Explained: ಅಲ್ಪ ಸಂಖ್ಯಾತರ ಶೇಕಡ 4 ಮೀಸಲಾತಿ ರದ್ದು, ಚುನಾವಣಾ ಹೊಸ್ತಿಲಲ್ಲಿ ಒಕ್ಕಲಿಗ ಮತ್ತು ಲಿಂಗಾಯಿತರನ್ನು ಸೆಳೆಯಲು ಸರಕಾರದ ಕಸರತ್ತು
ಅಲ್ಪ ಸಂಖ್ಯಾತರಿಗೆ 2ಬಿಯಡಿ ನೀಡಲಾಗಿದ್ದ ಶೇಕಡ 4 ಮೀಸಲಾತಿಯನ್ನು ರದ್ದುಗೊಳಿಸುವ ನಿರ್ಧಾರವನ್ನು ಕರ್ನಾಟಕ ಸರಕಾರ ಮಾಡಿದೆ. ಅಲ್ಪ ಸಂಖ್ಯಾತರಿಗೆ ಆರ್ಥಿಕವಾಗಿ ಹಿಂದುಳಿದ ವರ್ಗ (ಇಡಬ್ಲ್ಯುಎಸ್) ದಡಿ ಮೀಸಲಾತಿ ನೀಡಲು ನಿರ್ಧರಿಸಲಾಗಿದೆ.
ಬೆಂಗಳೂರು: ಅಲ್ಪ ಸಂಖ್ಯಾತರಿಗೆ 2ಬಿಯಡಿ ನೀಡಲಾಗಿದ್ದ ಶೇಕಡ 4 ಮೀಸಲಾತಿಯನ್ನು ರದ್ದುಗೊಳಿಸುವ ನಿರ್ಧಾರವನ್ನು ಕರ್ನಾಟಕ ಸರಕಾರ ಮಾಡಿದೆ. ಅಲ್ಪ ಸಂಖ್ಯಾತರಿಗೆ ಆರ್ಥಿಕವಾಗಿ ಹಿಂದುಳಿದ ವರ್ಗ (ಇಡಬ್ಲ್ಯುಎಸ್) ದಡಿ ಮೀಸಲಾತಿ ನೀಡಲು ನಿರ್ಧರಿಸಲಾಗಿದೆ. ಈ ಕುರಿತು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಕರ್ನಾಟಕದಲ್ಲಿ ಒಕ್ಕಲಿಗರು ಮತ್ತು ಲಿಂಗಾಯಿತರ ಮತಗಳು ಬಿಜೆಪಿಗೆ ಅತ್ಯಂತ ಪ್ರಮುಖವಾಗಿದ್ದು, ಈ ಎರಡು ಪ್ರಬಲ ಸಮುದಾಯಗಳನ್ನು ಸೆಳೆಯಲು ಪ್ರಯತ್ನಿಸುತ್ತಿದೆ. ಈಗಾಗಲೇ ಈ ಎರಡು ಸಮುದಾಯಗಳಿಗೆ ನಾನಾ ಕೊಡುಗೆಗಳನ್ನು ಸರಕಾರ ಘೋಷಿಸಿದ್ದು, ಇದೀಗ 2ಸಿ ಮತ್ತು 2ಡಿ ನೀಡಲಾಗುವ ಮೀಸಲಾತಿಯನ್ನೂ ಹೆಚ್ಚಿಸಲಾಗಿದೆ.
ಅಲ್ಪ ಸಂಖ್ಯಾತರಿಗೆ ಈ ಹಿಂದೆ 2ಬಿಯಡಿ ನೀಡುತ್ತಿದ್ದ ಮೀಸಲಾತಿಯನ್ನು ರದ್ದುಗೊಳಿಸಿ ಕರ್ನಾಟಕದ ಎರಡು ಪ್ರಬಲ ಸಮುದಾಯಗಳಾದ ಒಕ್ಕಲಿಗ ಮತ್ತು ಲಿಂಗಾಯಿತ ಸಮುದಾಯಕ್ಕೆ ಸೇರಿಸಲು ನಿರ್ಧರಿಸಲಾಗಿದೆ. ಒಕ್ಕಲಿಗ ಸಮುದಾಯಕ್ಕೆ ಮತ್ತು ಲಿಂಗಾಯಿತರಿಗೆ 2ಸಿ ಮತ್ತು 2ಡಿಯಡಿ ನೀಡುತ್ತಿದ್ದ ಮೀಸಲಾತಿ ಪ್ರಮಾಣವನ್ನು ಶೇಕಡ 4ರಿಂದ 6ಕ್ಕೆ ಹಾಗೂ ಶೇಕಡ 5ರಿಂದ 7ಕ್ಕೆ ಏರಿಕೆ ಮಾಡಲಾಗಿದೆ. ಚುನಾವಣೆಯ ಹೊಸ್ತಿಲಲ್ಲಿ ಕರ್ನಾಟಕ ಸರಕಾರವು ರಾಜ್ಯದ ಎರಡು ಪ್ರಬಲ ವರ್ಗಗಳಿಗೆ ಈ ಮೂಲಕ ಭರ್ಜರಿ ಕೊಡುಗೆ ನೀಡಿದೆ.
ಧಾರ್ಮಿಕ ಅಲ್ಪ ಸಂಖ್ಯಾತರನ್ನು ಇಡಬ್ಲ್ಯೂಎಸ್ ವರ್ಗದ ಅಡಿಯಲ್ಲಿ ತರಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ. "ಧಾರ್ಮಿಕ ಅಲ್ಪಸಂಖ್ಯಾತರ ಕೋಟಾವನ್ನು ತೆಗೆದುಹಾಕಲಾಗುವುದು. ಯಾವುದೇ ಷರತ್ತುಗಳನ್ನು ಬದಲಾಯಿಸದೆ ಇಡಬ್ಲ್ಯೂಎಸ್ ವರ್ಗದಲ್ಲಿಅಲ್ಪ ಸಂಖ್ಯಾತರಿಗೆ ಮೀಸಲಾತಿ ನೀಡಲಾಗುವುದು" ಎಂದು ಸಂಪುಟ ಸಭೆಯ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.
“ಶೇಕಡಾ 4 (ಅಲ್ಪಸಂಖ್ಯಾತರಿಗೆ ಮೀಸಲಾತಿ) ಮೀಸಲಾತಿಯನ್ನು 2C ಮತ್ತು 2D ನಡುವೆ ಎರಡು ಭಾಗಗಳಾಗಿ ವಿಂಗಡಿಸಲಾಗುತ್ತದೆ. ಒಕ್ಕಲಿಗರು ಮತ್ತು ಇತರರಿಗೆ ಶೇಕಡಾ 4 ರಷ್ಟು ಇದ್ದ ಮೀಸಲಾತಿಯನ್ನು ಶೇಕಡಾ 6 ಕ್ಕೆ ಹೆಚ್ಚಿಸಲಾಗುವುದು. ಶೇಕಡಾ 5 ರಷ್ಟು ಮೀಸಲಾತಿ ಪಡೆಯುತ್ತಿರುವ ವೀರಶೈವ ಪಂಚಮಸಾಲಿ ಮತ್ತು ಇತರರಿಗೆ (ಲಿಂಗಾಯತರು) ಶೇಕಡಾ 7 ಮೀಸಲಾತಿ ದೊರಕಲಿದೆ”ಎಂದು ಎಂದು ಮುಖ್ಯಮಂತ್ರಿಗಳು ವಿವರಿಸಿದ್ದಾರೆ.
ಒಕ್ಕಲಿಗರು ಮತ್ತು ಲಿಂಗಾಯತರಿಗೆ ಕ್ರಮವಾಗಿ 3A ಮತ್ತು 3B ವರ್ಗಗಳ ಮೀಸಲಾತಿಯನ್ನು ಸಚಿವ ಸಂಪುಟವು ಕಳೆದ ಡಿಸೆಂಬರ್ನಲ್ಲಿ ರದ್ದುಗೊಳಿಸಿತು. ಅವುಗಳನ್ನು 2C ಮತ್ತು 2D ಎಂಬ ಹೊಸ ವರ್ಗಗಳೊಂದಿಗೆ ಅವುಗಳನ್ನು ಬದಲಾಯಿಸಲಾಗಿತ್ತು.
ಮುಸ್ಲಿಮರ ಕೋಟಾವನ್ನು ರದ್ದುಗೊಳಿಸುವ ನಿರ್ಧಾರವನ್ನು ಸಮರ್ಥಿಸಿಕೊಂಡ ಬೊಮ್ಮಾಯಿ, ಧಾರ್ಮಿಕ ಅಲ್ಪಸಂಖ್ಯಾತರಿಗೆ ಯಾವುದೇ ಸಾಂವಿಧಾನಿಕ ಅವಕಾಶವಿಲ್ಲ ಎಂದು ಹೇಳಿದ್ದಾರೆ.
ಆಂಧ್ರಪ್ರದೇಶದಲ್ಲಿ ಅಲ್ಪಸಂಖ್ಯಾತರಿಗೆ ನೀಡಲಾಗಿದ್ದ ಮೀಸಲಾತಿಯನ್ನು ರದ್ದುಗೊಳಿಸಿದ ನ್ಯಾಯಾಲಯದ ತೀರ್ಪನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉಲ್ಲೇಖಿಸಿದ್ದಾರೆ. ಸಂವಿಧಾನ ಶಿಲ್ಪಿ ಬಿ ಆರ್ ಅಂಬೇಡ್ಕರ್ ಕೂಡ "ಜಾತಿಗೆ ಮೀಸಲಾತಿ" ಎಂದು ಹೇಳಿದ್ದಾರೆ ಎಂದು ಹೇಳಿದ್ದರು. “ಆದರೆ, ನಾವು ಆ ಸಮುದಾಯವನ್ನು ಸಂಪೂರ್ಣವಾಗಿ ಕೈಬಿಡಲು ಸಾಧ್ಯವಿಲ್ಲ" ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.
"ಅಲ್ಪ ಸಂಖ್ಯಾತರಿಗೆ ಯಾವುದೇ ಸಮಸ್ಯೆಯಾಗಬಾರದು ಎಂಬ ವಿವೇಚನೆಯಿಂದ ... ಮೀಸಲಾತಿಯನ್ನು ಯಾರಾದರೂ ಪ್ರಶ್ನಿಸಿದರೆ, ನಾವು ಪೂರ್ವಭಾವಿ ನಿರ್ಧಾರ ತೆಗೆದುಕೊಳ್ಳಲು ನಿರ್ಧರಿಸಿದ್ದೇವೆ. ವಾಸ್ತವವಾಗಿ ಅಲ್ಪ ಸಂಖ್ಯಾತರಿಗೆ ಯಾವುದೇ ತೊಂದರೆಯಾಗದಂತೆ ಅವರು ಇಡಬ್ಲ್ಯುಎಸ್ ಗುಂಪಿಗೆ ಹೋಗುತ್ತಾರೆ. ಅಲ್ಲಿ ಅವರು ಶೇಕಡಾ 4 ರಷ್ಟು ಇದ್ದ ಮೀಸಲಾತಿಯನ್ನು ಶೇಕಡ 10 ರಷ್ಟು ಪಡೆಯುತ್ತಾರೆ ”ಎಂದು ಬೊಮ್ಮಾಯಿ ವಿವರಿಸಿದರು.
ಮುಸ್ಲಿಮರನ್ನು 1, 2A ಮತ್ತು 2B ಎಂಬ ಮೂರು ಮೀಸಲಾತಿ ವರ್ಗಗಳಾಗಿ ವಿಂಗಡಿಸಲಾಗಿದೆ. ಅತ್ಯಂತ ಹಿಂದುಳಿದ ಧಾರ್ಮಿಕ ಅಲ್ಪಸಂಖ್ಯಾತರಾದ ಪಿಂಜಾರ, ನದಾಫ್, ದರೋಜಿ, ಚಪ್ಪರಬಂದ್ ಮುಂತಾದ ಮುಸ್ಲಿಮರ ಉಪ-ಪಂಗಡಗಳು ವರ್ಗ 1 ರಲ್ಲಿ ಸೇರ್ಪಡೆಗೊಂಡಿದ್ದಾರೆ. ಅವರು ಅದೇ ಮೀಸಲಾತಿ ಪಟ್ಟಿಯಲ್ಲಿ ಉಳಿಯುತ್ತಾರೆ.
ಇದೇ ರೀತಿ, 2ಎ ವರ್ಗದ ಅಡಿಯಲ್ಲಿ ಬರುವ ಮುಸ್ಲಿಮರಿಗೂ ತೊಂದರೆಯಿಲ್ಲ. “2B ವರ್ಗದಲ್ಲಿರುವ ಇತರ ಕೆಲವು ಮುಸ್ಲಿಂ ಉಪ-ಪಂಗಡಗಳಿಗೆ ತೊಂದರೆಯಾಗುವುದಿಲ್ಲ. ಆ ಪಂಗಡಗಳನ್ನು ಇಡಬ್ಲ್ಯೂಎಸ್ ಕೋಟಾಕ್ಕೆ ವರ್ಗಾಯಿಸಲಾಗುತ್ತದೆ" ಎಂದು ಬೊಮ್ಮಾಯಿ ವಿವರಿಸಿದ್ದಾರೆ.
“ಹಿಂದುಳಿದ ಆಯೋಗದ ವರದಿಯಲ್ಲಿ ಉಲ್ಲೇಖಿಸಿದ ಇನ್ನೂ ಕೆಲವು ಸಣ್ಣ ಹಿಂದುಳಿದ ಸಮುದಾಯಗಳಿವೆ. ಹಿಂದುಳಿದ ಪಟ್ಟಿ ಸೇರಿದಂತೆ ಯಾವುದೇ ಪಟ್ಟಿಯಲ್ಲಿ ಅವರು ಕಾಣಿಸಿಕೊಂಡಿಲ್ಲ. ಅವರು ಯಾವುದೇ ವರ್ಗದಲ್ಲಿ ಇಲ್ಲ. ಅವರಿಗೆ ಸಂಬಂಧಿಸಿದಂತೆ ಹಿಂದುಳಿದ ಆಯೋಗ ತನ್ನ ಎರಡನೇ ಪಟ್ಟಿಯಲ್ಲಿ ಉಲ್ಲೇಖಿಸಿದೆ. ವರದಿಯನ್ನು ಕೂಲಂಕಷವಾಗಿ ಅಧ್ಯಯನ ಮಾಡುತ್ತೇನೆ. ಮುಂಬರುವ ಸಚಿವ ಸಂಪುಟದಲ್ಲಿ ನಮ್ಮ ಸರ್ಕಾರ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಿದೆ. ಈಗಾಗಲೇ ನಾಲ್ಕು ಜಿಲ್ಲೆಗಳಲ್ಲಿ ಹರಡಿರುವ ‘ಕಾಡು ಕುರುಬ’ ಮತ್ತು ‘ಗೊಂಡ ಕುರುಬ’ ಎಂಬ ಎರಡು ಕುರುಬ ಸಮುದಾಯಗಳನ್ನು ಎಸ್ಟಿ ವರ್ಗಕ್ಕೆ ಸೇರಿಸಲು ಕೇಂದ್ರಕ್ಕೆ ಶಿಫಾರಸು ಕಳುಹಿಸಲಾಗಿದೆ" ಎಂದು ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.