ಪರಿಶಿಷ್ಟ ಜಾತಿ ಒಳಮೀಸಲಾತಿ: ಪರಿಶಿಷ್ಟ ಜಾತಿ, ಉಪ ಜಾತಿ ಸಮಗ್ರ ಸಮೀಕ್ಷೆ 2025ರಲ್ಲಿ 15 ಸ್ವರೂಪದ ತಾರತಮ್ಯ ಮಾಹಿತಿ ಸಂಗ್ರಹ, ಅವುಗಳ ವಿವರ
ಕನ್ನಡ ಸುದ್ದಿ  /  ಕರ್ನಾಟಕ  /  ಪರಿಶಿಷ್ಟ ಜಾತಿ ಒಳಮೀಸಲಾತಿ: ಪರಿಶಿಷ್ಟ ಜಾತಿ, ಉಪ ಜಾತಿ ಸಮಗ್ರ ಸಮೀಕ್ಷೆ 2025ರಲ್ಲಿ 15 ಸ್ವರೂಪದ ತಾರತಮ್ಯ ಮಾಹಿತಿ ಸಂಗ್ರಹ, ಅವುಗಳ ವಿವರ

ಪರಿಶಿಷ್ಟ ಜಾತಿ ಒಳಮೀಸಲಾತಿ: ಪರಿಶಿಷ್ಟ ಜಾತಿ, ಉಪ ಜಾತಿ ಸಮಗ್ರ ಸಮೀಕ್ಷೆ 2025ರಲ್ಲಿ 15 ಸ್ವರೂಪದ ತಾರತಮ್ಯ ಮಾಹಿತಿ ಸಂಗ್ರಹ, ಅವುಗಳ ವಿವರ

ಪರಿಶಿಷ್ಟ ಜಾತಿ ಒಳಮೀಸಲಾತಿ: ಪರಿಶಿಷ್ಟ ಜಾತಿ, ಉಪ ಜಾತಿ ಸಮಗ್ರ ಸಮೀಕ್ಷೆ 2025 ಇಂದು (ಮೇ 5) ಶುರುವಾಗಿದ್ದು, ಕುಟುಂಬದ ಸದಸ್ಯರ ವಿವರ, ಶೈಕ್ಷಣಿಕ, ಆರ್ಥಿಕ, ಔದ್ಯೋಗಿಕ, ಸರ್ಕಾರಿ ಸವಲತ್ತುಗಳು, ಮೂಲಸೌಕರ್ಯ, 15 ಸ್ವರೂಪದ ತಾರತಮ್ಯ ಮಾಹಿತಿ ಸಂಗ್ರಹವೂ ಸೇರಿ ಸಮಗ್ರ ಮಾಹಿತಿಯನ್ನು ಕಲೆ ಹಾಕಲು ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ನಿವೃತ್ತ ನ್ಯಾಯಮೂರ್ತಿ ಹೆಚ್‌ ಎನ್‌ ನಾಗಮೋಹನದಾಸ್‌ ನೇತೃತ್ವದ ಏಕ ಸದಸ್ಯ ವಿಚಾರಣಾ ಆಯೋಗದ ಶಿಫಾರಸು ಪ್ರಕಾರ, ಈ ಸಮೀಕ್ಷೆಯಲ್ಲಿ ಜಾತಿ ತಾರತಮ್ಯದ ಮಾಹಿತಿ ಕಲೆ ಹಾಕಲಾಗುತ್ತಿದ್ದು, ಅದರ ಆಧಾರದ ಮೇಲೆ ಒಳಮೀಸಲು ಸೌಲಭ್ಯ ಕಲ್ಪಿಸುವುದಕ್ಕೆ ಸರ್ಕಾರ ಚಿಂತನೆ ನಡೆಸಿದೆ.
ನಿವೃತ್ತ ನ್ಯಾಯಮೂರ್ತಿ ಹೆಚ್‌ ಎನ್‌ ನಾಗಮೋಹನದಾಸ್‌ ನೇತೃತ್ವದ ಏಕ ಸದಸ್ಯ ವಿಚಾರಣಾ ಆಯೋಗದ ಶಿಫಾರಸು ಪ್ರಕಾರ, ಈ ಸಮೀಕ್ಷೆಯಲ್ಲಿ ಜಾತಿ ತಾರತಮ್ಯದ ಮಾಹಿತಿ ಕಲೆ ಹಾಕಲಾಗುತ್ತಿದ್ದು, ಅದರ ಆಧಾರದ ಮೇಲೆ ಒಳಮೀಸಲು ಸೌಲಭ್ಯ ಕಲ್ಪಿಸುವುದಕ್ಕೆ ಸರ್ಕಾರ ಚಿಂತನೆ ನಡೆಸಿದೆ.

ಪರಿಶಿಷ್ಟ ಜಾತಿ ಒಳಮೀಸಲಾತಿ: ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ, ಉಪ ಜಾತಿ ಸಮಗ್ರ ಸಮೀಕ್ಷೆ 2025 ಇಂದು (ಮೇ 5) ಶುರುವಾಗಿದ್ದು ಮೇ 21ರ ತನಕ ಮೂರು ಹಂತಗಳಲ್ಲಿ ನಡೆಯಲಿದೆ. ಈ ಸಮೀಕ್ಷೆ ನಡೆಸುವವರು ಪರಿಶಿಷ್ಟ ಜಾತಿಯವರ ಮನೆ–ಮನೆಗೆ ಭೇಟಿ ನೀಡಿ ದತ್ತಾಂಶ ಸಂಗ್ರಹಿಸುವುದಕ್ಕೆ ಅನುಕೂಲವಾಗುವಂತೆ ಸರ್ಕಾರ ಆ್ಯಂಡ್ರಾಯ್ಡ್‌ ಆ್ಯಪ್‌ ಅಭಿವೃದ್ಧಿಪಡಿಸಿದೆ. ನಿವೃತ್ತ ನ್ಯಾಯಮೂರ್ತಿ ಹೆಚ್‌ ಎನ್‌ ನಾಗಮೋಹನದಾಸ್‌ ನೇತೃತ್ವದ ಏಕ ಸದಸ್ಯ ವಿಚಾರಣಾ ಆಯೋಗದ ಶಿಫಾರಸು ಪ್ರಕಾರ, ಈ ಸಮೀಕ್ಷೆಯಲ್ಲಿ ಜಾತಿ ತಾರತಮ್ಯದ ಮಾಹಿತಿ ಕಲೆ ಹಾಕಲಾಗುತ್ತಿದ್ದು, ಅದರ ಆಧಾರದ ಮೇಲೆ ಒಳಮೀಸಲು ಸೌಲಭ್ಯ ಕಲ್ಪಿಸುವುದಕ್ಕೆ ಸರ್ಕಾರ ಚಿಂತನೆ ನಡೆಸಿದೆ.

ಪರಿಶಿಷ್ಟ ಜಾತಿ, ಉಪ ಜಾತಿ ಸಮಗ್ರ ಸಮೀಕ್ಷೆ 2025 ಆ್ಯಂಡ್ರಾಯ್ಡ್‌ ಆ್ಯಪ್‌ 17 ವಿಂಡೋ

ಪರಿಶಿಷ್ಟ ಜಾತಿ, ಉಪ ಜಾತಿ ಸಮಗ್ರ ಸಮೀಕ್ಷೆಗೆ ಒಳಪಡುವವರು ಆಧಾರ್/ಪಡಿತರ ಚೀಟಿ ನೀಡಿ ನೋಂದಣಿ ಮಾಡಿಕೊಂಡ ನಂತರ ಅವರ ಮತ್ತು ಕುಟುಂಬದವರ ವೈಯಕ್ತಿಕ ವಿವರ ಒದಗಿಸಬೇಕಾಗುತ್ತದೆ. ಕುಟುಂಬದ ಸದಸ್ಯರ ವಿವರ, ಶೈಕ್ಷಣಿಕ, ಆರ್ಥಿಕ, ಔದ್ಯೋಗಿಕ, ಸರ್ಕಾರಿ ಸವಲತ್ತುಗಳು, ಮೂಲಸೌಕರ್ಯಗಳು ಸೇರಿ ಸಮಗ್ರ ಮಾಹಿತಿಯನ್ನು ಕಲೆ ಹಾಕಲು ಈ ಆ್ಯಪ್‌ನಲ್ಲಿ ಒಟ್ಟು 17 ವಿಂಡೋಗಳನ್ನು ರೂಪಿಸಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಪರಿಶಿಷ್ಟ ಜಾತಿ ಜನರು, ಜಾತಿಯ ಕಾರಣಕ್ಕೆ ಸಾಮಾಜಿಕ ತಾರತಮ್ಯಕ್ಕೆ ಗುರಿಯಾದುದರ ಬಗ್ಗೆ ಮಾಹಿತಿ ಕಲೆಹಾಕುವುದಕ್ಕೆ ಆ್ಯಂಡ್ರಾಯ್ಡ್‌ ಆ್ಯಪ್‌ನ 16ನೇ ವಿಂಡೋವನ್ನು ಮೀಸಲಿಡಲಾಗಿದೆ. ಇದರಲ್ಲಿ ‘ಯಾವುದಾದರೂ ಸಾಮಾಜಿಕ ತಾರತಮ್ಯವನ್ನು ಕುಟುಂಬವು ಎದುರಿಸಿದೆಯೇ ಎಂಬ ಪ್ರಶ್ನೆ ಇದ್ದು, ಸಮೀಕ್ಷೆ ನಡೆಸುವವರು ಇದನ್ನು ಕೇಳಿದಾಗ ಆ ಕುಟುಂಬದವರು ಹೌದು ಎಂದು ಉತ್ತರಿಸಿದರೆ ಆಗ, ಅದರಲ್ಲಿರುವ ಉಪವಿಂಡೋ ತೆರೆದುಕೊಳ್ಳುತ್ತದೆ. ಅದರಲ್ಲಿ 15 ತಾರತಮ್ಯ ಸ್ವರೂಪಗಳ ವಿವರ ತೆರೆದುಕೊಳ್ಳುತ್ತದೆ. ಈ ದತ್ತಾಂಶಗಳನ್ನು ಸಮೀಕ್ಷೆ ನಡೆಸುವವರು ಸಂಗ್ರಹಿಸಿ ಸರ್ಕಾರಕ್ಕೆ ಒದಗಿಸುತ್ತಾರೆ. ಈ ದತ್ತಾಂಶವನ್ನು ಆಧಾರವಾಗಿ ಇಟ್ಟುಕೊಂಡು ಒಳಮೀಸಲಾತಿಯನ್ನು ಸರ್ಕಾರ ನಿರ್ಧರಿಸಲಿದೆ ಎಂದು ಮೂಲಗಳು ತಿಳಿಸಿವೆ.

ಪರಿಶಿಷ್ಟ ಜಾತಿ, ಉಪ ಜಾತಿ ಸಮಗ್ರ ಸಮೀಕ್ಷೆ 2025ರಲ್ಲಿ 15 ಸ್ವರೂಪದ ತಾರತಮ್ಯ ವಿವರ

ಪರಿಶಿಷ್ಟ ಜಾತಿ, ಉಪ ಜಾತಿ ಸಮಗ್ರ ಸಮೀಕ್ಷೆ 2025ರ ಆ್ಯಂಡ್ರಾಯ್ಡ್‌ ಆ್ಯಪ್‌ನ 16ನೇ ವಿಂಡೋದ ಉಪವಿಂಡೋದಲ್ಲಿ 15 ಸ್ವರೂಪದ ತಾರತಮ್ಯಗಳನ್ನು ಆಯ್ಕೆ ಮಾಡಲು ಅವಕಾಶವಿದೆ.

ಪರಿಶಿಷ್ಟ ಜಾತಿ, ಉಪ ಜಾತಿ ಸಮಗ್ರ ಸಮೀಕ್ಷೆ 2025ರಲ್ಲಿ ಕೇಳಲಾಗುವ ಆಯ್ಕೆಗಳಿವು -

1) ಹಳ್ಳಿಗಳ ಟೀ ಸ್ಟಾಲ್‌ಗಳಲ್ಲಿ ಪ್ರತ್ಯೇಕ ಲೋಟ/ಕಪ್‌ ನೀಡಿ ತಾರತಮ್ಯ ತೋರುವುದು

2) ರೆಸ್ಟೋರೆಂಟ್‌ಗಳಲ್ಲಿ ಪ್ರತ್ಯೇಕ ಆಸನ ನೀಡಿ, ಪ್ರತ್ಯೇಕಿಸುವುದು

3) ಇತರ ಜಾತಿ ಸಮುದಾಯಗಳ ಸದಸ್ಯರೊಂದಿಗೆ ಆಹಾರ ಸೇವಿಸುವುದಕ್ಕೆ ನಿಷೇಧ

4) ಹಳ್ಳಿಗಳಲ್ಲಿ ಹಬ್ಬ, ಕಾರ್ಯಕ್ರಮಗಳಲ್ಲಿ ಆಸನ ಮತ್ತು ಆಹಾರ ವ್ಯವಸ್ಥೆಯಲ್ಲಿ ಪ್ರತ್ಯೇಕತೆ

5) ಸಾರ್ವಜನಿಕ ಪೂಜಾ ಸ್ಥಳಗಳ ಪ್ರವೇಶಕ್ಕೆ ನಿಷೇಧ

6) ಸಾರ್ವಜನಿಕ ರಸ್ತೆಗಳ ಬಳಕೆಯ ಮೇಲೆ ಪ್ರತಿಬಂಧಗಳು

7) ಶಾಲೆಗಳಲ್ಲಿ ಆಸನಗಳ ವ್ಯವಸ್ಥೆಯಲ್ಲಿ ಭೇದಭಾವ ಹಾಗೂ ಪ್ರತ್ಯೇಕತೆ

8) ಉಚ್ಚ ಜಾತಿಯ ಸದಸ್ಯರ ಎದುರಿಗೆ ಚಪ್ಪಲಿ ಧರಿಸುವುದು ಅಥವಾ ಛತ್ರಿ ಉಪಯೋಗಿಸುವುದಕ್ಕೆ ಪ್ರತಿಬಂಧ ವಿಧಿಸಿದ ಪ್ರಸಂಗ

9) ಸಾರ್ವಜನಿಕ ಸವಲತ್ತು/ಸಂಪನ್ಮೂಲಗಳ (ಬಾವಿ, ಕೊಳ, ದೇವಾಲಯ, ಇತ್ಯಾದಿ) ಬಳಕೆ ಮಾಡದಂತೆ ತಡೆದಿರುವ ಪ್ರಸಂಗ

10) ಬಲವಂತದ ಕರ್ತವ್ಯ ನಿರ್ವಹಿಸಲು ನಿರಾಕರಿಸಿದ್ದಕ್ಕೆ ಉಚ್ಚ ಸಮುದಾಯಗಳಿಂದ ಸಾಮಾಜಿಕ ಬಹಿಷ್ಕಾರ

11) ಬೇರೆ ಜಾತಿಯವರ ಮನೆ ಪ್ರವೇಶ ಮಾಡದಂತೆ ಪ್ರತಿಬಂಧ

12) ಸಮಾಧಿ/ಸ್ಮಶಾನ ಸ್ಥಳಗಳಲ್ಲಿ ಪ್ರತ್ಯೇಕತೆ

13) ಜೀತ ಹಾಗೂ ಋಣಬಂಧಿತ ಕಾರ್ಮಿಕ ಪದ್ಧತಿ

14) ನೀವು ಯಾವುದಾದರೂ ವಿಮುಕ್ತ ಬುಡಕಟ್ಟು (ಅಪರಾಧಿಕ ಬುಡಕಟ್ಟು) ಸಮುದಾಯಕ್ಕೆ ಸೇರಿದವರೇ? ಹಾಗಿದ್ದರೆ ಅದನ್ನು ತಿಳಿಸಿ.

15) ಮೇಲಿನ ಯಾವುವೂ ಅಲ್ಲದಿದ್ದರೆ, ತಾರತಮ್ಯದ ಇತರೆ ಸ್ವರೂಪಗಳಿದ್ದರೆ ಅವುಗಳ ವಿವರ ಕೊಡಿ.

ಯಾವ ರೀತಿ ತಾರತಮ್ಯಕ್ಕೆ ಗುರಿ ಮಾಡಲಾಯಿತು ಎಂಬ ವಿವರಣೆಗೂ ಅವಕಾಶ

ಪರಿಶಿಷ್ಟ ಜಾತಿ, ಉಪ ಜಾತಿ ಸಮಗ್ರ ಸಮೀಕ್ಷೆ 2025ರಲ್ಲಿ ಭಾಗವಹಿಸುವವರು ತಾವು ಎದುರಿಸಿದ ತಾರತಮ್ಯದ ಸ್ವರೂಪವನ್ನು ಆಯ್ಕೆ ಮಾಡಬಹುದು. ಅದರ ಉಲ್ಲೇಖ ಉಪವಿಂಡೋದ ಪಟ್ಟಿಯಲ್ಲಿ ಅವರು ಹೇಳಿದ ತಾರತಮ್ಯ ಇಲ್ಲದೇ ಇದ್ದರೆ ಆಗ, ‘ಹೇಗೆ, ಯಾವ ರೀತಿಯಲ್ಲಿ ತಾರತಮ್ಯಕ್ಕೆ ಗುರಿ ಮಾಡಲಾಯಿತು’ ಎಂಬುದನ್ನು ವಿವರಿಸುವುದಕ್ಕೂ ಅವಕಾಶವಿದೆ. ಶಿಕ್ಷಕರು, ಶಿಕ್ಷಣ ಸಂಸ್ಥೆ ಬೋಧಕ ಸಿಬ್ಬಂದಿ ಹಾಗೂ ಸ್ಥಳೀಯ ಸಂಸ್ಥೆಯ ಇತರೆ ಸಿಬ್ಬಂದಿ ಈ ಸಮೀಕ್ಷೆ ನಡೆಸಲು ಪರಿಶಿಷ್ಟ ಜಾತಿಯವರ ಮನೆ ಮನೆಗೆ ಹೋಗುತ್ತಿದ್ದಾರೆ. ಅವರಿಗೆ ಈಗಾಗಲೇ ತರಬೇತಿ ಹಾಗೂ ಆ್ಯಪ್‌ ಬಳಕೆ ಪ್ರಾತ್ಯಕ್ಷಿಕೆ ನೀಡಲಾಗಿದೆ. ಅವರು ತಾರತಮ್ಯ ಕುರಿತಾದ ಪ್ರಶ್ನೆಗಳನ್ನು ಸರಿಯಾಗಿ ವಿವರಿಸಬೇಕು. ಉದ್ಯೋಗ, ಶಿಕ್ಷಣ, ಸಾಮಾಜಿಕ, ಆರ್ಥಿಕ ವಿವರಗಳ ಸರಿಯಾದ ಮಾಹಿತಿಯನ್ನು ಕಲೆಹಾಕಬೇಕು. ಸಮೀಕ್ಷೆಗೆ ಒಳಪಡುವವರು ಈ ಮಾಹಿತಿ ಹಂಚಿಕೊಳ್ಳಲು ಹಿಂದೇಟು ಹಾಕಬಹುದು. ಅದರ ಮಹತ್ವವನ್ನು ಅರ್ಥಮಾಡಿಸಿ, ಮಾಹಿತಿಯನ್ನು ಕಲೆಹಾಕಬೇಕು ಎಂದು ಸರ್ಕಾರ ಸ್ಪಷ್ಟವಾಗಿ ಸೂಚಿಸಿದೆ.

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.