ಐಪಿಎಲ್ ಟಿಕೆಟ್ ಕಾಳಸಂತೆ ಮಾರಾಟ: ಬೆಂಗಳೂರಿನಲ್ಲಿ ನಾಲ್ವರ ಬಂಧನ; ತನಿಖೆಯಲ್ಲಿ ದಂಧೆಯ ಸುಳಿವು
ಆರ್ಸಿಬಿ ಮತ್ತು ಸಿಎಸ್ಕೆ ಪಂದ್ಯದ ಬಗ್ಗೆ ಜನರಲ್ಲಿ ಕ್ರೇಜ್ ಹೆಚ್ಚಾದಂತೆ, ಬ್ಲ್ಯಾಕ್ ಟಿಕೆಟ್ ಮಾರಾಟಗಾರರು ಕ್ರೇಜ್ನ ಲಾಭ ಪಡೆದಿದ್ದು ಅನೇಕ ಮಾರಾಟಗಾರರು ಆನ್ಲೈನ್ನಲ್ಲಿಯೂ ಜನರನ್ನು ಸಂಪರ್ಕಿಸಿದ್ದಾರೆ.

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಐಪಿಎಲ್ ಪಂದ್ಯದ ಟಿಕೆಟ್ಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಶುಕ್ರವಾರ ಬಂಧಿಸಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ನಡುವಿನ ಪಂದ್ಯದ 32 ಟಿಕೆಟ್ಗಳೊಂದಿಗೆ ಎಸ್. ಚರಣ್ ರಾಜ್, ಎಚ್. ಹರ್ಷವರ್ಧನ್ ಸಂಕ್ಲೇಚಾ, ಕೆ. ವಿನಯ್ ಮತ್ತು ಬಿ. ವೆಂಕಟ ಸಾಯಿ ಎಂಬುವವರನ್ನು ಬಂಧಿಸಿದೆ.
ವರದಿಯ ಪ್ರಕಾರ, 1,200 ರೂ.ಗಳ ಟಿಕೆಟ್ಗಳನ್ನು ತಲಾ 10,000 ರೂಪಾಯಿಗೆ ಮರು ಮಾರಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ. ಇದರಲ್ಲಿ ವೆಂಕಟ ಸಾಯಿ ಎಂಬಾತ ಪ್ರಮುಖನಾಗಿದ್ದ ಎಂದು ಹೇಳಲಾಗಿದ್ದು ಈತನೇ ಬೃಹತ್ ಹಂಚಿಕೆ ಜಾಲದ ರೂವಾರಿಯಾಗಿದ್ದ. ಚರಣ್ ರಾಜ್ ಬಂಧನದೊಂದಿಗೆ ಕಾರ್ಯಾಚರಣೆ ಪ್ರಾರಂಭಿಸಿದ ಪೊಲೀಸರು ಆತ ನೀಡಿದ ಸುಳಿವಿನಂತೆ ಉಳಿದ ಆರೋಪಿಗಳನ್ನು ಬಂಧಿಸಿದ್ದಾರೆ. ಇವರ ಬಳಿ ಇದ್ದ ನಗದು ಮತ್ತು ಮೊಬೈಲ್ ಫೋನ್ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈಗ ಈ ಟಿಕೆಟ್ಗಳನ್ನು ಪಡೆದ ಮೂಲದ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇಷ್ಟು ದೊಡ್ಡ ಪ್ರಮಾಣದ ಟಿಕೆಟ್ಗಳು ಇವರ ಕೈಗೆ ಹೇಗೆ ಸಿಕ್ಕಿತು ಎಂಬುದನ್ನು ನಾವು ಪರಿಶೀಲಿಸುತ್ತಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರ್ಸಿಬಿ ಮತ್ತು ಸಿಎಸ್ಕೆ ಪಂದ್ಯದ ಬಗ್ಗೆ ಕ್ರೇಜ್ ಜೋರಾದಂತೆ, ಬ್ಲ್ಯಾಕ್ ಟಿಕೆಟ್ ಮಾರಾಟಗಾರರು ಕ್ರೇಜ್ನಿಂದ ಲಾಭ ಪಡೆಯಲು ಪ್ರಯತ್ನಿಸಿದ್ದಾರೆ ಮತ್ತು ಅನೇಕ ಮಾರಾಟಗಾರರು ಆನ್ಲೈನ್ನಲ್ಲಿ ಜನರನ್ನು ಸಂಪರ್ಕಿಸಿದ್ದಾರೆ. ಟಿಕೆಟ್ಗಳ ಹೆಸರಿನಲ್ಲಿ ಅನೇಕ ಮಾರಾಟಗಾರರು ಕ್ರಿಕೆಟ್ ಅಭಿಮಾನಿಗಳಿಗೆ ಮೋಸ ಮಾಡಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕ ಜನರು ಹೇಳಿಕೊಂಡಿದ್ದಾರೆ .
ಈ ಸೀಸನ್ನಲ್ಲಿ ಇಂತಹ ಘಟನೆ ನಡೆಯುತ್ತಿರುವುದು ಇದೇ ಮೊದಲಲ್ಲ. ಕಳೆದ ತಿಂಗಳಷ್ಟೇ ಐಪಿಎಲ್ ಟಿಕೆಟ್ಗಳನ್ನು ಬ್ಲ್ಯಾಕ್ನಲ್ಲಿ ಮಾರಾಟ ಮಾಡುತ್ತಿದ್ದ ಕ್ರೀಡಾಂಗಣ ಮತ್ತು ಕ್ಯಾಂಟೀನ್ ಸಿಬ್ಬಂದಿ ಸೇರಿದಂತೆ ಎಂಟು ಮಂದಿಯನ್ನು ಸಿಸಿಬಿ ಬಂಧಿಸಿತ್ತು. ಆ ಕಾರ್ಯಾಚರಣೆಯಲ್ಲಿ, ಪೊಲೀಸರು ವಿವಿಧ ಬೆಲೆಯ 18 ಟಿಕೆಟ್ಗಳನ್ನು ವಶಪಡಿಸಿಕೊಂಡಿದ್ದರು. ಅವುಗಳಲ್ಲಿ ಕೆಲವು ₹1,200, ₹5,000 ಮತ್ತು ₹13,000 ಬೆಲೆಯ ಟಿಕೆಟ್ಗಳಾಗಿದ್ದು, ಅಕ್ರಮವಾಗಿ ಅದನ್ನು 7,000 ದಿಂದ 32,000 ರೂ.ಗಳವರೆಗೆ ಮಾರಾಟ ಮಾಡಲಾಗುತ್ತಿತ್ತು. ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಸದಸ್ಯರು ಇದರಲ್ಲಿ ಭಾಗಿಯಾಗಿರುವ ಸಾಧ್ಯತೆಯ ಬಗ್ಗೆ ತನಿಖಾಧಿಕಾರಿಗಳಿಗೆ ಸುಳಿವು ಸಿಕ್ಕಿದ್ದು, ನಡೆಯುತ್ತಿರುವ ತನಿಖೆಯ ಭಾಗವಾಗಿ ಅವರನ್ನು ಕರೆಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.