JP Nadda in Udupi: ಲವ್ ಜಿಹಾದ್, ಕೌ ಜಿಹಾದ್, ಉಗ್ರ ಚಟುವಟಿಕೆ ತಡೆಗೆ ಕರಾವಳಿಗೆ ಬೇಕು ಎನ್ಐ- ಸಾಧು ಸಂತರ ಬಲವಾದ ಆಗ್ರಹ
JP Nadda in Udupi: ಲವ್ ಜಿಹಾದ್, ಕೌ ಜಿಹಾದ್ಗಳು ಕರಾವಳಿ, ಮಲೆನಾಡು ಜಿಲ್ಲೆಗಳ ಮಟ್ಟಿಗೆ ಸವಾಲಿನ ವಿಚಾರಗಳು. ಇದು ಬಿಟ್ಟರೆ ಉಗ್ರಚಟುವಟಿಕೆಗಳಿಗೆ ಕರಾವಳಿ, ಮಲೆನಾಡಿನ ನೆಲವನ್ನು ಬಳಸಿಕೊಳ್ಳುವ ಪ್ರಯತ್ನ ತೀವ್ರಗೊಂಡಿದೆ. ಆದ್ದರಿಂದ ಎನ್ಐಎ ಘಟಕವನ್ನು ಕರಾವಳಿ ಜಿಲ್ಲೆಯಲ್ಲಿ ಪ್ರಾರಂಭಿಸಬೇಕು ಎಂದು ಸಾಧು ಸಂತರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಉಡುಪಿಯಲ್ಲಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ಬಳಿಕ, ಉಡುಪಿಯ ಪೇಜಾವರ ಮಠದಲ್ಲಿ ಸಾಧು ಸಂತರ ಜತೆಗೆ ಚುಟುಕು ಮಾತುಕತೆ ನಡೆಸಿದರು. ಕಿರು ಸಂತಸಮಾವೇಶದಲ್ಲಿ ಹಿಂದುಗಳ, ಹಿಂದು ಸಮುದಾಯದ ಹಿತಾಸಕ್ತಿ ಕಾಪಾಡುವಂತೆ ಸಾಧು, ಸಂತರು ಆಗ್ರಹಿಸಿದರು.
ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಆಳ್ವಿಕೆಯೇ ಇರುವ ಕಾರಣ, ತುರ್ತಾಗಿ ಆಗಬೇಕಾದ ಮತ್ತು ಆದ್ಯತೆ ಮೇರೆಗೆ ಆಗಬೇಕಾದ ಹಲವು ವಿಷಯಗಳ ಕಡೆಗೆ ಜೆ.ಪಿ.ನಡ್ಡಾ ಅವರ ಗಮನಸೆಳೆದರು.
ಸಾಧು ಸಂತರದ ಬೇಡಿಕೆಗಳೇನು?
ಕರಾವಳಿ ಜಿಲ್ಲೆಗಳಲ್ಲಿ ಅತಿ ಹೆಚ್ಚು ಸದ್ದು ಮಾಡುವ ವಿಚಾರಗಳೆಂದರೆ ಲವ್ ಜಿಹಾದ್, ಕೌ ಜಿಹಾದ್ಗಳು. ಇದು ಬಿಟ್ಟರೆ ಉಗ್ರಚಟುವಟಿಕೆಗಳಿಗೆ ಕರಾವಳಿ, ಮಲೆನಾಡಿನ ನೆಲವನ್ನು ಬಳಸಿಕೊಳ್ಳುವ ಪ್ರಯತ್ನ ತೀವ್ರಗೊಂಡಿರುವ ಕಾರಣ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳನ್ನು ಕೇಂದ್ರವಾಗಿಟ್ಟುಕೊಂಡು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಘಟಕವನ್ನು ಕರಾವಳಿ ಜಿಲ್ಲೆಯಲ್ಲಿ ಪ್ರಾರಂಭಿಸಬೇಕು ಎಂದು ಸಾಧು ಸಂತರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.
- ಸನಾತನ ಧರ್ಮ ಸಂಸ್ಕೃತಿ ಸದ್ವಿಚಾರಗಳಿಗೆ ಸದಾ ಮನ್ನಣೆ ನೀಡಬೇಕು.
- ರಾಜ್ಯದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಗೆ ಕ್ರಮ ತೆಗೆದುಕೊಳ್ಳಬೇಕು.
- ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಆದ್ಯತೆ ನೀಡಬೇಕು.
- ಕರಾವಳಿಯ ಸಮೃದ್ಧ ಪ್ರಾಕೃತಿಕ ಮತ್ತು ಸಾಂಸ್ಕೃತಿಕ ಧಾರ್ಮಿಕ ಸಂಪನ್ಮೂಲಗಳಿಗೆ ಹಾನಿಯಾಗದಂತೆ ಔದ್ಯಮಿಕ ಔದ್ಯೋಗಿಕ ಪ್ರಗತಿಗೆ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಬೇಕು.
- ತುಳು ಭಾಷೆಗೆ ಸೂಕ್ತ ಮಾನ್ಯತೆ ನೀಡಬೇಕು.
- ಗೋ ಹತ್ಯಾ ನಿಷೇಧ ಕಾನೂನು ಸಮರ್ಪಕ ಜಾರಿಯ ಜೊತೆಗೆ ಗೋಸಂರಕ್ಷಣೆಗೆ ಪೂರಕ ಯೋಜನೆಗಳಿಗೆ ನೆರವು ನೀಡಬೇಕು.
- ಭ್ರಷ್ಟಾಚಾರ ಮುಕ್ತ , ಸ್ವಚ್ಛ , ಪಾರದರ್ಶಕ ಆಡಳಿತ ನೀಡಬೇಕು.
- ದೇವಸ್ಥಾನಗಳ ಭೂಮಿ ಅತಿಕ್ರಮಣ ತಡೆಗಟ್ಟಲು ಕ್ರಮಕೈಗೊಳ್ಳಬೇಕು.
- ಉಡುಪಿ ಕಾರಿಡಾರ್ ಯೋಜನೆ
ಹೀಗೆ ಉಡುಪಿ ಅಭಿವೃದ್ಧಿಗೆ ಸಂಬಂಧಿಸಿದ ಹತ್ತು ಹಲವು ಯೋಜನೆಗಳ ವಿವರಗಳನ್ನು ಬೇಡಿಕೆಯಾಗಿ ಸಾಧು-ಸಂತರು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಸಲ್ಲಿಸಿದರು.
ಉಡುಪಿ ಪೇಜಾವರ ಮಠದಲ್ಲಿ ನಡೆದ ಸಂತ ಸಮಾವೇಶದಲ್ಲಿ ಶ್ರೀ ಪುತ್ತಿಗೆ, ಶ್ರೀ ಪೇಜಾವರ, ಶ್ರೀ ಸುಬ್ರಹ್ಮಣ್ಯ, ಶ್ರೀ ಚಿತ್ರಾಪುರ, ಚಾರು ಕೀರ್ತಿ ಭಟ್ಟಾರಕ, ರಾಮಕೃಷ್ಣಾಶ್ರಮದ ಸ್ವಾಮಿಗಳು ಉಪಸ್ಥಿತರಿದ್ದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ದಾ ಅವರೊಂದಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಸದರೂ ಆದ ಬಿಜೆಪಿಯ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿ ಜತೆಗಿದ್ದರು.