ಜಾತಿಗಣತಿ ವರದಿ ಹುಟ್ಟು ಹಾಕಿರುವ ಗೊಂದಲ ಹೇಗಿವೆ, ಹೆಗ್ಡೆ ಸಮಿತಿ ಸಲಹೆಗಳಿಗೆ ಪ್ರಬಲಜಾತಿಗಳ ವಾದ ಏನು; ಸರ್ಕಾರದ ಮುಂದಿರುವ ಆಯ್ಕೆಗಳು ಏನೇನಿವೆ
ಕನ್ನಡ ಸುದ್ದಿ  /  ಕರ್ನಾಟಕ  /  ಜಾತಿಗಣತಿ ವರದಿ ಹುಟ್ಟು ಹಾಕಿರುವ ಗೊಂದಲ ಹೇಗಿವೆ, ಹೆಗ್ಡೆ ಸಮಿತಿ ಸಲಹೆಗಳಿಗೆ ಪ್ರಬಲಜಾತಿಗಳ ವಾದ ಏನು; ಸರ್ಕಾರದ ಮುಂದಿರುವ ಆಯ್ಕೆಗಳು ಏನೇನಿವೆ

ಜಾತಿಗಣತಿ ವರದಿ ಹುಟ್ಟು ಹಾಕಿರುವ ಗೊಂದಲ ಹೇಗಿವೆ, ಹೆಗ್ಡೆ ಸಮಿತಿ ಸಲಹೆಗಳಿಗೆ ಪ್ರಬಲಜಾತಿಗಳ ವಾದ ಏನು; ಸರ್ಕಾರದ ಮುಂದಿರುವ ಆಯ್ಕೆಗಳು ಏನೇನಿವೆ

ಕರ್ನಾಟಕದಲ್ಲಿ ಹತ್ತು ವರ್ಷದಿಂದಲೂ ನಡೆದೇ ಇರುವ ಜಾತಿಗಣತಿ ವರದಿ ಜಾರಿಗೆ ಇನ್ನೂ ಸಮಯ ಕೂಡಿ ಬಂದಿಲ್ಲ.ಮೀಸಲಾತಿ ಹಂಚಿಕೆ ಒಂದು ರೀತಿ ಜೇನುಗೂಡಿಗೆ ಕೈ ಹಾಕಿದ ಹಾಗೆಯೇ. ಈಗಿನ ಸರ್ಕಾರದ ಮುಂದೆ ಇರುವ ಆಯ್ಕೆಗಳ ವಿಶ್ಲೇಷಣೆ ಇಲ್ಲಿದೆ.ವರದಿ: ಎಚ್.‌ ಮಾರುತಿ, ಬೆಂಗಳೂರು

ಕರ್ನಾಟಕದಲ್ಲಿ ಜಾತಿ ಗಣತಿ ವರದಿ ಸ್ಥಿತಿ ಏನಾಗಬಹುದು,
ಕರ್ನಾಟಕದಲ್ಲಿ ಜಾತಿ ಗಣತಿ ವರದಿ ಸ್ಥಿತಿ ಏನಾಗಬಹುದು,

ಬೆಂಗಳೂರು: 10 ವರ್ಷಗಳ ಹಿಂದಿನ ಜಾತಿಗಣತಿ ವರದಿ ಬಹಿರಂಗಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಒಪ್ಪಿಕೊಂಡಿಯೂ ಆಗಿದೆ. ಆದರೆ ಈ ವರದಿಯನ್ನು ಒಪ್ಪಿಕೊಂಡರೆ ಉಂಟಾಗುವ ರಾಜಕೀಯ ಕ್ಷೋಭೆಗಳ ಕಾರಣಕ್ಕೆ ಜಾರಿ ತಡವಾಗುತ್ತಿದೆ. 2015ರ ಏಪ್ರಿಲ್‌- ಮೇ ತಿಂಗಳಲ್ಲಿ 1.35 ಕೋಟಿ ಮನೆಗಳಿಗೆ ಭೇಟಿ ನೀಡಲಾಗಿದೆ. ಜಾತಿಗಣತಿ ನಡೆದಾಗ 6.35 ಕೋಟಿ ಜನಸಂಖ್ಯೆಯಿದ್ದು ಸುಮಾರು 5.98 ಜನರ ಮಾಹಿತಿ ಸಂಗ್ರಹಿಸಲಾಗಿದೆ (ಶೇ. 95 ರಷ್ಟು). 2011 ರ ಜನಗಣತಿ ಪ್ರಕಾರ ರಾಜ್ಯದಲ್ಲಿ 6.11 ಕೋಟಿ ಜನಸಂಖ್ಯೆ ಇದೆ. 2017ರ ಅಂತ್ಯದ ವೇಳೆಗೆ ವರದಿ ಸಿದ್ದವಾಗಿದ್ದರೂ ಸದಸ್ಯ ಕಾರ್ಯದರ್ಶಿ ಸಹಿ ಹಾಕದ ಕಾರಣಕ್ಕೆ ಆಗಿನ ಅಧ್ಯಕ್ಷ ಕಾಂತರಾಜು ಅವರು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಲಿಲ್ಲ. ನಂತರ ಬಂದ ಜೆಡಿಎಸ್‌ ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರವೂ ವರದಿಯನ್ನು ಸ್ವೀಕರಿಸಲಿಲ್ಲ. ತದನಂತರ ರಚನೆಯಾದ ಬಿಜೆಪಿ ಸರ್ಕಾರವೂ ವರದಿಯನ್ನು ಸ್ವೀಕರಿಲು ಹಿಂದೇಟು ಹಾಕಿತು.

ಈಗಿನ ಕಾಂಗ್ರೆಸ್‌ ಸರ್ಕಾರ ವರದಿಯನ್ನು ಸ್ವೀಕಾರ ಮಾಡಿಕೊಂಡ ನಂತರ ವರದಿಯ ಒಂದೊಂದೇ ಅಂಶಗಳು ಬಹಿರಂಗವಾಗುತ್ತಾ ಬಂದಿವೆ. ವೀರಶೈವ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳುಮತ್ತು ಇತರೆ ಹಿಂದುಳಿದ ವರ್ಗಗಳ ಜನಸಂಖ್ಯೆಯ ಅಂಕಿಅಂಶಗಳೇ ಒಂದು ರೀತಿಯಲ್ಲಿ ಘರ್ಷಣೆಗೆ ಕಾರಣವಾಗಿವೆ. ವರದಿ ಕುರಿತು ಏಪ್ರಿಲ್‌ 17 ರ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿಲ್ಲ. ಮೇ 2 ರ ಸಚಿವ ಸಂಪುಟದಲ್ಲಿ ಮತ್ತೆ ಚರ್ಚೆ ನಡೆಯಲಿದೆ. ಈ ಮಧ್ಯೆ ಈ ವಿಷಯ ಹೈಕೋರ್ಟ್‌ ಮೆಟ್ಟಿಲೇರಿದೆ.

ವರದಿಯ ಮುಖ್ಯಾಂಶಗಳೇನು?

ವರದಿಯ ಅಂಕಿಅಂಶಗಳೇ ತಿಕ್ಕಾಟಕ್ಕೆ ಕಾರಣವಾಗಿವೆ. ಹಿಂದುಳಿದ ವರ್ಗಗಳ ಕಲ್ಯಾಣವೇ ವರದಿಯ ಉದ್ದೇಶ ಎನ್ನಲಾಗುತ್ತಿದ್ದರೂ ರಾಜಕೀಯ ಮುನ್ನೆಲೆಗೆ ಬಂದು ನಿಂತಿದೆ.

ಸಮೀಕ್ಷೆಯ ಪ್ರಕಾರ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಸಂಖ್ಯೆ ಶೇ. 70 ರಷ್ಟಿದೆ. ಮುಸಲ್ಮಾನರ ಜನಸಂಖ್ಯೆ 75.25 (ಶೇ.12.58) ಲಕ್ಷದಷ್ಟಿದ್ದು ಅತಿ ದೊಡ್ಡ ಜನಸಂಖ್ಯೆ ಹೊಂದಿರುವ ಸಮುದಾಯವಾಗಿದೆ. ಉತ್ತರ ಕರ್ನಾಟಕ ಮತ್ತು ಮಧ್ಯ ಕರ್ನಾಟಕದಲ್ಲಿ ರಾಜಕೀಯವಾಗಿ ಪ್ರಬಲವಾಗಿರುವ ವೀರಶೈವ ಲಿಂಗಾಯತರ ಜನಸಂಖ್ಯೆ ಶೇ. 11 ರಷ್ಟು ಅಂದರೆ, 66.35 ಲಕ್ಷ ಎಂದು ವರದಿ ಹೇಳುತ್ತಿದೆ.

ಇನ್ನು ಬೆಂಗಳೂರು, ಹಳೆಮೈಸೂರು,ಮಲೆನಾಡು, ಕರಾವಳಿ ಭಾಗದಲ್ಲಿರುವ ಪ್ರಬಲವಾಗಿರುವ ಒಕ್ಕಲಿಗರ ಜನಸಂಖ್ಯೆ ಶೇ. 10.29 ರಷ್ಟಿದೆ. ಅಂದರೆ 61.58 ಲಕ್ಷ ಎಂದು ವರದಿ ಹೇಳುತ್ತಿದೆ. ಪರಿಶಿಷ್ಟ ಜಾತಿ- 1.09 ಕೋಟಿ (ಶೇ. 18.2); ಪರಿಶಿಷ್ಟ ಪಂಗಡ- 43.81 ಲಕ್ಷ (ಶೇ.7.1) ದಷ್ಟಿದ್ದು ಎರಡೂ ಸಮುದಾಯಗಳ ಜನಸಂಖ್ಯೆ ಶೇ. 25.3 ರಷ್ಟಾಗುತ್ತದೆ. ಸಾಮಾನ್ಯ ವರ್ಗಕ್ಕೆ ಸೇರಿರುವ ಬ್ರಾಹ್ಮಣ, ಆರ್ಯ ವೈಶ್ಯ, ಮುದಲಿಯಾರ್‌, ನಗರ್ತ ಮತ್ತು ಜೈನರ ಒಂದು ಭಾಗದ ಜನಸಂಖ್ಯೆ 29.74 ಲಕ್ಷದಷ್ಟಿದೆ (ಶೇ. 4.9).

ಜಯಪ್ರಕಾಶ್‌ ಹೆಗ್ಡೆ ವರದಿ ಸಲಹೆಗಳೇನು?

ಒಕ್ಕಲಿಗ, ಲಿಂಗಾಯತ ಮುಸ್ಲಿಂ ಮತ್ತು ಇತರ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಶೇ.32 ರಿಂದ ಶೇ. 51ಕ್ಕೆ ಹೆಚ್ಚಳ ಮಾಡುವಂತೆ ಸಲಹೆ ನೀಡಿದೆ. ಜಾತಿಗಳನ್ನು ಜಾತಿಗಣತಿಯಲ್ಲಿ ನೀಡಿರುವ ಮಾಹಿತಿಗಳ ಪ್ರಕಾರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಪರಿಸ್ಥಿತಿ ಹಿನ್ನೆಲೆಯಲ್ಲಿ ಜಾತಿಗಳ ಮರು ವರ್ಗೀಕರಣ ಮಾಡಬೇಕೆಂದು ಸಲಹೆ ನೀಡಲಾಗಿದೆ. ಸದ್ಯ ಮೀಸಲಾತಿಯನ್ನು ಐದು ಪ್ರವರ್ಗಗಳಲ್ಲಿ ನೀಡಲಾಗುತ್ತಿದ್ದು, ಆರಕ್ಕೆ ಏರಿಸಬೇಕೆಂದು ಸಲಹೆ ನೀಡಿದೆ.

ಪ್ರಬಲ ಜಾತಿಗಳ ವಾದವೇನು?

ಪ್ರಬಲ ಜಾತಿಗಳಾದ ವೀರಶೈವ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳು ಸಾರಾಸಗಟಾಗಿ ತಿರಸ್ಕರಿಸಿದ್ದು, ಮರು ಸಮೀಕ್ಷೆಗೆ ಆಗ್ರಹಪಡಿಸಿವೆ. ವೀರಶೈವ ಲಿಂಗಾಯತರು ತಮ್ಮ ಜನಸಂಖ್ಯೆ ಶೇ. 17ರಿಂದ 22 ರಷ್ಟು ಎಂದು ಒಕ್ಕಲಿಗರು ತಮ್ಮ ಜನಸಂಖ್ಯೆ ಶೇ. 12ರಿಂದ 14 ರಷ್ಟಿದೆ ಎಂದು ವಾದಿಸುತ್ತಿವೆ. ಸಮೀಕ್ಷೆ ನಡೆಸುವಾಗ ತಮ್ಮ ಸಮುದಾಯದ ಮನೆಗಳಿಗೆ ಭೇಟಿ ನೀಡಿಯೇ ಇಲ್ಲ, ಜಾತಿ ಗಣತಿ ಹಳೆಯದಾಗಿದೆ ಮತ್ತು ಉಪ ಜಾತಿಗಳ ವಿಷಯದಲ್ಲೂ ಗೊಂದಲ ಇದೆ ಎಂದು ವಾದಿಸುತ್ತಿವೆ. ಈ ಎರಡೂ ಸಮುದಾಯಗಳ ಸಚಿವರು ಮತ್ತು ಶಾಸಕರು ವರದಿಯನ್ನು ವಿರೋಧಿಸುತ್ತಿವೆ. ಜಂಟಿ ಹೋರಾಟಕ್ಕೂ ಸಜ್ಜಾಗುತ್ತಿವೆ.

ಮುಂದೆ ಏನಾಗಬಹುದು?

ಮೇ 2 ರ ಸಚಿವಸಂಪುಟ ಸಭೆಯಲ್ಲಿ ಜಾತಿಗಣತಿ ಮತ್ತೆ ಚರ್ಚೆಗೆ ಬರಲಿದೆ. ಸಧ್ಯಕ್ಕೆ ಡಾಟಾ ಸಂಗ್ರಹಕ್ಕೆ ಅನುಸರಿಲಾದ ನಿಯಮಗಳನ್ನು ಕುರಿತು ಆಕ್ಷೇಪಗಳು ವ್ಯಕ್ತವಾಗುತ್ತಿವೆ. ಸಚಿವ ಸತೀಶ್‌ ಜಾರಕಿಹೊಳಿ ಅವರು ವರದಿ ಅನುಷ್ಠಾನಕ್ಕೆ ಒಂದು ವರ್ಷ ಆದರೂ ಆಗಬಹುದು ಎಂದು ತಡವಾಗುವುದರ ಮುನ್ಸೂಚನೆ ನೀಡಿದ್ದಾರೆ. ಬಲ್ಲ ಮೂಲಗಳ ಪ್ರಕಾರ ಸಚಿವ ಸಂಪುಟ ಉಪ ಸಮಿತಿ ರಚಿಸಲಾಗುತ್ತದೆ. ಅಲ್ಲಿಗೆ ಜಾತಿಗಣತಿ ವರದಿ ಶೀತಲಗೃಹ ಸೇರಿದಂತಾಗುತ್ತದೆ.

ವರದಿ: ಎಚ್.‌ ಮಾರುತಿ, ಬೆಂಗಳೂರು

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.