ರೆಸ್ಟೋರೆಂಟ್‌ಗಳಿಗೆ ಡೆಲಿವರಿ ಅಗ್ರಿಗೇಟರ್‌ ಆಪ್ ದುಬಾರಿ; ಕಡಿಮೆ ದರದಲ್ಲಿ ಆಹಾರ ಪೂರೈಕೆಗೆ ತಮ್ಮದೇ ಆ್ಯಪ್‌ಗೆ ಮುಂದಾದ ಹೋಟೆಲ್‌ಗಳು
ಕನ್ನಡ ಸುದ್ದಿ  /  ಕರ್ನಾಟಕ  /  ರೆಸ್ಟೋರೆಂಟ್‌ಗಳಿಗೆ ಡೆಲಿವರಿ ಅಗ್ರಿಗೇಟರ್‌ ಆಪ್ ದುಬಾರಿ; ಕಡಿಮೆ ದರದಲ್ಲಿ ಆಹಾರ ಪೂರೈಕೆಗೆ ತಮ್ಮದೇ ಆ್ಯಪ್‌ಗೆ ಮುಂದಾದ ಹೋಟೆಲ್‌ಗಳು

ರೆಸ್ಟೋರೆಂಟ್‌ಗಳಿಗೆ ಡೆಲಿವರಿ ಅಗ್ರಿಗೇಟರ್‌ ಆಪ್ ದುಬಾರಿ; ಕಡಿಮೆ ದರದಲ್ಲಿ ಆಹಾರ ಪೂರೈಕೆಗೆ ತಮ್ಮದೇ ಆ್ಯಪ್‌ಗೆ ಮುಂದಾದ ಹೋಟೆಲ್‌ಗಳು

ಕರ್ನಾಟಕದ ನಾನಾ ಭಾಗಗಳಲ್ಲಿ ರೆಸ್ಟೋರೆಂಟ್‌ಗಳಿಗೆ ದುಬಾರಿಯಾಗುತ್ತಿರುವ ಡೆಲಿವರಿ ಅಗ್ರಿಗೇಟರ್‌ ಆ್ಯಪ್‌ ಸಂಸ್ಥೆಗಳು; ಆಹಾರ ಪೂರೈಕೆಗೆ ತಮ್ಮದೇ ಆಪ್‌ ಮೂಲಕ ಹೋಟೆಲ್‌ಗಳು ವ್ಯವಸ್ಥೆ ಮಾಡಿಕೊಳ್ಳುತ್ತಿವೆ. ಹೇಗೆ ಮತ್ತು ಏಕೆ? ಇಲ್ಲಿದೆ ವಿವರ.ವರದಿ:ಎಚ್.‌ ಮಾರುತಿ, ಬೆಂಗಳೂರು

ಡೆಲಿವರಿ ಅಗ್ರಿಗೇಟರ್‌ ಆ್ಯಪ್‌ ದುಬಾರಿ ಕಾರಣದಿಂದ ತಮ್ಮದೇ ಆ್ಯಪ್‌ ತಯಾರಿ ಚಟುವಟಿಕೆ ನಡೆದಿದೆ.
ಡೆಲಿವರಿ ಅಗ್ರಿಗೇಟರ್‌ ಆ್ಯಪ್‌ ದುಬಾರಿ ಕಾರಣದಿಂದ ತಮ್ಮದೇ ಆ್ಯಪ್‌ ತಯಾರಿ ಚಟುವಟಿಕೆ ನಡೆದಿದೆ.

ಬೆಂಗಳೂರು: ಆಹಾರವನ್ನು ಸರಬರಾಜು ಮಾಡುವ ಅಗ್ರಿಗೇಟರ್‌ ಆ್ಯಪ್‌ ಸಂಸ್ಥೆಗಳು ತಮ್ಮ ಕಮೀಷನ್‌ ಅನ್ನು ದುಬಾರಿಗೊಳಿಸಿರುವ ನಿಟ್ಟಿನಲ್ಲಿ ಬೆಂಗಳೂರಿನ ರೆಸ್ಟೋರೆಂಟ್‌ ಗಳು ಪರ್ಯಾಯ ಮಾರ್ಗವನ್ನು ಹುಡುಕಿಕೊಂಡಿವೆ. ಹೊಸ ತಂತ್ರಜ್ಞಾನ ಬಳಕೆಯೊಂದಿಗೆ ವಾಟ್ಸ್‌ ಆ್ಯಪ್‌ ಆಧಾರಿತ ಡೆಲಿವರಿ ವ್ಯವಸ್ಥೆಯನ್ನು ಮಾಡಿಕೊಳ್ಳುತ್ತಿವೆ.ಹೋಟೆಲ್‌, ರೆಸ್ಟೋರೆಂಟ್‌ ಗಳಿಗೆ ಈ ಅಗ್ರಿಗೇಟರ್‌ ಡೆಲಿವರಿ ಸಂಸ್ಥೆಗಳ ಕಮೀಷನ್‌ ದುಬಾರಿಯಾಗಿ ಪರಿಣಮಿಸಿದೆ.ನಗರದ ಅನೇಕ ರೆಸ್ಟೋರೆಂಟ್‌ ಮತ್ತು ಕ್ಲೌಡ್‌ ಕಿಚನ್‌ ಗಳು ಆ್ಯಪ್‌ ಆಧಾರಿತ ಡೆಲಿವರಿ ವ್ಯವಸ್ಥೆಯನ್ನೇ ನಂಬಿಕೊಂಡು ಹೋಟೆಲ್‌ ಉದ್ಯಮವನ್ನು ನಡೆಸುತ್ತಿವೆ. ಒಂದು ಕಡೆ ಈ ಆಪ್‌ ಸಂಸ್ಥೆಗಳ ಕಮೀಷನ್‌ ದುಬಾರಿಯಾಗಿದ್ದು, ಕಾರ್ಮಿಕರಿಗೆ ಸಂಬಳ ಕೊಡಲೂ ಕಷ್ಟಪಡುತ್ತಿವೆ. ಮೇಲಾಗಿ ಆ್ಯಪ್‌ಗಳು ಹೆಚ್ಚಿನ ರಿಯಾಯಿತಿಯನ್ನೂ ಕೇಳುತ್ತಿರುವುದು ಮತ್ತಷ್ಟು ನಷ್ಟಕ್ಕೆ ಕಾರಣವಾಗುತ್ತಿದೆ. ಈ ಆ್ಯಪ್‌ ಸಂಸ್ಥೆಗಳು ಗ್ರಾಹಕರ ವಿವರಗಳನ್ನು ರೆಸ್ಟೋರೆಂಟ್‌ ಗಳೊಂದಿಗೆ ಹಂಚಿಕೊಳ್ಳುತ್ತಿಲ್ಲ. ಇದರಿಂದ ಹೋಟೆಲ್‌ ರೆಸ್ಟೋರೆಂಟ್‌ ಗಳಿಗೆ ತಮ್ಮ ಗ್ರಾಹಕರು ಯಾರು, ಯಾವ ವರ್ಗದವರು ಎನ್ನುವುದು ತಿಳಿಯುತ್ತಿಲ್ಲ ಎಂದುಭಾರತ ರಾಷ್ಟ್ರೀಯ ರೆಸ್ಟೋರೆಂಟ್‌ ಗಳ ಸಂಘದ ಪ್ರತಿನಿಧಿಯೊಬ್ಬರು ತಿಳಿಸುತ್ತಾರೆ.

ಈ ಎಲ್ಲ ಕಾರಣಗಳಿಗೆ ಅನೇಕ ರೆಸ್ಟೋರೆಂಟ್‌ ಗಳು ತಮ್ಮದೇ ಸ್ವಂತ ಡೆಲಿವರಿ ವ್ಯವಸ್ಥೆಮಾಡಿಕೊಳ್ಳಲು ಚಿಂತನೆ ನಡೆಸಿವೆ. ಅನೇಕ ರೆಸ್ಟೋರೆಂಟ್‌ ಗಳು ಇದಕ್ಕಾಗಿ ತಾಂತ್ರಿಕ ಪಾಲುದಾರರೊಂದಿಗೆ ಚರ್ಚೆ ನಡೆಸುತ್ತಿವೆ. ಈಗಾಗಲೇ ಅನೇಕ ಹೋಟೆಲ್‌ ಗಳು ಆಹಾರ ಡೆಲಿವರಿ ಮಾಡಲು ತಮ್ಮದೇ ವಾಟ್ಸ್‌ ಆ್ಯಪ್‌ ವ್ಯವಸ್ಥೆ ಮಾಡಿಕೊಂಡಿದ್ದು ಯಶಸ್ವಿಯಾಗಿವೆ. ಇದರಿಂದ ಹೋಟೆಲ್‌ ನವರಿಗೂ ನಷ್ಟ ಇಲ್ಲ, ಗ್ರಾಹಕರಿಗೂ ಹೊರೆ ಆಗುತ್ತಿಲ್ಲ. ಆ್ಯಪ್‌ ನಲ್ಲಿ ಹಾಯ್‌ ಹೇಳಿ ಮೆನುವನ್ನು ಬ್ರೌಸ್‌ ಮಾಡಿ ಬೇಕಾದ್ದನ್ನು ಆರ್ಡರ್‌ ಮಾಡಿದರೆ ಸಾಕು, 3 ರಿಂದ 5 ಕಿಮೀ ವ್ಯಾಪ್ತಿಯೊಳಗೆ ಕೇವಲ ರೂ.25ರಿಂದ 30 ರೂ. ಚಾರ್ಜ್‌ ವಿಧಿಸಿ ಪೂರೈಕೆ ಮಾಡುತ್ತಿವೆ.

ಉದ್ಯಮದಲ್ಲಿ ಯಶಸ್ಸು ಗಳಿಸಲು ಇದೊಂದು ತಂತ್ರವಾಗಿದೆ. ಮೂರನೇ ವ್ಯಕ್ತಿಯ ಮೇಲೆ ಅವಲಂಬಿತವಾಗುವುದರ ಬದಲು ನಮ್ಮದೇ ವ್ಯವಸ್ಥೆ ಇದ್ದರೆ ಗುಣಮಟ್ಟದ ಆಹಾರ ಮತ್ತು ತ್ವರಿತ ಸೇವೆಯನ್ನು ಒದಗಿಸಬಹುದು ಎನ್ನುವುದು ಸಾಬೀತಾಗಿದೆ. ಇದರಿಂದ ಉಂಟಾಗುವ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಿದರೆ ಶಾಶ್ವತವಾಗಿ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಲುಸಾಧ್ಯವಾಗುತ್ತದೆ ಎನ್ನುವುದು ಹೋಟೆಲ್‌ ಮಾಲೀಕರ ವಾದ.

ಸ್ಥಳಿಯವಾಗಿ ಆಹಾರ ಪೂರೈಕೆ ಮಾಡುವ ಪದ್ದತಿಯನ್ನು ಅನೇಕ ಹೋಟೆಲ್‌ ಗಳು ಇಂದಿಗೂ ಉಳಿಸಿಕೊಂಡಿವೆ. ಅಗ್ರಿಗೇಟರ್‌ ಆ್ಯಪ್‌ಗಳು ಬರುವುದಕ್ಕೂ ಮುನ್ನ ಒಂದು ದೂರವಾಣಿ ಕರೆ ಮಾಡಿದರೆ ಪಿಜ್ಜಾ ಹೋಟೆಲ್‌ ಗಳು ಡೆಲಿವರಿ ಕೊಡುತ್ತಿದ್ದವು. ಇಂದಿಗೂ ಕೆಲವು ಕಿಮೀ ವ್ಯಾಪ್ತಿಗೆ ಈ ಸಂಪ್ರದಾಯವನ್ನು ಉಳಿಸಿಕೊಂಡಿದ್ದು ಆಹಾರ ಪೂರೈಕೆ ಮಾಡುತ್ತಿವೆ. ಇದರಿಂದ ನಿಷ್ಟಾವಂತ ಗ್ರಾಹಕರ ಪಡೆಯೇ ನಿರ್ಮಾಣವಾಗುತ್ತಿದೆ ಎನ್ನುತ್ತಾರೆ ಹಳೆಯ ಹೋಟೆಲ್‌ ಮಾಲೀಕರು.

ರೆಸ್ಟೋರೆಂಟ್‌ ಗಳಿಗೆ ಓಪನ್‌ ನೆಟ್‌ ವರ್ಕ್‌ ಫಾರ್‌ ಡಿಜಿಟಲ್‌ ಕಾಮರ್ಸ್‌ (ONDC) ನೆರವಿಗೆ ಬರುತ್ತದೆಯಾದರೂ ತುಂಬಾ ದೂರಕ್ಕೆ ಡೆಲಿವರಿ ಮಾಡುವ ವ್ಯವಸ್ಥೆ ಇಲ್ಲ ಎನ್ನಲಾಗುತ್ತಿದೆ. ಕೆಲವು ರೆಸ್ಟೋರೆಂಟ್‌ ಗಳು ಓಎನ್‌ ಡಿಸಿ ಜತೆ ಕೆಲಸ ಮಾಡುತ್ತಿದ್ದು, ಹೋಟೆಲ್‌ ಅಥವಾ ಗ್ರಾಹಕರಿಗೆ ತೊಂದರೆಯಾಗದ ಹಾಗೆ ಪರಾಮರ್ಶೆ ನಡೆಸುತ್ತಿವೆ. ಕೇಂದ್ರ ಸರ್ಕಾರವೇ ಜಾರಿಗೊಳಿಸಿರುವ ONDC ಅಡಿಯಲ್ಲಿ ಕಾರ್ಯನಿರ್ವಹಿಸಿದರೆ ತೊಂದರೆಯಾಗುವುದಿಲ್ಲ. ವಹಿವಾಟಿಗೆ ಧಕ್ಕೆ ಆಗದ ರೀತಿ ಹಾಗೂ ಹೆಚ್ಚು ಹೊರೆಯಾಗದ ಮಾರ್ಗವನ್ನು ಬಳಸಿಕೊಳ್ಳಲು ಹಲವರು ಮುಂದಾಗಿದ್ದಾರೆ. ತಂತ್ರಜ್ಞಾನ ಆಧರಿತ ಕಾಲದಲ್ಲಿ ಒಂದಷ್ಟು ಹೊಸತನ್ನು ಕಲಿತು ಅದನ್ನೇ ಉದ್ಯಮಕ್ಕೂ ಬಳಸಿಕೊಳ್ಳುವ ಇರಾದೆ ಹಲವರದ್ದಾಗಿದೆ.

ವರದಿ:ಎಚ್.‌ ಮಾರುತಿ, ಬೆಂಗಳೂರು

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.