ಕಾಂಗ್ರೆಸ್‌ ಗೆ ಬಿಸಿ ತುಪ್ಪವಾದ ಜಾತಿಗಣತಿ ವರದಿ; ರಾಹುಲ್‌ ಗಾಂಧಿಗೆ ಪತ್ರ ಚಳವಳಿ ಆರಂಭಿಸಿದ ಅಹಿಂದ ವರ್ಗ
ಕನ್ನಡ ಸುದ್ದಿ  /  ಕರ್ನಾಟಕ  /  ಕಾಂಗ್ರೆಸ್‌ ಗೆ ಬಿಸಿ ತುಪ್ಪವಾದ ಜಾತಿಗಣತಿ ವರದಿ; ರಾಹುಲ್‌ ಗಾಂಧಿಗೆ ಪತ್ರ ಚಳವಳಿ ಆರಂಭಿಸಿದ ಅಹಿಂದ ವರ್ಗ

ಕಾಂಗ್ರೆಸ್‌ ಗೆ ಬಿಸಿ ತುಪ್ಪವಾದ ಜಾತಿಗಣತಿ ವರದಿ; ರಾಹುಲ್‌ ಗಾಂಧಿಗೆ ಪತ್ರ ಚಳವಳಿ ಆರಂಭಿಸಿದ ಅಹಿಂದ ವರ್ಗ

ಜಾತಿಗಣತಿ ವರದಿ ಜಾರಿಗೆ ಅಹಿಂದ ವರ್ಗ ಒತ್ತಾಯಿಸುತ್ತಿದ್ದರೆ ವೀರಶೈವ ಲಿಂಗಾಯತ ಮತ್ತು ಒಕ್ಕಲಿಗರು ಪ್ರಬಲವಾಗಿ ವಿರೋಧಿಸುತ್ತಿದ್ದಾರೆ. ಇದು ಕರ್ನಾಟಕ ಕಾಂಗ್ರೆಸ್ ಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ವರದಿ ಜಾರಿಗಾಗಿ ಅಹಿಂದ ವರ್ಗ ಪತ್ರ ಚಳವಳಿ ಆರಂಭಿಸಿದೆ.

ಕರ್ನಾಟಕದಲ್ಲಿ ಜಾತಿ ಗಣತಿ ವರದಿ ಜಾರಿ ಮಾಡುವ ವಿಚಾರ ಕಾಂಗ್ರೆಸ್ ಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಅಹಿಂದ ವರ್ಗ ರಾಹುಲ್ ಗಾಂಧಿ ಅವರಿಗೆ ಪತ್ರ ಚಳವಳಿಯನ್ನು ಆರಂಭಿಸಿದೆ.
ಕರ್ನಾಟಕದಲ್ಲಿ ಜಾತಿ ಗಣತಿ ವರದಿ ಜಾರಿ ಮಾಡುವ ವಿಚಾರ ಕಾಂಗ್ರೆಸ್ ಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಅಹಿಂದ ವರ್ಗ ರಾಹುಲ್ ಗಾಂಧಿ ಅವರಿಗೆ ಪತ್ರ ಚಳವಳಿಯನ್ನು ಆರಂಭಿಸಿದೆ.

ಜಾತಿ ಗಣತಿ ವಿವಾದ ಕಾಂಗ್ರೆಸ್‌ ಪಕ್ಷವನ್ನು ಸುಲಭಕ್ಕೆ ಬಿಡುವಂತೆ ಕಾಣುತ್ತಿಲ್ಲ. ಒಂದು ಕಡೆ ದಲಿತ ವರ್ಗಗಳ ಸಚಿವರು ಮತ್ತು ಶಾಸಕರು ವರದಿಯನ್ನು ಜಾರಿಗೊಳಿಸುವಂತೆ ಒತ್ತಾಯಿಸುತ್ತಿದ್ದರೆ ಮತ್ತೊಂದು ಕಡೆ ಎರಡು ಪ್ರಬಲ ವರ್ಗಗಳಾದ ವೀರಶೈವ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳು ಸಚಿವರು ಮತ್ತು ಜನಪ್ರತಿನಿಧಿಗಳು ಜಾರಿಗೊಳಿಸಬಾರದು ಎಂದು ಅಡ್ಡಗಾಲು ಹಾಕುತ್ತಿದ್ದಾರೆ. ಸಾಮಾಜಿಕ ಆರ್ಥಿಕ ಶೈಕ್ಷಣಿಕ ಸಮೀಕ್ಷೆ ಅರ್ಥಾತ್‌ ಜಾತಿ ಸಮೀಕ್ಷೆ ನಡೆಸಲು ಆಯೋಗವನ್ನು ನೇಮಕ ಮಾಡಿದ್ದು ಮತ್ತು ವರದಿಯನ್ನುಸ್ವೀಕರಿಸಿದ್ದು ಎರಡೂ ಬಾರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಎನ್ನುವುದು ಗಮನಾರ್ಹ.

ಇದೀಗ ವರದಿಯನ್ನು ಜಾರಿಗೊಳಿಸಲೇಕು ಎಂದು ಅಹಿಂದ ಗುಂಪುಗಳು ಪಕ್ಷದ ವರಿಷ್ಠ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರಿಗೆ ಪತ್ರ ಚಳವಳಿ ಆರಂಭಿಸಿವೆ. ಇ ಮೇಲ್‌, ಪೋಸ್ಟ್‌ ಕಾರ್ಡ್‌ ಬರೆಯಲು ನಿರ್ಧರಿಸಿದ್ದಾರೆ. ಈ ಮೂಲಕ ಮಧ್ಯೆ ಪ್ರವೇಶಿಸಿ ವರದಿ ಜಾರಿ ಹಾದಿ ಸುಗಮಗೊಳಿಸುವಂತೆ ಮನವಿ ಮಾಡುತ್ತಿದ್ದಾರೆ. ವೇದಿಕೆಯ ಅಧ್ಯಕ್ಷ ಕೆ.ಎಸ್.ಶಿವರಾಂ ಅವರು ಪತ್ರ ಬರದಿರುವ ಪ್ರಮುಖರಲ್ಲಿ ಒಬ್ಬರಾಗಿದ್ದಾರೆ. ವರದಿ ಜಾರಿ ಮಾತ್ರವಲ್ಲದೆ ಸಮೀಕ್ಷೆಯ ಮುಖ್ಯ ಉದ್ದೇಶವೇ ಎಲ್ಲ ಸಮುದಾಯಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯನ್ನು ಅರ್ಥಮಾಡಿಕೊಳ್ಳುವುದೇ ಆಗಿದೆ.

ಸುಮಾರು 180 ಕೋಟಿ ರೂ ವೆಚ್ಚ ಮಾಡಿ ಹಿಂದುಳಿದ ವರ್ಗಗಳ ಆಯೋಗದ ಮೂಲಕ ವೈಜ್ಞಾನಿಕವಾಗಿಯೇ ಸಮೀಕ್ಷೆ ನಡೆಸಲಾಗಿದೆ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಾಮಾಜಿಕ ಬದ್ಧತೆಯನ್ನೂ ತೋರಿಸುತ್ತದೆ. ಈಗಾಗಲೇ ಸಚಿವ ಸಂಪುಟ ಸಭೆಯಲ್ಲೂ ಚರ್ಚೆ ಆಗಿದೆ ಎಂದು ಪತ್ರದಲ್ಲಿ ಮನವರಿಕೆ ಮಾಡಿಕೊಟ್ಟಿದ್ದಾರೆ. ಪಕ್ಷದ ಶಾಸಕರು ಮತ್ತು ಹಿರಿಯ ವೀರಶೈವ ಮುಖಂಡರೂ ಆದ ಶಾಮನೂರು ಶಿವಶಂಕರಪ್ಪ ಅವರಂತಹವರು ವರದಿಯನ್ನು ವಿರೋಧಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಅನೇಕ ಶಾಸಕರು ಮತ್ತು ಮುಖಂಡರು ಅಹಿಂದ ವರ್ಗ ಕುರಿತೂ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇಡೀ ವರದಿಯನ್ನು ಸಾರಾಸಗಟಾಗಿ ತಿರಸ್ಕರಿಸಬೇಕು ಎಂದು ಆಗ್ರಹಪಡಿಸುತ್ತಿರುವುದು ಅಹಿಂದ ವರ್ಗಕ್ಕೆ ನೋವನ್ನುಂಟು ಮಾಡಿದೆ ಎಂದು ತಿಳಿಸಿಕೊಟ್ಟಿದ್ದಾರೆ.

ಜಾತಿಗಣತಿ ವರದಿ ಕೇವಲ ಜನಸಂಖ್ಯೆಯನ್ನು ಮಾತ್ರ ಆಧರಿಸಿಲ್ಲ. ಅಹಿಂದ ವರ್ಗ (ಅಲ್ಪಸಂಖ್ಯಾತ, ದಲಿತ ಮತ್ತು ಹಿಂದುಳಿದ ವರ್ಗಗಳ ಒಕ್ಕೂಟ)ದ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಕುರಿತೂ ಅಧ್ಯಯನ ನಡೆಸಿದೆ. ಮೀಸಲಾತಿ ವರ್ಗೀಕರಣ ಮತ್ತು ಅನೇಕ ವರ್ಗಗಳ ಮೀಸಲಾತಿ ಹೆಚ್ಚಳಕ್ಕೂ ಶಿಫಾರಸ್ಸು ಮಾಡಿದೆ. ಇದರಿಂದ ಅಹಿಂದ ವರ್ಗಗಳ ಸರ್ವತೋಮುಖ ಅಭಿವೃದ್ಧಿಗೆ ನಾಂದಿ ಹಾಡಲಿದೆ. ಆದರೆ ಕಾಂಗ್ರೆಸ್‌ ಶಾಸಕರೇ ವಿರೋಧಿಸುತ್ತಿರುವುದು ವಿಷಾದನೀಯ ಎಂದು ಪತ್ರದಲ್ಲಿ ವಿವರಣೆ ನೀಡಿದ್ದಾರೆ.

ಕಾಂಗ್ರೆಸ್ ಗೆ ಜಾತಿ ಗಣತಿ ವರದಿ ಜಾರಿ ಮಾಡಿದರೂ ಕಷ್ಟ ಮಾಡದಿದ್ದರೂ ಕಷ್ಟ

ಅಹಿಂದ ವರ್ಗಗಳು ಕಾಂಗ್ರೆಸ್‌ ಪಕ್ಷದ ಬೆನ್ನುಮೂಳೆ ಇದ್ದ ಹಾಗೆ. ಜಾತಿಗಣತಿ ವರದಿಯನ್ನು ಜಾರಿಗೊಳಿಸುವುದಾಗಿ ಪಕ್ಷದ ಪ್ರಣಾಳಿಕೆಯಲ್ಲೂ ಭರವಸೆ ನೀಡಲಾಗಿತ್ತು. ಅಷ್ಟೇ ಅಲ್ಲದೆ ಇಡೀ ದೇಶಾದ್ಯಂತ ಜಾತಿಗಣತಿ ನಡೆಸುವುದಾಗಿಯೂ ಭರವಸೆ ನೀಡಿತ್ತು. ಅದರಂತೆ ಕಾಂಗ್ರೆಸ್‌ ಸರ್ಕಾರ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯಲಿದೆ ಎಂದು ಅಹಿಂದ ವರ್ಗ ನಿರೀಕ್ಷಿಸುತ್ತದೆ ಎಂದೂ ಅಹಿಂದ ನಾಯಕರು ತಿಳಿಸಿದ್ದಾರೆ. ಇಂತಹ ಕಾಂಗ್ರೆಸ್‌ ಮುಖಂಡರಿಂದ ಅಹಿಂದ ವರ್ಗಕ್ಕೆ ಅನ್ಯಾಯವಾಗುತ್ತಿದೆ. ಒಂದು ವೇಳೆ ವರದಿಯನ್ನು ಜಾರಿಗೊಳಿಸುವುದು ವಿಳಂಬವಾದರೆ ಅಹಿಂದ ವರ್ಗಗಳ ಪ್ರತಿರೋಧವನ್ನು ಎದುರಿಸಬೇಕಾಗುತ್ತದೆ ಎಂದೂ ಎಚ್ಚರಿಕೆ ನೀಡಿದ್ದಾರೆ. ಆದ್ದರಿಂದ ಜಾತಿಗಣತಿ ವರದಿಯನ್ನು ವಿರೋಧಿಸದಂತೆ ಪಕ್ಷ ದ ಮುಖಂಡರಿಗೆ ಎಚ್ಚರಿಕೆ ನೀಡಬೇಕು. ಸುಗಮವಾಗಿ ಜಾರಿಗಳೊಳಿಸಲು ಅನುವು ಮಾಡಿಕೊಡಬೇಕು ಎಂದೂ ಆಗ್ರಹಪಡಿಸಿದ್ದಾರೆ.

Raghavendra M Y

TwittereMail
ರಾಘವೇಂದ್ರ ಎಂ.ವೈ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್ ಪ್ರೊಡ್ಯೂಸರ್. ರಾಶಿ ಭವಿಷ್ಯ (ಧರ್ಮ) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ, ಉದಯ ನ್ಯೂಸ್, ದಿಗ್ವಿಜಯ ನ್ಯೂಸ್, ಫಸ್ಟ್ ನ್ಯೂಸ್, ಡಿಡಿ ಚಂದನ ನ್ಯೂಸ್, ಈ-ಟಿವಿ ಭಾರತದಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಸೇರಿ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಅನುಭವ. ಪುಸ್ತಕ, ಪತ್ರಿಕೆ ಓದುವುದು ಇಷ್ಟ. ವಾಣಿಜ್ಯ, ಕ್ರಿಕೆಟ್, ಗ್ರಾಮೀಣ ವಿದ್ಯಮಾನಗಳ ಬಗ್ಗೆ ಇಷ್ಟಪಟ್ಟು ಬರೆಯುತ್ತಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿರುಪನಹಳ್ಳಿ ಇವರ ಸ್ವಂತ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.