ಸುಹಾಸ್ ಶೆಟ್ಟಿ ಹತ್ಯೆಗೆ ಫಾಜಿಲ್ ಪರಿಹಾರದ ಹಣ ಬಳಕೆ ಆರೋಪ: ಸಿಎಂ ಸಿದ್ದರಾಮಯ್ಯ ನಿರಾಕರಣೆ
ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಹಂತಕರಿಗೆ ಫಾಜಿಲ್ ಕುಟುಂಬಕ್ಕೆ ನೀಡಲಾದ ಪರಿಹಾರದ ಹಣ ಬಳಸಲಾಗಿದೆ ಎಂಬ ಆರೋಪಗಳ ಬಗ್ಗೆ ನನಗೆ ತಿಳಿದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರು: ಹಿಂದೂ ಕಾರ್ಯಕರ್ತ ಮಂಗಳೂರಿನ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವ ಗುತ್ತಿಗೆ ಹಂತಕರನ್ನು ನೇಮಿಸಿಕೊಳ್ಳಲು ಮೊಹಮ್ಮದ್ ಫಾಜಿಲ್ ಕುಟುಂಬಕ್ಕೆ ನೀಡಿದ ಪರಿಹಾರವನ್ನು ಬಳಸಲಾಗಿದೆ ಎಂಬ ವರದಿಗಳ ಬಗ್ಗೆ ನನಗೆ ತಿಳಿದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಹೇಳಿದ್ದಾರೆ. ಈ ಬಗ್ಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರೊಂದಿಗೆ ಚರ್ಚಿಸಿ ಹೆಚ್ಚಿನ ಮಾಹಿತಿ ಪಡೆಯುವುದಾಗಿ ತಿಳಿಸಿದ್ದಾರೆ.
2022 ರಲ್ಲಿ ಸುರತ್ಕಲ್ನಲ್ಲಿ ಮುಸುಕುಧಾರಿಗಳ ಗುಂಪೊಂದು ಫಾಜಿಲ್ ಅವರನ್ನು ಕೊಲೆ ಮಾಡಿತ್ತು. ರೌಡಿಶೀಟರ್ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದನು. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಫಾಜಿಲ್ ಪರಿಹಾರದ ಹಣ ಬಳಕೆ ಆರೋಪ ಕುರಿತು ಅದನ್ನು ಪರಿಶೀಲಿಸಬೇಕಾಗಿದೆ. ನನಗೆ ಯಾವುದೇ ಮಾಹಿತಿ ಇಲ್ಲ. ನಿನ್ನೆ ದಿನೇಶ್ ಗುಂಡೂರಾವ್ ಮತ್ತು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಭೇಟಿ ನೀಡಿದ್ದರು. ನಾನು ಇನ್ನೂ ಅವರೊಂದಿಗೆ ಮಾತನಾಡಿಲ್ಲ. ಅವರೊಂದಿಗೆ ಮಾತನಾಡಿದ ನಂತರ ಹೇಳುತ್ತೇನೆ. 2022 ರಲ್ಲಿ ಫಾಜಿಲ್ ಹತ್ಯೆಯ ನಂತರ ರಾಜ್ಯ ಸರ್ಕಾರವು ಅವರ ಕುಟುಂಬಕ್ಕೆ ನೀಡಿದ 25 ಲಕ್ಷ ರೂ.ಗಳ ಪರಿಹಾರದ ಹಣದಲ್ಲಿ ಐದು ಲಕ್ಷ ರೂ.ಗಳನ್ನು ಸುಹಾಸ್ ಶೆಟ್ಟಿಯನ್ನು ಕೊಲ್ಲಲು ಹಂತಕರಿಗೆ ಪಾವತಿಸಲಾಗಿದೆ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ ಎಂದು ಅವರು ಹೇಳಿದರು.
ಮೇ 1ರ ಗುರುವಾರ ರಾತ್ರಿ ಸುಹಾಸ್ ಶೆಟ್ಟಿಯನ್ನು ಮಂಗಳೂರಿನಲ್ಲಿ ಕೊಲೆ ಮಾಡಲಾಗಿತ್ತು. ಈ ಸಂಬಂಧ ಫಾಜಿಲ್ ಸಹೋದರ ಸೇರಿದಂತೆ ಎಂಟು ಮಂದಿಯನ್ನು ಬಂಧಿಸಲಾಗಿದೆ. ಕರಾವಳಿಯಲ್ಲಿ ಕೋಮು ಸಮಸ್ಯೆಗಳನ್ನು ನಿಭಾಯಿಸಲು ಕಾರ್ಯಪಡೆ ರಚಿಸುವ ಬಗ್ಗೆ ಕೇಳಿದಾಗ, ಸಮಾಜ ವಿರೋಧಿ ಶಕ್ತಿಗಳನ್ನು ಗುರುತಿಸಲು ಮತ್ತು ನಿಗ್ರಹಿಸಲು ಪೊಲೀಸ್ ವಿಶೇಷ ಕಾರ್ಯಪಡೆ ವಿಭಾಗದ ಅಗತ್ಯವಿದೆ ಎಂದು ಪರಮೇಶ್ವರ್ ಹೇಳಿದ್ದಾರೆ ಎಂದು ಸಿಎಂ ಹೇಳಿದರು. ಕಾರ್ಯಪಡೆ ರಚನೆ ಬಗ್ಗೆ ನಾನು ಗೃಹ ಸಚಿವರೊಂದಿಗೆ ಮಾತನಾಡುತ್ತೇನೆ ಮತ್ತು ನಂತರ ನಾನು ನಿಮಗೆ ತಿಳಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.