ಕರ್ನಾಟಕದಲ್ಲಿ ಜನಿವಾರ ವಿವಾದ; ಕಾಲೇಜಿನ ಪ್ರಾಂಶುಪಾಲರು-ಸಿಬ್ಬಂದಿ ಅಮಾನತು; ಇಲ್ಲಿದೆ ಈವರೆಗಿನ ಪ್ರಮುಖ 10 ಅಂಶಗಳು
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕದಲ್ಲಿ ಜನಿವಾರ ವಿವಾದ; ಕಾಲೇಜಿನ ಪ್ರಾಂಶುಪಾಲರು-ಸಿಬ್ಬಂದಿ ಅಮಾನತು; ಇಲ್ಲಿದೆ ಈವರೆಗಿನ ಪ್ರಮುಖ 10 ಅಂಶಗಳು

ಕರ್ನಾಟಕದಲ್ಲಿ ಜನಿವಾರ ವಿವಾದ; ಕಾಲೇಜಿನ ಪ್ರಾಂಶುಪಾಲರು-ಸಿಬ್ಬಂದಿ ಅಮಾನತು; ಇಲ್ಲಿದೆ ಈವರೆಗಿನ ಪ್ರಮುಖ 10 ಅಂಶಗಳು

ಶಿವಮೊಗ್ಗ ಮತ್ತು ಬೀದರ್‌ನ ಪರೀಕ್ಷಾ ಕೇಂದ್ರಗಳಲ್ಲಿ ವರದಿಯಾದ ಘಟನೆಯು, ಬ್ರಾಹ್ಮಣ ಸಮುದಾಯದ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ವಿದ್ಯಾರ್ಥಿಗಳ ಜನಿವಾರ ತೆಗೆಯುವಂತೆ ಒತ್ತಾಯಿಸಿದ್ದು ಹಲವು ವಿವಾದಗಳಿಗೆ ಕಾರಣವಾಗಿದೆ. ಈ ಕುರಿತ ಪ್ರಮುಖ ಬೆಳವಣಿಗೆಗಳ ವಿವರ ಇಲ್ಲಿದೆ.

ಕರ್ನಾಟಕದಲ್ಲಿ ಜನಿವಾರ ವಿವಾದ; ಇಲ್ಲಿದೆ ಈವರೆಗಿನ ಪ್ರಮುಖ 10 ಅಂಶಗಳು
ಕರ್ನಾಟಕದಲ್ಲಿ ಜನಿವಾರ ವಿವಾದ; ಇಲ್ಲಿದೆ ಈವರೆಗಿನ ಪ್ರಮುಖ 10 ಅಂಶಗಳು

ಬೆಂಗಳೂರು: ಬೀದರ್ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಸಿಇಟಿ ಪರೀಕ್ಷೆ ಬರೆಯಲು ಬಂದಿದ್ದ ಕೆಲವು ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರದೊಳಗೆ ಪ್ರವೇಶಿಸುವ ಮುನ್ನ ಜನಿವಾರ ತೆಗೆಯುವಂತೆ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ. ಬೀದರ್‌ನ ಸಾಯಿ ಸ್ಪೂರ್ತಿ ಕಾಲೇಜಿನ ಪರೀಕ್ಷಾ ಕೇಂದ್ರದ ಸ್ಕ್ರೀನಿಂಗ್ ಕಮಿಟಿಯು, ಪರೀಕ್ಷಾ ಕೊಠಡಿಗೆ ಪ್ರವೇಶಿಸಲು ಬಿಡದೆ ಜನಿವಾರವನ್ನು ತೆಗೆದುಹಾಕುವಂತೆ ವಿದ್ಯಾರ್ಥಿಗೆ ಹೇಳಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರಕರಣ ಸಂಬಂಧ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಹಲವು ಬೆಳವಣಿಗೆಗಳು ನಡೆದಿವೆ.

ಜನಿವಾರ ಪ್ರಕರಣವು ಇದೀಗ ರಾಜ್ಯದಲ್ಲಿ ಭಾರಿ ವಿವಾದ ಸೃಷ್ಟಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗಿನ ಪ್ರಮುಖ 10 ಬೆಳವಣಿಗೆಗಳನ್ನು ನೋಡೋಣ.

  1. ಶಿವಮೊಗ್ಗದಲ್ಲಿ ಸಿಇಟಿ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿಯ ಜನಿವಾರವನ್ನು ಅಧಿಕಾರಿಗಳು ತೆಗೆಸಿದ್ದರು. ಅತ್ತ ಬೀದರ್‌ನಲ್ಲಿ ಜನಿವಾರ ಹಾಕಿದ್ದ ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಿರಲಿಲ್ಲ. ಅಧಿಕಾರಿಗಳ ಈ ಕ್ರಮದ ವಿರುದ್ಧ ಬ್ರಾಹ್ಮಣ ಮಹಾಸಭಾ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಅದರ ಬೆನ್ನಲ್ಲೇ ರಾಜ್ಯದ್ಯಂತ ವ್ಯಾಪಕ ಆಕ್ಷೇಪ ಹಾಗೂ ವಿರೋಧಗಳು ವ್ಯಕ್ತವಾಗಿವೆ.‌
  2. ಶಿವಮೊಗ್ಗದ ಆದಿಚುಂಚನಗಿರಿ ಪಿಯು ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಬುಧವಾರ (ಏ.16) ಮೂವರು ವಿದ್ಯಾರ್ಥಿಗಳಿಗೆ ಭದ್ರತಾ ಸಿಬ್ಬಂದಿ ತಮ್ಮ ಜನಿವಾರಗಳನ್ನು ತೆಗೆಯುವಂತೆ ಸೂಚಿಸಿದ್ದರು. ವರದಿಗಳ ಪ್ರಕಾರ, ಒಬ್ಬ ವಿದ್ಯಾರ್ಥಿ ಇದಕ್ಕೆ ನಿರಾಕರಿಸಿದ್ದಾನೆ. ಆದರೆ ಆತನಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಇತರ ಇಬ್ಬರು ಪರೀಕ್ಷಾ ಕೊಠಡಿಗೆ ಪ್ರವೇಶಿಸುವ ಮೊದಲು ಜನಿವಾರನನ್ನು ತೆಗೆದಿದ್ದಾರೆ.
  3. ಜನಿವಾರ ಧರಿಸಿ ಯಾವುದೇ ದುಷ್ಕೃತ್ಯದಲ್ಲಿ ತೊಡಗುವ ಸಾಧ್ಯತೆಯಿಲ್ಲ. ಹೀಗಾಗಿ ಪರೀಕ್ಷಾ ಕೊಠಡಿಯೊಳಗೆ ಅನುಮತಿ ನೀಡುವಂತೆ ವಿದ್ಯಾರ್ಥಿ ಪರೀಕ್ಷಾ ಸಿಬ್ಬಂದಿಯನ್ನು ವಿನಂತಿಸಿಕೊಂಡಿದ್ದಾನೆ. ಆದರೂ ಆತನಿಗೆ ಅವಕಾಶ ನೀಡಲಿಲ್ಲ. ಜನಿವಾರವನ್ನು ತೆಗೆದ ನಂತರ ಪರೀಕ್ಷಾ ಕೊಠಡಿಗೆ ಪ್ರವೇಶಿಸಲು ಅವನಿಗೆ ತಿಳಿಸಲಾಯಿತು. ಆದರೆ ವಿದ್ಯಾರ್ಥಿ ಅದಕ್ಕೆ ನಿರಾಕರಿಸಿ ಗಣಿತ ಪತ್ರಿಕೆಗೆ ಹಾಜರಾಗದೆ ಪರೀಕ್ಷಾ ಕೇಂದ್ರವನ್ನು ತೊರೆದಿದ್ದಾನೆ, ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
  4. ಗುರುವಾರ (ಏ.17) ಮಧ್ಯಾಹ್ನ ನಡೆದ ಜೀವಶಾಸ್ತ್ರ ಪರೀಕ್ಷೆಗೆ ಜನಿವಾರ ಧರಿಸಿ ಹಾಜರಾಗಲು ಅವಕಾಶ ನೀಡಲಾಗಿದೆ. ಬೀದರ್‌ನ ಅದೇ ವಿದ್ಯಾರ್ಥಿ, ಯಾವುದೇ ಸಮಸ್ಯೆಯಿಲ್ಲದೆ ಜನಿವಾರ ಧರಿಸಿಯೇ ಒಂದು ದಿನ ಮೊದಲು ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ಪರೀಕ್ಷೆಗೆ ಹಾಜರಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
  5. ವಿವಾದಾತ್ಮಕ ವಿಷಯ ತಮ್ಮ ಗಮನಕ್ಕೆ ಬಂದ ಕೂಡಲೇ ಪರೀಕ್ಷಾ ಕೇಂದ್ರದ ಮುಖ್ಯ ಪರೀಕ್ಷಕರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಈ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ಬೀದರ್ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದ್ದಾರೆ. ಪರೀಕ್ಷಾ ಕೇಂದ್ರದ ತಪಾಸಣೆ ತಂಡಕ್ಕೆ ಶೋಕಾಸ್ ನೋಟಿಸ್ ನೀಡುವುದಾಗಿ ಬೀದರ್ ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದರು.
  6. ಘಟನೆ ಸಂಬಂಧ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಮಾತನಾಡಿ, ಇಂತಹ ಘಟನೆ ನಡೆದಿರುವುದು ಖಂಡನೀಯ ಎಂದಿದ್ದಾರೆ. ಘಟನೆ ಕುರಿತು ನಾನು ವಿಸ್ತೃತ ವರದಿ ಪಡೆಯುತ್ತೇನೆ. ಅದರ ಆಧಾರದ ಮೇಲೆ ತಪ್ಪಿತಸ್ಥರ ವಿರುದ್ಧ ಕಾನೂನಿನ ಪ್ರಕಾರ ಯಾವ ಕ್ರಮ ತೆಗೆದುಕೊಳ್ಳಬೇಕು ಎಂದು ನಿರ್ಧರಿಸಲಾಗುವುದು ಎಂದಿದ್ದಾರೆ.
  7. ಘಟನೆ ಖಂಡಿಸಿರುವ ಶಿಕ್ಷಣ ಸಚಿವ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಘಟನೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡುವುದಾಗಿ ಹೇಳಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕೂಡಾ ಘಟನೆ ಖಂಡಿಸಿದ್ದಾರೆ. ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ, ಬಿಜೆಪಿ ನಾಯಕ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸೇರಿದಂತೆ ಹಲವು ನಾಯಕರು ಈ ಘಟನೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
  8. ಬೀದರ್‌ನಲ್ಲಿ ನಡೆದ ಪ್ರಕರಣ ಹೆಚ್ಚು ವಿವಾದದ ಕೇಂದ್ರ ಬಿಂದುವಾಗಿದೆ. ಅಲ್ಲಿನ ವಿದ್ಯಾರ್ಥಿ ಪರೀಕ್ಷೆ ಬರೆಯಲು ಸಾಧ್ಯವಾಗಿರಲಿಲ್ಲ. ಈ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಬೀದರ್ ಜಿಲ್ಲಾಧಿಕಾರಿ ವರದಿ ಸಲ್ಲಿಸಿದ್ದರು. ಈ ವರದಿಯಲ್ಲಿ ಅಧಿಕಾರಿಗಳದ್ದೇ ತಪ್ಪು ಎಂದು ಉಲ್ಲೇಖಿಸಲಾಗಿತ್ತು. ಪರೀಕ್ಷಾ ವೀಕ್ಷಕರಾಗಿದ್ದ ಔರಾದ್​ ಆರ್‌ಎಫ್ಒ ಮೊದ್ದಶೀರ್ ಅವರರ ನಿರ್ಲಕ್ಷ್ಯದಿಂದಾಗಿ ಈ ಘಟನೆ ನಡೆದಿದೆ. ವಿದ್ಯಾರ್ಥಿ ಪರೀಕ್ಷೆಗೆ ಕಾದು ನಿಂತರೂ ಅವಕಾಶ ಸಿಕ್ಕಿಲ್ಲ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಿಯಮ ಪಾಲಿಸದೆ ಸಿಬ್ಬಂದಿ ಎಡವಟ್ಟು ಮಾಡಿದ್ದಾರೆ ಎಂದು ವರದಿಯಲ್ಲಿ ಜಿಲ್ಲಾಧಿಕಾರಿ ತಿಳಿಸಿದ್ದರು.
  9. ಜಿಲ್ಲಾಧಿಕಾರಿ ವರದಿ ಬೆನ್ನಲ್ಲೇ ಘಟನೆ ನಡೆದ ಬೀದರ್‌​ನ ಖಾಸಗಿ ಕಾಲೇಜಿನ ಪ್ರಾಂಶುಪಾಲ ಮತ್ತು ಆ ಕಾಲೇಜಿನ ಕೆಲವು ಸಿಬ್ಬಂದಿಯನ್ನು ಕೆಲಸದಿಂದ ಅಮಾನತು ಮಾಡಲಾಗಿದೆ. ಸಾಯಿ ಸ್ಫೂರ್ತಿ ಪದವಿ ಪೂರ್ವ ಕಾಲೇಜು ಪ್ರಿನ್ಸಿಪಾಲ್​ ಚಂದ್ರಶೇಖರ ಬಿರಾದಾರ್ ಹಾಗೂ ಆ ಕಾಲೇಜಿನ ತಪಾಸಣಾ ಸಿಬ್ಬಂದಿ ಸತೀಶ್ ಪವಾರ್ ಅವರನ್ನು ಅಮಾನತು ಮಾಡಲಾಗಿದೆ. ಈ ಕುರಿತು ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಕೆ.ಜಿ. ಜಗದೀಶ್​ ಆದೇಶ ಹೊರಡಿಸಿದ್ದಾರೆ.
  10. ಘಟನೆ ಸಂಬಂಧ ರಾಜ್ಯವ್ಯಾಪಿ ಪ್ರತಿಭಟನೆ ನಡೆಸುವುದಾಗಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಎಚ್ಚರಿಕೆ ನೀಡಿದೆ. ಸುದ್ದಿಸಂಸ್ಥೆ ಎಎನ್ಐ ಜೊತೆ ಮಾತನಾಡಿದ ಮಹಾಸಭಾದ ಅಧ್ಯಕ್ಷ ರಘುನಾಥ್, ಇದು ಬ್ರಾಹ್ಮಣ ಸಮುದಾಯದ ಮೇಲಿನ ದಾಳಿ ಎಂದು ಹೇಳಿದ್ದಾರೆ. ನಾವು ಮುಖ್ಯಮಂತ್ರಿಯನ್ನು ಭೇಟಿ ಮಾಡಿದ್ದೇವೆ ಮತ್ತು ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದೇವೆ. ವಿದ್ಯಾರ್ಥಿಗಳನ್ನು ಅವಮಾನಿಸಲಾಗಿದೆ ಮತ್ತು ಇದರಲ್ಲಿ ಭಾಗಿಯಾಗಿರುವ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ಅವರು ಹೇಳಿದ್ದಾರೆ.
  11. ಜನಿವಾರ ವಿವಾದದಲ್ಲಿ ಮಾನಸಿಕವಾಗಿ ಕುಗ್ಗಿದ ಬೀದರ್‌ ವಿದ್ಯಾರ್ಥಿಗೆ ಉಚಿತ ಇಂಜಿನಿಯರಿಂಗ್‌ ಸೀಟ್‌ ಕೊಡಿಸುವ ಬಗ್ಗೆ ಸಚಿವ ಈಶ್ವರ್‌ ಖಂಡ್ರೆ ಭರವಸೆ ನೀಡಿದ್ದಾರೆ.

ಇದನ್ನೂ ಓದಿ | ನೀಟ್‌ ಪರೀಕ್ಷೆ2025 ಮೇ 4 ರಂದು ಭಾನುವಾರ ನಿಗದಿ; ಕರ್ನಾಟಕದ ಅಭ್ಯರ್ಥಿಗಳು ಈ ಸೂಚನೆಗಳನ್ನು ಗಮನಿಸಿ

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.