ಕನ್ನಡ ಸುದ್ದಿ  /  Karnataka  /  Karnataka Election Actor Shivarajkumar Campaign For Siddaramaiah Is V Somanna Pratap Simha Upset About Shivanna Mnk

Karnataka Election: ಸಿದ್ದರಾಮಯ್ಯ ಪರ ಪ್ರಚಾರ; ನಟ ಶಿವಣ್ಣನ ಬಗ್ಗೆ ಅಸಮಾಧಾನಗೊಂಡ್ರಾ ವಿ ಸೋಮಣ್ಣ, ಪ್ರತಾಪ್‌ ಸಿಂಹ?

V Somanna on Shiva Rajkumar: ನಟ ಶಿವರಾಜ್‌ಕುಮಾರ್‌, ಸಿದ್ದರಾಮಯ್ಯ ಪರವಾಗಿ ವರುಣದಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಈ ಬೆನ್ನಲ್ಲೇ ಶಾಸಕ ವಿ ಸೋಮಣ್ಣ ಮತ್ತು ಸಂಸದ ಪ್ರತಾಪ್‌ ಸಿಂಹ ಶಿವಣ್ಣನ ನಡೆಯ ಬಗ್ಗೆ ಅಸಮಾಧಾನಗೊಂಡಂತಿದೆ.

ಸಿದ್ದರಾಮಯ್ಯ ಪರ ಪ್ರಚಾರ; ನಟ ಶಿವಣ್ಣನ ಬಗ್ಗೆ ಅಸಮಾಧಾನಗೊಂಡ್ರಾ ವಿ ಸೋಮಣ್ಣ, ಪ್ರತಾಪ್‌ ಸಿಂಹ?
ಸಿದ್ದರಾಮಯ್ಯ ಪರ ಪ್ರಚಾರ; ನಟ ಶಿವಣ್ಣನ ಬಗ್ಗೆ ಅಸಮಾಧಾನಗೊಂಡ್ರಾ ವಿ ಸೋಮಣ್ಣ, ಪ್ರತಾಪ್‌ ಸಿಂಹ?

ಮೈಸೂರು: ನನಗೆ ದುನಿಯಾ ವಿಜಿ, ನಟಿ ರಮ್ಯಾ ಬಗ್ಗೆ ಗೊತ್ತಿಲ್ಲ. ಆದರೆ ನಟ ಶಿವರಾಜ್‌ಕುಮಾರ್ ಯಾಕೆ ಹೀಗೆ ಮಾಡಿದರು ಎಂದು ತಿಳಿಯುತ್ತಿಲ್ಲ. ಸಿದ್ದರಾಮಯ್ಯ ಹತಾಶರಾಗಿ ಸ್ಟಾರ್‌ಗಳನ್ನು ಕರೆಸಿ ಪ್ರಚಾರ ಮಾಡುತ್ತಿದ್ದಾರೆ ಎಂದು ವಿ.ಸೋಮಣ್ಣ ಸ್ಟಾರ್‌ ಪ್ರಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಈ ಸಂಬಂಧ ಗುರುವಾರ ಮೈಸೂರಿನಲ್ಲಿ ಮಾಡತನಾಡಿರುವ ಅವರು, ಒಂದೇ ದಿನ ಪ್ರಚಾರಕ್ಕೆ ಬರ್ತೇನೆ ಎಂದು ಹೇಳಿದ್ದ ಸಿದ್ದರಾಮಯ್ಯ ಅವರು ಈಗ ಪದೇಪದೆ ಬರ್ತಿದ್ದಾರೆ. ರಾಜ್‌ಕುಮಾರ್‌ ಕುಟುಂಬದ ಜತೆ ನನಗೆ ಅವಿನಾಭಾವ ಸಂಬಂಧವಿದೆ. ಪುನೀತ್ ಹೆಸರಿನಲ್ಲಿ ನಮ್ಮ ಕ್ಷೇತ್ರದಲ್ಲಿ ಬೃಹತ್ ಆಸ್ಪತ್ರೆ ಕಟ್ಟಿಸಿದ್ದೇನೆ. ಆದರೆ ನಟ ಶಿವ ರಾಜ್‌ಕುಮಾರ್ ಯಾಕೆ ಹೀಗೆ ಮಾಡಿದರು ಎಂದು ಗೊತ್ತಿಲ್ಲ. ಜನ ಸೇರಿಸಲು ಸಿದ್ದರಾಮಯ್ಯ ಸ್ಟಾರ್‌ಗಳ ಜೊತೆ ಬರುತ್ತಿದ್ದಾರೆ ಅಷ್ಟೇ ಎಂದು ಹೇಳಿದರು.

ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಮನೆಯ ಕೋಳಿ ಕೂಗಿದರೆ ಮಾತ್ರ ಬೆಳಕು ಹರಿಯುತ್ತೆ ಎಂಬಂತೆ ಹೇಳಿದ್ದಾರೆ. ಸಿದ್ದರಾಮಯ್ಯ ಮನಸ್ಸು ಮಾಡಿದ್ದರೆ ವರುಣ ಅಭಿವೃದ್ಧಿ ಮಾಡಬಹುದಿತ್ತು. ವರುಣದಲ್ಲಿ 1 ಕಾಲೇಜು ಇಲ್ಲ, ಆಸ್ಪತ್ರೆ ಇಲ್ಲ, ಸರಿಯಾದ ರಸ್ತೆಗಳಿಲ್ಲ. ಬಾದಾಮಿಯಲ್ಲೂ ಸಿದ್ದರಾಮಯ್ಯ ಯಾವುದೇ ಅಭಿವೃದ್ಧಿ ಮಾಡಲಿಲ್ಲ. ಜನರ ಋಣ ತೀರಿಸುವುದಕ್ಕೂ ಬದ್ಧತೆ ಬೇಕು. ಜನರ ಋಣ ತೀರಿಸುವ ಕೆಲಸವನ್ನು ನಾನು ಮಾಡಿದ್ದೇನೆ. ಎಲ್ಲದ್ದಕ್ಕೂ ನಾನೇ ಎಂಬುವುದನ್ನು ಸಿದ್ದರಾಮಯ್ಯ ಮೊದಲು ಬಿಡಲಿ ಎಂದು ಹೇಳಿದರು.

ಈ ಬಾರಿ ವರುಣ ಕ್ಷೇತ್ರದ ಜನತೆ ನನ್ನನ್ನು ಗೆಲ್ಲಿಸಬೇಕು, ಬಿಜೆಪಿಯನ್ನು ಬೆಂಬಲಿಸಬೇಕು. ವರುಣ ಕ್ಷೇತ್ರದ ಜನರು ಗೆಲ್ಲಿಸಿದರೆ ನಾನು ವರುಣದಲ್ಲೇ ಇರುತ್ತೇನೆ. ಇಲ್ಲೇ ಶಾಶ್ವತವಾಗಿ ಮನೆ ಮಾಡುತ್ತೇನೆ. ವರುಣವನ್ನು ಗೋವಿಂದರಾಜನಗರ ರೀತಿ ಅಭಿವೃದ್ಧಿಪಡಿಸುತ್ತೇನೆ. 15 ವರ್ಷಗಳ ಕಾಲ ಸಿದ್ದರಾಮಯ್ಯಗೆ ಅವಕಾಶ ಕೊಟ್ಟಿದ್ದೀರಾ. ಈ ಬಾರಿ ನನಗೆ ಅವಕಾಶ ನೀಡಿ ಎಂದರು. ವಿ. ಸೋಮಣ್ಣ, ಬಿಳುಗಲಿ, ತಾಯೂರು, ಗೆಜ್ಜಗನಹಳ್ಳಿಯಲ್ಲಿ ಪ್ರಚಾರ ಮಾಡಿದರು.

ಶಿವಣ್ಣನ ನಡೆಯ ಬಗ್ಗೆ ಪ್ರತಾಪ್‌ ಸಿಂಹ ಟ್ವಿಟ್‌

ಇನ್ನು ಸಿದ್ದರಾಮಯ್ಯ ಪರ ಶಿವರಾಜ್‌ಕುಮಾರ್‌ ಪ್ರಚಾರ ಕಣಕ್ಕೆ ಇಳಿಯುತ್ತಿದ್ದಂತೆ, ಸಂಸದ ಪ್ರತಾಪ್‌ ಸಿಂಹ ಸಹ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ʻಪುನೀತ್ ರಾಜಕುಮಾರ್ ಸರ್ ಹೆಸರಿನಲ್ಲಿ ಬಡವರಿಗಾಗಿ ಆಸ್ಪತ್ರೆ ಕಟ್ಟಿದ ಸೋಮಣ್ಣ, ಮನಮೆಚ್ಚಿ ಶ್ಲಾಘಿಸಿದ ರಾಘಣ್ಣ, ಸಿದ್ರಾಮಣ್ಣ ಪರವಾಗಿ ಪ್ರಚಾರಕ್ಕಿಳಿದ ಶಿವಣ್ಣ! ಅವರವರ ಭಾವ ಭಕುತಿಗೆ...ʼ ಎಂದು ಪ್ರತಾಪ್‌ ಸಿಂಹ ಬರೆದುಕೊಂಡಿದ್ದಾರೆ. ಇದರೊಂದಿಗೆ ಶಿವರಾಜ್‌ಕುಮಾರ್‌ ಅವರ ಪ್ರಚಾರದ ಫೋಟೋ ಹಾಗೂ ರಾಘವೇಂದ್ರ ರಾಜ್‌ಕುಮಾರ್‌ ಅವರು ಪುನೀತ್‌ ಹೆಸರಿನಲ್ಲಿ ಆಸ್ಪತ್ರೆ ಕಟ್ಟಿಸಿದ ಸೋಮಣ್ಣ ಅವರನ್ನು ಶ್ಲಾಘಿಸುತ್ತಿರುವ ವಿಡಿಯೋವನ್ನು ಟ್ವೀಟ್‌ ಮಾಡಿದ್ದಾರೆ.