ಕನ್ನಡ ಸುದ್ದಿ  /  Karnataka  /  Karnataka Assembly Election 2023: Karnataka Pradesh Congress Committee Collects Rupees 25 Crore From 1200 Ticket Aspirants

Karnataka assembly election 2023: ಟಿಕೆಟ್‌ ಆಕಾಂಕ್ಷಿಗಳಿಂದ 25 ಕೋಟಿ ರೂ. ಕಾಂಗ್ರೆಸ್‌ ಖಾತೆಗೆ; ಇಷ್ಟು ಹಣ ಹೇಗೆ ಸಂಗ್ರಹ ಆಯಿತು?

Karnataka assembly election 2023: ವಿಧಾನಸಭಾ ಚುನಾವಣೆಯ ಟಿಕೆಟ್‌ ಕೋರಿ ಅರ್ಜಿ ಸಲ್ಲಿಸಿದ ಆಕಾಂಕ್ಷಿಗಳಿಂದ ಪಕ್ಷ ಸೋಮವಾರ ಸಂಜೆ ತನಕ 25 ಕೋಟಿ ರೂಪಾಯಿ ಸಂಗ್ರಹಿಸಿದೆ. ಇನ್ನುಳಿದ ವಿವರ ಈ ವರದಿಯಲ್ಲಿದೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ)
ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ)

ಬೆಂಗಳೂರು: ರಾಜ್ಯ ಮತ್ತೊಂದು ವಿಧಾನಸಭಾ ಚುನಾವಣೆಗೆ ಸಜ್ಜಾಗತೊಡಗಿದೆ. ಆಕಾಂಕ್ಷಿಗಳು ಟಿಕೆಟ್‌ಗಾಗಿ ಪಕ್ಷದಲ್ಲಿ ಲಾಬಿ ಶುರುಮಾಡಿದ್ದಾರೆ. ಕಾಂಗ್ರೆಸ್‌ ಪಕ್ಷ ಈ ಸಲದ ಚುನಾವಣೆಗೂ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿತ್ತು. 1250 ಆಕಾಂಕ್ಷಿಗಳು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಕಮಿಟಿಯ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದರು. ಇವರಿಂದ ಕಾಂಗ್ರೆಸ್‌ ಖಾತೆಗೆ ಸೋಮವಾರ ಸಂಜೆ ವೇಳೆಗೆ ಬರೋಬ್ಬರಿ 25 ಕೋಟಿ ರೂಪಾಯಿ ಜಮೆ ಆಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಮುಂದಿನ ವಿಧಾನಸಭಾ ಚುನಾವಣೆ 2023ರಲ್ಲಿ ನಡೆಯಲಿದೆ. ಈ ಹಿಂದೆ 2018ರಲ್ಲಿ ಚುನಾವಣೆ ನಡೆದಾಗಲೂ, ಕಾಂಗ್ರೆಸ್‌ ಪಕ್ಷದಲ್ಲಿ 1250 ಅರ್ಜಿಗಳು ಟಿಕೆಟ್‌ ಆಕಾಂಕ್ಷಿಗಳಿಂದ ಪಕ್ಷಕ್ಕೆ ಸಲ್ಲಿಕೆಯಾಗಿತ್ತು. ಆದರೆ ಈ ಸಲ ಶುಲ್ಕ ಸಂಗ್ರಹ ಮತ್ತು ಪಾರ್ಟಿ ಫಂಡ್‌ ಕಲೆಕ್ಷನ್‌ ಅನ್ನು ಕೂಡ ಆಕಾಂಕ್ಷಿಗಳಿಂದ ಮಾಡಲಾಗಿತ್ತು.

ಶುಲ್ಕ ಮತ್ತು ಕಾಂಗ್ರೆಸ್‌ ಪಾರ್ಟಿ ಫಂಡ್‌ಗೆ ಏನು ಲೆಕ್ಕಾಚಾರ?

ಕೆಪಿಸಿಸಿಗೆ ವಿಧಾನಸಭಾ ಚುನಾವಣೆಯ ಟಿಕೆಟ್‌ ಕೋರಿ ಅರ್ಜಿ ಸಲ್ಲಿಸುವ ಆಕಾಂಕ್ಷಿಗಳು ಜನರಲ್‌ ಕೆಟಗರಿಯವರಾದರೆ 2 ಲಕ್ಷ ರೂಪಾಯಿ, ಎಸ್‌ಸಿ/ಎಸ್‌ಟಿ ಆದರೆ 1 ಲಕ್ಷ ರೂಪಾಯಿ ಪಾರ್ಟಿ ಫಂಡ್‌ ಪಾವತಿಸಬೇಕು. ಇದು ಹಿಂತಿರುಗಿ ಸಿಗದ ಪಾವತಿ. ಇದಲ್ಲದೆ, ಅರ್ಜಿ ಶುಲ್ಕ ಎಂದು 5,000 ರೂಪಾಯಿ ಪಾವತಿಸಬೇಕು ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿದ್ದಾಗಿ ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ. ಸೋಮವಾರದ ತಾತ್ಕಾಲಿಕ ವರದಿ ಪ್ರಕಾರ, ಒಂದೇ ದಿನ ಸಿದ್ದರಾಮಯ್ಯ ಸೇರಿ 85 ಸದಸ್ಯರು ಅರ್ಜಿ ಸಲ್ಲಿಸಿದ್ದಾರೆ. ಈ ಸಂಖ್ಯೆ 105ರ ತನಕ ಏರುವ ಸಾಧ್ಯತೆ ಇದೆ.

ಸಿದ್ದರಾಮಯ್ಯ ಎಲ್ಲಿಂದ ಸ್ಪರ್ಧಿಸುತ್ತಾರೆ?

ಮಾಜಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್‌ ಟಿಕೆಟ್‌ಗಾಗಿ ಸೋಮವಾರ ಅರ್ಜಿ ಸಲ್ಲಿಸಿದ್ದಾರೆ. ಆದರೆ ಅರ್ಜಿಯಲ್ಲಿ ವಿಧಾನಸಭಾ ಕ್ಷೇತ್ರದ ಹೆಸರು ನಮೂದಿಸಿಲ್ಲ. ಈ ರೀತಿ ಅರ್ಜಿಯಲ್ಲಿ ಕ್ಷೇತ್ರ ನಮೂದಿಸದ ಏಕೈಕ ಆಕಾಂಕ್ಷಿ ಸಿದ್ದರಾಮಯ್ಯ ಒಬ್ಬರೇ. ಹೀಗಾಗಿ, ಅವರು ಎಲ್ಲಿಂದ ಸ್ಪರ್ಧಿಸುತ್ತಾರೆ ಎಂಬ ಕುತೂಹಲ ಹಾಗೆಯೇ ಉಳಿದುಕೊಂಡಿದೆ. ಈ ವಿಚಾರ ಕೇಳಿದಾಗ ಸಿದ್ದರಾಮಯ್ಯ ಅವರ ಉತ್ತರ ಹೀಗಿತ್ತು - “ಎಲ್ಲವನ್ನೂ ಹೈಕಮಾಂಡ್‌ ತೀರ್ಮಾನಿಸಲಿದೆ” ಎಂದು ಮೂಲಗಳು ತಿಳಿಸಿವೆ. ಸದ್ಯ ಬಾದಾಮಿ, ಕೋಲಾರ ಮತ್ತು ವರುಣಾ ಕ್ಷೇತ್ರಗಳ ಹೆಸರು ಸಿದ್ದರಾಮಯ್ಯ ಅವರು ಸ್ಪರ್ಧಿಸಬಹುದಾದ ಕ್ಷೇತ್ರಗಳು ಎಂಬ ಸುದ್ದಿ ಹರಿದಾಡುತ್ತಿದೆ.

ಎರಡು ಕ್ಷೇತ್ರಗಳಲ್ಲಿ 15ಕ್ಕೂ ಹೆಚ್ಚು ಆಕಾಂಕ್ಷಿಗಳು!

ಅರ್ಜಿ ಸಲ್ಲಿಸಿರುವ 1,250 ರಷ್ಟು ಆಕಾಂಕ್ಷಿಗಳ ಹೆಸರು ಗಮನಿಸಿದರೆ, ಅದರಲ್ಲಿ ಅನೇಕ ಶಾಸಕರ ಪುತ್ರರು, ಪುತ್ರಿಯರು ಮತ್ತು ಸಂಬಂಧಿಕರ ಸಂಖ್ಯೆ ಹೆಚ್ಚಿದೆ. ಬಸವನಬಾಗೇವಾಡಿಯ ಶಿವಾನಂದ ಪಾಟೀಲರ ಪುತ್ರಿ ಸಂಯುಕ್ತ ಪಾಟೀಲ್‌, ನಂಜನಗೂಡು ಮತ್ತು ಟಿ.ನರಸೀಪುರ ಕ್ಷೇತ್ರಕ್ಕೆ ಎಚ್.ಮಹದೇವಪ್ಪ ಮತ್ತು ಅವರ ಪುತ್ರ ಸುನಿಲ್‌ ಬೋಸ್‌, ಬಳ್ಳಾರಿಗೆ ಅಲ್ಲಂ ವೀರಭದ್ರಪ್ಪ, ದಿವಾಕರ ಬಾಬು, ಹನುಮ ಕಿಶೋರ್‌ ಅರ್ಜಿ ಸಲ್ಲಿಸಿದ್ದಾರೆ. ಎರಡು ಕ್ಷೇತ್ರಗಳಲ್ಲಿ 15ಕ್ಕೂ ಹೆಚ್ಚು ಆಕಾಂಕ್ಷಿಗಳಿರುವುದು ಕೂಡ ಕಂಡುಬಂದಿದೆ ಎಂದು ಮೂಲಗಳು ತಿಳಿಸಿರುವುದಾಗಿ ವರದಿ ಹೇಳಿದೆ.

IPL_Entry_Point