ಜಾತಿ ಮೀಸಲಾತಿ ಸಮೀಕ್ಷೆ: ಪರಿಶಿಷ್ಟ ಜಾತಿ ಒಳ ಮೀಸಲಾತಿಗಾಗಿ ಜಾತಿ ತಾರತಮ್ಯದ ದತ್ತಾಂಶ ಸಂಗ್ರಹ ಇಂದು ಶುರು
ಕನ್ನಡ ಸುದ್ದಿ  /  ಕರ್ನಾಟಕ  /  ಜಾತಿ ಮೀಸಲಾತಿ ಸಮೀಕ್ಷೆ: ಪರಿಶಿಷ್ಟ ಜಾತಿ ಒಳ ಮೀಸಲಾತಿಗಾಗಿ ಜಾತಿ ತಾರತಮ್ಯದ ದತ್ತಾಂಶ ಸಂಗ್ರಹ ಇಂದು ಶುರು

ಜಾತಿ ಮೀಸಲಾತಿ ಸಮೀಕ್ಷೆ: ಪರಿಶಿಷ್ಟ ಜಾತಿ ಒಳ ಮೀಸಲಾತಿಗಾಗಿ ಜಾತಿ ತಾರತಮ್ಯದ ದತ್ತಾಂಶ ಸಂಗ್ರಹ ಇಂದು ಶುರು

ಜಾತಿ ಮೀಸಲಾತಿ ಸಮೀಕ್ಷೆ: ನಿವೃತ್ತ ನ್ಯಾಯಮೂರ್ತಿ ಹೆಚ್‌ ಎನ್‌ ನಾಗಮೋಹನದಾಸ್‌ ನೇತೃತ್ವದ ಏಕ ಸದಸ್ಯ ವಿಚಾರಣಾ ಆಯೋಗವು, ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ–2025ರ ಮೊದಲ ಹಂತದ ಸಮೀಕ್ಷೆ ಇಂದಿನಿಂದ ಮೇ 17ರ ತನಕ ನಡೆಯಲಿದೆ. ಈ ಸಂಬಂಧ ವಿವರ ಇಲ್ಲಿದೆ.

 ಪರಿಶಿಷ್ಟ ಜಾತಿ ಒಳ ಮೀಸಲಾತಿಗಾಗಿ ಜಾತಿ ತಾರತಮ್ಯದ ದತ್ತಾಂಶ ಸಂಗ್ರಹ ಇಂದು ಶುರು
ಪರಿಶಿಷ್ಟ ಜಾತಿ ಒಳ ಮೀಸಲಾತಿಗಾಗಿ ಜಾತಿ ತಾರತಮ್ಯದ ದತ್ತಾಂಶ ಸಂಗ್ರಹ ಇಂದು ಶುರು

ಜಾತಿ ಮೀಸಲಾತಿ ಸಮೀಕ್ಷೆ: ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ ಮೀಸಲಾತಿಯಲ್ಲಿ ಒಳಮೀಸಲಾತಿ ಕಲ್ಪಿಸುವ ಉದ್ದೇಶದ ಪರಿಶಿಷ್ಟ ಜಾತಿಗಳ ದತ್ತಾಂಶ ಸಂಗ್ರಹ ಕಾರ್ಯ ಇಂದು (ಮೇ 5) ಶುರುವಾಗುತ್ತಿದೆ. ಇದರಲ್ಲಿ ಜಾತಿ ತಾರತಮ್ಯದ ಮಾಹಿತಿ ಕಲೆ ಹಾಕಲಾಗುತ್ತಿದ್ದು, ಅದರ ಆಧಾರದ ಮೇಲೆ ಒಳಮೀಸಲು ಸೌಲಭ್ಯ ಕಲ್ಪಿಸುವ ಚಿಂತನೆ ಸರ್ಕಾರದ್ದು. ನಿವೃತ್ತ ನ್ಯಾಯಮೂರ್ತಿ ಹೆಚ್‌ ಎನ್‌ ನಾಗಮೋಹನದಾಸ್‌ ನೇತೃತ್ವದ ಏಕ ಸದಸ್ಯ ವಿಚಾರಣಾ ಆಯೋಗವು, ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ–2025ರ ರೂಪುರೇಖೆಗಳನ್ನು ಸಿದ್ಧಪಡಿಸಿದೆ. ಮೂರು ಹಂತಗಳಲ್ಲಿ ಪರಿಶಿಷ್ಟ ಜಾತಿ, ಉಪ ಜಾತಿ ಸಮಗ್ರ ಸಮೀಕ್ಷೆ 2025 ನಡೆಯಲಿದ್ದು, ಮೊದಲ ಹಂತ ಇಂದಿನಿಂದ (ಮೇ 5) 17ರ ತನಕ ನಡೆಯಲಿದೆ.

3 ಹಂತಗಳಲ್ಲಿ ಪರಿಶಿಷ್ಟ ಜಾತಿ, ಉಪ ಜಾತಿ ಸಮಗ್ರ ಸಮೀಕ್ಷೆ 2025

ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನದಾಸ್‌ ನೇತೃತ್ವದ ಏಕ ಸದಸ್ಯ ವಿಚಾರಣಾ ಆಯೋಗ ಶಿಫಾರಸು ಪ್ರಕಾರ, ಪರಿಶಿಷ್ಟ ಜಾತಿ, ಉಪ ಜಾತಿ ಸಮಗ್ರ ಸಮೀಕ್ಷೆ 2025 ಅನ್ನು ಮೂರು ಹಂತಗಳಲ್ಲಿ ನಡೆಸಲಾಗುತ್ತಿದೆ. ಮೊಬೈಲ್ ಆ್ಯಪ್‌ ಬಳಸಿ ಸಮೀಕ್ಷೆ ನಡೆಸಲಾಗುತ್ತಿದೆ. 3 ಹಂತಗಳ ವಿವರ ಹೀಗಿದೆ -

1) ಮನೆ ಮನೆ ತೆರಳಿ ದತ್ತಾಂಶ ಸಂಗ್ರಹ: ಮೊದಲ ಹಂತದಲ್ಲಿ ಮೇ 5 ರಿಂದ ಮೇ 17 ರ ತನಕ ಗಣತಿದಾರರು ಮನೆ ಮನೆಗೆ ತೆರಳಿ ದತ್ತಾಂಶಗಳನ್ನು ಸಂಗ್ರಹಿಸಲಿದ್ದಾರೆ. ಇದರಲ್ಲಿ ಅವರು ಪರಿಶಿಷ್ಟ ಜಾತಿಯವರ ಉಪ ಜಾತಿ ಮತ್ತು ಇತರೆ ಮಾಹಿತಿಗಳನ್ನು ಸಂಗ್ರಹಿಸುವರು.

2) ಮತಗಟ್ಟೆವಾರು ವಿಶೇಷ ಶಿಬಿರ: ಎರಡನೇ ಹಂತದಲ್ಲಿ ಮೇ 19 ರಿಂದ 21ರ ತನಕ ಮತಗಟ್ಟೆ ಪ್ರದೇಶವಾರು ವಿಶೇಷ ಶಿಬಿರಗಳನ್ನು ಏರ್ಪಡಿಸಿ ಮಾಹಿತಿ ನೀಡಲು ಅವಕಾಶ ನೀಡಲಾಗುತ್ತದೆ. ಸಮೀಕ್ಷೆ ನಡೆಸುವವರು ಮನೆಗೆ ಬಂದಾಗ ಮಾಹಿತಿ ಒದಗಿಸಲು ಸಾಧ್ಯವಾಗದೇ ಇದ್ದ ಪರಿಶಿಷ್ಟ ಜಾತಿಯವರು ಈ ಶಿಬಿರಕ್ಕೆ ತೆರಳಿ ಮಾಹಿತಿ ಒದಗಿಸಬೇಕಾಗುತ್ತದೆ.

3) ಮೊಬೈಲ್ ಆಪ್‌ ಮೂಲಕ ಸ್ವಯಂಘೋಷಣೆ: ಮೊದಲ ಎರಡೂ ಹಂತಗಳಲ್ಲಿ ಸಮೀಕ್ಷೆಯಲ್ಲಿ ಭಾಗವಹಿಸುವುದಕ್ಕೆ ಸಾಧ್ಯವಾಗದೇ ಬಾಕಿಯಾದವರು ಮೂರನೇ ಹಂತದಲ್ಲಿ ಮೇ 19 ರಿಂದ 21ರ ತನಕ ಸಮೀಕ್ಷೆಯಲ್ಲಿ ಸ್ವಯಂ ಭಾಗವಹಿಸಬಹುದು. ಅಂಥವರು ಆನ್‌ಲೈನ್ ಮೂಲಕ ಸ್ವಯಂ ಘೋ‍ಷಣೆ ಮಾಡಿಕೊಂಡು ಸಮೀಕ್ಷೆಗೆ ಮಾಹಿತಿ ಒದಗಿಸಬಹುದು. ಇದಕ್ಕಾಗಿ ಅವರು ಆಧಾರ್ ಸಂಖ್ಯೆ ಮತ್ತು ಜಾತಿ ಪ್ರಮಾಣಪತ್ರದ ಆರ್‌ಡಿ ಸಂಖ್ಯೆ ನೀಡಬೇಕಾದ್ದು ಕಡ್ಡಾಯ.

ಪರಿಶಿಷ್ಟ ಜಾತಿ, ಉಪ ಜಾತಿ ಸಮಗ್ರ ಸಮೀಕ್ಷೆ 2025 ಆ್ಯಂಡ್ರಾಯ್ಡ್‌ ಆ್ಯಪ್‌

ಸಮೀಕ್ಷೆ ನಡೆಸುವವರು ಮನೆ–ಮನೆಗೆ ಭೇಟಿ ನೀಡಿ ದತ್ತಾಂಶ ಸಂಗ್ರಹಿಸುವುದಕ್ಕೆ ಅನುಕೂಲವಾಗುವಂತೆ ಸರ್ಕಾರ ಆ್ಯಂಡ್ರಾಯ್ಡ್‌ ಆ್ಯಪ್‌ ಅಭಿವೃದ್ಧಿಪಡಿಸಿದೆ. ಸಮೀಕ್ಷೆಗೆ ಒಳಪಡುವವರು ಆಧಾರ್/ಪಡಿತರ ಚೀಟಿ ನೀಡಿ ನೋಂದಣಿ ಮಾಡಿಕೊಂಡ ನಂತರ ಅವರ ಮತ್ತು ಕುಟುಂಬದವರ ವೈಯಕ್ತಿಕ ವಿವರ ಒದಗಿಸಬೇಕಾಗುತ್ತದೆ. ಕುಟುಂಬದ ಸದಸ್ಯರ ವಿವರ, ಶೈಕ್ಷಣಿಕ, ಹಣಕಾಸು, ಉದ್ಯೋಗ, ಸರ್ಕಾರಿ ಸವಲತ್ತುಗಳು, ಮೂಲಸೌಕರ್ಯ ಗಳು ಸೇರಿ ಸಮಗ್ರ ಮಾಹಿತಿಯನ್ನು ಕಲೆ ಹಾಕಲು ಈ ಆ್ಯಪ್‌ನಲ್ಲಿ ಒಟ್ಟು 17 ವಿಂಡೋಗಳನ್ನು ರೂಪಿಸಲಾಗಿದೆ.

ಪರಿಶಿಷ್ಟ ಜಾತಿ ಜನರು, ಜಾತಿಯ ಕಾರಣಕ್ಕೆ ಸಾಮಾಜಿಕ ತಾರತಮ್ಯಕ್ಕೆ ಗುರಿಯಾದುದರ ಬಗ್ಗೆ ಮಾಹಿತಿ ಕಲೆಹಾಕುವುದಕ್ಕೂ ಈ ಆ್ಯಂಡ್ರಾಯ್ಡ್‌ ಆ್ಯಪ್‌ನಲ್ಲಿ ಅವಕಾಶ ಒದಗಿಸಲಾಗಿದೆ. ಇದೇ ಕಾರಣಕ್ಕೆ ಈ ಆ್ಯಂಡ್ರಾಯ್ಡ್‌ ಆ್ಯಪ್‌ನ 16ನೇ ವಿಂಡೋವನ್ನು ಮೀಸಲಿಡಲಾಗಿದೆ. ಈ 16ನೇ ವಿಂಡೋದಲ್ಲಿ ‘ಕುಟುಂಬವು ಯಾವುದಾದರೂ ಸಾಮಾಜಿಕ ತಾರತಮ್ಯ ಎದುರಿಸಿದೆಯೇ’ ಎಂಬ ಪ್ರಶ್ನೆ ಇದೆ. ಸಮೀಕ್ಷೆ ನಡೆಸುವವರು ಈ ಪ್ರಶ್ನೆ ಕೇಳಿದಾಗ ಕುಟುಂಬದವರು ‘ಹೌದು’ ಎಂದು ಉತ್ತರಿಸಿದರೆ, ಆ್ಯಂಡ್ರಾಯ್ಡ್‌ ಆ್ಯಪ್‌ನಲ್ಲಿ ತಾರತಮ್ಯದ ಸ್ವರೂಪವನ್ನು ವಿವರಿಸುವ ಉಪವಿಂಡೋ ತೆರೆದುಕೊಳ್ಳುತ್ತದೆ. ಸಮೀಕ್ಷೆ ನಡೆಸುವಂಥವರು ಈ ದತ್ತಾಂಶಗಳನ್ನು ಸಂಗ್ರಹಿಸಿ ಸರ್ಕಾರಕ್ಕೆ ಒದಗಿಸುತ್ತಾರೆ. ಮುಂದೆ ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ನೀಡುವ ವಿಚಾರವನ್ನು ಸರ್ಕಾರ ಅಂತಿಮಗೊಳಿಸಲಿದೆ.

ಪರಿಶಿಷ್ಟ ಜಾತಿ, ಉಪ ಜಾತಿ ಸಮಗ್ರ ಸಮೀಕ್ಷೆ 2025ರ ಸಂಬಂಧ ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಸಮಾಜ ಕಲ್ಯಾಣ ಇಲಾಖೆ ಸಹಾಯವಾಣಿ ಸಂಖ್ಯೆ: 9482300400. ನ್ಯಾ. ಎಚ್.ಎನ್.ನಾಗಮೋಹನ್‌ದಾಸ್ ಅವರ ವಿಚಾರಣಾ ಆಯೋಗ ಸಹಾಯವಾಣಿ: 9481359000 ಸಂಪರ್ಕಿಸಬಹುದು.

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.