ಇಸ್ರೋ ಮಾಜಿ ಅಧ್ಯಕ್ಷ ಕಸ್ತೂರಿರಂಗನ್‌ ಇನ್ನಿಲ್ಲ; ಬೆಂಗಳೂರಿನಲ್ಲಿ ವಿಧಿವಶರಾದ ಶ್ರೇಷ್ಠ ವಿಜ್ಞಾನಿ
ಕನ್ನಡ ಸುದ್ದಿ  /  ಕರ್ನಾಟಕ  /  ಇಸ್ರೋ ಮಾಜಿ ಅಧ್ಯಕ್ಷ ಕಸ್ತೂರಿರಂಗನ್‌ ಇನ್ನಿಲ್ಲ; ಬೆಂಗಳೂರಿನಲ್ಲಿ ವಿಧಿವಶರಾದ ಶ್ರೇಷ್ಠ ವಿಜ್ಞಾನಿ

ಇಸ್ರೋ ಮಾಜಿ ಅಧ್ಯಕ್ಷ ಕಸ್ತೂರಿರಂಗನ್‌ ಇನ್ನಿಲ್ಲ; ಬೆಂಗಳೂರಿನಲ್ಲಿ ವಿಧಿವಶರಾದ ಶ್ರೇಷ್ಠ ವಿಜ್ಞಾನಿ

ಹಿರಿಯ ವಿಜ್ಞಾನಿ, ಇಸ್ರೋದ ಮಾಜಿ ಅಧ್ಯಕ್ಷ ಹಾಗೂ ಹಲವು ಸಮಿತಿಗಳ ಮೂಲಕ ವಿಜ್ಞಾನ, ಶಿಕ್ಷಣ, ಪರಿಸರ ಸಹಿತ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದ ಡಾ.ಕಸ್ತೂರಿ ರಂಗನ್‌ ಬೆಂಗಳೂರಿನಲ್ಲಿ ನಿಧನರಾದರು.

ಇಸ್ರೋ ಮಾಜಿ ಅಧ್ಯಕ್ಷ ಕಸ್ತೂರಿ ರಂಗನ್‌ ನಿಧನರಾಗಿದ್ದಾರೆ.
ಇಸ್ರೋ ಮಾಜಿ ಅಧ್ಯಕ್ಷ ಕಸ್ತೂರಿ ರಂಗನ್‌ ನಿಧನರಾಗಿದ್ದಾರೆ.

ಬೆಂಗಳೂರು: ಭಾರತೀಯ ಬಾಹಾಕ್ಯಾಶ ಸಂಸ್ಥೆ ಇಸ್ರೋದ ಅಧ್ಯಕ್ಷರಾಗಿ ಸಂಸ್ಥೆಯನ್ನು ಉತ್ತುಂಗಕ್ಕೆ ತೆಗೆದುಕೊಂಡು ಹೋದ, ವಿಶ್ವದ ಪ್ರಮುಖ ವಿಜ್ಞಾನಿಗಳ ಪಟ್ಟಿಯಲ್ಲಿ ಹೆಸರಿಸಬಹುದಾದ ಹಾಗೂ ಪರಿಸರ. ಶಿಕ್ಷಣ ಸಹಿತ ವಿವಿಧ ವಿಷಯಗಳಲ್ಲಿ ತಜ್ಞತೆ ಹೊಂದಿದ್ದ ಡಾ.ಕಸ್ತೂರಿರಂಗನ್‌ ಅವರು ಬೆಂಗಳೂರಿನಲ್ಲಿ ಶುಕ್ರವಾರ ನಿಧನರಾದರು. ಕೆಲ ಸಮಯಗಳಿಂದ ವಯೋ ಸಹಜ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತಿದ್ದ ಇಸ್ರೋ ಮಾಜಿ ಅಧ್ಯಕ್ಷ ಕೆ.ಕಸ್ತೂರಿರಂಗನ್ ಕೊನೆಯುಸಿರೆಳೆದರು. ಅವರಿಗೆ 84 ವರ್ಷ ವಯಸ್ಸಾಗಿತ್ತು. ಬೆಂಗಳೂರಿನ ಅವರ ನಿವಾಸದಲ್ಲಿ ನಿಧನರಾಗಿದ್ದು. ಸದಾಶಿವನಗರದಲ್ಲಿರುವ ರಾಮನ್‌ ರೀಸರ್ಚ್‌ ಇನ್ಸ್‌ಟಿಟೂಟ್‌ನಲ್ಲಿ ಅವರ ಪಾರ್ಥಿವ ಶರೀರವನ್ನು ಶನಿವಾರ ಇರಿಸಲಾಗುತ್ತದೆ. ಭಾನುವಾರ ಬೆಳಿಗ್ಗೆ ಅಂತ್ಯಕ್ರಿಯೆ ನೆರವೇರಿಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಕಸ್ತೂರಿರಂಗನ್ ಇಸ್ರೋದ ಅಧ್ಯಕ್ಷರಾಗಿ 1994 ಮತ್ತು 2003 ಅವಧಿಯಲ್ಲಿ ಕೆಲಸ ಮಾಡಿದ್ದರು.ಕೃಷ್ಣಸ್ವಾಮಿ ಕಸ್ತೂರಿರಂಗನ್ ಅವರು ಬಾಹ್ಯಾಕಾಶ ಆಯೋಗದ ಅಧ್ಯಕ್ಷರಾಗಿ ಮತ್ತು ಭಾರತ ಸರ್ಕಾರದ ಬಾಹ್ಯಾಕಾಶ ಇಲಾಖೆ ಕಾರ್ಯದರ್ಶಿಯಾಗಿ 9 ವರ್ಷಗಳಿಗೂ ಹೆಚ್ಚು ಕಾಲ ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮವನ್ನು ಅತ್ಯುನ್ನತವಾಗಿ ಮುನ್ನಡೆಸಿದ್ದರು. ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV) ಯೋಜನೆಯನ್ನು ಅಭಿವೃದ್ಧಿಪಡಿಸುವ ಉಸ್ತುವಾರಿ ವಹಿಸಿದ್ದರು. ಭಾರತದ ಮೊದಲ ಭೂ ವೀಕ್ಷಣಾ ಉಪಗ್ರಹಗಳಾದ ಭಾಸ್ಕರ-I ಮತ್ತು ಭಾಸ್ಕರ್-II ಕಾರ್ಯಕ್ರಮಗಳಿಗೆ ಯೋಜನಾ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದರು.

ಅವರ ದೂರದೃಷ್ಟಿಯ ನಾಯಕತ್ವದಲ್ಲಿ, ಇಸ್ರೋ ಪಿಎಸ್ ಎಲ್ ವಿ ಯ ಯಶಸ್ವಿ ಉಡಾವಣೆ ಮತ್ತು ಕಾರ್ಯಾಚರಣೆ ಮತ್ತು ಜಿಎಸ್ ಎಲ್ ವಿ ಯ ಮೊದಲ ವಿಮಾನ ಸೇರಿದಂತೆ ಪ್ರಮುಖ ಮೈಲಿಗಲ್ಲುಗಳನ್ನು ಸಾಧಿಸಿದೆ. ಐಆರ್‌ಎಸ್‌ ಸಿ 1ಮತ್ತು 1ಡಿ ನಂತಹ ಮುಂದುವರಿದ ನಾಗರಿಕ ದೂರ ಸಂವೇದಿ ಉಪಗ್ರಹಗಳ ಅಭಿವೃದ್ಧಿ ಮತ್ತು ಉಡಾವಣೆ, ಹೊಸ ತಲೆಮಾರಿನ ಇನ್ಸಾಟ್‌ ಸಂವಹನ ಉಪಗ್ರಹಗಳು, ಮತ್ತು ಸಮುದ್ರ ವೀಕ್ಷಣೆ ಉಪಗ್ರಹಗಳ ಐಆರ್ ಎಸ್-ಪಿ3/ಪಿ4 ಅನ್ನು ಜಾರಿಗೊಳಿಸಿದ್ದು ಇವರ ಕಾಲದಲ್ಲಿಯೇ. ಬಾಹ್ಯಾಕಾಶ ವಿಷಯದಲ್ಲಿ ವಿಶ್ವದ ಪ್ರಮುಖ ರಾಷ್ಟ್ರಗಳ ನಡುವೆ ಭಾರತವೂ ನಿಲ್ಲುವಂತೆ ಮಾಡುವಲ್ಲಿ ಕಸ್ತೂರಿ ರಂಗನ್‌ ಅವರ ಪಾತ್ರ ಹಿರಿದಾದದು.

ಜವಹರಲಾಲ್ ನೆಹರು ವಿಶ್ವವಿದ್ಯಾಲಯದ ಕುಲಪತಿಯಾಗಿ,ಕರ್ನಾಟಕ ಜ್ಞಾನ ಆಯೋಗದ ಅಧ್ಯಕ್ಷರಾಗಿ, ಶಿಕ್ಷಣ ತಜ್ಞ, ಪರಿಸರವಾದಿ, ರಾಜ್ಯಸಭಾ ಸದಸ್ಯರಾಗಿಯು ಹಲವು ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲ್ಲಿಸಿರುವ ಇವರಿಗೆ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಸೇರಿದಂತೆ ಹತ್ತಾರು ಪ್ರಶಸ್ತಿಗಳು ಸಂದಿವೆ. ಸಿಂದಗಿಯ ಶ್ರೀ ಚೆನ್ನವೀರ ಸ್ವಾಮೀಜಿ ಪ್ರತಿಷ್ಠಾನದ ಭಾಸ್ಕರಾಚಾರ್ಯ ಪ್ರಶಸ್ತಿಯನ್ನು ಆರು ವರ್ಷದ ಹಿಂದೆ ಕಸ್ತೂರಿ ರಂಗನ್‌ ಅವರಿಗೆ ಪ್ರದಾನ ಮಾಡಲಾಗಿತ್ತು.

ಭಾರತದ ಬಾಹ್ಯಾಕಾಶ ಸಂಸ್ಥೆಗೆ ಕಠಿಣ ಸಮಯದ ಅವಧಿ. ಆಗ ಕಸ್ತೂರಿ ರಂಗನ್‌ ಅಧ್ಯಕ್ಷರಾಗಿ ಬದಲಾವಣೆಗೆ ನಾಂದಿ ಹಾಡಿದರು. ಕ್ರಯೋಜೆನಿಕ್ ತಂತ್ರಜ್ಞಾನಕ್ಕೆ ಪ್ರವೇಶ ಸೇರಿದಂತೆ ಅಂತರರಾಷ್ಟ್ರೀಯ ನಿರ್ಬಂಧಗಳನ್ನು ಎದುರಿಸಿದ ಸಮಯದಲ್ಲಿ ಅವರು ಗಟ್ಟಿಯಾಗಿ ಕೆಲಸ ಮಾಡಿದರು. ಅದರಲ್ಲೂ 1998 ರಲ್ಲಿ ಭಾರತದ ಪರಮಾಣು ಪರೀಕ್ಷೆಯ ನಂತರ ನಿರ್ಬಂಧಗಳು ಮತ್ತಷ್ಟು ಬಿಗಿಯಾದಾಗ ಕಸ್ತೂರಿ ರಂಗನ್‌ ಅವರು ಭಾರತದ ವಿಜ್ಞಾನ, ತಂತ್ರಜ್ಞಾನ ವಲಯಕ್ಕೆ ಬಲ ತುಂಬಿದರು.

ಇದಲ್ಲದೇ ರಾಷ್ಟ್ರೀಯ ಶಿಕ್ಷಣ ಕರಡು ನೀತಿ ಜಾರಿ ಸಮಿತಿಯ ಅಧ್ಯಕ್ಷರಾಗಿಯೂ ಭಾರತದಲ್ಲಿ ಎನ್‌ಇಪಿ ಜಾರಿಗೆ ಪ್ರಯತ್ನ ಮಾಡಿದವರು. ಅವರು ನೀಡಿದ ವರದಿ ಆಧರಿಸಿಯೇ ಎನ್‌ಇಪಿಯನ್ನು ಕೇಂದ್ರ ಸರ್ಕಾರ ಐದು ವರ್ಷದ ಹಿಂದೆ ಜಾರಿಗೊಳಿಸಿತ್ತು.

ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳಲ್ಲಿ ಹಬ್ಬಿರುವ ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ರಚಿಸಲಾಗಿದ್ದ ಸಮಿತಿಗೆ ಡಾ.ಕಸ್ತೂರಿರಂಗನ್‌ ಅವರು ನೇತೃತ್ವ ವಹಿಸಿದ್ದರು. ಅವರು ನೀಡಿದ ವರದಿಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾರ್ಯೋನ್ಮುಖವೂ ಆಗಿದೆ. ಕರ್ನಾಟಕದಲ್ಲಿ ಕೆಲವು ಬದಲಾವಣೆಗಳೊಂದಿಗೆ ಕಸ್ತೂರಿ ರಂಗನ್‌ ಅವರ ವರದಿಯನ್ನು ಜಾರಿ ಮಾಡಲು ಅನುಮತಿಯನ್ನು ನೀಡಲಾಗಿದೆ.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.