ಮುಜಾಫರ್ ಅಸ್ಸಾದಿ ನಿಧನ: ದಿನೇಶ್ ಅಮೀನ್ ಮಟ್ಟು, ರಹಮತ್ ತರಿಕೇರೆ, ರಂಜಾನ್ ದರ್ಗಾ ನೆನಪುಗಳು
ಸಮಾಜಶಾಸ್ತ್ರಜ್ಞ, ವಿದ್ವಾಂಸ ಪ್ರೊ.ಮುಜಾಫರ್ ಅಸ್ಸಾದಿ ಇಂದು (ಶನಿವಾರ) ನಿಧನರಾಗಿದ್ದಾರೆ. ಈ ಸಮಯದಲ್ಲಿ ಅಸ್ಸಾದಿ ಕುರಿತು ಅವರ ಒಡನಾಡಿಗಳಾದ ದಿನೇಶ್ ಅಮೀನ್ ಮಟ್ಟು, ರಹಮತ್ ತರಿಕೇರೆ, ರಂಜಾನ್ ದರ್ಗಾ ಸೋಷಿಯಲ್ ಮೀಡಿಯಾದಲ್ಲಿ ಬರೆದ ಬರಹಗಳು ಗಮನ ಸೆಳೆಯುತ್ತವೆ.
ಸಮಾಜಶಾಸ್ತ್ರಜ್ಞ, ವಿದ್ವಾಂಸ ಪ್ರೊ.ಮುಜಾಫರ್ ಅಸ್ಸಾದಿ ಇಂದು (ಶನಿವಾರ) ನಿಧನರಾಗಿದ್ದಾರೆ. ಈ ಸಮಯದಲ್ಲಿ ಅಸ್ಸಾದಿ ಕುರಿತು ಅವರ ಒಡನಾಡಿಗಳಾದ ದಿನೇಶ್ ಅಮೀನ್ ಮಟ್ಟು, ರಹಮತ್ ತರಿಕೇರೆ, ರಂಜಾನ್ ದರ್ಗಾ ಸೋಷಿಯಲ್ ಮೀಡಿಯಾದಲ್ಲಿ ಬರೆದ ಬರಹಗಳು ಗಮನ ಸೆಳೆಯುತ್ತವೆ. ಒಬ್ಬ ವಿದ್ವಾಂಸನ ಸಾವು ಕೇವಲ ಒಬ್ಬ ಮನುಷ್ಯನ ಸಾವಾಗಿರುವುದಿಲ್ಲ, ಅದೊಂದು ಅರಿವಿನ ಭಂಡಾರದ ಸಾವಾಗಿರುತ್ತದೆ ಎಂದು ದಿನೇಶ್ ಅಮಿನ್ ಮಟ್ಟು ಅಭಿಪ್ರಾಯಪಟ್ಟಿದ್ದಾರೆ. ಅಸ್ಸಾದಿ ನಿಧನರಾದ ಸಮಯದಲ್ಲಿ ಮುಜಫ್ಫರ್ ಅಸ್ಸಾದಿ ಅವರ ಅಭಿನಂದನಾ ಗ್ರಂಥಕ್ಕೆ ಬರೆದ ಲೇಖನವನ್ನು ರಂಜಾನ್ ದರ್ಗಾ ಹಂಚಿಕೊಂಡಿದ್ದಾರೆ. ಪ್ರೀತಿಯ ಗೆಳೆಯ ಕಾಣದ ಲೋಕಕ್ಕೆ ಇಷ್ಟು ಬೇಗ ತೆರಳುವನೆಂದು, ಆತನಿಗೆ ಶ್ರದ್ಧಾಂಜಲಿ ಅರ್ಪಿಸಬೇಕಾಗುವುದು ಎಂದು ಊಹಿಸಿರಲಿಲ್ಲ ಎಂದು ರಹಮತ್ ತರಿಕೇರೆ ಭಾವುಕರಾಗಿ ಫೇಸ್ಬುಕ್ನಲ್ಲಿ ಬರೆದಿದ್ದಾರೆ.
ಅರಿವಿನ ಭಂಡಾರದ ಸಾವು- ದಿನೇಶ್ ಅಮೀನ್ ಮಟ್ಟು
ಒಬ್ಬ ವಿದ್ವಾಂಸನ ಸಾವು ಕೇವಲ ಒಬ್ಬ ಮನುಷ್ಯನ ಸಾವಾಗಿರುವುದಿಲ್ಲ, ಅದೊಂದು ಅರಿವಿನ ಭಂಡಾರದ ಸಾವಾಗಿರುತ್ತದೆ. ಅಂತಹದ್ದೊಂದು ಸಾವು ಪ್ರೊ ಮುಝಾಪರ್ ಅಸ್ಸಾದಿಯವರದ್ದು. ಅವರು ಇನ್ನು ಎಷ್ಟೋ ಬರೆಯುವುದಿತ್ತು, ಮಾತನಾಡುವುದಿತ್ತು, ನಮಗೆ ಮಾರ್ಗದರ್ಶನ ನೀಡುವುದಿತ್ತು. ನೋವಾಗುತ್ತಿರುವುದು ಈ ನಷ್ಟದ ದು:ಖಕ್ಕಾಗಿ.
ಅಸ್ಸಾದಿ ಅವರು ಪಾಠ ಮಾಡುವ ತರಗತಿಗಳು ಮತ್ತು ತಮ್ಮ ವಿದ್ಯಾರ್ಥಿಗಳಿಗಷ್ಟೇ ಸೀಮಿತರಾಗಿದ್ದ ಪ್ರಾಧ್ಯಾಪಕರಾಗಿರಲಿಲ್ಲ. ಸಾಮಾಜಿಕ ಪರಿವರ್ತನೆ ಮತ್ತು ಅನ್ಯಾಯದ ವಿರುದ್ದದ ಹೋರಾಟಕ್ಕೆ ತಮ್ಮ ಅಧ್ಯಯನ ಪೂರ್ಣ ಒಳನೋಟಗಳನ್ನು ನೀಡುತ್ತಿದ್ದ ಜೊತೆಗೆ ಬೀದಿಗೆಬಂದು ಜೊತೆಯಲ್ಲಿ ನಿಲ್ಲುತ್ತಿದ್ದ ಒಬ್ಬ ಜನಪರ ಚಿಂತಕ. ಜೋರು ಮಾತಿನ ವಾದ-ವಿವಾದದ ಗೋಜಿಗೆ ಹೋಗದ ಅಸ್ಸಾದಿ ಅವರು ಸದಾ ಹಸನ್ಮಖಿ, ಮಾತು ಮತ್ತು ಬರವಣಿಗಳಿಗೆ ಬಂದರೆ ವೈಚಾರಿಕವಾಗಿ ಸಾಸಿವೆಯಷ್ಟೂ ರಾಜಿಯಾಗದ ಗಟ್ಟಿಕಾಳು.
ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ ದೇಶ-ವಿದೇಶಗಳಲ್ಲಿ ಇಷ್ಟೊಂದು ಗೌರವ-ಮಾನ್ಯತೆ ಪಡೆದಿರುವ ಇನ್ನೊಬ್ಬ ವಿದ್ವಾಂಸ ಸದ್ಯಕ್ಕೆ ನಮ್ಮಲ್ಲಿ ಇನ್ನೊಬ್ಬರಿಲ್ಲ. ವಿದೇಶದ ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸ ನೀಡುತ್ತಿದ್ದ ಆಸಕ್ತಿಯಲ್ಲಿಯೇ ಬೀದಿಯಲ್ಲಿ ನಿಂತು ಭಾಷಣ ಮಾಡುತ್ತಿದ್ದರು. ಅವರೆಂದೂ ವಿಶ್ವವಿದ್ಯಾಲಯಗಳ ದಂತಗೋಪುರದ ಪ್ರಾಧ್ಯಾಪಕರಾಗಿರಲಿಲ್ಲ.
ನನ್ನೂರಿನ ಪಕ್ಕದ ಶಿರ್ವ ಎಂಬ ಗ್ರಾಮದಿಂದ ಬಂದಿರುವ ಮುಝಾಪರ್ ಸಿಕ್ಕಿದಾಗೆಲ್ಲ ತುಳುವಿನಲ್ಲಿ ‘’ ಧನಿಕುಲೆ ಅಡ್ಡ ಬೂರಿಯೆ’’’ (ಧಣಿಗಳೇ ಅಡ್ಡಬಿದ್ದೆ) ಎಂದು ತಮಾಷೆಯಾಗಿ ಮಾತು ಶುರುಮಾಡುತ್ತಿದ್ದರು. ಒಂದು ವಾರದ ಹಿಂದೆಯಷ್ಟೇ ತುಮಕೂರು ವಿಶ್ವವಿದ್ಯಾಲಯದಲ್ಲಿ ಜೊತೆಗಿದ್ದೆವು, ದೈಹಿಕವಾಗಿ ಸ್ವಲ್ಪ ಬಳಲಿದಂತೆ ಕಂಡರೂ ಯಥಾಪ್ರಕಾರ ನಿಂತುಕೊಂಡೇ ಒಂದು ಗಂಟೆ ಮಾತನಾಡಿದ್ದರು. ಕೂತುಕೊಂಡು ಮಾತಾಡಿ ಎಂದರೂ ನಿಂತುಕೊಂಡೇ ಸಂವಾದಲ್ಲಿ ಭಾಗಿಯಾಗಿದ್ದರು. ಎಷ್ಟೊಂದು ವೇದಿಕೆಗಳಲ್ಲಿ ಜೊತೆಗಿದ್ದೆವು, ಅವರ ಮಾತು ಮತ್ತು ಬರಹಗಳಿಂದ ನಾನು ಎಷ್ಟೊಂದು ಕಲಿತಿದ್ದೇನೆ ಎನ್ನುವುದನ್ನು ನೆನಪು ಮಾಡಿಕೊಂಡಾಗ ಸಂಕಟವಾಗುತ್ತದೆ. ತೀರಾ ಅನಿರೀಕ್ಷಿತವಾದ ಸಾವು. ಧಣಿಕುಲೆ ಅಡ್ಡ ಬೂರಿಯೆ" ಎಂದು ದಿನೇಶ್ ಅಮಿನ್ ಮಟ್ಟು ಫೇಸ್ಬುಕ್ನಲ್ಲಿ ಬರೆದಿದ್ದಾರೆ.
ರಹಮತ್ ತರಿಕೇರೆ ಹಂಚಿಕೊಂಡ ಬರಹ
"ಏನೂ ತೋಚುತ್ತಿಲ್ಲ. ಇಂದು ಮುಂಜಾನೆ ಬೆಳಕನ್ನು ಹರಿಯಲು ಬಿಡದಂತೆ ಆವರಿಸಿದ ತಣ್ಣನೆಯ ಕಾವಳ, ಗೆಳೆಯನ ಸಾವಿನ ಘೋರಸುದ್ದಿಯಾಗಿ ಹೀಗೆ ತನುಮನವನ್ನು ಅಪ್ಪಳಿಸುತ್ತದೆ ಎಂದು ಊಹಿಸಿರಲಿಲ್ಲ.. ಪ್ರೀತಿಯ ಗೆಳೆಯ ಕಾಣದ ಲೋಕಕ್ಕೆ ಇಷ್ಟು ಬೇಗ ತೆರಳುವನೆಂದು, ಆತನಿಗೆ ಶ್ರದ್ಧಾಂಜಲಿ ಅರ್ಪಿಸಬೇಕಾಗುವುದು ಎಂದು ಊಹಿಸಿರಲಿಲ್ಲ. ಮರಣದಂತಹ ಘೋರಸತ್ಯ ಬೇರೆಯಿಲ್ಲ. ಹೋಗಿ ಬಾ ಮಿತ್ರ, ಅಲ್ಬಿದಾ" ಎಂದು ರಹಮತ್ ತರಿಕೇರೆ ಫೇಸ್ಬುಕ್ನಲ್ಲಿ ಸುದೀರ್ಘ ಬರಹವೊಂದನ್ನು ಹಂಚಿಕೊಂಡಿದ್ದಾರೆ.
ಅಸ್ಸಾದಿಯವರು ನಿವೃತ್ತರಾದಾಗ ಬರೆದಿದ್ದ ಈ ಬರೆಹವನ್ನು ಹಂಚಿಕೊಂಡಿರುವೆ.
ಭಾರತದ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಲ್ಲಿ ಹಲವಾರು ಮಾದರಿಯವರಿದ್ದಾರೆ. ಒಂದು: ಸಂಶೋಧನೆ ಮತ್ತು ಪಾಠಪ್ರವಚನಗಳಿಂದ ತಪ್ಪಿಸಿಕೊಂಡು, ವಿಶ್ವವಿದ್ಯಾನಿಲಯ ಇಲ್ಲವೆ ಸರ್ಕಾರದ ಬೇರೆಬೇರೆ ಅಧಿಕಾರ ಸ್ಥಾನಗಳಲ್ಲಿ ಇಡೀ ವೃತ್ತಿಜೀವನ ಮುಗಿಸುವವರು. ಎರಡು: ಒಳ್ಳೆಯ ಅಧ್ಯಾಪಕರಾಗಿರುತ್ತಾರೆ. ಆದರೆ ಸಂಶೋಧನೆ ಅಥವಾ ಬರವಣಿಗೆಯ ಕಲೆ ಇರುವುದಿಲ್ಲ. ಮೂರು: ಅತ್ಯುತ್ತಮ ಬೋಧನೆಯ ಜತೆ ಸಂಶೋಧನೆಯನ್ನೂ ಮಾಡುವವರು. ಇವರಲ್ಲಿ ಕೆಲವರ ಸಂಶೋಧನೆಯು ಸಂಶೋಧಕ ಸಮುದಾಯ ಸ್ತರವನ್ನು ಮಾತ್ರ ದೃಷ್ಟಿಯಲ್ಲಿಟ್ಟುಕೊಂಡು ಸೃಷ್ಟಿಯಾಗುತ್ತದೆ. ಅದಕ್ಕೆ ಸಾಮಾನ್ಯ ಓದುಗರ ಜತೆ ನೇರ ಸಂಬಂಧ ಇರುವುದಿಲ್ಲ. ನಾಲ್ಕು: ಏಕಕಾಲಕ್ಕೆ ಬೋಧನೆ ಸಂಶೋಧನೆ ಮತ್ತು ಸಮಾಜ ಬದಲಾವಣೆಯ ಪ್ರಕ್ರಿಯೆಯಲ್ಲಿ ತೊಡಗಿಕೊಂಡವರು. ಇವರು ತಮ್ಮ ಸಂಶೋಧನೆಯ ಫಲಿತವನ್ನು ಸಾರ್ವಜನಿಕ ಉಪನ್ಯಾಸಗಳ ಅಥವಾ ಜನಪ್ರಿಯ ಬರಹಗಳ ಮೂಲಕ ಸಾಮಾನ್ಯ ಓದುಗರಿಗೆ ಸರಳವಾದ ಭಾಷೆಯಲ್ಲಿ ಹಂಚಿಕೊಳ್ಳುವವರು; ಅದನ್ನು ನಾಡಿನ ಸಾಮಾಜಿಕ ರಾಜಕೀಯ ಚಳವಳಿಗಳಲ್ಲಿಯೂ ತೊಡಗಿಸುವವರು. ಆ ಜ್ಞಾನವು ಸರ್ಕಾರದ ನೀತಿನಿರೂಪಣೆಯಲ್ಲಿ ಉಪಯೋಗವಾಗುವಂತೆ ಮಾಡುವವರು, ವಿದ್ವತ್ತಿನ ಈ ಮಾದರಿಯನ್ನು ಜ್ಞಾನದ ಬಹುಸ್ತರೀಯ ಅಥವಾ ಜನೋಪಯೋಗಿ ಮಾದರಿ ಎನ್ನಬಹುದು.
ಡಿ.ಆರ್.ನಾಗರಾಜ್, ಕಾಂಚ ಐಲಯ್ಯ, ಆನಂದ ತೇಲ್ತುಂಬ್ಡೆ, ಗಣೇಶ್ ಎನ್.ದೇವಿ, ಯೋಗೇಂದ್ರ ಯಾದವ್, ವಸು ಮಳಲಿ, ಎ.ನಾರಾಯಣ, ಚಂದ್ರಪೂಜಾರಿ, ಟಿ.ಆರ್. ಚಂದ್ರಶೇಖರ, ಬಿಳಿಮಲೆ, ಮುಜಾಫರ್ ಅಸ್ಸಾದಿ ಮೊದಲಾದವರು ಈ ಮಾದರಿಯವರು. ಪತ್ರಕರ್ತರಲ್ಲಿ ಪಿ.ಸಾಯಿನಾಥ್ ಅವರು ಈ ಮಾದರಿಗೆ ನೆನಪಾಗುತ್ತಾರೆ.
ಅಸ್ಸಾದಿಯವರು ವಿದ್ಯಾರ್ಥಿಸ್ನೇಹಿಯಾದ ಪ್ರಾಧ್ಯಾಪಕರೆಂದು ಕೇಳಿರುವೆ. ಜತೆಗೆ ಅವರು ತಮ್ಮ ಜನೋಪಯೋಗಿ ಸಂಶೋಧನೆ, ಉಪನ್ಯಾಸ ಮತ್ತು ಬರೆಹಗಳಿಂದಾಗಿ ಶೈಕ್ಷಣಿಕ ವಲಯದಲ್ಲಿ ಮಾತ್ರವಲ್ಲ, ಸಾರ್ವಜನಿಕ ಬದುಕಿನಲ್ಲಿಯೂ ದೊಡ್ಡಸಂಖ್ಯೆಯ ಸಂಗಾತಿಗಳು, ಓದುಗರು, ಅಭಿಮಾನಿಗಳನ್ನು ಗಳಿಸಿದ್ದಾರೆ. ಅವರ ಈ ವ್ಯಕ್ತಿತ್ವಕ್ಕೆ ಅವರು ಜೆಎನ್ಯುನಲ್ಲಿ ಕಲಿತಿದ್ದು ಕೂಡ ಒಂದು ಕಾರಣವಿರಬಹುದು. ಇದರಿಂದ ಕನ್ನಡಿಗನೊಬ್ಬ ಅಂತಾರಾಷ್ಟ್ರೀಯ ವಿಶ್ವವಿದ್ಯಾನಿಲಯಗಳಲ್ಲಿ ಕರ್ನಾಟಕದ ಬಗೆಗಿನ ತಿಳಿವನ್ನು ಹಂಚಿಕೊಳ್ಳುವುದು; ಕರ್ನಾಟಕದ ಹಳ್ಳಿಗಾಡು ಮತ್ತು ಕಾಡುಪ್ರದೇಶಗಳಿಗೆ ಹೋಗಿ ಬುಡಕಟ್ಟು ಜನರೊಂದಿಗೆ ಸಂವಾದ ಮಾಡುವುದು; ಅಲ್ಲಿ ಪಡೆದ ಅನುಭವ ಮತ್ತು ಜ್ಞಾನವನ್ನು ಪ್ರಭುತ್ವದ ನೀತಿನಿರೂಪಣ ಸಭೆಗಳಲ್ಲಿ ಹಂಚಿಕೊಳ್ಳುವುದು ಸಾಧ್ಯವಾಯಿತು.
ಅಸ್ಸಾದಿ ಅರಬಸ್ಥಾನದ ಒಂದು ಸಮುದಾಯದ ಹೆಸರು. ಅಸ್ಸಾದಿಯವರ ಪೂರ್ವಜರು ಬಗ್ದಾದು ಕಡೆಯಿಂದ ಭಾರತಕ್ಕೆ ವಲಸೆ ಬಂದು ಕರಾವಳಿ ಸೀಮೆಯಲ್ಲಿ ನೆಲೆ ನಿಂತವರು. ಮುಜಾಫರ್ ಅವರು ಉಡುಪಿ ಸಮೀಪದ ಶಿರ್ವದಲ್ಲಿ ಹುಟ್ಟಿದರು. ಕರ್ನಾಟಕದ ಕರಾವಳಿಯು ಅತಿಹೆಚ್ಚು ಜನಭಾಷೆಗಳು, ಹಲವಾರು ಆದಿವಾಸಿಗಳು, ವಿಭಿನ್ನ ಧರ್ಮಗಳು, ಆಹಾರ ಪದ್ಧತಿಗಳು ಇರುವ ವಿಶಿಷ್ಟ ಪ್ರದೇಶ. ಇದು ದುರದೃಷ್ಟವಶಾತ್ ಏಕರೂಪೀ ಸಂಸ್ಕೃತಿ ಹೇರಿಕೆಯ ಮತ್ತು ಮಹಿಳೆಯರ, ಅಲ್ಪಸಂಖ್ಯಾತರ ಮಾನವ ಹಕ್ಕುಗಳನ್ನು ದಮನಿಸುವ ಪ್ರಯೋಗಶಾಲೆಯೂ ಆಗಿಬಿಟ್ಟಿದೆ. ಇಂತಹ ಸಾಮಾಜಿಕ ವಾಸ್ತವ ಮತ್ತು ಸೈದ್ಧಾಂತಿಕ ಪ್ರಯೋಗಶಾಲೆಯ ಹಿನ್ನೆಲೆಯ ಪ್ರದೇಶದಿಂದ ಬಂದ ಅಸ್ಸಾದಿ, ಜಿ.ರಾಜಶೇಖರ, ಪುರುಷೋತ್ತಮ ಬಿಳಿಮಲೆ, ಚಂದ್ರಪೂಜಾರಿ, ದಿನೇಶ್ ಅಮಿನ್ಮಟ್ಟು, ಪಟ್ಟಾಭಿರಾಮ ಸೋಮಯಾಜಿ, ಸಂವರ್ತ ಸಾಹಿಲ್ ಮೊದಲಾದ ಚಿಂತಕರ ಮಾತು ಮತ್ತು ಬರಹಗಳಲ್ಲಿ, ಭಾರತದ ಆತ್ಮದಂತಿರುವ ಬಹುತ್ವ ತತ್ವವು ಪ್ರತಿಪಾದಿತವಾಗಿದೆ. ಈ ತತ್ವಕ್ಕೆ ಮೂಲಭೂತವಾದ ಮತ್ತು ಮತೀಯವಾದ ಎರಡನ್ನೂ ಪ್ರತಿರೋಧಿಸುವ ಶಕ್ತಿಯೂ ಒದಗಿದೆ. ಇದಕ್ಕೆ ಬೇಕಾಗಿ ಅಸ್ಸಾದಿಯವರಿಗೆ ಉರ್ದು, ತುಳು, ಕನ್ನಡ, ಇಂಗ್ಲೀಷ್ ಭಾಷೆಗಳಲ್ಲಿ ಪ್ರಭುತ್ವವಿದೆ. ಈ ಭಾಷಿಕ ಬಹುತ್ವವು ಅವರನ್ನು ಸಾಂಸ್ಕೃತಿಕ ಬಹುತ್ವವನ್ನು ಪ್ರತಿಪಾದಿಸುವಂತೆ ಮಾಡಿದೆ ಕೂಡ. ಅಸ್ಸಾದಿ ನಮ್ಮನಡುವಿನ ಬಹುತ್ವದ ಚಿಂತಕರು.
ಅನೇಕ ಸಲ ಕೋಮುಸೌಹಾರ್ದ ಅಥವಾ ಮತೀಯವಾದ ವಿರೋಧಿಸುವ ಚಿಂತನೆಯು, ಸಮಾಜದಲ್ಲಿ ಆಳವಾಗಿರುವ ವರ್ಗಭೇದ ಮತ್ತು ಸಾಮಾಜಿಕ ತಾರತಮ್ಯದ ಆಯಾಮಗಳನ್ನು ಅರ್ಥ ಮಾಡಿಕೊಳ್ಳದೆ ಇಲ್ಲವೇ ಪರಿಗಣಿಸದೇ ಹೋಗುವ ಸಾಧ್ಯತೆಗಳಿವೆ. ಅಸ್ಸಾದಿಯವರ ಸಂಶೋಧನ ಬರಹ ಮತ್ತು ಉಪನ್ಯಾಸಗಳ ವಿಶೇಷತೆಯೆಂದರೆ, ಅವು ನಮ್ಮ ಸಮಾಜದ ಬಡತನ ಮತ್ತು ಸಾಮಾಜಿಕ ಭೇದಗಳನ್ನು, ಅವುಗಳ ನಡುವಿರುವ ಅಂತಃಸಂಬಂಧವನ್ನು ಮರೆಯುವುದಿಲ್ಲ. ಅವನ್ನು ಎಚ್ಚರಿಕೆಯಿಂದ ಗುರುತಿಸುತ್ತವೆ ಮತ್ತು ವಿಶ್ಲೇಷಿಸುತ್ತವೆ. ಸಮಸ್ಯೆಯಿಂದ ಹೊರಬರುವ ಕಾರ್ಯಸಾಧ್ಯವಾದ ಸಲಹೆ ಸೂಚನೆಗಳ ಮೂಲಕ ಮುಗಿಯುತ್ತವೆ.
ಈ ದೃಷ್ಟಿಯಿಂದ ಮುಸ್ಲಿಮರಲ್ಲಿರುವ ಪಂಗಡ ಅಥವಾ ಜಾತಿಪದ್ಧತಿಯನ್ನು ಕುರಿತ ಅಸ್ಸಾದಿಯವರ 'ಅಲ್ಪಸಂಖ್ಯಾತರು ಮತ್ತು ಜಾತಿವ್ಯವಸ್ಥೆ' ಪುಸ್ತಕವು ಅತ್ಯುತ್ತಮ ನಿದರ್ಶನವಾಗಿದೆ. ಈ ಪುಸ್ತಕದಲ್ಲಿರುವ ೪೦೮ ಅಡಿ ಟಿಪ್ಪಣಿಗಳು ಮತ್ತು ಅಲ್ಲಿ ಉಲ್ಲೇಖಗೊಂಡಿರುವ ಕೃತಿಗಳು, ಅಸ್ಸಾದಿಯವರ ವ್ಯಾಪಕವಾದ ಅಧ್ಯಯನದ ಪ್ರತೀಕವಾಗಿವೆ.
ಇದು ಜಗತ್ತಿನ ಮುಸ್ಲಿಮರೆಲ್ಲ ಒಂದೇ, ಮುಸ್ಲಿಮರಲ್ಲಿ ಜಾತಿ ವ್ಯವಸ್ಥೆ ಇಲ್ಲ ಎಂದು ನಂಬಿರುವ ಮತ್ತು ಪ್ರತಿಪಾದಿಸುವ ಮಹನೀಯರಿಗೆ ಅಷ್ಟೇನು ಪ್ರಿಯವಾದ ಪುಸ್ತಕಲ್ಲ. ಆದರೆ ಒಬ್ಬ ವಿದ್ವಾಂಸ ತನ್ನ ಸಮುದಾಯಕ್ಕೆ ತನ್ನ ಬೌದ್ಧಿಕತೆಯಿಂದ ಸೇವೆ ಸಲ್ಲಿಸುವ ವಿಧಾನವೆಂದರೆ, ಅದರೊಳಗಿರುವ ವೈರುಧ್ಯಗಳನ್ನು ಕಹಿಸತ್ಯಗಳನ್ನು ಬಹಿರಂಗಪಡಿಸುವುದು; ತನ್ನ ಸಮುದಾಯದೊಳಗಿನ ದಮನಿತ ಸ್ತರ ವರ್ಗಗಳಿಗೆ ಸಾಮಾಜಿಕ, ಆರ್ಥಿಕ ನ್ಯಾಯ ಸಿಗುವ ದಿಸೆಯಲ್ಲಿ ನೆರವಾಗುವುದು; ಅವರ ನಿಜವಾದ ಎದುರಾಳಿಗಳ ಬಗ್ಗೆ ಎಚ್ಚರವನ್ನು ಕೊಡುವುದು. ಅವರನ್ನು ಕುರಿತು ಪ್ರಭುತ್ವವನ್ನು ಸಂವೇದನಶೀಲಗೊಳಿಸುವುದು; ಈ ಹಿನ್ನೆಲೆಯಲ್ಲಿ ಅಸ್ಸಾದಿಯವರು ಲಿಂಗಾಯತ ಧರ್ಮದ ಸಮಿತಿಯಲ್ಲಿ ಕೆಲಸ ಮಾಡಿದ್ದನ್ನು; ಮೈಸೂರು ಸೀಮೆಯ ಕಾಡುಗಳಲ್ಲಿರುವ ಅದಿವಾಸಿಗಳ ಸ್ಥಳಾಂತರ ಮತ್ತು ಪುನರ್ವಸತಿ ಕುರಿತಂತೆ ಉಚ್ಚನ್ಯಾಯಾಲಯವು ನೇಮಿಸಿದ ಸಮಿತಿಯ ಅಧ್ಯಕ್ಷರಾಗಿ ಅವರು ಕೊಟ್ಟ ವರದಿಯನ್ನು; ರೈತರ ಆತ್ಮಹತ್ಯೆ ಮತ್ತು ದಲಿತರ ಮೇಲಿನ ದೌರ್ಜನ್ಯಗಳ ಬಗ್ಗೆ ನಡೆಸಿದ ಅಧ್ಯಯನವನ್ನು ಚುನಾವಣೆಗಳಲ್ಲಿ ದಮನಿತ ಸಮುದಾಯಗಳು ಮತದಾನ ಮಾಡುವ ಪ್ರವೃತ್ತಿಯನ್ನು ಕುರಿತ ವಿಶ್ಲೇಷಣೆಗಳನ್ನು ಗಮನಿಸಬಹುದು.
ಕೆಲವು ವರ್ಷಗಳ ಹಿಂದೆ ನಾವು, ಕರ್ನಾಟಕದ ಲೇಖಕರು, ವಕೀಲರು, ಪತ್ರಕರ್ತರು, ಚಳವಳಿಗಾರರು ಸೇರಿಕೊಂಡು 'ಮುಸ್ಲಿಂ ಚಿಂತಕರ ಚಾವಡಿ' ಎಂಬ ಸಂಘಟನೆ ಕಟ್ಟಿದೆವು. ಮುಜಾಫರ್ ಅಸ್ಸಾದಿಯವರು ಅದರ ಪ್ರಥಮ ಅಧ್ಯಕ್ಷರಾಗಿ ಮಾಡಿದ ಮೊದಲನೇ ಕಾರ್ಯಕ್ರಮವೆಂದರೆ, ಭಾರತದ ಮುಸ್ಲಿಮರ ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಅವಸ್ಥೆಯ ಬಗ್ಗೆ ಜಸ್ಟೀಸ್ ಸಾಚಾರ್ ಅವರು ಕೊಟ್ಟಿರುವ ವರದಿಯ ಮೇಲೆ ಚರ್ಚೆ ಏರ್ಪಡಿಸಿದ್ದು. ಭಾರತದ ಮುಸ್ಲಿಮರಿಗೆ ತುರ್ತು ಅಗತ್ಯ ಇರುವುದು ಮಸೀದಿಗಳಲ್ಲ. ಘನತೆಯಿಂದ ಬದುಕುವ ಆರ್ಥಿಕ ಹಾಗೂ ಸಾಮಾಜಿಕ ಬದುಕು. ರಾಜಕೀಯ ಪ್ರಾತಿನಿಧ್ಯ ಎಂಬುದು ಅವರ ನಂಬಿಕೆ. ಅವರಿಗೆ ಸಾಮಾಜಿಕ ಕ್ರಿಯಾಶೀಲತೆಗೆ ಮತ್ತು ಸಾಮುದಾಯಿಕ ಸಂಘಟನೆಗೆ ತಮ್ಮ ಸಂಶೋಧನೆಯ ಬಲದಿಂದ ಚಿಂತನೆಯ ಚೌಕಟ್ಟು ಕೊಡುವ ವಿಶಿಷ್ಟ ತರಬೇತಿಯಿದೆ. ಚಾರಿತ್ರಿಕ ಅರಿವಿನಿಂದ ಕೂಡಿರುವ ಈ ಚೌಕಟ್ಟಿಗೆ ವರ್ತಮಾನವನ್ನು ಬದಲಿಸುವ ಕಳಕಳಿಯಿದೆ. ಅವರ ಅಧ್ಯಯನಗಳು ಚರಿತ್ರೆ, ಸಮಾಜ ವಿಜ್ಞಾನ, ರಾಜಕೀಯಶಾಸ್ತ್ರ, ಮಾನವಶಾಸ್ತ್ರಗಳ ಬಹುಶಿಸ್ತೀಯ ತಿಳಿವಳಿಕೆಯಿಂದ ರೂಪುಗೊಂಡಿರುವುದೇ ಇದಕ್ಕೆ ಕಾರಣ.
ಅಸ್ಸಾದಿಯವರ ಈ ಬಹುಶಿಸ್ತೀಯ ಮತ್ತು ಜನಪರ ವಿದ್ವತ್ತಿನ ತಾರ್ಕಿಕ ಆಯಾಮವೇ ಅವರು ಪತ್ರಿಕೆಗಳಲ್ಲಿ ಲೇಖನ ಅಂಕಣ ಬರೆಯುವುದು. ಕನ್ನಡದಲ್ಲಿ ಸಾಹಿತ್ಯದ ಹಿನ್ನೆಲೆಯವರಿಗೆ ಹೋಲಿಸಿದರೆ, ಸಮಾಜ ವಿಜ್ಞಾನದ ಹಿನ್ನೆಲೆಯವರು ಕನ್ನಡದಲ್ಲಿ ತಮ್ಮ ತಿಳಿವಳಿಕೆಯನ್ನು ಪತ್ರಿಕೆಗಳಲ್ಲಿ ಹಂಚಿಕೊಳ್ಳುವುದು ಇಲ್ಲವೇ ಟಿವಿ ಚರ್ಚೆಗಳಲ್ಲಿ ಕಾಣಿಸಿಕೊಳ್ಳುವುದು ಕಡಿಮೆ. ಆದರೆ ಅಸ್ಸಾದಿಯವರು ಇದಕ್ಕೆ ಅಪವಾದ. ಅವರ ಪತ್ರಿಕಾ ಲೇಖನಗಳು ಬಹಳ ಜನಪ್ರಿಯವಾಗಿವೆ. ಅವರ ಅಂಕಣ ಬರೆಹಗಳಿಗೆ ಮಾಧ್ಯಮ ಅಕಾಡೆಮಿಯ ಬಹುಮಾನ ಬಂದಿದ್ದು ಸಹಜವಾಗಿವೆ.
ಜೆಎನ್ಯು ಮತ್ತು ಶಿಕಾಗೊ ವಿಶ್ವವಿದ್ಯಾಲಯಗಳಲ್ಲಿ ಕಲಿತ, ಮಂಗಳೂರು, ಗೋವಾ ಮತ್ತು ಮೈಸೂರು ವಿಶ್ವವಿದ್ಯಾನಿಲಯಗಳಲ್ಲಿ ನಾಲ್ಕು ದಶಕಗಳ ಕಾಲ ಸಹಸ್ರಾರು ವಿದ್ಯಾರ್ಥಿಗಳಿಗೆ ಕಲಿಸಿದ, ಜಗತ್ತಿನ ಅನೇಕ ವಿಶ್ವವಿದ್ಯಾಲಯಗಳಲ್ಲಿ ಕರ್ನಾಟಕ ಕುರಿತ ತಮ್ಮ ಜ್ಞಾನವನ್ನು ಹಂಚಿಕೊಂಡ, ರಾಜ್ಯಶಾಸ್ತ್ರ ಮತ್ತು ಸಮಾಜ ವಿಜ್ಞಾನಗಳ ತಿಳಿವಳಿಕೆಯನ್ನು ನಾಡಿನ ಓದುಗರಿಗೆ ಅಂಕಣಗಳ ಮೂಲಕ ಉಣಬಡಿಸಿದ ಪ್ರೊ.ಅಸ್ಸಾದಿಯವರು, ಇಂದು (೩೦.೮.೨೦೨೩) ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಅವರ ತಿಳಿವಳಿಕೆಯು, ಸಮಾನತೆಯ ಕರ್ನಾಟಕವನ್ನು ಕಟ್ಟಲು ನೆರವಾಗಿದೆ ಮತ್ತು ಮುಂದೆ ಕೂಡ ನೆರವಾಗಲಿದೆ. 'ಜ್ಞಾನದ ಬಹುಸ್ತರೀಯ ಅಥವಾ ಜನೋಪಯೋಗಿ ಮಾದರಿ' ಎಂದೂ ವಿರಮಿಸುವುದಿಲ್ಲ" ಎಂದು ರಹಮತ್ ತರಿಕೇರೆ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಮುಜಫ್ಫರ್ ಅಸ್ಸಾದಿ ಅವರ ಅಭಿನಂದನಾ ಗ್ರಂಥಕ್ಕೆ ಬರೆದ ಲೇಖನವಿದು. 30.08.2023 ರಂದು ಅವರು ಮೈಸೂರು ವಿಶ್ವವಿದ್ಯಾಲಯದ ರಾಜಕೀಯ ವಿಜ್ಞಾನ ವಿಭಾಗದಿಂದ ನಿವೃತ್ತರಾದ ಸಂದರ್ಭದಲ್ಲಿ ಬಿಡುಗಡೆಯಾಯಿತು. ಇಂದು ಅವರು ಚಿರಸ್ಮರಣೆಗೆ ಸೇರಿದರು! ಈ ಸುದ್ದಿ ಬಹಳ ತಲ್ಲಣಗೊಳಿಸಿದೆ. ಭಾವಪೂರ್ಣ ಶ್ರದ್ಧಾಂಜಲಿ.
ಮಾನವೀಯ ನೆಲೆಯ ವಿದ್ವಾಂಸ: ರಂಜಾನ್ ದರ್ಗಾ ಬರೆದ ಪೋಸ್ಟ್
ಸೋಷಿಯಲ್ ಮೀಡಿಯಾದಲ್ಲಿ ಮುಜಾಫರ್ ಅಸ್ಸಾದಿ ನೆನಪಿನಲ್ಲಿ ರಂಜಾನ್ ದರ್ಗಾ ಅವರು ದೀರ್ಘ ಬರಹವೊಂದನ್ನು ಹಂಚಿಕೊಂಡಿದ್ದಾರೆ. ಮುಜಫ್ಫರ್ ಅಸ್ಸಾದಿ ಅವರ ಅಭಿನಂದನಾ ಗ್ರಂಥಕ್ಕೆ ಬರೆದ ಲೇಖನವಿದು. 30.08.2023 ರಂದು ಅವರು ಮೈಸೂರು ವಿಶ್ವವಿದ್ಯಾಲಯದ ರಾಜಕೀಯ ವಿಜ್ಞಾನ ವಿಭಾಗದಿಂದ ನಿವೃತ್ತರಾದ ಸಂದರ್ಭದಲ್ಲಿ ಬಿಡುಗಡೆಯಾಯಿತು. ಇಂದು ಅವರು ಚಿರಸ್ಮರಣೆಗೆ ಸೇರಿದರು! ಈ ಸುದ್ದಿ ಬಹಳ ತಲ್ಲಣಗೊಳಿಸಿದೆ. ಭಾವಪೂರ್ಣ ಶ್ರದ್ಧಾಂಜಲಿ ಎಂದು ರಂಜಾನ್ ದರ್ಗಾ ಅವರು "ಮಾನವೀಯ ನೆಲೆಯ ವಿದ್ವಾಂಸ" ಎಂಬ ಬರಹವನ್ನು ಹಂಚಿಕೊಂಡಿದ್ದಾರೆ.
ಪ್ರೊ. ಮುಜಫ್ಫರ್ ಅಸ್ಸಾದಿ ಅವರ ಸ್ವ ವಿವರದ ಮೇಲೆ ಕಣ್ಣಾಡಿಸಿದಾಗ, ಒಬ್ಬ ಮನುಷ್ಯ ತನ್ನ ಸೇವಾವಧಿಯಲ್ಲಿ ಇಷ್ಟೆಲ್ಲ ಸಾಧಿಸಲು ಸಾಧ್ಯವೆ? ಎಂಬ ಪ್ರಶ್ನೆ ಮೂಡದೆ ಇರಲು ಸಾಧ್ಯವಿಲ್ಲ. ನಾನು ವಯಸ್ಸಲ್ಲಿ ಅಸ್ಸಾದಿ ಅವರಿಗಿಂತ ಹತ್ತು ವರ್ಷ ಹಿರಿಯ. ಆದರೆ ನನ್ನ ವಾರಿಗೆ ಗೆಳೆಯರಲ್ಲಿ ಅಸ್ಸಾದಿ ಅವರಷ್ಟು ಸಾಧನೆ ಮಾಡಿದ ಇನ್ನೊಬ್ಬರನ್ನು ಕಾಣೆ. ನನ್ನ ದೃಷ್ಟಿಯಲ್ಲಿ ಇವರೊಬ್ಬರು ಸೌಮ್ಯ ಸ್ವಭಾವದ ಜ್ಞಾನ ತಪಸ್ವಿ. ಬಹುಶಿಸ್ತೀಯ ಅಧ್ಯಯನಗಳ ಪ್ರತಿಭಾವಂತ. ಜಾತ್ಯತೀತ ಚಿಂತನೆಯ ಜೊತೆಗೇ ಅಲ್ಪಸಂಖ್ಯಾತರ ಅಸಹಾಯಕ ಸ್ಥಿತಿಗೆ ಕಾರಣಗಳನ್ನು ನಿಖರವಾಗಿ ದಾಖಲಿಸಿದ ಚಿಂತಕ.
"ಜಗತ್ತಿನ ಮುಸ್ಲಿಮರೆಲ್ಲ ಒಂದೇ" ಎಂಬ ಮಿಥ್ ಅನ್ನು ಅಲ್ಲಗಳೆದು ಸೋದಾಹರಣವಾಗಿ ಎತ್ತಿ ತೋರಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಈ ಸತ್ಯವನ್ನು ಮುಸ್ಲಿಮರು ಸ್ವಾತಂತ್ರ್ಯ ಬಂದಕೂಡಲೆ ಆರ್ಥ ಮಾಡಿಕೊಂಡಿದ್ದರೆ, ಮುಸ್ಲಿಮರ ಸ್ಥಿತಿಗತಿಯಲ್ಲಿ ಭಾರಿ ಗುಣಾತ್ಮಕ ಬದಲಾವಣೆ ಕಂಡುಬರುತ್ತಿತ್ತು.
ಭಾರತದ ಬಹುಪಾಲು ಮುಸ್ಲಿಮರ ಪೂರ್ವಜರು ದೇಶದ ಮೂಲನಿವಾಸಿಗಳಾಗಿದ್ದಾರೆ. ಈ ಮೂಲನಿವಾಸಿಗಳ ರೀತಿನೀತಿಗಳು ಒಂದೇ ಆಗಿರಲು ಸಾಧ್ಯವಿಲ್ಲ. ಅವರೆಲ್ಲ ತಂತಮ್ಮ ಪ್ರದೇಶ, ಭಾಷೆ, ವಿವಿಧ ಆಹಾರ ಉತ್ಪಾದನಾ ಕ್ಷೇತ್ರಗಳು, ವಿವಿಧ ಕಾಯಕಗಳು, ಆಹಾರ ಪದ್ಧತಿ, ಉಡುಗೆ ತೊಡಿಗೆ, ಭಾಷೆ, ಬಣ್ಣ, ನಡಾವಳಿ, ಪೂರ್ವಜರ ಸಂಪ್ರದಾಯ, ಪರಂಪರೆ, ಇತಿಹಾಸ ಮುಂತಾದವುಗಳಿಂದ ಪ್ರಭಾವಿತರಾಗಿರುತ್ತಾರೆ. ಜೊತೆಯಲ್ಲಿ ಬಡವ ಶ್ರೀಮಂತ ವರ್ಗಗಳು ಬೇರೆ.
ಇಷ್ಟೆಲ್ಲ ವೈವಿಧ್ಯಮಯವಾದ ಮೂಲನಿವಾಸಿಗಳು ಇಸ್ಲಾಂ ಧರ್ಮ ಸ್ವೀಕಾರ ಮಾಡಿದ ಮೇಲೆ ಒಂದಾಗಿ ಬಿಡುತ್ತಾರೆಯೆ? ಅವರು ತಮ್ಮ ಪೂರ್ವಿಕರ ಅನೇಕ ನಡಾವಳಿ ಜೊತೆಗೇ ಇಸ್ಲಾಂ ಅಥವಾ ಯಾವುದೇ ಧರ್ಮವನ್ನು ಸ್ವೀಕರಿಸಿರುತ್ತಾರೆ. ಈ ಮಿಥ್ ಅನ್ನು ಸೈದ್ಧಾಂತಿಕವಾಗಿ ದಾಖಲಿಸಿದವರೇ ಮುಜಫ್ಫರ್ ಅಸ್ಸಾದಿ.
ಕರ್ನಾಟಕದಲ್ಲೇ ಅನೇಕ ವಿಧವಾದ ಮುಸ್ಲಿಮರಿದ್ದಾರೆ. ಪ್ರಾದೇಶಿಕವಾಗಿ ಹೇಳುವುದಾದರೆ, ಭಟ್ಕಳ ನವಾಯತ ಮುಸ್ಲಿಮರ ಜೀವನ ವಿಧಾನವೇ ಬೇರೆಯಾಗಿದೆ. ಬಿಳಿಬಣ್ಣದ ಅವರು ಕಪ್ಪು ಮುಸ್ಲಿಮರನ್ನು "ಕಾಲೇಪಾಂವ್" ಎಂದು ಕರೆಯುತ್ತಾರೆ. ಅವರು ನವಾಯತರ ಮಧ್ಯೆಯೆ ರಕ್ತಸಂಬಂಧ ಬೆಳೆಸುತ್ತಾರೆ. ಮಂಗಳೂರು ಮುಸ್ಲಿಮರು ಮೂಲ ಇಸ್ಲಾಂಮಿನ ನಡಾವಳಿಯ ಕಡೆಗೇ ಹೆಚ್ಚು ಗಮನ ಹರಿಸುತ್ತಾರೆ. ನಾವು ಉತ್ತರ ಕರ್ನಾಟಕದ ಹಳ್ಳಿಗಾಡಿನ ಮುಸ್ಲಿಮರು "ಖಾದರಲಿಂಗನಿಗೆ ಸಾವಿರ ಸಲಾಂ" ಎನ್ನುವವರು. ನಮಗೆ ರಂಜಾನ್, ದೀಪಾವಳಿ, ದಸರಾ ಎಲ್ಲ ಅಷ್ಟೇ. ಮೋಹರಂ ನಮಗೆ ಬರಿ ದುಃಖದ ದಿನವಲ್ಲ, ಎಲ್ಲ ಧರ್ಮಗಳವರು ಒಂದಾಗಿ ಮಾನವ ಏಕತೆಯನ್ನು ಆನಂದಿಸುವ ಸಂದರ್ಭವಾಗಿದೆ.
ನಮ್ಮ ಜೀವನವಿಧಾನ ಇಸ್ಲಾಂ ಗ್ರಂಥಜ್ಞಾನಿಗಳಿಗೆ ವಿಚಿತ್ರವೆನಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಅಂಥ ಜ್ಞಾನಿಗಳ ಪ್ರಭಾವ ನಮ್ಮ ಹಳ್ಳಿಗಾಡಿನ ಮುಸ್ಲಿಮರ ಮೇಲೂ ಆಗುತ್ತಿದೆ. ಬಿಹಾರ, ಉತ್ತರ ಪ್ರದೇಶ ಮುಂತಾದ ಕಡೆಗಳ ಇಸ್ಲಾಂ ಧಾರ್ಮಿಕ ಶಿಕ್ಷಣ ಪಡೆದವರು, ನಮ್ಮ ಕಡೆಯ ಹಳ್ಳಿ ಪಟ್ಟಣಗಳಲ್ಲಿನ ಮಸೀದಿಗಳಲ್ಲೂ ನಮಾಜ್ ಮಾಡಿಸಲು ಬರುತ್ತಾರೆ. ಧರ್ಮಗುರುಗಳು ಧಾರ್ಮಿಕ ಪ್ರವಚನ ಮಾಡುವುದಕ್ಕೂ ಸ್ಥಳೀಯ ಜನರ ಜೀವನವಿಧಾನಕ್ಕೂ ಅಜಗಜಾಂತರವಿದೆ. ಹೀಗಾಗಿ ಸ್ದಳೀಯ ಬದುಕಿನಲ್ಲಿ ಸಾಂಸ್ಕೃತಿಕ ಗೊಂದಲಗಳು ಶುರುವಾಗುತ್ತವೆ.
ಸಯ್ಯದ, ಶೇಖ, ಮೊಘಲ್, ಪಠಾಣ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವವರಿದ್ದಾರೆ. ಷಿಯಾ ಸುನ್ನಿಗಳಿದ್ದು ಅವರಲ್ಲೂ ಅನೇಕ ಪ್ರಕಾರಗಳಿವೆ. ಪಿಂಜಾರರು, ದರ್ವೆಶಿಗಳು, ಜಾತಕಾರರು, ನಾಲಬಂದರು, ಚಪ್ಪರಬಂದರು, ಬಾಗವಾನರು, ಬ್ಯಾರಿಗಳು, ತಬ್ಲೀಕ್ ಜಮಾತನವರು ಸೂಫಿ ಮುಸ್ಲಿಮರು ಹೀಗೆ ಅನೇಕ ಪ್ರಕಾರದವರು ಇದ್ದಾರೆ. ಅವರ ಜೀವನವಿಧಾನದಲ್ಲೂ ಬಹಳ ವ್ಯತ್ಯಾಸಗಳಿವೆ.
ಈ ನಿಜದ ನಿಲವನ್ನು ಭಾರತದ ಯಾವೊಬ್ಬ ಮುಸ್ಲಿಂ ಚಿಂತಕರೂ ಸೂಕ್ಷ್ಮವಾಗಿ ಗಮನಿಸದ ಕಾರಣ ಕೆಳವರ್ಗದ ಮುಸ್ಲಿಮರ ಬದುಕು ಅಯೋಮಯವಾಗಿದೆ. ಈ ಹಿನ್ನಲೆಯಲ್ಲಿ ಅಸ್ಸಾದಿಯವರು ದೇಶದ ಮುಖ್ಯ ಚಿಂತಕರಲ್ಲಿ ಒಬ್ಬರಾಗಿ ಕಾಣುತ್ತಾರೆ. ದೇಶದ ಮುಸ್ಲಿಂ ಸಮಾಜದ ಅಭಿವೃದ್ಧಿಯಲ್ಲಿ ಆವರ ಪಾತ್ರ ಮಹತ್ವದ್ದಾಗಿದೆ.
ಅವರ ಚಿಂತನೆ ಬರಿ ರಾಜಕೀಯ ವಿಜ್ಞಾನ ವಿಷಯಕ್ಕೆ ಸೀಮಿತವಾಗಿಲ್ಲ. ಸಮಾಜೋ ಧಾರ್ಮಿಕ ಆರ್ಥಿಕ ಚಿಂತನೆಗಳು ಅವರ ರಾಜಕೀಯ ಪ್ರಜ್ಞೆಯ ಪರಿಧಿಯಲ್ಲಿ ಬರುತ್ತವೆ. ಜನಮುಖಿ ಅಕ್ಯಾಡೆಮಿಕ್ ಆಗಿ ಅವರು ಬಹಳಷ್ಟು ಸಾಧಿಸಿದ್ದಾರೆ. ಬಡ ಅಲ್ಪಸಂಖ್ಯಾತರಷ್ಟೇ ಅಲ್ಲದೆ ದಲಿತರು ಮತ್ತು ಹಿಂದುಳಿದವರ ಬಗ್ಗೆಯೂ ಆಳವಾದ ಚಿಂತನೆಗಳನ್ನು ದಾಖಲಿಸಿದ್ದಾರೆ.
ಸಮರ್ಪಣಾಭಾವದ ಪ್ರಾಧ್ಯಾಪಕರಾಗಿ ಶಿಷ್ಯಗಣದ ಪ್ರೀತಿಗೆ ಪಾತ್ರರಾಗಿದ್ದಾರೆ. ಏತನ್ಮಧ್ಯೆ ಕರ್ನಾಟಕದ ಎಲ್ಲ ಚಳವಳಿಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದಾರೆ. ಮೂರು ದಶಕಗಳ ಹಿಂದೆ ಅವರ ತಾರುಣ್ಯದಲ್ಲೇ ಕರ್ನಾಟಕದ ಚಳವಳಿಗಳ ಬಗ್ಗೆ ಪ್ರಖ್ಯಾತ ಇಪಿಡಬ್ಲೂನಲ್ಲಿ ಬರೆದಿದ್ದರು. ಅದನ್ನು ಆಕಸ್ಮಿಕವಾಗಿ ಓದಿ ಆಶ್ಚರ್ಯವೆನಿಸಿತ್ತು. ಅದರಲ್ಲಿ ನನ್ನ ಹೆಸರೂ ಇತ್ತು! ಹೀಗೆ ಅವರನ್ನು ನೋಡುವ ಮೊದಲೇ ಅವರ ಪ್ರತಿಭೆ ಮತ್ತು ಸಾಮಾಜಿಕ ಪ್ರಜ್ಞೆಯ ಪರಿಚಯವಾಯಿತು.
ಪ್ರಗತಿಪರ ಮುಸ್ಲಿಂ ಬರಹಗಾರರು ಸೇರಿ "ಚಿಂತಕರ ಚಾವಡಿ" ಪ್ರಾರಂಭಿಸಿದಾಗ, ಸಭೆಗಳಲ್ಲಿ ಅವರ ಚಿಂತನಾಕ್ರಮದಿಂದ ನಾವೆಲ್ಲ ಸಂತುಷ್ಟರಾಗುತ್ತಿದ್ದೆವು. ಆಳವಾದ ಚಿಂತನೆಗಳಿಂದ ಕೂಡಿದ ಅವರ ಗಂಭೀರ ಮಾತುಗಳು ನಮಗೆಲ್ಲ ದಾರಿದೀಪದಂತೆ ಖುಷಿಕೊಟ್ಟಿದ್ದುಂಟು.
ಮುಜಫ್ಫರ್ ಅಸ್ಸಾದಿ ಅವರು ನಿವೃತ್ತರಾದಮೇಲೆ ಇನ್ನೂ ಹೆಚ್ಚು ಬೀಜಿ ಆಗುವುದರಲ್ಲಿ ಸಂಶಯವಿಲ್ಲ. ಅವರು ದೇಶ ವಿದೇಶಗಳಿಗೆ ಸಂದರ್ಶಕ ಪ್ರಾಧ್ಯಾಪಕರಾಗಿ ಹೋಗಬಹುದು. ಸರ್ಕಾರದ ಯೋಜನೆಗಳಲ್ಲಿ ಸಲಹೆಗಾರರಾಗಬಹುದು. ಇವೆಲ್ಲ ಅವರ ವಿದ್ವತ್ತಿಗೆ ಸಹಜವಾಗಿ ಬರುವಂಥವು. ಆದರೆ ಇವೆಲ್ಲವುಗಳಿಗಿಂತ ಮಿಗಿಲಾಗಿ ಅವರು ದೇಶದಲ್ಲಿ ಸಂಕಷ್ಟಕ್ಕೊಳಗಾದ ಅಮಾಯಕ ಮುಸ್ಲಿಮರ ಭವಿಷ್ಯಕ್ಕಾಗಿ ತಾವು ಕಂಡುಕೊಂಡ ಸತ್ಯವನ್ನು ಪ್ರತಿಪಾದಿಸುತ್ತ, ಮುಸ್ಲಿಂ ವಿದ್ವಾಂಸರ ಮತ್ತು ಧರ್ಮಪಂಡಿತರ ಕಣ್ಣು ತೆರೆಸುವ ಮಹಾಕಾರ್ಯದಲ್ಲಿ ತೊಡಗುವುದು ಒಳ್ಳೆಯದು.
ಮೈನಾರಿಟಿ ಕುರಿತ ಅವರ ಚಿಂತನೆಗಳು ಹಿಂದಿ, ಉರ್ದು, ಇಂಗ್ಲಿಷ್ ಮುಂತಾದ ಭಾಷೆಗಳಲ್ಲಿ ಪ್ರಕಟವಾಗಬೇಕು ಎಂಬುದು ಕಾಲದ ಕರೆ ಆಗಿದೆ.
ಕೃಪೆ: ದಿನೇಶ್ ಅಮೀನ್ ಮಟ್ಟು, ರಹಮತ್ ತರಿಕೇರೆ, ರಂಜಾನ್ ದರ್ಗಾ ಫೇಸ್ಬುಕ್ ಪೋಸ್ಟ್ಗಳು