ ಯಾವುದೇ ರೀತಿಯ ತೊಂದರೆಯಾದರೂ ಈ ಕಾರ್ಯಕರ್ತೆಯರು ತಕ್ಷಣವೇ ಸ್ಪಂದಿಸಿ ನೆರವು ನೀಡುತ್ತಿದ್ದಾರೆ.

ಕರ್ನಾಟಕದಲ್ಲಿ ಮಹಿಳಾ ಆಯೋಗದ ಅಧ್ಯಕ್ಷರಾಗುವವರು ಸರ್ಕಾರದ ಸೌಲಭ್ಯಗಳಿಗಾಗಿ ಕಾರ್ಯನಿರ್ವಹಿಸಿ, ಮಹಿಳೆಯರಿಂದ ಅರ್ಜಿಗಳು ಬಂದಾಗ ಮಾತ್ರ ಪರಿಶೀಲನೆ ಮಾಡುವುದನ್ನು ನೋಡುತ್ತಿದ್ದೇವೆ. ಆದರೆ ದೆಹಲಿಯ ಮಹಿಳಾ ಆಯೋಗವು ಎಲ್ಲಿ ಮಹಿಳೆಯರಿಗೆ ತೊಂದರೆಯಾದರೂ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ರಕ್ಷಣೆಗೆ ಮುಂದಾಗುತ್ತಿದೆ. ಪಂಜಾಬ್‌ ಸರ್ಕಾರ ಕೂಡ ಇದೇ ಹಾದಿಯಲ್ಲಿ ಸಾಗುತ್ತಿದೆ.

ದೆಹಲಿಯ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಿದ್ದರಿಂದಾಗಿ, ಅವರಿಗೆ ಹಣ ಉಳಿಯುವ ಜೊತೆಗೆ ಬಸ್‌ನಲ್ಲಿ ಪ್ರಯಾಣಿಸುವ ಮಹಿಳೆಯರ ಸಂಖ್ಯೆ ಕೂಡ ಗಣನೀಯವಾಗಿ ಹೆಚ್ಚಾಗಿದೆ. ಇದರಿಂದಾಗಿ ಅವರಿಗೆ ಪುರುಷರೊಂದಿಗೆ ಒಬ್ಬಳೇ ಪ್ರಯಾಣಿಸಬೇಕಾದ ಆತಂಕ ದೂರವಾಗಿದೆ. ಗಲ್ಲಿ ಗಲ್ಲಿಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸುವ ಮೂಲಕ ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡಿದೆ ಎಂದು ವಿವರಿಸಿದ್ದಾರೆ.

ಆಮ್‌ ಆದ್ಮಿ ಪಾರ್ಟಿ ವಕ್ತಾರರಾದ ಉಷಾ ಮೋಹನ್‌ ಮಾತನಾಡಿ, ದೆಹಲಿಯಲ್ಲಿ ಮಹಿಳೆಯರಿಗಾಗಿಯೇ ಪ್ರತ್ಯೇಕ ಮಹಿಳಾ ಮೊಹಲ್ಲಾ ಕ್ಲಿನಿಕ್‌ಗಳನ್ನು ತೆರೆಯಲಾಗಿದ್ದು, 24 ಗಂಟೆಗಳೂ ಮಹಿಳೆಯರಿಗೆ ಸೇವೆಗಳು ದೊರೆಯುತ್ತಿವೆ. ಜೊತೆಗೆ ಹೆಣ್ಣುಮಕ್ಕಳಿಗೆ ಉಚಿತ ಸ್ಯಾನಿಟರಿ ನ್ಯಾಪ್ಕಿನ್ಸ್‌ಗಳನ್ನೂ ಅಲ್ಲಿ ವಿತರಿಸಲಾಗುತ್ತಿದೆ. ಸುರಕ್ಷತೆಗಾಗಿ ಬೀದಿ ದೀಪಗಳ ಅಳವಡಿಕೆ, ಬಸ್‌ಗಳಲ್ಲಿ ಮಾರ್ಷಲ್‌ಗಳ ನೇಮಕ ಮುಂತಾದ ಕ್ರಮಗಳನ್ನು ಕೈಗೊಂಡಿದೆ. ಆದರೆ ಕರ್ನಾಟಕದಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಪ್ಯಾಡ್‌ ವಿತರಿಸುವ ಯೋಜನೆಯನ್ನೂ ಬಿಜೆಪಿ ಸರ್ಕಾರ ಸ್ಥಗಿತಗೊಳಿಸಿರುವುದು ದುರದೃಷ್ಟಕರ ಎಂದಿದ್ದಾರೆ. ಆಮ್‌ ಆದ್ಮಿ ಪಾರ್ಟಿ ಮುಖಂಡರಾದ ಅಂಜನಾ ಗೌಡ ಹಾಗೂ ಜ್ಯೋತಿ ಉಪಸ್ಥಿತರಿದ್ದರು.