ಪಹಲ್ಗಾಮ್ ಘಟನೆ ನಂತರ ಉಗ್ರರ ನೆಲೆಗಳ ಮೇಲೆ ದಾಳಿಗೆ ಶಿವಮೊಗ್ಗ ಮಂಜುನಾಥ್ರಾವ್ ಕುಟುಂಬಸ್ಥರ ಸ್ವಾಗತ
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಎರಡು ವಾರದ ಹಿಂದೆ ಪ್ರವಾಸಕ್ಕೆ ಹೋಗಿದ್ದಾಗ ಉಗ್ರಗಾಮಿಗಳಿಂದ ಹತರಾದ ಶಿವಮೊಗ್ಗದ ಮಂಜುನಾಥ್ ರಾವ್ ಕುಟುಂಬದವರು ಆಪರೇಷನ್ ಸಿಂಧೂರ ಮೂಲಕ ನಡೆಸಿದ ಕಾರ್ಯಾಚರಣೆಯನ್ನು ಸ್ವಾಗತಿಸಿದ್ದಾರೆ.

ಶಿವಮೊಗ್ಗ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಎರಡು ವಾರದ ಹಿಂದೆ ನಡೆದ ಉಗ್ರರ ದಾಳಿಯಲ್ಲಿ ತಮ್ಮ ಕುಟುಂಬದವರನ್ನು ಕಳೆದುಕೊಂಡವರು ಈಗ ಕೇಂದ್ರ ಸರ್ಕಾರ ನಡೆಸಿ ಆಪರೇಷನ್ ಸಿಂಧೂರ ದಾಳಿಯನ್ನು ಸ್ವಾಗತಿಸಿದ್ದಾರೆ. ಉಗ್ರರ ನೆಲೆಗಳ ಮೇಲೆ ದಾಳಿ ಮಾಡಿ ಭಯೋತ್ಪಾದನೆ ಚಟುವಟಿಕೆಗಳಲ್ಲಿ ಭಾಗಿಯಾದವರನ್ನು ಕೊಂದು ಹಾಕಿರುವ ಕ್ರಮದ ಬಗ್ಗೆಯೂ ಸಂತಸ ವ್ಯಕ್ತಪಡಿಸಿದ್ದಾರೆ. ಕೇಂ ದ್ರ ಸರ್ಕಾರದವರು ಉಗ್ರರನ್ನು ಗುರಿಯಾಗಿಸಿ ಸರಿಯಾದ ನಿರ್ಧಾರ ತೆಗೆದುಕೊಂಡಿದ್ದಾರೆ. ಅಮಾಯಕರಿಗೆ ತೊಂದರೆಯಾಗದೇ ಉಗ್ರರನ್ನು ಹೀಗೆಯೇ ಸೆದೆ ಬಡಿಯಬೇಕು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗ ಮೂಲದ ರಿಯಲ್ಎಸ್ಟೇಟ್ ಉದ್ಯಮಿ ಮಂಜುನಾಥ್ರಾವ್ ಅವರನ್ನು ಪತಿ ಹಾಗೂ ಮಗನ ಎದುರಿನಲ್ಲಿಯೇ ಉಗ್ರಗಾಮಿಗಳು ಕೊಂದು ಹಾಕಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.ಇವರೊಂದಿಗೆ ಕರ್ನಾಟಕದ ಬೆಂಗಳೂರಿನವರಾದ ಭರತ್ ಭೂಷಣ್ ಎಂಬುವವರೂ ಹತರಾಗಿದ್ದರು.
ನಮ್ಮ ಕುಟುಂಬದ ಸದಸ್ಯರನ್ನು ಕಾಶ್ಮೀರದಲ್ಲಿ ನಡೆದಿದ್ದ ದಾಳಿಯಲ್ಲಿ ಕಳೆದುಕೊಂಡಿದ್ದೆವು. ನಮ್ಮ ಕುಟುಂಬ ಸದಸ್ಯರನ್ನು ಕೊಂದವರಿಗೆ ಶಿಕ್ಷೆಯಾಗಬೇಕಿತ್ತು. ಈಗ ಅವರ ವಿರುದ್ದ ನಡೆಸಿದ ಆಪರೇಷನ್ ಸಿಂಧೂರ ದಾಳಿ ಮೂಲಕ ಉತ್ತರವನ್ನು ಕೇಂದ್ರ ಸರ್ಕಾರ ನೀಡಿದೆ. ಇದನ್ನು ನಾವೆಲ್ಲರೂ ಖಂಡಿತವಾಗಿಯೂ ಸ್ವಾಗತಿಸುತ್ತೇವೆ ಎಂದವರು ಉದ್ಯಮಿ ಮಂಜುನಾಥ್ ರಾವ್ ತಾಯಿ ಸುಮತಿರಾವ್.
ಶಿವಮೊಗ್ಗದಲ್ಲಿ ಈ ಟಿವಿ ಭಾರತ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸುಮತಿರಾವ್, ಕಾಶ್ಮೀರದಲ್ಲಿ ನಡೆದ ರೀತಿ ಸುಮ್ಮನೆ ಒಂದು ದೇಶಕ್ಕೆ ನುಗ್ಗಿ, ನಮ್ಮ ವ್ಯವಸ್ಥೆಯನ್ನೆಲ್ಲ ಹಾಳು ಮಾಡುವುದು ತಪ್ಪು. ಇದನ್ನು ಯಾರೂ ಒಪ್ಪುವುದಿಲ್ಲ. ಅನ್ಯಾಯವಾಗಿ 26 ಜನ ಅಮಾಯಕರ ಜೀವ ಹೋಯಿತು. ಅದಕ್ಕೆ ಭಾರತದ ಸೇನೆಯು ಸರಿಯಾದ ಪಾಠ ಕಲಿಸುತ್ತದೆ ಎನ್ನುವ ವಿಶ್ವಾಸದಲ್ಲಿದ್ದವು.ಯುದ್ಧ ಅಲ್ಲದಿದ್ದರೂ, ಏನಾದರೂ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ನಮಗೆ ಅನ್ನಿಸುತ್ತಿತ್ತು ಈಗ ತಕ್ಕ ಪಾಠವನ್ನೇ ಉಗ್ರರಿಗೆ ಕಲಿಸಿದ್ದಾರೆ.ಮೋದಿ ಅವರು ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದರು.
ನಮ್ಮವರನ್ನು ಕೊಂದವರಿಗೆ ಶಿಕ್ಷೆ ಆಗಬೇಕಿತ್ತು ಎಂದು ಮನಸು ಹೇಳುತ್ತಿತ್ತು. ಹಾಗೆಂದು ಅಮಾಯಕರಿಗೆ ಏನೂ ತೊಂದರೆ ಆಗಬಾರದು. ಸರ್ವೇ ಜನ ಸುಖಿನೋ ಭವಂತು ಅಂತ ನಾವು ಕೇಳಿಕೊಳ್ಳುತ್ತೇವೆ. ಎಲ್ಲರೂ ಚೆನ್ನಾಗಿರಬೇಕು ಎಂಬುದೇ ನಮ್ಮ ಬಯಕೆ. ನಾವು ಬೇಡಿಕೊಳ್ಳುವುದು. ಮುಂದೆಯೂ ಪ್ರಾರ್ಥನೆ ಮಾಡಿಕೊಳ್ಳುವುದು ಅದನ್ನೇ ಎನ್ನುವುದು ಅವರ ನುಡಿ.
ಮಾಜಿ ಡಿಸಿಎಂ ಈಶ್ವರಪ್ಪ ಸ್ವಾಗತ
ಇದೇ ವೇಳೆ ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತದ ದಾಳಿ ವಿಚಾರವಾಗಿ ಶಿವಮೊಗ್ಗದಲ್ಲಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ಕೇಂದ್ರ ಸರ್ಕಾರ ನಡೆಸಿದ ಆಪರೇಷನ್ ಸಿಂಧೂರ ಬಹಳ ಸಂತೋಷದ ವಿಚಾರ. ಲಷ್ಕರ್ -ಇ- ತೋಯ್ಬಾ ಹಾಗೂ ವಿವಿಧ ಉಗ್ರ ಸಂಘಟನೆಗಳ ಮೇಲೆ ದಾಳಿ ಮಾಡಲಾಗಿದೆ. ಆಪರೇಶನ್ ಸಿಂಧೂರ ಮೂಲಕ ನಮ್ಮ ಸೈನಿಕರು ಧ್ವಂಸ ಮಾಡಿದ್ದಾರೆ. ಸೈನಿಕರ ದಾಳಿಯಿಂದ ಶಕ್ತಿಶಾಲಿ ಉಗ್ರರೆ ಸತ್ತರುವುದು ಸಂತೋಷ. ಉಗ್ರರು ಹೆಣ್ಣು ಮಕ್ಕಳ ಸಿಂಧೂರ ಅಳಿಸುವ ಕೆಲಸ ಮಾಡಿದ್ದರು.ಅದಕ್ಕೆ ಪ್ರತಿಯಾಗಿ ಆಪರೇಶನ್ ಸಿಂಧೂರ ಎಂದು ಹೆಸರಿಟ್ಟಿರುವುದು ಸಂತೋಷ.100 ಕ್ಕೂ ಹೆಚ್ಚು ಉಗ್ರರು ಬಲಿಯಾಗಿದ್ದಾರೆ ಎನ್ನಲಾಗುತ್ತಿದೆ.ಚೀನಾ ಒಂದು ಬಿಟ್ಟು ಇನ್ನೆಲ್ಲಾ ದೇಶಗಳು ಸಂತೋಷ ಪಟ್ಟಿವೆ.ಇಡೀ ವಿಶ್ವವೇ ಇಂದು ಭಾರತದ ಜೊತೆಗಿದೆ ಎಂದು ಹೇಳಿದರು.
ಮೋದಿ, ರಾಜನಾಥ್ ಸಿಂಗ್, ಅಮಿತ್ ಶಾ ಅವರು ಸೇನೆಗೆ ಬೆಂಬಲ ನೀಡಿದ್ದಾರೆ. ಎಲ್ಲರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ. ಸಿಎಂ ಸಿದ್ದರಾಮಯ್ಯ ಅವರೂ ಸೈನಿಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಕೂಡ ಅಭಿನಂದಿಸಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷ ಟ್ವಿಟರ್ ಮೂಲಕ ಶಾಂತಿ ಮಂತ್ರ ಜಪಿಸಿದ್ದಾರೆ. ಸಾಕಷ್ಟು ವಿರೋಧ ವ್ಯಕ್ತವಾದ ಬಳಿಕ ಅದನ್ನ ಡಿಲೀಟ್ ಮಾಡಿದ್ದಾರೆ.ಎಲ್ಲಿಯವರೆಗೆ ಶಾಂತಿ ಮಂತ್ರ ಪಠಿಸಲು ಸಾಧ್ಯ. ಇಂತಹ ಸಂದರ್ಭದಲ್ಲಿ ದೇಶದ ಜೊತೆ ನಿಲ್ಲೋ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಹುಡುಕಿ, ಹುಡುಕಿ ಹೊಡೆಯೋ ಕೆಲಸವನ್ನ ಕೇಂದ್ರ ಸರ್ಕಾರ ಮಾಡುತ್ತಿದೆ. ಪಾಕಿಸ್ತಾನ ನಾಗರೀಕರ ಮೇಲೆ ದಾಳಿ ಮಾಡುತ್ತಿದೆ.ಅದರ ಪ್ರತಿಫಲವನ್ನ ಕೂಡ ಪಾಕಿಸ್ತಾನ ಅನುಭವಿಸಬೇಕಾಗುತ್ತೆ. ಭಾರತ ಉಗ್ರಗಾಮಿಗಳನ್ನು ಮಾತ್ರ ಹುಡುಕಿ ಕೊಲ್ಲುತ್ತಿದೆ.ನಾಗರೀಕರ ಮೇಲೆ ದಾಳಿ ಮಾಡಿಲ್ಲ. ಇದು ಸಂತೋಷದ ವಿಚಾರ. ಸೈನಿಕರ ನೈತಿಕತೆಯನ್ನ ನಾನು ಮೆಚ್ಚುತ್ತೇನೆ ಎಂದರು ಈಶ್ವರಪ್ಪ.