ಅಕ್ಷಯ ತೃತೀಯಕ್ಕೆ ಆಫರ್​​ಗಳ ಮೇಳ, ನೂತನ ಡಿಸೈನ್​ಗಳ ಲಗ್ಗೆ; ಬೆಲೆ ಗಗನಕ್ಕೇರಿದರೂ ಕುಗ್ಗದ ಚಿನ್ನದ ಖರೀದಿಗೆ ಬೇಡಿಕೆ!
ಕನ್ನಡ ಸುದ್ದಿ  /  ಕರ್ನಾಟಕ  /  ಅಕ್ಷಯ ತೃತೀಯಕ್ಕೆ ಆಫರ್​​ಗಳ ಮೇಳ, ನೂತನ ಡಿಸೈನ್​ಗಳ ಲಗ್ಗೆ; ಬೆಲೆ ಗಗನಕ್ಕೇರಿದರೂ ಕುಗ್ಗದ ಚಿನ್ನದ ಖರೀದಿಗೆ ಬೇಡಿಕೆ!

ಅಕ್ಷಯ ತೃತೀಯಕ್ಕೆ ಆಫರ್​​ಗಳ ಮೇಳ, ನೂತನ ಡಿಸೈನ್​ಗಳ ಲಗ್ಗೆ; ಬೆಲೆ ಗಗನಕ್ಕೇರಿದರೂ ಕುಗ್ಗದ ಚಿನ್ನದ ಖರೀದಿಗೆ ಬೇಡಿಕೆ!

2025ರ ಸಾಲಿನಲ್ಲಿ ಏಪ್ರಿಲ್ 30ರಂದು ಅಕ್ಷಯ ತೃತೀಯ ಇದ್ದು, ಹೆಚ್ಚು ಬೆಲೆಬಾಳುವ ನಿರ್ಜೀವ ಹಳದಿ ಲೋಹದ ಖರೀದಿಗೆ ಆಭರಣ ಪ್ರಿಯರು ಸಜ್ಜಾಗಿದ್ದಾರೆ. ಬೆಲೆ ಗಗನಕ್ಕೇರಿದರೂ ಚಿನ್ನದ ಖರೀದಿಗೆ ಬೇಡಿಕೆ ಕುಗ್ಗಿಲ್ಲ.

ಅಕ್ಷಯ ತೃತೀಯಕ್ಕೆ ಆಫರ್​​ಗಳ ಮೇಳ, ನೂತನ ಡಿಸೈನ್​ಗಳ ಲಗ್ಗೆ; ಬೆಲೆ ಗಗನಕ್ಕೇರಿದರೂ ಕುಗ್ಗದ ಚಿನ್ನದ ಖರೀದಿಗೆ ಬೇಡಿಕೆ!
ಅಕ್ಷಯ ತೃತೀಯಕ್ಕೆ ಆಫರ್​​ಗಳ ಮೇಳ, ನೂತನ ಡಿಸೈನ್​ಗಳ ಲಗ್ಗೆ; ಬೆಲೆ ಗಗನಕ್ಕೇರಿದರೂ ಕುಗ್ಗದ ಚಿನ್ನದ ಖರೀದಿಗೆ ಬೇಡಿಕೆ!

ಬೆಂಗಳೂರು: ಇತ್ತೀಚಿನ ವರ್ಷಗಳಲ್ಲಿ ಅಕ್ಷಯ ತೃತೀಯ ದಿನದಂದು ಚಿನ್ನಾಭರಣ ಖರೀದಿಸುವುದು ಹೊಸ ಟ್ರೆಂಡ್ ಆಗಿದೆ. ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಈ ಶುಭದಿನವು ಹೆಚ್ಚು ಆಪ್ತ ಎನಿಸಿದ್ದು, ಒಂದೆರಡು ಗ್ರಾಂ ಚಿನ್ನವನ್ನಾದರೂ ಖರೀದಿ ಮಾಡಲೇಬೇಕು ಎನ್ನುವುದು ಅವರ ಆಸೆ, ಬಯಕೆ. ಈ ಹಿನ್ನೆಲೆ ಚಿನ್ನಾಭರಣಗಳ ಮಳಿಗೆಗಳ ಮುಂದೆ ಜನಸ್ತೋಮ ನೆರೆದಿರುತ್ತದೆ. ಈ ವರ್ಷ ಅದರ ದುಪ್ಪಟ್ಟಾಗುವ ನಿರೀಕ್ಷೆಯಿದೆ. ಅದಕ್ಕಾಗಿ ವ್ಯಾಪಾರಿಗಳೂ ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದಾರೆ.

2025ರ ಸಾಲಿನಲ್ಲಿ ಏಪ್ರಿಲ್ 30ರಂದು ಅಕ್ಷಯ ತೃತೀಯ ಇದ್ದು, ಹೆಚ್ಚು ಬೆಲೆಬಾಳುವ ನಿರ್ಜೀವ ಹಳದಿ ಲೋಹದ ಖರೀದಿಗೆ ಆಭರಣ ಪ್ರಿಯರು ಸಜ್ಜಾಗಿದ್ದಾರೆ. ಆಭರಣ ವ್ಯಾಪಾರಿಗಳು ಗ್ರಾಹಕರಿಗೆ ವಿನೂತನ ಆಭರಣ ವಿನ್ಯಾಸಗಳನ್ನು ಸಂಗ್ರಹಿಸಿಟ್ಟಿದ್ದಾರೆ. ಜೊತೆಗೆ ಹಲವಾರು ರಿಯಾಯಿತಿಗಳನ್ನೂ ಘೋಷಿಸುತ್ತಿದ್ದಾರೆ. ನಿರೀಕ್ಷಿತ ಜನದಟ್ಟಣೆ ನಿಯಂತ್ರಿಸಲು ಅಕ್ಷಯ ತೃತೀಯ ದಿನದಂದು ಅನೇಕ ಶೋರೂಮ್​ಗಳು, ಮಳಿಗೆಗಳು ಬೆಳಿಗ್ಗೆ 7 ಗಂಟೆಯಿಂದಲೇ ತೆರೆಯುತ್ತವೆ ಎಂಬುದು ವಿಶೇಷ.

‘ಡೆಕ್ಕನ್ ಹೆರಾಲ್ಡ್’​​​ನೊಂದಿಗೆ ಮಾತನಾಡಿದ ಸಿ ಕೃಷ್ಣಯ್ಯ ಚೆಟ್ಟಿ ಗ್ರೂಪ್‌ನ ನಿರ್ದೇಶಕ ವಿನೋದ್ ಹಯಗ್ರೀವ್ ಅವರು, ‘ಇದು ನಮಗೆ ವರ್ಷದ ಅತಿದೊಡ್ಡ ಹಬ್ಬ. ನಾವು ಹೆಚ್ಚಿನ ಪ್ರಮಾಣದಲ್ಲಿ ನೂತನ ವಿನ್ಯಾಸಗಳನ್ನು ಸಂಗ್ರಹಿಸಿದ್ದೇವೆ. ವಿಶೇಷ ವಿನ್ಯಾಸ ಮತ್ತು ಹೊಸ ಸಂಗ್ರಹಗಳನ್ನು ಹೊಂದಿದ್ದೇವೆ. ಕಳೆದ 3 ತಿಂಗಳಿಂದ, ಅಕ್ಷಯ ತೃತೀಯ ವೇಳೆ ಬೇಡಿಕೆ ಪೂರೈಸಲು ಹೊಸ ವಿನ್ಯಾಸ ಮತ್ತು ಉತ್ಪಾದನೆಯ ಮೇಲೆ ಕೆಲಸ ಮಾಡುತ್ತಿದ್ದೇವೆ’ ಎಂದು ಸಿದ್ದತೆಯ ಕುರಿತು ವಿವರಿಸಿದ್ದಾರೆ.

ಮುಂಗಡ ಬುಕ್ಕಿಂಗ್ ನಡೆಯುತ್ತಿದೆ; ಶರವಣ

ಕೆಲವು ಶೋ ರೂಂಗಳಲ್ಲಿ ಗ್ರಾಹಕರ ಆದ್ಯತೆಗೆ ತಕ್ಕಂತೆ ಪೂರೈಸಲು ವಿಶೇಷವಾಗಿ ವಿನ್ಯಾಸಗೊಳಿಸಲಾದ ಮತ್ತು ಕಸ್ಟಮೈಸ್ ಮಾಡಲಾದ ಸೀಮಿತ ಆವೃತ್ತಿಯ ಸಂಗ್ರಹಗಳನ್ನು ಸಹ ಪರಿಚಯಿಸಿವೆ. ಕಳೆದೈದು ವರ್ಷಗಳಲ್ಲಿ ಅಕ್ಷಯ ತೃತೀಯಕ್ಕೆ ಚಿನ್ನದ ಬೇಡಿಕೆ ಸ್ಥಿರವಾಗಿ ಹೆಚ್ಚುತ್ತಿದೆ. ಈ ವರ್ಷ ವ್ಯವಹಾರ ಹಿಂದಿನ ವರ್ಷಕ್ಕಿಂತ ಹೆಚ್ಚಿರಲಿದೆ ಎಂದು ಆಭರಣ ವ್ಯಾಪಾರಿಗಳು ವಿಶ್ವಾಸ ಹೊಂದಿದ್ದಾರೆ.

‘ಬೇಡಿಕೆ ತುಂಬಾ ಹೆಚ್ಚಾಗಿದ್ದು, ಕಳೆದ ಒಂದು ತಿಂಗಳಿನಿಂದ ನಮಗೆ ಮುಂಗಡ ಬುಕಿಂಗ್​ಗಳು ಬರುತ್ತಿವೆ. ಅನೇಕ ಗ್ರಾಹಕರು ಈಗಾಗಲೇ ತಮ್ಮ ಆಭರಣಗಳನ್ನು ಆಯ್ಕೆ ಮಾಡಿಕೊಂಡಿದ್ದು, ಮುಂಗಡ ಹಣ ಪಾವತಿಸಿದ್ದಾರೆ. ಆದ್ದರಿಂದ ಅವರು ಅಕ್ಷಯ ತೃತೀಯದಂದು ಅವುಗಳನ್ನು ಸುಲಭವಾಗಿ ಸಂಗ್ರಹಿಸಬಹುದು’ ಎಂದು ಕರ್ನಾಟಕ ಆಭರಣ ವ್ಯಾಪಾರಿಗಳ ಸಂಘದ ಅಧ್ಯಕ್ಷ ಟಿಎ ಶರವಣ ಹೇಳಿದ್ದಾರೆ.

2,000 ಕೆಜಿ ಚಿನ್ನ ಮಾರಾಟ

2024ರಲ್ಲಿ ಅಕ್ಷಯ ತೃತೀಯದ ಸಮಯದಲ್ಲಿ ಕರ್ನಾಟಕದಲ್ಲಿ ಸುಮಾರು 2,000 ಕೆಜಿ ಚಿನ್ನ ಮಾರಾಟವಾಗಿದೆ ಎಂದು ಅಂದಾಜಿಸಲಾಗಿದೆ. ಬೆಂಗಳೂರಿನಿಂದ ರಾಜ್ಯದ ಚಿನ್ನದ ಮಾರಾಟದ ಸುಮಾರು 60% ರಷ್ಟಿದೆ. ಚಿನ್ನದ ಬೆಲೆಯಲ್ಲಿನ ಏರಿಕೆಯು ಬೇಡಿಕೆ ಪ್ರಮಾಣ ಕುಗ್ಗಿಸುವುದಿಲ್ಲ. ಇತ್ತೀಚಿಗೆ ಚಿನ್ನದ ಬೆಲೆ ಗಗನಕ್ಕೇರಿದ್ದರೂ ಅಕ್ಷಯ ತೃತೀಯಕ್ಕೆ ಬೇಡಿಕೆ ಇನ್ನೂ ಕಡಿಮೆಯಾಗಿಲ್ಲ. ಹಲವರಿಗೆ, ಇದು ಒಂದು ಸಂಪ್ರದಾಯವಾದರೆ; ಕೆಲವರಿಗೆ, ಇದು ಕಾರ್ಯತಂತ್ರದ ಹೂಡಿಕೆಯಾಗಿದೆ.

ಬೆಲೆಯಲ್ಲಿ ಹೊಸ ದಾಖಲೆ

ಮಂಗಳವಾರ (ಏಪ್ರಿಲ್ 22), ಚಿನ್ನದ ಬೆಲೆ ಹೊಸ ದಾಖಲೆ ತಲುಪಿತ್ತು. 24 ಕ್ಯಾರೆಟ್ ಚಿನ್ನದ 10 ಗ್ರಾಂ ಚಿನ್ನದ ಬೆಲೆ 1 ಲಕ್ಷ ರೂ.ಗಳನ್ನು ದಾಟಿ, 1,01,350 ರೂ.ಗಳನ್ನು ತಲುಪಿದ್ದರೆ, 22 ಕ್ಯಾರೆಟ್ ಚಿನ್ನದ ಬೆಲೆ 92,900 ರೂ.ಗಳಷ್ಟಿತ್ತು.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.