ಕರ್ನಾಟಕದಲ್ಲಿ ಸೋಲಾರ್ ಪ್ಯಾನೆಲ್ ಅಳವಡಿಸಲು ಸರ್ಕಾರಿ ಇಲಾಖೆಗಳ ನಿರಾಸಕ್ತಿ; ಕಡ್ಡಾಯವಾದರೂ ಮುತುವರ್ಜಿ ಕೊರತೆ
ಭಾರತದ ಎಲ್ಲಾ ಸರ್ಕಾರಿ ಸಂಸ್ಥೆಗಳು ಸೋಲಾರ್ ಫಲಕಗಳನ್ನು ಅಳವಡಿಸುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ಆದರೆ, ಇದರ ಪಾಲನೆ ಸಮರ್ಪಕವಾಗಿ ಆಗಿಲ್ಲ. ಕರ್ನಾಟಕದಲ್ಲೂ ಸೌರ ಫಲಕ ಅಳವಡಿಕೆಗೆ ಆಸಕ್ತಿ ಕಂಡುಬರುತ್ತಿಲ್ಲ.
ಬೆಂಗಳೂರು: ಕರ್ನಾಟಕ ಮಾತ್ರವಲ್ಲದೆ ಭಾರತದ ಎಲ್ಲಾ ಸರ್ಕಾರಿ ಸಂಸ್ಥೆಗಳು ಮತ್ತು ಖಾಸಗಿ ವಾಣಿಜ್ಯ ಸಂಸ್ಥೆಗಳ ಚಾವಣಿ ಮೇಲೆ ಸೌರಶಕ್ತಿ ಫಲಕಗಳನ್ನು (ಸೋಲಾರ್ ಪ್ಯಾನೆಲ್) ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಆದರೆ, ಇದನ್ನು ಗಂಭಿರವಾಗಿ ಪರಿಗಣಿಸಿದ ಇಲಾಖೆಗಳು ತುಂಬಾ ಕಡಿಮೆ. ರಾಜ್ಯದಲ್ಲಿ ಹೆಚ್ಚಿನ ಯಾವುದೇ ಕಚೇರಿಗಳು ಸೋಲಾರ್ ಪ್ಯಾನೆಲ್ ಅಳವಡಿಕೆಗೆ ಆಸಕ್ತಿ ತೋರಿಲ್ಲ. ಸ್ವಂತ ಬಳಕೆಗೆ ವಿದ್ಯುತ್ ಉತ್ಪಾದನೆ ಮಾಡಬಹುದಾದ ಆಯ್ಕೆ ಹಾಗೂ ಅವಕಾಶ ಸರ್ಕಾರಿ ಇಲಾಖೆಗಳಿಗೆ ಇದೆ. ಆದರೆ, ಎಲ್ಲೂ ಆಸಕ್ತಿ ಕಾಣಿಸುತ್ತಿಲ್ಲ. ಸರ್ಕಾರದ ನಿಯಮಗಳನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ.
ರಾಜ್ಯದಲ್ಲಿ ಬೆಸ್ಕಾಮ್ ಮತ್ತು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಲಿಮಿಟೆಡ್ (KREDL) ಮೇಲ್ಚಾವಣಿ ಸೋಲಾರ್ ಪ್ಯಾನೆಲ್ ಅಳವಡಿಸುವುದನ್ನು ಉತ್ತೇಜಿಸುವ ಮತ್ತು ಸಬ್ಸಿಡಿಗಳನ್ನು ನೀಡುವ ಮತ್ತು ಗ್ರಿಡ್-ಸಂಪರ್ಕಿತ ಸೌರ ಯೋಜನೆಗಳನ್ನು ನಿರ್ವಹಿಸುವಲ್ಲಿ ತೊಡಗಿರುವ ಸರ್ಕಾರಿ ಇಲಾಖೆಗಳಾಗಿವೆ.
2024ರ ಜುಲೈ 3ರಂದು, ದೇಶದ ಎಲ್ಲಾ ಸರ್ಕಾರಿ ಸಂಸ್ಥೆಗಳು ಸೋಲಾರ್ ಫಲಕಗಳನ್ನು ಅಳವಡಿಸುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ಆದರೆ, ಸರ್ಕಾರ ಆದೇಶ ಪಾಲನೆಯಾಗಿದ್ದು ಅಷ್ಟಕಷ್ಟೇ. ಎಷ್ಟೋ ಸರ್ಕಾರಿ ಇಲಾಖೆ ಕಚೇರಿಗಳಿಗೆ ಇಂಥಾ ಒಂದು ಕ್ರಮದ ಬಗ್ಗೆ ಮಾಹಿತಿ ಇಲ್ಲದಂತಿದೆ. ಹೀಗಾಗಿ ಸೌರ ಫಲಕ ಅಳವಡಿಕೆಗೆ ಆಸಕ್ತಿ ಕಂಡುಬರುತ್ತಿಲ್ಲ. ಈ ನಡುವೆ ರಸ್ತೆ ಸಾರಿಗೆ ಮತ್ತು ಆರೋಗ್ಯ ಇಲಾಖೆಗಳು ಸೋಲಾರ್ ಪ್ಯಾನೆಲ್ ಅಳವಡಿಕೆಗೆ ಆಸಕ್ತಿ ತೋರಿಸಿರುವ ಬಗ್ಗೆ ವರದಿಗಳಿವೆ.
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಮ್) ಮಿತಿಯೊಳಗೆ, ಇಂಧನ ಇಲಾಖೆಯಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, 14,944 ಕಟ್ಟಡಗಳಲ್ಲಿ ಸೌರಶಕ್ತಿ ಮೇಲ್ಚಾವಣಿ ಫಲಕಗಳನ್ನು ಅಳವಡಿಸಲಾಗಿದೆ. ಇದರಲ್ಲಿ 215 ಕಟ್ಟಡಗಳು ಮಾತ್ರ ಸರ್ಕಾರಿ ಕಚೇರಿಗಳಾಗಿವೆ. ಎಲ್ಲಾ ಕಟ್ಟಡಗಳ ಸೋಲಾರ್ ಫಲಕಗಳಿಂದ ಒಟ್ಟು 352.35 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದ್ದು, ಅದರಲ್ಲಿ ಕೇವಲ 15 ಮೆಗಾವ್ಯಾಟ್ ವಿದ್ಯುತ್ ಮಾತ್ರ ಸರ್ಕಾರಿ ಕಟ್ಟಡಗಳಿಂದ ಉತ್ಪಾದನೆಯಾಗುತ್ತಿದೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿತ್ತು.
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಅವರು, ಸರ್ಕಾರದಿಂದ ಸೋಲಾರ್ ಪ್ಯಾನೆಲ್ ಅಳವಡಿಕೆ ಕಡ್ಡಾಯ ಮಾಡಲಾಗಿದೆ. ಆದರೂ ಅಳವಡಿಸಿರುವ ಸಂಖ್ಯೆ ತುಂಬಾ ಕಡಿಮೆ ಎಂದು ಹೇಳಿದ್ದಾರೆ. ಎಷ್ಟು ಸರ್ಕಾರಿ ಮತ್ತು ಖಾಸಗಿ ಘಟಕಗಳು ಸೌರಶಕ್ತಿ ಫಲಕಗಳನ್ನು ಅಳವಡಿಸಿವೆ ಎಂಬುದನ್ನು ತಿಳಿಯಲು ನಾವು ಸಮೀಕ್ಷೆ ನಡೆಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
ಹಣಕಾಸಿನ ಕೊರತೆಯ ನೆಪ
ಸರ್ಕಾರಿ ಸಂಸ್ಥೆಗಳಿಂದ ಸೋಲಾರ್ ಅಳವಡಿಸುವ ಆಸಕ್ತಿ ಕಳಪೆಯಾಗಿದೆ. ಸೋಲಾರ್ ಪ್ಯಾನೆಲ್ ಅಳವಡಿಕೆ ಮತ್ತು ನಿರ್ವಹಣೆಗೆ ಹಣಕಾಸಿನ ಕೊರತೆ ಎಂದು ಸರ್ಕಾರಿ ಸಂಸ್ಥೆಗಳು ಕಾರಣ ನೀಡುತ್ತವೆ. ಭದ್ರತಾ ಠೇವಣಿಯನ್ನು ಯಾರು ಪಾವತಿಸುತ್ತಾರೆ ಎಂಬುದನ್ನು ಅವರು ಕೇಳುತ್ತಾರೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮನೆಮನೆಗಳಿಗೂ ಸೋಲಾರ್ ಪ್ಯಾನೆಲ್ ಅಳವಡಿಕೆಗೆ ಸರ್ಕಾರ ನೆರವಾಗುತ್ತಿದೆ. ಆದರೆ, ಇದಕ್ಕೂ ಆಸಕ್ತಿ ಕಡಿಮೆ. ಸೋಲಾರ್ ಫಲಕಗಳನ್ನು ಅಳವಡಿಸಲು ಸುಮಾರು 3 ಲಕ್ಷ ರೂ.ನಷ್ಟು ಖರ್ಚಾಗುತ್ತದೆ. ಕೇಬಲ್ಗಳು, ಇನ್ವರ್ಟರ್ ಸೇರಿದಂತೆ ಅಳವಡಿಕೆ ಕಾರ್ಯಕ್ಕೆ ದುಬಾರಿ ಖರ್ಚಿದೆ. ಅದರ ಬದಲು ಜನರು ಬೆಂಗಳೂರಿನಲ್ಲಿ ಸುಮಾರು 1,500 ರೂ.ಗಳಷ್ಟು ವಿದ್ಯುತ್ ಬಿಲ್ಗಳನ್ನು ಪಾವತಿಸುವುದೇ ಉತ್ತಮ ಎನ್ನುತ್ತಿದ್ದಾರೆ ಎಂದು ಬೆಸ್ಕಾಮ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇನ್ನು ಮನೆಗಳಲ್ಲಿ ಸೋಲಾರ್ ಅಳವಡಿಸಲು ಜನರ ಹಿಂದೇಟಿಗೆ ಕರ್ನಾಟಕ ಸರ್ಕಾರದ ಯೋಜನೆ ಕೂಡಾ ಒಂದು ಕಾರಣ. ಗೃಹ ಜ್ಯೋತಿ ಯೋಜನೆಯಿಂದಾಗಿ ಹೇಗೂ ವಿದ್ಯುತ್ ಉಚಿತ. ಹೀಗಿರುವಾಗ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸೌರ ಯೋಜನೆಗಳನ್ನು ಜನರು ಆಸಕ್ತಿಯಿಂದ ಮಾಡಿಸುವ ಸಾಧ್ಯತೆ ಇಲ್ಲ.