ತುಮಕೂರು ರೈಲ್ವೆ ನಿಲ್ದಾಣದ ಹೆಸರು ಬದಲಾವಣೆಗೆ ರಾಜ್ಯ ಸರ್ಕಾರ ಒಪ್ಪಿಗೆ; ಶ್ರೀ ಶಿವಕುಮಾರ ಸ್ವಾಮೀಜಿ ಹೆಸರಿಡಲು ನಿರ್ಧಾರ
ತುಮಕೂರು ರೈಲ್ವೆ ನಿಲ್ದಾಣಕ್ಕೆ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ರೈಲ್ವೆ ನಿಲ್ದಾಣ ಎಂದು ಮರುನಾಮಕರಣ ಮಾಡುವ ಪ್ರಸ್ತಾವಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.

ತುಮಕೂರು: ತುಮಕೂರು ರೈಲ್ವೆ ನಿಲ್ದಾಣಕ್ಕೆ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ರೈಲ್ವೆ ನಿಲ್ದಾಣ ಎಂದು ಮರುನಾಮಕರಣ ಮಾಡುವ ಪ್ರಸ್ತಾವಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಈ ನಿಲ್ದಾಣವು ಭಾರತೀಯ ರೈಲ್ವೆಯ ನೈಋತ್ಯ ರೈಲ್ವೆ ವಲಯದ ಅಡಿಯಲ್ಲಿ ಬರುತ್ತದೆ. ಏಪ್ರಿಲ್ 8 ರಂದು ಬರೆದ ಪತ್ರದಲ್ಲಿ, ರಾಜ್ಯ ಸರ್ಕಾರವು ಈ ಪ್ರಸ್ತಾಪವನ್ನು ಸಕಾರಾತ್ಮಕವಾಗಿ ಪರಿಗಣಿಸುವಂತೆ ಮತ್ತು ಈ ನಿಟ್ಟಿನಲ್ಲಿ ಅಗತ್ಯ ಅನುಮೋದನೆಗಳನ್ನು ನೀಡುವಂತೆ ಗೃಹ ಸಚಿವಾಲಯವನ್ನು ಕೋರಿದೆ.
ಶ್ರೀ ಸಿದ್ಧಗಂಗಾ ಮಠವು ರಾಜ್ಯದ ಎಲ್ಲಾ ಸಮುದಾಯಗಳ ಜನರ ಹೃದಯದಲ್ಲಿ ಬಹಳ ಪ್ರಮುಖ ಸ್ಥಾನವನ್ನು ಹೊಂದಿದೆ. ಸಿದ್ಧಗಂಗಾ ಮಠವು ಅನೇಕ ದಶಕಗಳಿಂದ ವಂಚಿತರು, ದೀನದಲಿತರು ಮತ್ತು ಇನ್ನೂ ಹಲವರಿಗೆ ಆಹಾರ, ವಸತಿ ಮತ್ತು ಶಿಕ್ಷಣವನ್ನು ಒದಗಿಸುವ ಮೂಲಕ ಅನೇಕರ ಉನ್ನತಿಗಾಗಿ ಉತ್ತಮ ಸೇವೆಯನ್ನು ಸಲ್ಲಿಸುತ್ತಿದೆ. ಆ ಕಾರಣಕ್ಕಾಗಿ ಶ್ರೀ ಶಿವಕುಮಾರ ಸ್ವಾಮೀಜಿ ರೈಲ್ವೆ ನಿಲ್ದಾಣ ಎಂದು ಮರುನಾಮಕರಣ ಮಾಡುವ ಪ್ರಸ್ತಾಪ ಇಡಲಾಗಿತ್ತು. ಇದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ಲಭ್ಯವಾಗಿದೆ.
"ಪದ್ಮಭೂಷಣ ಡಾ.ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳು 1930ರಲ್ಲಿ ಮಠದ ಮುಖ್ಯಸ್ಥರಾದರು. ಸುಮಾರು 87 ವರ್ಷಗಳ ಕಾಲ, ಅವರು ಮಾನವಕುಲಕ್ಕೆ ಉತ್ತಮ ಸೇವೆ ಸಲ್ಲಿಸಿದ್ದಾರೆ. ಅವರನ್ನು "ನಡೆದಾಡುವ ದೇವರು" ಎಂದು ಹಲವರು ಪ್ರೀತಿಯಿಂದ ಹಾಗೂ ಗೌರವದಿಂದ ಗುರುತಿಸುತ್ತಾರೆ. ಅವರ ನೇತೃತ್ವದ ಮಠವು ರಾಷ್ಟ್ರಪತಿಗಳು ಮತ್ತು ಭಾರತದ ಪ್ರಧಾನ ಮಂತ್ರಿಗಳಂತಹ ಅನೇಕ ಗಣ್ಯರಿಂದ ಮೆಚ್ಚುಗೆ ಪಡೆದಿದೆ. ಅವರಲ್ಲಿ ಹಲವು ಗಣ್ಯರು ಸಂಸ್ಥೆಗೆ ಭೇಟಿ ನೀಡಿದ್ದಾರೆ ಮತ್ತು ಮಹಾಸ್ವಾಮಿಗಳು ಸಲ್ಲಿಸಿದ ಅದ್ಭುತ ಸೇವೆಗಳನ್ನು ಶ್ಲಾಘಿಸಿದ್ದಾರೆ ಎಂದು ರಾಜ್ಯ ಸರ್ಕಾರ ಉಲ್ಲೇಖಿಸಿದೆ.
ಈ ಪ್ರಸ್ತಾಪವನ್ನು ಸಕಾರಾತ್ಮಕವಾಗಿ ಪರಿಗಣಿಸಿ, ಅಗತ್ಯ ಅನುಮೋದನೆಗಳಿಗೆ ಅನುಕೂಲವಾಗುವಂತೆ ಮತ್ತು ಕರ್ನಾಟಕ ರಾಜ್ಯ ಸರ್ಕಾರವು ಪ್ರಸ್ತಾಪಿಸಿದಂತೆ ತುಮಕೂರು ರೈಲ್ವೆ ನಿಲ್ದಾಣವನ್ನು ಡಾ.ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ರೈಲ್ವೆ ನಿಲ್ದಾಣ ಎಂದು ಮರುನಾಮಕರಣ ಮಾಡಲು ಅಧಿಸೂಚನೆ ಹೊರಡಿಸಲು ಭಾರತ ಸರ್ಕಾರದ ಗೃಹ ಸಚಿವಾಲಯವನ್ನು ಕೋರಲಾಗಿದ್ದು ಅನುಮತಿ ಲಭ್ಯವಾಗಿದೆ.

ವಿಭಾಗ