Karkala School Bus Accident: ಕಾರ್ಕಳದಲ್ಲಿ ವಿಜಯನಗರ ಜಿಲ್ಲೆಯ ಶಾಲಾ ಪ್ರವಾಸದ ಬಸ್ ಅಪಘಾತ, ಹಲವರಿಗೆ ಗಂಭೀರ ಗಾಯ | ಸುದ್ದಿ, ವಿಡಿಯೋ
Karkala School Bus Accident: ಕಾರ್ಕಳ ರಾಜ್ಯ ಹೆದ್ದಾರಿಯ ಪಾಜೆಗುಡ್ಡ ತಿರುವಿನಲ್ಲಿ ಶಾಲಾ ಮಕ್ಕಳ ಪ್ರವಾಸದ ಬಸ್ ಪಲ್ಟಿ ಹೊಡೆದ ಘಟನೆ ವರದಿಯಾಗಿದೆ.
ಕಾರ್ಕಳ: ಇತ್ತೀಚೆಗೆ ಕೇರಳದ ಇಡುಕ್ಕಿಯಲ್ಲಿ ಕಾಲೇಜು ವಿದ್ಯಾರ್ಥಿಗಳ ಪ್ರವಾಸಿ ಬಸ್ ಪ್ರಪಾತಕ್ಕೆ ಉರುಳಿದ ಘಟನೆ ಮರೆಯಾಗುವ ಮುನ್ನವೇ ಕರ್ನಾಟಕದಲ್ಲಿಯೂ ಶಾಲಾ ಪ್ರವಾಸ ಬಸ್ಗಳ ಅಪಘಾತ, ಅನಾಹುತ ಘಟನೆಗಳು ಸುದ್ದಿಯಾಗುತ್ತಿವೆ. ಇಂದು ಕಾರ್ಕಳ ರಾಜ್ಯ ಹೆದ್ದಾರಿಯ ಪಾಜೆಗುಡ್ಡ ತಿರುವಿನಲ್ಲಿ ಶಾಲಾ ಮಕ್ಕಳ ಪ್ರವಾಸದ ಬಸ್ ಪಲ್ಟಿ ಹೊಡೆದ ಘಟನೆ ವರದಿಯಾಗಿದೆ.
ಕಾರ್ಕಳ ರಾಜ್ಯ ಹೆದ್ದಾರಿಯ ನಲ್ಲೂರು ಸಮೀಪ ಈ ಘಟನೆ ನಡೆದಿದ್ದು, ಬಸ್ನಲ್ಲಿ ವಿಜಯ ನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಪ್ರೌಢಶಾಲೆಯೊಂದರ ವಿದ್ಯಾರ್ಥಿಗಳಿದ್ದರು. ಇಲ್ಲಿನ ಬಸವೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳು ವಾರ್ಷಿಕ ಶಾಲಾ ಪ್ರವಾಸಕ್ಕಾಗಿ ಈ ಹೆದ್ದಾರಿಯಲ್ಲಿ ಸಾಗುತ್ತಿದ್ದರು. ಕರಾವಳಿ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಇಂದು ಇವರ ಬಸ್ ತಿರುವಿನಲ್ಲಿ ಅಪಘಾತಕ್ಕೆ ಈಡಾಗಿದೆ.
ಘಟನೆಯಲ್ಲಿ ಮೂವರು ಶಿಕ್ಷಕಿಯರು ಮತ್ತು ಇಬ್ಬರು ವಿದ್ಯಾರ್ಥಿಗಳಿಗೆ ಗಂಭೀರ ಪ್ರಮಾಣದ ಗಾಯಗಳಾಗಿದೆ ಎಂದು ವರದಿಗಳು ತಿಳಿಸಿವೆ.
ಸ್ಥಳೀಯ ಮಾಧ್ಯಮ ವರದಿ ಪ್ರಕಾರ ಗಾಯಗೊಂಡ ವಿದ್ಯಾರ್ಥಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೂವರು ವಿದ್ಯಾರ್ಥಿಗಳಿಗೆ ಗಂಭೀರಗಾಯಗಳಾಗಿವೆ. ಸಣ್ಣಪುಟ್ಟ ಗಾಯಗೊಂಡ ವಿದ್ಯಾರ್ಥಿಗಳನ್ನು ಬಜಗೋಳಿ ಬಿಲ್ಲವ ಸಮಾಜ ಸೇವಾ ಸಂಘಕ್ಕೆ ಕರೆದೊಯ್ದು ಶುಶ್ರೂಷೆ ಮಾಡಲಾಗುತ್ತದೆ.
ನಿನ್ನೆ ಬೆಳಗ್ಗೆ ಕೇರಳದ ಇಡುಕ್ಕಿಯಲ್ಲಿಪ್ರವಾಸಿ ಬಸ್ ಕಮರಿಗೆ ಉರುಳಿ ಓರ್ವ ವಿದ್ಯಾರ್ಥಿ ಮೃತಪಟ್ಟ ದುರ್ಘಟನೆ ನಡೆದಿತ್ತು. . ವಾಲಂಚೇರಿಯ ಕಾಲೇಜೊಂದರ ವಿದ್ಯಾರ್ಥಿಗಳು ಇದ್ದ ಈ ಬಸ್ ಕಮರಿಗೆ ಉರುಳಿದ್ದು, ಎಂಜಿನಿಯರಿಂಗ್ ವಿದ್ಯಾರ್ಥಿ ಮನೋಜ್ ಮೃತಪಟ್ಟ ದುರ್ಘಟನೆ ನಡೆದಿತ್ತು.
ನಿನ್ನೆ ಮುಂಜಾನೆ ಬಸ್ ನಿಯಂತ್ರಣ ತಪ್ಪಿ ಆಳವಾದ ಕಂದಕಕ್ಕೆ ಉರುಳಿದೆ. ಬಸ್ನಲ್ಲಿ ಒಟ್ಟು 41 ಪ್ರಯಾಣಿಕರು ಇದ್ದರು. ಗಾಯಗೊಂಡವರನ್ನು ತಾಲೂಕು ಆಸ್ಪತ್ರೆ ಮತ್ತು ಸ್ಥಳೀಯ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿತ್ತು. ಮೃತಪಟ್ಟ ಮನೋಜ್ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದಾನೆ. ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಕಾಲೇಜು ಪ್ರವಾಸಕ್ಕೆ ಹೋಗಿ ಹಿಂತುರುಗಿ ಬರುವಾಗ ದುರ್ಘಟನೆ ನಡೆದಿತ್ತು.
ಅರಣ್ಯ ಪ್ರದೇಶದಲ್ಲಿ ಕಂದಕಕ್ಕೆ ಪಲ್ಟಿಯಾದ ಬಸ್ನ ಬಳಿ ಪೊಲೀಸರು ಮತ್ತು ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಹೊಸ ವರ್ಷವನ್ನು ವಿಶ್ವದ ಇತರ ಭಾಗಗಳಲ್ಲಿ ಮತ್ತು ದೇಶದಾದ್ಯಂತ ಸ್ವಾಗತಿಸುತ್ತಿರುವಾಗ ಈ ದುರ್ಘಟನೆ ಸಂಭವಿಸಿತ್ತು.
ದೇಶದ ವಿವಿಧೆಡೆ ಶಾಲಾ ಕಾಲೇಜುಗಳ ಪ್ರವಾಸಿ ವಾಹನಗಳ ಅಪಘಾತ ಸುದ್ದಿ ಹೆಚ್ಚಾಗುತ್ತಿದೆ. ಶನಿವಾರ, ಮಹಾರಾಷ್ಟ್ರದ ಬಾರಾಮತಿಯಲ್ಲಿ ಬಸ್ ಸೇತುವೆಯಿಂದ ಬಿದ್ದು 40 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರಿದಂತೆ 57 ಪ್ರಯಾಣಿಕರು ಗಾಯಗೊಂಡಿದ್ದರು. ಕೊಲ್ಲಾಪುರ ಜಿಲ್ಲೆಯ ಇಚಲಕರಂಜಿಯ ಖಾಸಗಿ ಶಾಲಾ ವಿದ್ಯಾರ್ಥಿಗಳ ಪ್ರವಾಸಿ ಬಸ್ ಇದಾಗಿತ್ತು.