ಈ ಸಾವು ಸದಾ ನಮ್ಮನ್ನು ಕಾಡುತ್ತೆ: ಕಾಶ್ಮೀರದ ಪಹಲ್ಗಾಮ್ ಉಗ್ರರ ದಾಳಿಗೆ ಸ್ಪಂದಿಸಿದ ಜನ, ಪತಿಯ ಶವದ ಪಕ್ಕ ಅಳುತ್ತಿರುವ ಮಹಿಳೆಯ ಫೋಟೊ ವೈರಲ್
ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ಹಿಂದೂಗಳನ್ನೇ ಗುರಿಯಾಗಿಟ್ಟುಕೊಂಡು ನಡೆಸಿರುವ ದಾಳಿ, ಅಲ್ಲಿನ ಸನ್ನಿವೇಶ, ಮಹಿಳೆಯರ ಆಕ್ರಂದನ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ.

ಬೆಂಗಳೂರು: ಕೆಲ ತಿಂಗಳಿನಿಂದ ಶಾಂತಿ ನೆಲೆಸಿದಂತೆ ಕಂಡ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಉಗ್ರರ ದಾಳಿಯಾಗಿದೆ. ಈ ದಾಳಿಯಲ್ಲಿ ಕರ್ನಾಟಕದವರ ಸಹಿತ ಹಲವರು ಜೀವ ಕಳೆದುಕೊಂಡಿದ್ದಾರೆ. ಸ್ಮರಣೀಯ ಕ್ಷಣದೊಂದಿಗೆ ಹಿಂದಿರುಗಲು ಅಣಿಯಾಗಿದ್ದವರ ಮೇಲೂ ದಾಳಿಯಾಗಿದೆ. ರೆಸಾರ್ಟ್ಗೆ ನುಗ್ಗಿ ಗುಂಡಿನ ಮಳೆ ಸುರಿಗೈಯಲಾಗಿದೆ. ಅದರಲ್ಲೂ ಪುರುಷರನ್ನೇ ಗುರಿಯಾಗಿಸಿ ದಾಳಿ ಮಾಡಲಾಗಿದೆ. ಹಿಂದೂಗಳನ್ನೇ ಟಾರ್ಗೆಟ್ ಮಾಡಲಾಗಿದೆ. ದಾಳಿ ವೇಳೆ ಹತರಾದ ಪುರುಷರು ಜೀವ ಕಳೆದುಕೊಂಡಿದ್ದರೆ. ಅವರ ದೇಹದ ಬಳಿ ಅಸಹಾಯತೆಯಿಂದ ಕುಳಿತ ಮಹಿಳೆ ಸಹಾಯಕ್ಕೆ ಅಂಗಲಾಚುತ್ತಿರುವ ವಿಡಿಯೋ ಹಾಗೂ ಫೋಟೋವೊಂದು ಭಾರೀ ವೈರಲ್ ಆಗಿದೆ. ಇದಕ್ಕೆ ಕನ್ನಡಿಗರು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಆಕ್ರೋಶ ಹೊರ ಹಾಕಿದ್ದಾರೆ. ಭಯೋತ್ಪಾದಕರಿಗೆ ಧರ್ಮವಿಲ್ಲ. ನಮ್ಮಗಳ ಹೇಡಿತನಕ್ಕೆ ಮದ್ದಿಲ್ಲ. ನಾವು ಸೇಡು ತೀರಿಸಿಕೊಳ್ಳಲೇಬೇಕು ಎನ್ನುವ ಅಭಿಪ್ರಾಯವನ್ನು ಹಲವರು ವ್ಯಕ್ತಪಡಿಸಿದ್ದಾರೆ.
ಶೋಭಾರಾವ್ ಅವರ ಪ್ರತಿಕ್ರಿಯೆ ಹೀಗಿದೆ. ಉಗ್ರರ ದಾಳಿಯ ಸುದ್ದಿ ನೋಡುತ್ತಿದ್ದ ಹಾಗೆ ಮೊದಲು ನೆನಪಾಗಿದ್ದೇ ಮೊನ್ನೆಯಷ್ಟೆ ಮಂಜು ಕಾಶ್ಮೀರ ಹೋಗ್ತಾ ಇದೀನಿ ಅಂತ ಪೋಸ್ಟ್ ಹಾಕಿದ್ದು. ಗಾಬರಿಯಿಂದ ಸ್ಕ್ರೋಲ್ ಮಾಡಿದರೆ ಅವನದೇ ಫೋಟೋ. ನಂಬಲು ಸಾದ್ಯವೇ ಇಲ್ಲದೆ ಸ್ಕ್ರೋಲ್ ಮಾಡುತ್ತಾ ಹೋದರೆ ಎಲ್ಲಾ ಸುದ್ದಿಗಳು ಅದೇ ನಿಜ ಎಂದು ಹೇಳುತ್ತಿದೆ.
ಪ್ರವಾಸಿಗರನ್ನು ಕೊಂಚವೂ ಮನುಷ್ಯತ್ವ ಇಲ್ಲದೆ ನೀನು ಹಿಂದೂವಾ ಎಂದು ಕೇಳಿ ಕನ್ಫರ್ಮ್ ಮಾಡಿಕೊಂಡು ಅದರಲ್ಲೂ ಹೆಂಡತಿ ಮಗನ ಎದುರಿಗೆ ಷೂಟ್ ಮಾಡಿ ಕೊಲ್ಲಬೇಕಾದರೆ ಹೋಗಿ ನಿನ್ನ ಮೋದಿಗೆ ಹೇಳು ಎಂದು ಹೇಳಬೇಕಾದರೆ ಅದೆಂತ ಕ್ರೌರ್ಯ ತುಂಬಿಕೊಂಡಿರಬಹುದು. ಅವರ ಧಾರ್ಮಿಕ ಅಮಲು, ರಾಜಕೀಯ ಹಿನ್ನಲೆ, ದಾಯಾದಿ ದ್ವೇಷ ಏನೇ ಇರಲಿ ಮಂಜು ಹೆಂಡತಿ ಹಾಗೂ ಮಗನ ಮನಸ್ಥಿತಿ ಇಡೀ ಬದುಕು ಅವರ ಕಾಡುವ ಈ ಘಟನೆ, ಅವರು ಅನುಭವಿಸುವ ನರಕ ಊಹಿಸಿಕೊಂಡು ಸಂಕಟ ಸಿಂಬಿ ಸುತ್ತುತ್ತಿದೆ. ಉಫ್ ಇದು ಕಾಡುತ್ತಲೇ ಉಳಿಯುವ ಘಟನೆ.
ಅಮಾಯಕರ ಪ್ರಾಣ ಎಷ್ಟು ಅಗ್ಗ ಈ ಜಗತ್ತಿನಲ್ಲಿ. ಅಂದ ಹಾಗೆ ಭಯೋತ್ಪಾದಕರಿಗೆ ಧರ್ಮವಿಲ್ಲ. ನಮ್ಮಗಳ ಹೇಡಿತನಕ್ಕೆ ಮದ್ದಿಲ್ಲ. ಸೇಡು ತೀರಿಸಿಕೊಳ್ಳಲೇನಬೇಕು ಎಂದು ಬರೆದಿದ್ದಾರೆ.
ಕೃಷ್ಣಭಟ್ ಅವರು ಇದು ಅಕ್ಷಮ್ಯ ಎಂದಷ್ಟೇ ಫೋಟೋ ಶೇರ್ ಮಾಡಿದ್ದಾರೆ.
ಲೇಖಕಿ ದೀಪಾ ಹಿರೇಗುತ್ತಿ, ಕಾಶ್ಮೀರ ಮತ್ತೆ ಗಾಯಗೊಂಡಿದೆ. ಇಪ್ಪತ್ತೈದಕ್ಕೂ ಹೆಚ್ಚಿನ ಪ್ರವಾಸಿಗರು ಉಗ್ರರ ದಾಳಿಗೆ ಬಲಿಯಾಗಿದ್ದಾರೆ. So sad.. ಎಂಥಾ ನೀಚ ಕೃತ್ಯ. ತನ್ನ ಪ್ರೀತಿಪಾತ್ರರನ್ನು ಕಳೆದುಕೊಂಡ ಈ ಚಿತ್ರದಲ್ಲಿನ ಮಹಿಳೆಗೆ ಮತ್ತು ಅಂಥವರಿಗೆ ಹೇಗೆ ಸಮಾಧಾನ ಹೇಳುವುದು ಎಂದು ಬರೆದಿದ್ದಾರೆ.
ಸಂತೋಷ್ ಸಂತು ಅವರು, ಕೊಂದವರು ಕಾಶ್ಮೀರದ ನಿವಾಸಿಗಳೇ, ಪಾಕ್ ಮೂಲದ ಲಷ್ಕರ್ ಎ ತೋಯಿಬಾದ ವಿಂಗ್ ಆದ The Resistance Front ನ ಭಯೋತ್ಪಾದಕ ಸದಸ್ಯರು.. ಹಿಂದೂ ಕಾಫೀರ ಅಂತ ಗೊತ್ತಾದ ನಂತರ ಹತ್ಯೆ.. ಸತ್ಯ ಕಹಿ..
ನಂದಿನಿ ಹೆದ್ದುರ್ಗ ಅವರು ನಮ್ಮ ಭಂಡತನಕ್ಕೆ ನಾಚಿಕೆಯಾಗ್ತಿದೆ ಎಂದು ಪ್ರತಿಕ್ರಿಯಿಸಿದರೆ. ವೀರೇಂದ್ರಕುಮಾರ ಅರವಕ್ಕಿ ಅವರು, ಪಾಕಿಸ್ತಾನಕ್ಕೆ ಸಾಕ್ಷಿ ಕೊಡೋದನ್ನ ಭಾರತ ನಿಲ್ಲಿಸಬೇಕು. ಇಸ್ರೇಲ್ ರೀತಿ ಪ್ರತೀಕಾರ ಒಂದೇ ಇದಕ್ಕೆ ಉತ್ತರ ಎಂದು ಹೇಳಿದ್ದಾರೆ.
ನಂದಕುಮಾರ್ ಹೊಸಮನೆ ಸುಬ್ರಹ್ಮಣ್ಯ ಅವರು, ನನ್ನ ಹತ್ತಿರದ ಸಂಬಂಧಿ ಎಳೆಯ ವಯಸ್ಸಿನ ಮಂಜುನಾಥ, ಶಿವಮೊಗ್ಗ ಈ ಹೇಯ ಕೃತ್ಯಕ್ಕೆ ಬಲಿಯಾಗಿದ್ದಾನೆ. ಸಂಕಟವಾಗುತ್ತಿದೆ ಎಂದು ಬೇಸರ ಹೊರ ಹಾಕಿದ್ದಾರೆ.
ಕೇರಳದ ಮಾಜಿ ಡಿಜಿಪಿ ಡಾ.ಟಿ.ಪಿ.ಸೇನ್ಕುಮಾರ್ ಕೂಡ ಕಾರವಾಗಿಯೇ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ನೀವು ಕನ್ನಡ, ಮರಾಠಿ/ಹಿಂದಿ ಮಾತನಾಡುತ್ತೀರಾ ಎಂದು ಅವರು ಕೇಳಲಿಲ್ಲ. ನೀವು ಬಿಜೆಪಿ/ಕಾಂಗ್ರೆಸ್ಗೆ ಮತ ಹಾಕಿದ್ದೀರಾ ಎಂದು ಅವರು ಕೇಳಲಿಲ್ಲ. ನೀವು ಮೇಲ್ವರ್ಗ, ಕೆಳವರ್ಗ, ಸಾಮಾನ್ಯ ವರ್ಗಕ್ಕೆ ಸೇರಿದವರೇ ಎಂದು ಅವರು ಕೇಳಲಿಲ್ಲ. ನೀವು ಹಿಂದೂ ಅಥವಾ ಹಿಂದೂಯೇತರರೇ ಎಂದು ಮಾತ್ರ ಅವರು ಕೇಳಿದರು. ಆದರೂ ಅವರು ಭಯೋತ್ಪಾದನೆಗೆ ಯಾವುದೇ ಧರ್ಮವಿಲ್ಲ ಎಂದು ಹೇಳುತ್ತಾರೆ ಎನ್ನುವುದು ಸೇನ್ಕುಮಾರ್ ಅವರ ಪೋಸ್ಟ್ನ ಸಾರ.