ಹೆಬ್ಬಾಳ: ಕೆಐಎಡಿಬಿ 55 ಎಕರೆ ಭೂಮಿ ಮೇಲೆ ಯಾರೆಲ್ಲರ ಕಣ್ಣು ಬಿದ್ದಿದೆ; ಮೆಟ್ರೋಗೆ ಬಳಕೆಯಾಗುವುದೇ ಅಥವಾ ರಿಯಲ್ ಎಸ್ಟೇಟ್ ಪಾಲಾಗಲಿದೆಯೇ?
ಹೆಬ್ಬಾಳದಲ್ಲಿ ಕೆಐಎಡಿಬಿ ವಶದಲ್ಲಿರುವ 55 ಎಕರೆ ಭೂಮಿ ಮೇಲೆ ಬಹಳಷ್ಟು ಮಂದಿ ಕಣ್ಣು ಹಾಕಿದ್ದಾರೆ. ಆದರೆ ಈ ಜಾಗ ಮೆಟ್ರೋಗೆ ಬಳಕೆಯಾಗುವುದೇ ಅಥವಾ ರಿಯಲ್ ಎಸ್ಟೇಟ್ ಪಾಲಾಗಲಿದೆಯೇ?ಈ ಮಧ್ಯೆ ಟನಲ್ ರಸ್ತೆಗೆ ಭೂಮಿ ಮೇಲೆ ಡಿಸಿಎಂ ಪಟ್ಟು ಹಿಡಿದಿರುವುದಾರೂ ಏಕೆ ಎಂಬ ಪ್ರಶ್ನೆ ಉದ್ಭವವಾಗಿದೆ. ವರದಿ: ಎಚ್.ಮಾರುತಿ

ಬೆಂಗಳೂರು: ಕೆಐಎಡಿಬಿ ವಶದಲ್ಲಿರುವ ಹೆಬ್ಬಾಳದ 55 ಎಕರೆ ಜಮೀನು ಇದೀಗ ಕೇಂದ್ರ ಬಿಂದುವಾಗಿದ್ದು ಸರ್ಕಾರವೇ ಉಳಿಸಿಕೊಳ್ಳುವುದೇ ಅಥವಾ ರಿಯಲ್ ಎಸ್ಟೇಟ್ ಉದ್ಯಮಿಗಳ ಪಾಲಾಗುವುದೇ ಎಂಬ ಆತಂಕ ಉಂಟಾಗಿದೆ. ಹೆಬ್ಬಾಳದಲ್ಲಿ ಬಹು ಮಾದರಿ ಸಾರಿಗೆ ಹಬ್ ನಿರ್ಮಿಸಲು 45 ಎಕರೆ 5.5 ಗುಂಟೆ ಜಮೀನು ಅಗತ್ಯವಿದೆ ಎಂದು ಬಿಎಂಆರ್ಸಿಎಲ್ ಪ್ರತಿಪಾದಿಸುತ್ತಿದೆ. ಮೂರು ಮೆಟ್ರೊ ಮಾರ್ಗಗಳು ಒಂದೆ ಕಡೆ ಸಂಧಿಸುವ ನಗರದ ಏಕೈಕ ಪ್ರದೇಶ ಇದಾಗಿದೆ. ಈ ಮೆಟ್ರೋ ನಿಲ್ದಾಣ ಬೆಂಗಳೂರಿನ ಸಾರಿಗೆ ನೆಟ್ ವರ್ಕ್ ಗೆ ಬಹುಮುಖ್ಯ ಕೊಂಡಿಯಾಗಲಿದೆ.
ಸೆಂಟ್ರಲ್ ಸಿಲ್ಕ್ ಬೋರ್ಡ್– ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ನಮ್ಮ ಮೆಟ್ರೊ ನೀಲಿ ಮಾರ್ಗವು ಹೆಬ್ಬಾಳ ಮೂಲಕ ಹಾದುಹೋಗಲಿದೆ. ಜೆ.ಪಿ. ನಗರದಿಂದ ಕೆಂಪಾಪುರದವರೆಗಿನ ಮೆಟ್ರೊ ಮಾರ್ಗ (ಕಿತ್ತಳೆ ಮಾರ್ಗ), ಹೆಬ್ಬಾಳ–ಸರ್ಜಾಪುರ ಮಧ್ಯದ ಮೆಟ್ರೊ (ಕೆಂಪು) ಮಾರ್ಗವೂ ನಿರ್ಮಾಣಗೊಳ್ಳಲಿದೆ. ಬೆಂಗಳೂರು ಉಪನಗರ ರೈಲು ಯೋಜನೆಯ ಎರಡನೇ ಕಾರಿಡಾರ್ ಚಿಕ್ಕಬಾಣಾವರ–ಬೆನ್ನಿಗಾನಹಳ್ಳಿ ಮಾರ್ಗ (ಮಲ್ಲಿಗೆ ಮಾರ್ಗ) ಕೂಡ ಇಲ್ಲಿಂದಲೇ ಹಾದು ಹೋಗುತ್ತಿದೆ. ಜತೆಗೆ ರೈಲು, ಉಪನಗರ ರೈಲು, ಬಿಎಂಟಿಸಿ ಬಸ್ಗಳು ಹಾದು ಹೋಗಲಿವೆ.
ಇಲ್ಲಿನ 55 ಎಕರೆ ಜಮೀನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ವಶದಲ್ಲಿದೆ. ಇಲ್ಲಿ ಹಿಂದೆ ಬೇರೆ ಯೋಜನೆ ರೂಪಿಸಿದ್ದರೂ ಕಾರ್ಯಗತಗೊಂಡಿಲ್ಲ. ಹಾಗಾಗಿ ಬಹು ಮಾದರಿ ಸಾರಿಗೆ ಹಬ್ ನಿರ್ಮಾಣಕ್ಕೆ ಈ ಜಮೀನನ್ನು ಒದಗಿಸಬೇಕು ಎಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಗೆ ಬೆಂಗಳೂರು ಮೆಟ್ರೊ ರೈಲ್ ಕಾರ್ಪೊರೇಶನ್ ಲಿಮಿಟೆಡ್ (ಬಿಎಂಆರ್ಸಿಎಲ್) ಪ್ರಸ್ತಾವ ಸಲ್ಲಿಸಿತ್ತು.
ಮಿನಿ ಟೌನ್ ಶಿಪ್ ನಿರ್ಮಿಸಲು 2000 ಇಸವಿಯಲ್ಲಿ ಲೇಕ್ ಸೈಡ್ ಟೂರಿಸಂ ಕಾರ್ಪೋರೇಷನ್ ಗೆ ಹಂಚಿಕೆ ಮಾಡಿತ್ತು. ಆದರೆ ಈ ಯೋಜನೆ ಕಾರ್ಯಗತವಾಗಲೇ ಇಲ್ಲ. ಈಗ ಆ ಯೋಜನೆಯೂ ಅಪ್ರಸ್ತುತವಾಗಿದೆ. ಆದರೂ ಕೆಲವು ರಿಯಲ್ ಎಸ್ಟೇಟ್ ಹಿತಾಸಕ್ತಿಗಳು ಹೋಟೆಲ್, ಮಾಲ್, ಅಪಾರ್ಟ್ ಮೆಂಟ್ ನಿರ್ಮಿಸಲು ಪ್ರಯತ್ನಗಳನ್ನು ನಡೆಸಿವೆ ಎಂದು ತಿಳಿದು ಬಂದಿದೆ. ಭೂ ಮಾಲೀಕರಿಗೂ ಇದುವರೆಗೂ ಪರಿಹಾರ ನೀಡಿಲ್ಲ. ಆದರೂ ಕಾಣದ ಕೈಗಳು ಪ್ರಯತ್ನವನ್ನು ಮುಂದುವರೆಸಿವೆ.
ಬೆಂಗಳೂರು ಉಸ್ತುವಾರಿ ವಹಿಸಿಕೊಂಡಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅಧಿಕಾರಿಗಳೊಂದಿಗೆ ಹಲವು ಬಾರಿ ಸಭೆ ನಡೆಸಿದ್ದರು. ಕಳೆದ ವಾರ ಮತ್ತೆ ಆಂತರಿಕ ಸಭೆ ನಡೆದಿದ್ದರೂ ಯಾವುದೇ ತೀರ್ಮಾನವಾಗಿಲ್ಲ ಎಂದು ತಿಳಿದು ಬಂದಿದೆ. ಆದರೂ ಸರ್ಕಾರದ ಆದ್ಯತಗಳೇನು ಎನ್ನುವುದು ಸಂಶಯಾಸ್ಪದವಾಗಿದೆ. ಸಾರ್ವಜನಿಕರ ಅಗತ್ಯಗಳನ್ನು ಪೂರೈಸುವುದೇ ಅಥವಾ ಖಾಸಗಿ ಹಿತಾಸಕ್ತಿಗಳನ್ನು ಪೂರೈಸುವುದೇ ಎಂಬ ಗೊಂದಲದಲ್ಲಿ ಸರ್ಕಾರ ಮುಳುಗಿದೆ ಎಂಬ ಆರೋಪ ಕೇಳಿಬರುತ್ತಿದೆ.
ಈ ಹಿಂದೆ ಕೆಐಎಡಿಬಿ ಈ ಭೂಮಿಯನ್ನು ಬಿಎಂಆರ್ಸಿಎಲ್ಗೆ ಹಸ್ತಾಂತರಿಸಲು ನಿರ್ಧರಿಸಿತ್ತು. ಪರಿಹಾರವಾಗಿ 551.18 ಕೋಟಿ ರೂ. ನೀಡಲು ಬಿಎಂಆರ್ಸಿಎಲ್ ಒಪ್ಪಿಕೊಂಡಿತ್ತು.
ಈಗಾಗಲೇ ಮೆಟ್ರೋ ಕಾಮಗಾರಿ ಜಾರಿಯಲ್ಲಿದ್ದು, ಈ ಹಂತದಲ್ಲಿ ಭೂಮಿ ಹಸ್ತಾಂತರವನ್ನು ರದ್ದುಗೊಳಿಸಿದರೆ ಯೋಜನೆಗೆ ಅಡ್ಡಿಯಾಗುವುದಲ್ಲದೆ ಆರ್ಥಿಕವಾಗಿಯೂ ನಷ್ಟ ಉಂಟಾಗುತ್ತದೆ. ಈ ಯೋಜನೆ ಜಾರಿಯಾದರೆ ಸಾರ್ವಜನಿಕರಿಗೆ ಪ್ರಯೋಜನವಾಗಲಿದೆ, ಸಂಚಾರ ದಟ್ಟಣೆ ಕಡಿಮೆಯಾಗುತ್ತದೆ ಮತ್ತು ಖಾಸಗಿ ವಾಹನಗಳಿಗೆ ಕಡಿವಾಣ ಬೀಳಲಿದೆ.
ಬೆಂಗಳೂರಿಗೆ ಮತ್ತೊಂದು ಟೌನ್ ಶಿಪ್ ಅಗತ್ಯವಿಲ್ಲ. ಬದಲಾಗಿ ಸಮರ್ಥ ಮತ್ತು ಪರಿಣಾಮಕಾರಿ ಸಾರಿಗೆ ಸೌಕರ್ಯದ ಅಗತ್ಯವಿದೆ. ಮೆಟ್ರೋ ಯೋಜನೆ ಒಂದೊಂದು ದಿನ ವಿಳಂಬವಾದಷ್ಟೂ ನಷ್ಟ ಹಚ್ಚುತ್ತಾ ಹೋಗುತ್ತದೆ. ಈ ಹಂತದಲ್ಲಿ ಸರ್ಕಾರ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ. ಟೌನ್ ಶಿಪ್ ಯೋಜನೆಯನ್ನು ರದ್ದುಗೊಳಿಸಿ ಕೂಡಲೇ ಭೂಮಿಯನ್ನು ಬಿಎಂಆರ್ಸಿಎಲ್ ಗೆ ಹಸ್ತಾಂತರಿಸಬೇಕು. ಸರ್ಕಾರಕ್ಕೆ ರಿಯಲ್ ಎಸ್ಟೇಟ್ ಉದ್ಯಮಿಗಳ ಹಿತಕ್ಕಿಂತ ಲಕ್ಷಾಂತರ ಸಾರ್ವಜನಿಕರ ಹಿತರಕ್ಷಣೆ ಮುಖ್ಯವಾಗಬೇಕು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ಮಧ್ಯ ಪ್ರವೇಶಿಸಿ ಬಿಎಂಆರ್ಸಿಎಲ್ ಪರವಾಗಿ ನಿರ್ಧಾರ ಕೈಗೊಳ್ಳಬೇಕು ಎಂದು ಪ್ರಜ್ಞಾವಂತ ನಾಗರಿಕರು ಆಗ್ರಹಪಡಿಸುತ್ತಿದ್ದಾರೆ.