Kalaburai News: ಗುಲಬರ್ಗಾ ವಿವಿ ಘಟಿಕೋತ್ಸವ; ನಾಡೋಜ ಮಾನಯ್ಯ ಸೇರಿ ಮೂವರಿಗೆ ಗೌರವ ಡಾಕ್ಟರೇಟ್
ಕನ್ನಡ ಸುದ್ದಿ  /  ಕರ್ನಾಟಕ  /  Kalaburai News: ಗುಲಬರ್ಗಾ ವಿವಿ ಘಟಿಕೋತ್ಸವ; ನಾಡೋಜ ಮಾನಯ್ಯ ಸೇರಿ ಮೂವರಿಗೆ ಗೌರವ ಡಾಕ್ಟರೇಟ್

Kalaburai News: ಗುಲಬರ್ಗಾ ವಿವಿ ಘಟಿಕೋತ್ಸವ; ನಾಡೋಜ ಮಾನಯ್ಯ ಸೇರಿ ಮೂವರಿಗೆ ಗೌರವ ಡಾಕ್ಟರೇಟ್

Gulbarga University Convocation : ಗುಲಬರ್ಗಾ ವಿಶ್ವವಿದ್ಯಾಲಯದ 41ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಸಾಧಕರಿಗೆ ಗೌರವ ಡಾಕ್ಟರೇಟ್ ಮತ್ತು ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯ್ತು.

ಮೂವರಿಗೆ ಗೌರವ ಡಾಕ್ಟರೇಟ್ ಪ್ರದಾನ
ಮೂವರಿಗೆ ಗೌರವ ಡಾಕ್ಟರೇಟ್ ಪ್ರದಾನ

ಕಲಬುರಗಿ: ಭಾರತವು ಪ್ರಸ್ತುತ ಅಂತಾರಾಷ್ಟ್ರೀಯ ಮಟ್ಟದ ಆರ್ಥಿಕ ಶ್ರೇಯಾಂಕದಲ್ಲಿ ಐದನೇ ಸ್ಥಾನದಲ್ಲಿದ್ದು, ಮೂರನೇ ಸ್ಥಾನಕ್ಕೆ ಏರಲು ಪ್ರಯತ್ನಿಸುತ್ತಿದೆ. ಇದಕ್ಕಾಗಿ ದೇಶದ ಪ್ರತಿಯೊಬ್ಬ ಪ್ರಜೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಾಧಿಪತಿಯಾಗಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.

ಸೋಮವಾರ (ಜೂನ್‌ 19)ರಂದು ಗುಲಬರ್ಗಾ ವಿವಿಯ ಡಾ.ಬಿಆರ್ ಅಂಬೇಡ್ಕರ್ ಸಭಾಂಗಣದಲ್ಲಿ ನಡೆದ ವಿಶ್ವವಿದ್ಯಾಲಯದ 41ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಸಾಧಕರಿಗೆ ಗೌರವ ಡಾಕ್ಟರೇಟ್ ಮತ್ತು ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದರು.

ಭಾರತವು ಸ್ವಾತಂತ್ರ್ಯದ ಅಮೃತ ಮಹೋತ್ಸವ ಇತ್ತೀಚೆಗೆ ಆಚರಿಸಿಕೊಂಡಿದೆ. ಕಳೆದ 75 ವರ್ಷದ ಅವಧಿಯಲ್ಲಿ ಅನೇಕ ಕ್ಷೇತ್ರದಲ್ಲಿ ಭಾರತ ಅನನ್ಯ ಪ್ರಗತಿ ಕಂಡಿದೆ. ಮುಂದಿನ 25 ವರ್ಷ ನಮಗೆಲ್ಲ ಕರ್ತವ್ಯದ ಕಾಲವಾಗಿದ್ದು, ಸ್ವಾತಂತ್ರ್ಯದ ಶತಮಾನೋತ್ಸವ ಸಂದರ್ಭದಲ್ಲಿ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿಸಲು ಪ್ರತಿಯೊಬ್ಬರು ಶ್ರಮಿಸಬೇಕು ಎಂದು ಕರೆ ನೀಡಿದರು. ನಮ್ಮ ಪೂರ್ವಜರು ಭಾರತವನ್ನು “ಸೋನೇಕಿ ಚಿಡಿಯಾ” ಎಂದು ಕರೆದಿದ್ದನ್ನ ಸ್ಮರಿಸಿದ ಅವರು, ವಿಶ್ವ ಗುರುವಿನತ್ತ ಭಾರತ ಹೆಜ್ಜೆ ಇಟ್ಟಿದೆ. ಇಂದಿನ ವಿದ್ಯಾರ್ಥಿಗಳೇ ಮುಂದಿನ ಭವಿಷ್ಯವಾಗಿದ್ದಾರೆ. ಅಧುನಿಕ ತಂತ್ರಜ್ಞಾನ ಬಳಸಿಕೊಂಡು ಮಾನವ ಅಭಿವೃದ್ಧಿ ಹೊಂದಬೇಕಿದೆ. ನಮ್ಮ ದೇಶ ಸಭ್ಯ, ಸಂಸ್ಕತಿಗೆ ಹೆಸರುವಾಸಿ. ಇಡೀ ವಿಶ್ವವನ್ನು "ವಸುದೈವ ಕುಟುಂಬ" ಪರಿಕಲ್ಪನೆಯಲ್ಲಿ ನೋಡುತ್ತದೆ. ಭಾರತ ಸೇರಿದಂತೆ ವಿಶ್ವ ಕಲ್ಯಾಣವೇ ನಮ್ಮ ಆಶಯವಾಗಿದೆ ಎಂದರು.

ಪರಿಸರ ಸಂರಕ್ಷಿಸಿ

ಇತ್ತೀಚೆಗೆ ಪರಿಸರ ಮಾಲಿನ್ಯ ಹೆಚ್ಚಾಗಿ ಕಾಣುತ್ತಿದೆ. ಇದನ್ನು ತಡೆಗಟ್ಟಲು ಪರಿಸರ ಸಂರಕ್ಷಣೆಗೆ ಎಲ್ಲರು ಕೈಜೋಡಿಸಬೇಕು. ಜೂನ್ 21ಕ್ಕೆ ವಿಶ್ವ ಯೋಗ ದಿನ ಆಚರಿಸಲಾಗುತ್ತಿದ್ದು, ಇದರಲ್ಲಿ ಭಾಗವಹಿಸುವ ಮೂಲಕ ನಿಮ್ಮ ಆರೋಗ್ಯದ ಜೊತೆಗೆ ಪರಿವಾರ, ಸಮಾಜದ ಸ್ವಾಸ್ಥ ಮತ್ತು ಆರೋಗ್ಯವಂತ ದೇಶ ನಿರ್ಮಿಸುವ ಅಗತ್ಯತೆ ಇದೆ ಎಂದು ಪ್ರತಿಪಾದಿಸಿದರು.

ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಪ್ರಗತಿಗೆ ಬದ್ಧ

ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿಶ್ವವಿದ್ಯಾಲಯದ ಸಮ-ಕುಲಾಧಿಪತಿಯಾರುವ ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ.ಎಂಸಿ ಸುಧಾಕರ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಪ್ರಗತಿಗೆ ಸರ್ಕಾರ ಬದ್ಧ. ತಾವು ಸಚಿವರಾದ ನಂತರ ಪ್ರಥಮ ಬಾರಿಗೆ ವಿವಿ ಘಟಿಕೋತ್ಸವದಲ್ಲಿ ಭಾಗವಹಿಸುವುತ್ತಿರುವುದು ಹೆಮ್ಮೆ ಎನಿಸುತ್ತಿದೆ. ಈ ಭಾಗದ ಶಿಕ್ಷಣ ಪ್ರಗತಿಗೆ 371ಜೆ ಮೀಸಲಾತಿ ಪೂರಕವಾಗಿದೆ ಎಂದು ಹೇಳಿದರು.

ಗುಲಬರ್ಗಾ ವಿವಿ. ಶೈಕ್ಷಣಿಕ ಪ್ರಗತಿಯಲ್ಲಿ ಉತ್ತಮ ಹೆಜ್ಜೆ ಇಡುತ್ತಿದೆ ಎಂದ ಸಚಿವರು, ಇತ್ತೀಚೆಗೆ ಖಾಸಗಿ ವಿವಿಗಳು ಶಿಕ್ಷಣದಲ್ಲಿ ಸ್ಪರ್ಧೆ ನೀಡುತ್ತಿದ್ದು, ಅದನ್ನು ನಮ್ಮ ವಿಶ್ವವಿದ್ಯಾಲಯಗಳು ಸವಾಲಾಗಿ ಸ್ವೀಕರಿಸಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದರು.

ಮೂವರಿಗೆ ಗೌರವ ಡಾಕ್ಟರೇಟ್ ಪ್ರದಾನ

ಶಿಲ್ಪಕಲಾ ಕ್ಷೇತ್ರದಲ್ಲಿ ಗಣನೀಯ ಸೇವೆಗೆ ಕಲಬುರಗಿ ಜಿಲ್ಲೆಯ ನಾಡೋಜ ಮಾನಯ್ಯ ಬಡಿಗೇರ್, ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರದಲ್ಲಿನ ಸಾಧನೆಗೆ ತಾತ್ಯಾರಾವ ಕಾಂಬ್ಳೆ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿನ ಸಾಧನೆಗೆ ಬೆಂಗಳೂರು ಮೂಲದ ಎನ್ಎಸ್ ಶ್ರೀನಾಥ ಅವರಿಗೆ ರಾಜ್ಯಪಾಲರು ಮತ್ತು ಮುಖ್ಯ ಅತಿಥಿಗಳು ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.

ಇದೇ ಸಂದರ್ಭದಲ್ಲಿ 26,590 ಸ್ನಾತಕ ಪದವಿ, 4,171 ಸ್ನಾತಕೋತ್ತರ ಪದವಿ ಸೇರಿ 30,761 ಅಭ್ಯರ್ಥಿಗಳಿಗೆ ಪದವಿ ಘೋಷಿಸಲಾಯಿತು. 129 ಅಭ್ಯರ್ಥಿಗಳಿಗೆ ಪಿಎಚ್‌ಡಿ ಹಾಗೂ 72 ವಿದ್ಯಾರ್ಥಿಗಳಿಗೆ 165 ಚಿನ್ನದ ಪದಕ ಪ್ರದಾನ ಮಾಡಿದರೆ, 23 ವಿದ್ಯಾರ್ಥಿಗಳಿಗೆ 15 ಚಿನ್ನದ ಪದಕವನ್ನು ನಗದು ಬಹುಮಾನಕ್ಕೆ ಪರಿವರ್ತಿಸಿ ವಿತರಿಸಲಾಯಿತು.

14 ಚಿನ್ನದ ಪದಕ ಪಡೆದ ಗ್ರಾಮೀಣ ಪ್ರತಿಭೆ ರುಕ್ಮಿಣಿ; ಮಗಳ ಸಾಧನೆ ಕಂಡು ಭಾವುಕನಾದ ತಂದೆ

ವಿಶ್ವವಿದ್ಯಾಲಯದ 41ನೇ ಘಟಿಕೋತ್ಸವದಲ್ಲಿ ಕಲಬುರಗಿ ಜಿಲ್ಲೆಯ ಕಲಬುರಗಿ ತಾಲೂಕಿನ ಆಲಗೂಡ ಮೂಲದ ಎಂಎ (ಕನ್ನಡ) ವಿಭಾಗದ ವಿದ್ಯಾರ್ಥಿನಿ ರುಕ್ಮಿಣಿ ಹಣಮಂತ್ರಾಯ 14 ಚಿನ್ನದ ಪದಕ ಪಡೆದು ವಿವಿ ಯಲ್ಲಿಯೇ ಅತೀ ಹೆಚ್ಚು ಚಿನ್ನದ ಪಡೆದ ಕೀರ್ತಿಗೆ ಪಾತ್ರರಾದರು.

ಚಿನ್ನದ ಪದಕ ಪ್ರಶಸ್ತಿ ಪಡೆದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ರುಕ್ಮಿಣಿ, ತಮ್ಮ ಈ ಸಾಧನೆಗೆ ಉಪನ್ಯಾಸಕರ ಮಾರ್ಗದರ್ಶನ, ತಂದೆ-ತಾಯಿ ಮತ್ತು ಕುಟುಂಬಸ್ಥರ ಸಹಕಾರವೇ ಕಾರಣ. ವಿವಿಯಲ್ಲಿನ ಗ್ರಂಥಾಲಯಗಳು ತುಂಬಾ ನೆರವಿಗೆ ಬಂದಿವೆ. ತಾವು ಬಿಎಡ್ ಸಹ ಮಾಡಿದ್ದರಿಂದ ಈಗಾಗಲೇ ಶಿಕ್ಷಕಿ ಹುದ್ದೆಗೆ ಆಯ್ಕೆಯಾಗಿದ್ದು, ಇನ್ನಷ್ಟೆ ನೇಮಕಾತಿ ಪತ್ರ ಬರಬೇಕಿದೆ. ಶಿಕ್ಷಕ ವೃತ್ತಿಯಲ್ಲಿ ಮುಂದೆ ಸಾಗುವೆ ಎಂದರು.

ಮಗಳ ಈ ಸಾಧನೆ ಕಂಡು ಅವರ ತಂದೆ ಹಣಮಂತ್ರಾಯ ಅವರು ಒಂದು ಕ್ಷಣ ಭಾವುಕರಾದರು. "ಮಗಳು ಇಡೀ ವಿವಿಗೆ ಹೆಚ್ಚಿನ ಚಿನ್ನದ ಪದಕ ಪಡೆದಿದ್ದಾಳೆ. ನಿಮ್ಮ ಅನಿಸಿಕೆ ಏನೆಂದು ಪತ್ರಕರ್ತರು ಕೇಳಿದಾಗ ನಾನು 3ನೇ ತಕ ಸಾಲಿ ಕಲ್ತೀನ್ರಿ. 4 ಜನ ಹೆಣ್ಮಕ್ಳು, ಒಬ್ಬ ಗಂಡು ಹುಡುಗ ಇದಾನ್ರೀ. ರುಕ್ಮಿಣಿ ಕೊನೆಯವಳ್ರಿ. ನನಗೇನ್ ಹೆಚ್ಚಿಗ್ ಗೊತ್ತಿಲ್ರಿ. ಕೆಲಸ ಹುಡಕೊಂಡು ಊರು ಬಿಟ್ಟು ಹೋಗಿದ್ದೆ. ಇಜೇರಿ ಪ್ರಾಥಮಿಕ ಆರೋಗ್ಯ ಕೇಂದ್ರಲ್ಲಿ ಪಿವನ್ ಕೆಲಸ ಸಿಕ್ತು. 2 ವರ್ಷದ ಹಿಂದೆ ರಿಟೈರ್‍ಮೆಂಟ್ ಆಗೀನ್ರಿ. ಮಗಳು ಓದ್ಯಾಳ್ರಿ" ಎಂದಾಗ ಮಾತು ನಿಂತು ಕಣ್ಣೀರು ತುಂಬಿಕೊಂಡವು.

ಪಿಎಚ್‌ಡಿ ಮಾಡುವಾಸೆ

ಪ್ರಾಣಿಶಾಸ್ತ್ರ ವಿಭಾಗದಲ್ಲಿ 9 ಚಿನ್ನದ ಪದಕ ಪಡೆದ ಬೀದರ ಮೂಲದ ಆದಿತಿ ರೆಡ್ಡಿ ಪಿಎಚ್‌ಡಿ ಮಾಡುವುದಾಗಿ ತಿಳಿಸಿದರು.

ಹೆತ್ತವರಿಗೆ ಅರ್ಪಣೆ

ಯಾದಗಿರಿ ಜಿಲ್ಲೆಯ ಸುರಪೂರ ಮೂಲದ ಬಿ ರಾಜಶ್ರೀ ಅವರು ಸೂಕ್ಷ್ಮ ಜೀವವಿಜ್ಞಾನ ವಿಭಾಗದಲ್ಲಿ 7 ಚಿನ್ನದ ಪದಕ ಪಡೆದಿದ್ದಕ್ಕೆ ಪ್ರತಿಕ್ರಿಯೆಸಿ ನೀಡಿದರು. ಈ ಸಾಧನೆಗೆ ತಂದೆ-ತಾಯಿ ಹಾಗೂ ತಮ್ಮ ಅಜ್ಜನಿಗೆ ಅರ್ಪಿಸುವುದಾಗಿ ತಿಳಿಸಿ ಉಪನ್ಯಾಸಕ ವೃತ್ತಿಯಲ್ಲಿ ಮುಂದುವರೆಯುವೆ ಎಂದರು.

ವರದಿ: ಎಸ್‌ಬಿ ರೆಡ್ಡಿ, ಕಲಬುರಗಿ

Whats_app_banner