ಕರ್ನಾಟಕ ಸಿಇಟಿ 2025: ಜನಿವಾರ ವಿವಾದ, ಮರುಪರೀಕ್ಷೆ ಸಿಗುತ್ತಾ, ಇದುವರೆಗೆ ಏನೇನಾಯಿತು, ಇಲ್ಲಿದೆ 10 ಮುಖ್ಯ ಬೆಳವಣಿಗೆಗಳು
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕ ಸಿಇಟಿ 2025: ಜನಿವಾರ ವಿವಾದ, ಮರುಪರೀಕ್ಷೆ ಸಿಗುತ್ತಾ, ಇದುವರೆಗೆ ಏನೇನಾಯಿತು, ಇಲ್ಲಿದೆ 10 ಮುಖ್ಯ ಬೆಳವಣಿಗೆಗಳು

ಕರ್ನಾಟಕ ಸಿಇಟಿ 2025: ಜನಿವಾರ ವಿವಾದ, ಮರುಪರೀಕ್ಷೆ ಸಿಗುತ್ತಾ, ಇದುವರೆಗೆ ಏನೇನಾಯಿತು, ಇಲ್ಲಿದೆ 10 ಮುಖ್ಯ ಬೆಳವಣಿಗೆಗಳು

ಕರ್ನಾಟಕ ಸಿಇಟಿ 2025: ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಹಾಜರಾದ ಪರೀಕ್ಷಾರ್ಥಿಗಳ ಪೈಕಿ ಇಬ್ಬರು ವಿದ್ಯಾರ್ಥಿಗಳ ಜನಿವಾರ (ಯಜ್ಞೋಪವೀತ) ತೆಗೆಯಲು ಅಧಿಕಾರಿಗಳು ಸೂಚಿಸಿದ್ದು ವಿವಾದಕ್ಕೀಡಾಗಿದೆ. ಮರುಪರೀಕ್ಷೆ ಮಾಡ್ತಾರಾ - ಇಲ್ಲಿದೆ 10 ಮುಖ್ಯ ಬೆಳವಣಿಗೆಗಳ ವಿವರ.

ಕರ್ನಾಟಕ ಸಿಇಟಿ 2025: ಜನಿವಾರ ವಿವಾದ ಗಮನಸೆಳೆದಿದ್ದು, ಸರ್ಕಾರ ಸಿಇಟಿ ವಸ್ತ್ರಸಂಹಿತೆ ವಿಚಾರವನ್ನು ಸ್ಪಷ್ಟಪಡಿಸಿದೆ. (ಸಾಂಕೇತಿಕ ಚಿತ್ರ)
ಕರ್ನಾಟಕ ಸಿಇಟಿ 2025: ಜನಿವಾರ ವಿವಾದ ಗಮನಸೆಳೆದಿದ್ದು, ಸರ್ಕಾರ ಸಿಇಟಿ ವಸ್ತ್ರಸಂಹಿತೆ ವಿಚಾರವನ್ನು ಸ್ಪಷ್ಟಪಡಿಸಿದೆ. (ಸಾಂಕೇತಿಕ ಚಿತ್ರ)

ಕರ್ನಾಟಕ ಸಿಇಟಿ 2025: ವೈದ್ಯಕೀಯ, ಎಂಜಿನಿಯರಿಂಗ್ ಸೇರಿ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಒದಗಿಸುವುದಕ್ಕಾಗಿ ನಡೆಸುವ ಕರ್ನಾಟಕ ಸಿಇಟಿ ವಸ್ತ್ರಸಂಹಿತೆ ಅನುಷ್ಠಾನದ ಹೆಸರಿನಲ್ಲಿ ಜನಿವಾರ ತೆಗೆಸಿದ ಅಧಿಕಾರಿಗಳ ಕ್ರಮ ವಿವಾದಕ್ಕೀಡಾಗಿದೆ. ಶಿವಮೊಗ್ಗ ಮತ್ತು ಬೀದರ್‌ನಲ್ಲಿ ಇಂತಹ ಘಟನೆಗಳು ವರದಿಯಾಗಿದ್ದು, ಬ್ರಾಹ್ಮಣ ಸಮುದಾಯದಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಈ ನಡುವೆ, ಸಿಇಟಿ ವಸ್ತ್ರಸಂಹಿತೆಯಲ್ಲಿ ಎಲ್ಲವೂ ಸ್ಪಷ್ಟವಾಗಿದ್ದು, ಅದರಲ್ಲಿ ಜನಿವಾರ, ಕಾಶಿದಾರ ಇತ್ಯಾದಿ ತೆಗೆಸಬೇಕು ಎಂಬ ನಿರ್ದೇಶನ ಇಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸ್ಪಷ್ಟಪಡಿಸಿದೆ. ಹೀಗಾಗಿ, ಅನುಷ್ಠಾನ ಅಧಿಕಾರಿಗಳ ಅಧಿಕ ಪ್ರಸಂಗದ ನಡೆಯನ್ನು ಬ್ರಾಹ್ಮಣ ಮಹಾಸಭಾ ಖಂಡಿಸಿದೆ.

ಕರ್ನಾಟಕ ಸಿಇಟಿ 2025ರ ಜನಿವಾರ ವಿವಾದ; 10 ಮುಖ್ಯ ವಿದ್ಯಮಾನ

ಕರ್ನಾಟಕ ಸಿಇಟಿ ಬರೆಯಲು ಬಂದ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ಮತ್ತು ಕಾಶಿದಾರ ಕಡಿದು ಹಾಕಿದ್ದಾರೆ ಎಂದು ಶಿವಮೊಗ್ಗದ ಬ್ರಾಹ್ಮಣ ಸಮುದಾಯದವರು ಆರೋಪಿಸಿದ್ದು, ಜನಿವಾರ ತೆಗೆಯದ ಕಾರಣ ಪರೀಕ್ಷೆ ಬರೆಯಲು ಬಿಟ್ಟಿಲ್ಲ ಎಂದು ಬೀದರ್‌ನ ಬ್ರಾಹ್ಮಣ ಸಮುದಾಯದವರು ಆರೋಪಿಸಿದ್ದಾರೆ. ಕರ್ನಾಟಕ ಸಿಇಟಿ 2025 ಜನಿವಾರ ವಿವಾದಕ್ಕೆ ಸಂಬಂಧಿಸಿದ 10 ಮುಖ್ಯ ವಿದ್ಯಮಾನಗಳ ಕಡೆಗೊಂದು ನೋಟ ಇಲ್ಲಿದೆ.

1) ಶಿವಮೊಗ್ಗದಲ್ಲಿ ಜನಿವಾರ, ಕಾಶಿದಾರ ತೆಗೆಸಿದ ಅಧಿಕಾರಿಗಳು

ಶಿವಮೊಗ್ಗದ ಆದಿಚುಂಚನಗಿರಿ ಕಾಲೇಜು ಸಿಇಟಿ ಕೇಂದ್ರದ ಸಿಬ್ಬಂದಿ ತೀರ್ಥಹಳ್ಳಿಯ ಬ್ರಾಹ್ಮಣ ವಿದ್ಯಾರ್ಥಿ ಅಭಿಜ್ಞಾ ಧರಿಸಿದ್ದ ಜನಿವಾರ, ಕೈಗೆ ಕಟ್ಟಿಕೊಂಡಿದ್ದ ಕಾಶಿ ದಾರವನ್ನು ತೆಗೆಸಿ ಪರೀಕ್ಷೆ ಬರೆಯಲು ಬಿಟ್ಟಿದ್ದಾರೆ. ಇದು ಸಾಮಾಜಿಕ ಮಾದ್ಯಮಗಳ ಮೂಲಕ ಬಹಿರಂಗವಾಗಿದ್ದು, ಬ್ರಾಹ್ಮಣ ಸಮುದಾಯದವರಿಂದ ವ್ಯಾಪಕ ಅಸಮಾಧಾನ ವ್ಯಕ್ತವಾಗಿತ್ತು.

2) ಬೀದರ್‌ನಲ್ಲಿ ಜನಿವಾರ ತೆಗೆಯದ ವಿದ್ಯಾರ್ಥಿಗೆ ಪರೀಕ್ಷೆ ಇಲ್ಲ

ಬೀದರ್‌ನ ಮನ್ನಳ್ಳಿ ರಸ್ತೆಯ ಸಾಯಿಸ್ಫೂರ್ತಿ ಕಾಲೇಜು ಸಿಇಟಿ ಕೇಂದ್ರದಲ್ಲಿ ಪರೀಕ್ಷೆ ಬರೆಯಬೇಕಾಗಿದ್ದ ಸುಚಿವೃತ ಕುಲಕರ್ಣಿಯನ್ನು ತಡೆದ ಅಧಿಕಾರಿಗಳು ಜನಿವಾರ ತೆಗೆದು ಬದಿಗಿಟ್ಟು ಪರೀಕ್ಷೆ ಬರೆಯಲು ಸೂಚಿಸಿದ್ದಾರೆ. ಇದನ್ನು ಪ್ರಶ್ನಿಸಿದಾಗ, ಪರೀಕ್ಷಾ ಕೇಂದ್ರದೊಳಗೆ ಜನಿವಾರ ಬಳಸಿಕೊಂಡು ನೇಣುಬಿಗಿದು ಸತ್ತರೆ ಏನು ಮಾಡೋದು ಎಂಬ ಉಡಾಫೆ ಉತ್ತರ ಕೊಟ್ಟರು ಎಂದು ಸುಚಿವೃತ ಕುಲಕರ್ಣಿ ಮತ್ತು ಅವರ ತಾಯಿ ಟಿವಿ9 ಜತೆಗೆ ಮಾತನಾಡುತ್ತ ತಿಳಿಸಿದ್ದು ಗಮನ ಸೆಳೆದಿದೆ. ಸುಚಿವೃತ ಕುಲಕರ್ಣಿ ತಾಯಿ ನೀತಾ ಕುಲಕರ್ಣಿ, ಸಿಇಟಿ ಬರೆದು ಎಂಜಿನಿಯರ್ ಆಗಬೇಕು ಎಂದು ಮಗ ಬಯಸಿದ್ದ. ನಿನ್ನೆ ಪರೀಕ್ಷೆ ಬರೆಯಲು ಬಿಡದೇ ಮಗನ ಭವಿಷ್ಯದ ಜತೆಗೆ ಅಧಿಕಾರಿಗಳು ಚೆಲ್ಲಾಟವಾಡಿದರು. ಆತನಿಗೆ ಸಿಎಸ್‌ ವಿಭಾಗ ಸೇರಬೇಕು ಎಂಬ ಆಸೆ ಇದೆ. ಪರೀಕ್ಷಾ ಪ್ರಾಧಿಕಾರವೇ ಈಗ ಆತನಿಗೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

3) ಗಣಿತ ಪರೀಕ್ಷೆ ಬರೆಯಲು ಹೋದಾಗ ಅಧಿಕಾರಿ ಕಣ್ಣಿಗೆ ಬಿತ್ತು ಜನಿವಾರ

ಸುಚಿವೃತ ಕುಲಕರ್ಣಿ ಸುದ್ದಿಗಾರರ ಜತೆಗೆ ಮಾತನಾಡುತ್ತ, ಫಿಸಿಕ್ಸ್‌ ಮತ್ತು ಕೆಮಿಸ್ಟ್ರಿ ಬರೆಯೋದಕ್ಕೆ ಬಿಟ್ಟಿದ್ದರು. ನಿನ್ನೆ ಗಣಿತ ಪರೀಕ್ಷೆ ಇತ್ತು. ಅದಕ್ಕೆ ಹೋದಾಗ ಜನಿವಾರ ಕಣ್ಣಿಗೆ ಬಿತ್ತು. ಜನಿವಾರ ಕತ್ತರಿಸಿಕೊಂಡು ಬನ್ನಿ. ಇಲ್ಲಾಂದ್ರೆ ಪರೀಕ್ಷೆ ಬರೆಯೋದಕ್ಕೆ ಬಿಡಲ್ಲ ಎಂದು ಹೇಳಿದರು. ಕಾಲೇಜು ಆಡಳಿತ ಮಂಡಳಿಯವರು ಜನಿವಾರ ತೆಗೆದು ಬನ್ನಿ ಅಂತ ಹೇಳಿದರು. ಅವರಿಗೆ ಸಿಇಟಿ ವಸ್ತ್ರಸಂಹಿತೆಯಲ್ಲಿ ಅದು ಇಲ್ಲ ಎಂದು ಹೇಳಿದೆ. ಅವರು ನನ್ನ ಮಾತು ಕೇಳಲಿಲ್ಲ. ಪರೀಕ್ಷೆ ಬರೆಯೋದಕ್ಕೆ ಬಿಡಲಿಲ್ಲ ಎಂದು ಹೇಳಿದರು.

4) ಕ್ಷಮೆಯಾಚನೆಗೆ ಬ್ರಾಹಣ ಮಹಾಸಭಾ ಆಗ್ರಹ

ಶಿವಮೊಗ್ಗದ ತೀರ್ಥಹಳ್ಳಿ ಹಾಗೂ ಬೀದರ್‌ನಲ್ಲಿ ಬ್ರಾಹಣ ವಿದ್ಯಾರ್ಥಿಗಳಿಗೆ ಜನಿವಾರ ವಿಷಯ ಹಿಡಿದು ಅವಮಾನ ಮಾಡಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು, ಈ ಅಮಾನವೀಯ ಕೃತ್ಯಕ್ಕೆ ಬೇಷರತ್‌ ಕ್ಷಮೆಯಾಚಿಸಬೇಕು ಎಂದು ಅಖಿಲ ಕರ್ನಾಟಕ ಬ್ರಾಹಣ ಮಹಾಸಭಾ ಅಧ್ಯಕ್ಷ ಎಸ್‌‍. ರಘುನಾಥ್‌ ಒತ್ತಾಯಿಸಿದ್ದಾರೆ. ಈ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಪತ್ರ ಬರೆದು ಕ್ರಮಕ್ಕೆ ಆಗ್ರಹಿಸಿದ್ದು, ಪ್ರತಿಭಟನೆಗೂ ಕರೆ ನೀಡಿದ್ದಾರೆ.

5) ಬಿಜೆಪಿ ರಾಜ್ಯ ಅಧ್ಯಕ್ಷ ಬಿವೈ ವಿಜಯೇಂದ್ರ ಖಂಡನೆ

ಬೀದರ್‌ನಲ್ಲಿ ಜನಿವಾರ ಧರಿಸಿದ್ದ ವಿದ್ಯಾರ್ಥಿಗೆ ಸಿಇಟಿ ಪರೀಕ್ಷೆಗೆ ಅವಕಾಶ ಕೊಡದೇ, ಶಿವಮೊಗ್ಗದಲ್ಲಿ ವಿದ್ಯಾರ್ಥಿಯೊಬ್ಬನ ಜನಿವಾರ ಕಿತ್ತೆಸೆಯಲು ದರ್ಪ ಮೆರೆದು ವಿದ್ಯಾರ್ಥಿಯ ಭವಿಷ್ಯಕ್ಕೆ ಕಲ್ಲು ಹಾಕಿದ ಅಧಿಕಾರಿ,ಸಿಬ್ಬಂದಿಗಳ ವರ್ತನೆ ಅತ್ಯಂತ ಹೇಯ. ಈ ರೀತಿಯ ಬೌದ್ಧಿಕ ವಿಕೃತಿ ಹಾಗೂ ಮನುಷ್ಯತ್ವ ಇಲ್ಲದ ನಡೆ ಇನ್ನೊಂದಿರಲಾರದು, ಇದು ಕಾಂಗ್ರೆಸ್ ಸರ್ಕಾರದ ಹೀನ ಮನಸ್ಥಿತಿಯ ಮುಖವಾಡವನ್ನು ಪ್ರದರ್ಶಿಸಿದೆ. ಬಾಲ್ಯದಿಂದಲೂ ಕನಸು ಕಟ್ಟಿಕೊಂಡು ಭವಿಷ್ಯದ ತಿರುವಿನಲ್ಲಿ ಆಘಾತ ಎದುರಿಸಿ ವಿದ್ಯಾರ್ಥಿಯೊಬ್ಬನ ಇಂಜಿನಿಯರಿಂಗ್ ಪದವಿಯ ಕನಸಿನ ಮೇಲೆ ಅಟ್ಟಹಾಸಗೈದ ಸಿಇಟಿ ಪರೀಕ್ಷಾ ಸಿಬ್ಬಂದಿಯ ವರ್ತನೆ ಅತ್ಯಂತ ಖಂಡನೀಯ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಬಿವೈ ವಿಜಯೇಂದ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

6) ತಪ್ಪಿತಸ್ಥರ ವಿರುದ್ಧ ಕ್ರಮ; ಶಿಕ್ಷಣ ಸಚಿವ ಮಧು ಬಂಗಾರಪ್ಪ ಭರವಸೆ

ಸಿಇಟಿಗೆ ವಸ್ತ್ರಸಂಹಿತೆ ಜಾರಿಯಲ್ಲಿದೆಯಾದರೂ ಈ ರೀತಿ ಜನಿವಾರ ತೆಗೆಸಬೇಕು ಎಂಬ ನಿರ್ದೇಶನ ಕೊಟ್ಟಿಲ್ಲ. ಯಾವ ಇಲಾಖೆಯೂ ಅಂತಹ ನಿರ್ದೇಶನ, ಸುತ್ತೋಲೆ ಹೊರಡಿಸಿಲ್ಲ. ಈ ಘಟನೆಗೆ ಕಾರಣವಾದವರ ವಿರುದ್ಧ ಕ್ರಮ ಜರುಗಿಸಬೇಕು. ಪರೀಕ್ಷೆಯಿಂದ ವಂಚಿತರಾದವರಿಗೆ ಮರುಪರೀಕ್ಷೆ ಕೊಡುವ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಪ್ರಕರಣದ ಬಗ್ಗೆ ನಿಖರ ಮಾಹಿತಿ ಪಡೆಯುತ್ತೇನೆ. ಜನಿವಾರ ತೆಗೆಯಬೇಕು ಎಂಬ ನಿಯಮ ಇಲ್ಲ. ಜಾತಿ ಧರ್ಮಗಳ ಆಚರಣೆಗಳನ್ನು ಗೌರವಿಸಬೇಕು. ಘಟನೆಗೆ ಕಾರಣಕರ್ತರಾದವರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.

7) ಅತಿರೇಕದ ವರ್ತನೆ ವಿರುದ್ಧ ಕಠಿಣ ಕ್ರಮ; ಸಚಿವ ಎಂಸಿ ಸುಧಾಕರ್

ಸಿಇಟಿ ಪರೀಕ್ಷಾರ್ಥಿಯ ಜನಿವಾರ ತೆಗೆಸಿದ್ದು ನಿಜವೇ ಆಗಿದ್ದರೆ ಅದು ಅತಿರೇಕದ ವರ್ತನೆ. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಇದನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಎಲ್ಲಾ ಜಾತಿ, ಧರ್ಮಗಳ ಆಚರಣೆ ಸಂಪ್ರದಾಯಕ್ಕೆ ಗೌರವ ಕೊಡಬೇಕು. ನಾನು ಈ ರೀತಿಯ ಘಟನೆಗಳಿಗೆಲ್ಲ ಪ್ರೋತ್ಸಾಹ ಕೊಡುವುದಿಲ್ಲ. ಘಟನೆ ಸಂಬಂಧ ಅಧಿಕಾರಿಗಳ ಬಳಿ ವರದಿ ಪಡೆದು ಮುಂದಿನ ಕ್ರಮ ಜರುಗಿಸುತ್ತೇವೆ. ಆಯ್ದ ವಿಚಾರ ಎತ್ತಿಕೊಂಡು ರಾಜಕೀಯ ಲಾಭ ಮಾಡುವುದಲ್ಲ. ಯಾವುದೇ ಸಮುದಾಯಕ್ಕೆ ನೋವು ಉಂಟುಮಾಡುವ ಉದ್ದೇಶ ನಮ್ಮದಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂಸಿ ಸುಧಾಕರ್ ಹೇಳಿದ್ದಾರೆ.

8) ಪರೀಕ್ಷಕ ಚಂದ್ರಶೇಖರ್ ಬಿರಾದಾರ್‌ಗೆ ಶೋಕಾಸ್ ನೋಟಿಸ್

'ಘಟನೆಯ ಬಗ್ಗೆ ತಿಳಿದ ನಂತರ, ಕೇಂದ್ರದ ಪರೀಕ್ಷಕ ಚಂದ್ರಶೇಖರ್ ಬಿರಾದಾರ್ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ಪರೀಕ್ಷಾರ್ಥಿ ಸುಚಿವೃತ ಕುಲಕರ್ಣಿ ಅವರಿಗೆ ವಿಶೇಷ ಪರೀಕ್ಷೆ ನಡೆಸುವ ಅವಕಾಶವನ್ನು ಪರೀಕ್ಷಾ ಪ್ರಾಧಿಕಾರ ಹಾಗೂ ಸರ್ಕಾರ ತೀರ್ಮಾನಿಸಬೇಕು ಎಂದು ಬೀದರ್ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

9) ಜನಿವಾರ ತೆಗೆಸಿದ್ದು ತಪ್ಪು: ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ

ಸಿಇಟಿ ಪರೀಕ್ಷೆ ವೇಳೆ ಅಲ್ಲಿನ ಸಿಬ್ಬಂದಿ ಜನಿವಾರ ತೆಗೆಯಬೇಕು ಅಂತ ಹೇಳಿದ್ದು ತಪ್ಪು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಂತಹ ಯಾವುದೇ ಮಾರ್ಗಸೂಚಿ ಕೊಟ್ಟಿಲ್ಲ. ಪರೀಕ್ಷಾ ಸಿಬ್ಬಂದಿ ಜನಿವಾರ ತೆಗೆಸಿದ್ದು ತಪ್ಪು. ಇದನ್ನು ಪ್ರಾಧಿಕಾರ ಒಪ್ಪುವುದಿಲ್ಲ. ಈ ಘಟನೆಗೆ ಪ್ರಾಧಿಕಾರ ವಿಷಾದ ವ್ಯಕ್ತಪಡಿಸುತ್ತದೆ. ನಾನೇ ಕ್ಷಮೆಯಾಚಿಸುತ್ತೇನೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಪಬ್ಲಿಕ್ ಟಿವಿ ಜತೆಗೆ ಮಾತನಾಡುತ್ತ ಹೇಳಿದರು.

10) ಘಟನೆ ಮರುಕಳಿಸದಂತೆ ಕಠಿಣ ಮಾರ್ಗಸೂಚಿ

ಸಿಇಟಿ ಪರೀಕ್ಷಾ ಕೇಂದ್ರಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ, ಕಠಿಣ ಮಾರ್ಗಸೂಚಿ ಪ್ರಕಟಿಸುತ್ತೇವೆ. ಯಾವುದೇ ಜಾತಿ, ಧರ್ಮದ ವಿರುದ್ಧ ನಾವು ಮಾರ್ಗಸೂಚಿ ಸಿದ್ಧಪಡಿಸಿಲ್ಲ, ಪಡಿಸುವುದೂ ಇಲ್ಲ. ಈಗ ತಪ್ಪಾಗಿದೆ. ಈ ಕೆಲಸ ಮಾಡಿದವರ ವಿರುದ್ಧ ಕ್ರಮ ಜರುಗಿಸುತ್ತೇವೆ. ತನಿಖೆಗೆ ಆದೇಶ ನೀಡಿದ್ದೇವೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಸುದ್ದಿ ಮಾಧ್ಯಮಗಳಿಗೆ ತಿಳಿಸಿದ್ಧಾರೆ.

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.