ದಕ್ಷಿಣ ಕನ್ನಡದ ನೇತ್ರಾವತಿ ನದಿಯಲ್ಲಿ ಮಂಗಳೂರು ವಾಟರ್ ಮೆಟ್ರೋ ಯೋಜನೆ ಜಾರಿ; ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆ ಸಭೆಯಲ್ಲಿ ಅನುಮತಿ
ಕನ್ನಡ ಸುದ್ದಿ  /  ಕರ್ನಾಟಕ  /  ದಕ್ಷಿಣ ಕನ್ನಡದ ನೇತ್ರಾವತಿ ನದಿಯಲ್ಲಿ ಮಂಗಳೂರು ವಾಟರ್ ಮೆಟ್ರೋ ಯೋಜನೆ ಜಾರಿ; ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆ ಸಭೆಯಲ್ಲಿ ಅನುಮತಿ

ದಕ್ಷಿಣ ಕನ್ನಡದ ನೇತ್ರಾವತಿ ನದಿಯಲ್ಲಿ ಮಂಗಳೂರು ವಾಟರ್ ಮೆಟ್ರೋ ಯೋಜನೆ ಜಾರಿ; ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆ ಸಭೆಯಲ್ಲಿ ಅನುಮತಿ

ಕರ್ನಾಟಕದ ಕರಾವಳಿ ಭಾಗದಲ್ಲೂ ವಾಟರ್‌ ಮೆಟ್ರೋ ಆರಂಭಿಸಬೇಕು ಎನ್ನುವ ಬೇಡಿಕೆಗೆ ಬಲ ಬಂದಿದ್ದು, ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅನುಮತಿ ನೀಡಿದ್ದಾರೆ.

ಮಂಗಳೂರಲ್ಲಿ ವಾಟರ್‌ ಮೆಟ್ರೋ ಯೋಜನೆಗೆ ಅನುಮತಿ ದೊರೆತಿದೆ.
ಮಂಗಳೂರಲ್ಲಿ ವಾಟರ್‌ ಮೆಟ್ರೋ ಯೋಜನೆಗೆ ಅನುಮತಿ ದೊರೆತಿದೆ.

ಬೆಂಗಳೂರು: ಕೇರಳದ ನಂತರ ಕರ್ನಾಟಕ ಕರಾವಳಿ ಭಾಗದಲ್ಲೂ ವಾಟರ್ ಮೆಟ್ರೋ ಯೋಜನೆ ಜಾರಿಯಾಗಲಿದ್ದು, ಮಂಗಳೂರು ಸಮೀಪದಲ್ಲಿ ಇದನ್ನು ಅನುಷ್ಠಾನಗೊಳಿಸಲು ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಕಾವೇರಿ ನಿವಾಸದಲ್ಲಿ ನಡೆದ ಕರ್ನಾಟಕ ಜಲಸಾರಿಗೆ ಮಂಡಳಿಯ ಸಮಿತಿ ಸಭೆ ಅನುಮತಿ ನೀಡಿದೆ. ಮಂಗಳೂರಿನ ಗುರುಪುರ- ನೇತ್ರಾವತಿ ನದಿಯಲ್ಲಿ ಮಂಗಳೂರು ವಾಟರ್ ಮೆಟ್ರೋ ಯೋಜನೆ ಕಾರ್ಯಗತ ಗೊಳಿಸುವ ಪ್ರಸ್ತಾವನೆಗೆ ಅನುಮೋದನೆ ನೀಡಿದರು, ಕಳೆದ ತಿಂಗಳು ಮಂಡಿಸಿದ್ದ ಕರ್ನಾಟಕ ಬಜೆಟ್ ನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ವಾಟರ್ ಮೆಟ್ರೊ ಆರಂಭಿಸುವ ಘೋಷಣೆಯನ್ನು ಮಾಡಿದ ಚಟುವಟಿಕೆ ಗರಿಗೆದರಿದ್ದವು. ಈಗಿನ ಯೋಜನೆಯ ಪ್ರಕಾರವೇ ನಡೆದರೆ, 2026ರಲ್ಲಿ ಯಾವುದಾದರೂ ಮಂಗಳೂರಿನಲ್ಲಿ ವಾಟರ್ ಮೆಟ್ರೋ ಸೇವೆ ಆರಂಭಗೊಳ್ಳಲಿದೆ. ಬೆಳೆಯುತ್ತಿರುವ ಮಂಗಳೂರಿನ ಸಾರಿಗೆ ನಿಯಂತ್ರಣಕ್ಕೂ ಇದು ಸಹಕಾರಿಯಾಗಬಹುದು ಎನ್ನುವ ಅಭಿಪ್ರಾಯಗಳೂ ದಟ್ಟವಾಗಿವೆ.

ಹೇಗಿರಲಿದೆ ಯೋಜನೆ

ಮಂಗಳೂರಿನಲ್ಲಿ ವಾಟರ್ ಮೆಟ್ರೋ ಸ್ಟೇಷನ್ ಸ್ಥಾಪನೆಗೆ ಬೇಕಾದ ಜಾಗ ಕುರಿತು ಸರ್ವೆ ಇನ್ನಷ್ಟೇ ಆರಂಭವಾಗಬೇಕಿದೆ. ಮುಂದಿನ 25 ವರ್ಷಗಳಲ್ಲಿ ಮಂಗಳೂರು ನಗರದ ಬೆಳವಣಿಗೆಯ ಸಾಧ್ಯತೆ ಮತ್ತು ಬೇಡಿಕೆ ಆಧರಿಸಿ ಎಲ್ಲಿ ಸ್ಟೇಷನ್ ಮಾಡಿದರೆ ಒಳ್ಳೆಯದೋ ಅಲ್ಲಿ ಮೆಟ್ರೋ ಸ್ಟೇಷನ್ ನ ಮಾಡುವ ಬಗ್ಗೆ ಸರ್ವೆ ನಡೆಯಲಿದೆ.

ನೇತ್ರಾವತಿಯಿಂದ ಫಲ್ಗುಣಿ ನದಿಯ ಮರವುರುವರೆಗೆ 30 ಕಿಲೋಮೀಟರ್ ದೂರ ಇದೆ ಸಮುದ್ರದ ಹಿನ್ನಿರಿನಿಂದಾಗಿ ಅಂದರೆ ಸಮುದ್ರದ ಬ್ಯಾಕ್ ವಾಟರ್ ಇಂದಾಗಿ ವರ್ಷಪೂರ್ತಿ ನೀರು ಇರುತ್ತದೆ ಹೀಗಾಗಿ ಬಜಾಜ್ ಪ್ರದೇಶದಿಂದ ತೊಡಗಿ ನೇತ್ರಾವತಿ ನದಿ ಆಗಿ ಬೆಂಗ್ರೆ ಅಳಿವಿನ ಬಾಗಿಲು ಬೇಳೂರು ಸುಲ್ತಾನ್ ಬತ್ತೇರಿ ಕೂಳೂರು ಮರ ಊರು ಗುರುಪುರದವರೆಗೆ ಇಡೀ ಮಂಗಳೂರು ನಗರವನ್ನು ಸುತ್ತು ಹಾಕುವಂತೆ ಜಲ ಸಾರಿಗೆ ತರುವುದಕ್ಕೆ ಪ್ರಸ್ತಾಪ ಮಾಡಲಾಗಿದೆ.

ಇದರ ಮಧ್ಯೆ 17 ಕಡೆ ಮೆಟ್ರೋ ಸ್ಟೇಷನ್ ಮಾದರಿಯಲ್ಲಿ ಬೋಟ್ ನಿಂದ ಇಳಿದು ಹತ್ತುವುದಕ್ಕೆ ಹಾದಿಯುವುದಕ್ಕೂ ನಿಲ್ದಾಣ ನಿರ್ಮಿಸುವ ಯೋಜನೆಯೂ ಸರ್ಕಾರದ ಹಂತದಲ್ಲಿದೆ. ಈಗ ಅನುಮತಿ ನೀಡಿರುವುದರಿಂದ ಕೆಲವೇ ದಿನಗಳಲ್ಲಿ ಸ್ಪಷ್ಟ ಚಿತ್ರಣ ಸಿಗಬಹುದು.

ವಾಟರ್ ಮೆಟ್ರೋ ಸಾರಿಗೆಯಿಂದ ಮಂಗಳೂರಿನ ಹಳೆ ಮೀನುಗಾರಿಕಾ ಬಂದರು ರಸ್ತೆಯಲ್ಲಿ ಅತಿಯಾದ ದಟ್ಟಣೆ ತಪ್ಪಲಿದೆ ಎಂದು ನಂಬಲಾಗಿದೆ. ಸರಕು ಸಾಗಾಣಿಕೆಗಾಗಿ ರೋರು ಸೇವೆಗಳನ್ನು ಬಳಸಿಕೊಳ್ಳಲು ಅವಕಾಶ ಸಿಗಲಿದೆ ಎಂಬ ಲೆಕ್ಕಾಚಾರ ಇದೆ ಪ್ರಯಾಣಿಕರ ಸೇವೆ ಮಾದರಿಯಲ್ಲಿಯೇ ಸರಕು ಸಾಗಾಣಿಯ ಉದ್ದೇಶಕ್ಕೂ ಜಲ ಸಾರಿಗೆ ಎಂದು ಬಳಸಿಕೊಳ್ಳುವ ಕುರಿತು ಯೋಜಿಸಲಾಗುತ್ತಿದೆ.

ಕೇರಳದ ಕೊಚ್ಚಿ ಮಾದರಿಯಲ್ಲಿ ಮಂಗಳೂರು ನಗರವನ್ನು ನೇತ್ರಾವತಿ ಮತ್ತು ಪಲ್ಗುಣಿ ನದಿಗಳು ಸುತ್ತುವರಿದು ಹರಿಯುತ್ತಿರುವುದರಿಂದ ಇದೇ ಮಾರ್ಗದಲ್ಲಿ ವಾಟರ್ ಮೆಟ್ರೋ ಚಾಲ್ತಿಗೆ ತರಲು ಯೋಜನೆ ಹಾಕಲಾಗಿದೆ ರಾಷ್ಟ್ರೀಯ ಜಲ ಸಾರಿಗೆ ಯೋಜನೆ ಅಡಿ ಬಜಾಜ್ ನಿಂದ ಪಲ್ಗುಣಿ ನದಿ ಮೂಲಕ ಮರ ಊರು ಗುರುಪುರದವರೆಗೆ ಮೆಟ್ರೋ ಸಾರಿಗೆ ತರುವುದಕ್ಕೆ ಯೋಜನೆ ಆಗಲಿದೆ ಎನ್ನಲಾಗುತ್ತಿದೆ.

ಕೇರಳದಲ್ಲಿ ಹೇಗಿದೆ

ಕೇರಳ ರಾಜ್ಯದ ಕೊಚ್ಚಿನ್ ಭಾರತದ ಮೊದಲ ವಾಟರ್ ಮೆಟ್ರೋ ಹೊಂದಿರುವ ನಗರವಾಗಿದೆ 2023ರ ಏಪ್ರಿಲ್ 25ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇದನ್ನು ಲೋಕಾರ್ಪಣೆ ಮಾಡಿದ್ದರು. ಕೊಚ್ಚಿ ಜಲಸಾರಿಗೆಯಲ್ಲಿ 78 ಬೋಟ್ ವಾಟರ್ ಮೆಟ್ರೋ ಟರ್ಮಿನಲ್ ಒಳಗೊಂಡಿದ್ದು, ಕೊಚ್ಚಿಯನ್ನು ಆವರಿಸಿರುವ ವೆಂಬನಾಡ್ ಸರೋವರದಲ್ಲಿ ಬರುವ 10 ದ್ವೀಪಗಳನ್ನು ಇದು ಸಂಪರ್ಕಿಸಲಿದೆ. ಒಟ್ಟು 76 ಕಿಲೋಮೀಟರ್ ಉದ್ದಕ್ಕೆ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. ಸಂಪೂರ್ಣ ಏರ್ ಕಂಡೀಶನ್ ಇರುವ ಈ ಮೆಟ್ರೋ ಸಾರಿಗೆಯು ಕೊಚ್ಚಿ ಮೆಟ್ರೋ ರೈಲು ವ್ಯವಸ್ಥೆಯೊಂದಿಗೆ ಸಂಪರ್ಕ ಹೊಂದಿದ್ದು ಬಸ್ ಟರ್ಮಿನಲ್ ಮೆಟ್ರೋ ನೆಟ್‌ವರ್ಕ್‌ ಮತ್ತು ರೈಲ್ವೆ ಜೊತೆ ಕನೆಕ್ಟ್ ಆಗಿದೆ. ಕೊಚ್ಚಿ ವಾಟರ್ ಮೆಟ್ರೋದಲ್ಲಿ 100 ಮತ್ತು 50 ಜನರ ಸಾಮರ್ಥ್ಯದ ಎರಡು ಮಾದರಿಯ ಪ್ಯಾಸೆಂಜರ್ ಬೋಟ್ ಅನ್ನು ಅಳವಡಿಸಲಾಗಿದೆ.

ಸಿಎಂ ಸೂಚನೆ ಏನೇನು

ರಾಜ್ಯದ ಬಂದರುಗಳು ಅಭಿವೃದ್ಧಿ, ಜಲಸಾರಿಗೆ ಯೋಜನೆಗಳ ಪ್ರಗತಿ, ಸರಕು ಸಾಗಣೆಗೆ ಅವಶ್ಯವಿರುವ ಮೂಲ ಸೌಲಭ್ಯಗಳ ಬಗ್ಗೆ ಸಮಿತಿಯಲ್ಲಿ ಚರ್ಚಿಸಲಾಯಿತು. ಸಾಗರಮಾಲಾ ಯೋಜನೆಯಡಿಯಲ್ಲಿ ಮಂಗಳೂರಿನಲ್ಲಿ ಕರ್ನಾಟಕ ಜಲಸಾರಿಗೆ ತರಬೇತಿ ಕೇಂದ್ರವನ್ನು ಸ್ಥಾಪಿಸುವ ಪ್ರಸ್ತಾವನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಗೆ ನೀಡಿದರು.

ಪುನರ್ವಸತಿ, ಬಂದರು ಸಂಬಂಧಿತ ಕಾರ್ಯಾಚರಣೆಗಳಿಗೆ ಭೂಮಿ ಹಂಚಿಕೆ ಗುತ್ತಿಗೆ ಅವಧಿಯನ್ನು ಪರಿಶೀಲಿಸಿ ಪ್ರಸ್ತಾವನೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಿದ್ದು ಜತೆಗೆ ಅತಿಕ್ರಮಣ ಮಾಡಿಕೊಂಡಿರುವವರನ್ನು ಕೂಡಲೇ ಎತ್ತಂಗಡಿ ಮಾಡುವಂತೆ ಸಿಎಂ ಸೂಚಿಸಿದರು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಗುರುತಿಸಲಾಗಿರುವ ದ್ವೀಪಗಳ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಡ್ರೋಣ್ ಸರ್ವೇ ಮಾಡಿಸಿ. ಇನ್ನು ಮೂರು ತಿಂಗಳ ಒಳಗಾಗಿ ವರದಿ ನೀಡುವಂತೆ ಉತ್ತರ ಕನ್ನಡ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಆಂಧ್ರ ಪ್ರದೇಶ, ವಿಶಾಖಪಟ್ಟಣ, ಕೇರಳ, ತಮಿಳು ನಾಡು, ಗುಜರಾತ್ ಗಳಲ್ಲಿ ಬಂದರುಗಳು ಹೇಗೆ ಕಾರ್ಯನಿರ್ವ ಹಿಸುತ್ತಿವೆ ಎಂಬುದರ ಬಗ್ಗೆ ಅಧ್ಯಯನ ಮಾಡಿ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದು ಮುಂದಿನ ದಿನಗಳಲ್ಲಿ ರಾಜ್ಯದ ಬಂದರು ಅಭಿವೃದ್ಧಿಗೆ ಎಲ್ಲಾ ರೀತಿಯ ಸಹಕಾರ, ಸೌಲಭ್ಯ ನೀಡುವುದಾಗಿ ಭರವಸೆ ನೀಡಿದರು.

( ಪೂರಕ ಮಾಹಿತಿ:ಹರೀಶ ಮಾಂಬಾಡಿ. ಮಂಗಳೂರು)

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.