ಜಾತಿ ಗಣತಿ: ಯಾವುದೇ ತೀರ್ಮಾನ ಕೈಗೊಳ್ಳದ ಸಚಿವ ಸಂಪುಟ; ಅಭಿಪ್ರಾಯ ನೀಡದ 22 ಸಚಿವರು
ಜಾತಿ ಗಣತಿ ಕುರಿತು ಸಚಿವ ಸಂಪುಟ ಯಾವುದೇ ತೀರ್ಮಾನ ಕೈಗೊಂಡಿಲ್ಲ. 22 ಸಚಿವರು ಈ ಕುರಿತು ಅಭಿಪ್ರಾಯ ನೀಡಿಲ್ಲ, ಹೀಗಾಗಿ ಮುಂದಿನ ಸಭೆಯಲ್ಲಿ ಅಭಿಪ್ರಾಯ ನೀಡಲು ತಾಕೀತು ಮಾಡಲಾಗಿದೆ. ವರದಿ: ಎಚ್.ಮಾರುತಿ

ಬೆಂಗಳೂರು: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ (ಜಾತಿ ಗಣತಿ) ಕುರಿತು ಅಭಿಪ್ರಾಯ ನೀಡಲು ಮತ್ತಷ್ಟು ಕಾಲಾವಕಾಶ ನೀಡುವಂತೆ ಕೋರಿದ್ದರಿಂದ ಶುಕ್ರವಾರ ಸಂಜೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಯಾವುದೇ ತೀರ್ಮಾನ ಕೈಗೊಳ್ಳದೆ ಚರ್ಚೆಯನ್ನು ಮುಂದೂಡಿದೆ. ಹಿಂದುಳಿದ ವರ್ಗಗಳ ಆಯೋಗ ನಡೆಸಿದ ಈ ಸಮೀಕ್ಷೆಯ ವರದಿಯನ್ನು 2024ರ ಫೆಬ್ರವರಿಯಲ್ಲಿ ಸರಕಾರಕ್ಕೆ ಸಲ್ಲಿಸಲಾಗಿತ್ತು. ಈ ವರ್ಷದ ಏಪ್ರಿಲ್ 11 ರಂದು ನಡೆದ ಸಚಿವ ಸಂಪುಟದಲ್ಲಿ ಮೊದಲ ಬಾರಿಗೆ ಮಂಡಿಸಲಾಗಿತ್ತು. ವೀರಶೈವ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳಿಂದ ಪ್ರಬಲ ವಿರೋಧ ಕೇಳಿಬಂದಿದ್ದರಿಂದ ಯಾವುದೇ ತೀರ್ಮಾನ ತೆಗೆದುಕೊಳ್ಳಲಾಗದೆ ಮುಂದಿನ ಸಂಪುಟ ಸಭೆಯ ವೇಳೆಗೆ ಎಲ್ಲ ಸಚಿವರು ಅಭಿಪ್ರಾಯ ನೀಡುವಂತೆ ಕೋರಲಾಗಿತ್ತು.
ಬಲ್ಲ ಮೂಲಗಳ ಪ್ರಕಾರ 33 ಸಚಿವರ ಪೈಕಿ ಕೇವಲ 11 ಸಚಿವರು ಮಾತ್ರ ತಮ್ಮ ಅಭಿಪ್ರಾಯಗಳನ್ನು ಸಭೆಯಲ್ಲಿ ಮಂಡಿಸಿದ್ದಾರೆ. ಉಳಿದ ಸಚಿವರು ಮತ್ತಷ್ಟು ಕಾಲಾವಕಾಶ ಕೋರಿದ್ದಾರೆ. ಇದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನಿವಾರ್ಯವಾಗಿ ಜಾತಿ ಗಣತಿ ಕುರಿತ ಚರ್ಚೆಯನ್ನು ಮುಂದಿನ ಸಭೆಗೆ ಮುಂದೂಡಿದ್ದಾರೆ. ಬಹುಶಃ ಮುಂದಿನ ಸಚಿವ ಸಂಪುಟ ಸಭೆ ಮೇ 15 ರಂದು ನಡೆಯಲಿದೆ ಎಂದು ಹೇಳಲಾಗುತ್ತಿದೆ. ನಿನ್ನೆ ನಡೆದ ಸಭೆಯಲ್ಲಿ ಕೆಲವು ಸಚಿವರು ವರದಿಯಲ್ಲಿನ ಮಾಹಿತಿ ಅಪೂರ್ಣ ಎಂದು ರಾಗ ತೆಗೆದಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತಷ್ಟು ಮಾಹಿತಿ ನೀಡಲು ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.
ಸಚಿವರಿಗೆ 2ನೇ ಸಂಪುಟ ನೀಡಿದ ಸರ್ಕಾರ:
ಹಾಗಾಗಿ ಎಲ್ಲ ಸಚಿವರಿಗೂ ಜಾತಿ ಗಣತಿಯ ಎರಡನೇ ಸಂಪುಟವನ್ನೂ ನೀಡಲಾಗಿದೆ. ಈ ಸಂಪುಟದಲ್ಲಿ ತಾಲೂಕು ಮತ್ತು ವಿಧಾನಸಭಾ ಕ್ಷೇತ್ರವಾರು ಮಾಹಿತಿ ಲಭ್ಯವಿದೆ. ಈ ಸಂಪುಟವನ್ನು ನೀಡಿದ ನಂತರ ಸಿಎಂ ಸಿದ್ದರಾಮಯ್ಯ ಅವರು ವರದಿಯನ್ನು ಕೂಲಂಕಷವಾಗಿ ಅಧ್ಯಯನ ನಡೆಸಿ ಮುಂದಿನ ಸಚಿವ ಸಂಪುಟದಲ್ಲಿ ಎಲ್ಲ ಸಚಿವರು ಅದರಲ್ಲೂ ವಿಶೇಷವಾಗಿ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಅಭಿಪ್ರಾಯ ನೀಡಲೇಬೇಕು ಎಂದು ತಾಕೀತು ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಸಭೆಯಲ್ಲಿಯೂ ಲಿಂಗಾಯತ ಮತ್ತು ಒಕ್ಕಲಿಗ ಸಚಿವರು ತಮ್ಮ ತಮ್ಮ ಜಾತಿಯ ಜನಸಂಖ್ಯೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದೂ ಹೇಳಲಾಗುತ್ತಿದೆ. ಸಚಿವರು ವರದಿ ಕುರಿತು ಭಿನ್ನಾಭಿಪ್ರಾಯ ತಾಳಿರುವುದರಿಂದ ಜಾತಿ ಗಣತಿ ಕುರಿತ ನಿರ್ಧಾರವನ್ನು ಮುಂದೂಡಲಾಗುತ್ತಿದೆ ಎಂದು ಸಚಿವರೊಬ್ಬರು
ತಿಳಿಸಿದ್ದಾರೆ. ಕೇಂದ್ರ ಸರ್ಕಾರವೂ ಜಾತಿ ಗಣತಿಗೆ ಮುಂದಾಗಿರುವುದರಿಂದ ಸಿಎಂ ಸಿದ್ದರಾಮಯ್ಯ ಸರ್ಕಾರ ಮತ್ತಷ್ಟು ಕಾಲಾವಕಾಶ ತೆಗೆದುಕೊಳ್ಳಲು ಉದ್ದೇಶಿಸಿದೆ.
ಸಾರ್ವಜನಿಕ ಚರ್ಚೆಗೂ ಚಿಂತನೆ:
ಜಾತಿ ಗಣತಿಯ ದತ್ತಾಂಶಗಳ ಅಧ್ಯಯನ ವರದಿಯಲ್ಲಿನ ಅಂಶಗಳನ್ನು ಸಾರ್ವಜನಿಕಗೊಳಿಸಿ ಬಹಿರಂಗ ಚರ್ಚೆಗೆ ಅವಕಾಶ ಕಲ್ಪಿಸಿದರೆ ಹೇಗೆ ಎಂದೂ ಸರ್ಕಾರ ಚಿಂತನೆ ನಡೆಸುತ್ತಿದೆ. ಜಾತಿಗಣತಿಗೆ ಪ್ರಬಲ ವಿರೋಧ ವ್ಯಕ್ತವಾಗುತ್ತಿದ್ದು, ವರದಿಯ ದತ್ತಾಂಶಗಳನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಿ, ಜನಸಂಖ್ಯಾವಾರು ಅಂಕಿ ಅಂಶದ ಚರ್ಚೆ ನಡೆಸಿ ನಂತರ ತೀರ್ಮಾನ ಕೈಗೊಳ್ಳುವ ಸಾಧಕ ಭಾದಕಗಳನ್ನು ಕುರಿತು ಚರ್ಚೆ ನಡೆಸುತ್ತಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಈ ಕುರಿತ ಪ್ರಸ್ತಾವವನ್ನು ಸಿದ್ದಪಡಿಸಿದೆ.
ಜಾತಿ ಗಣತಿ ಕುರಿತು ಆಕ್ಷೇಪಣೆ ಮತ್ತು ಸಲಹೆಗಳನ್ನು ಸ್ವೀಕಾರ ಮಾಡಿ ನಂತರ ಅಂತಿಮ ತೀರ್ಮಾನ ಕೈಗೊಂಡು ವಿಧಾನಮಂಡಲ ಅಧಿವೇಶನದ ಉಭಯ ಸದನಗಳಲ್ಲಿ ವಿಷಯ ಮಂಡಿಸುವ ಬಗ್ಗೆಯೂ ಚರ್ಚೆ ನಡೆದಿದೆ.
ಒಟ್ಟಾರೆ ಜಾತಿ ಗಣತಿ ಎಂಬ ಜೇನುಗೂಡಿಗೆ ಕೈ ಹಾಕಿರುವ ಸರಕಾರ ಇಕ್ಕಟ್ಟಿಗೆ ಸಿಲುಕಿರುವುದಂತೂ ಸತ್ಯ. ವರದಿ ಸ್ವೀಕರಿಸಿದರೆ ಲಿಂಗಾಯತ ಒಕ್ಕಲಿಗ ಸೇರಿದಂತೆ ಅನೇಕ ಜಾತಿಗಳ ವಿರೋಧ ವ್ಯಕ್ತವಾಗುತ್ತದೆ. ಸ್ವೀಕಾರ ಮಾಡಿದ್ದರೆ ಹಿಂದುಳಿದ ದಲಿತ ಅಲ್ಪಸಂಖ್ಯಾತ ಸಮುದಾಯಗಳ ವಿರೋಧ ಕಟ್ಟಿಕೊಳ್ಳಬೇಕಾಗಿದೆ. ಮುಂಬರುವ ಎಲ್ಲ ಚುನಾವಣೆಗಳಲ್ಲೂ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಮತ್ತು ಜಾತಿ ಮುಖಂಡ ಸಚಿವರು ಮತ್ತು ಶಾಸಕರು ಹೊಡೆತ ಎದುರಿಸಬೇಕಾಗುತ್ತದೆ ಮತ್ತು ಹಿನ್ನೆಡೆ ಕಟ್ಟಿಟ್ಟ ಬುತ್ತಿಯಾಗುತ್ತದೆ. ಸರ್ಕಾರ ಎಲ್ಲ ಸಮುದಾಯಗಳನ್ನು ತೃಪ್ತಿಪಡಿಸುವ ಮಾರ್ಗವೊಂದರ ಹುಡುಕಾಟದಲ್ಲಿದೆ. ಅದುವರೆಗೆ ಜಾತಿ ಗಣತಿ ವರದಿ ಕುರಿತು ಸಂಪುಟ ಸಭೆಯ ಅಂಗೀಕಾರ ಪಡೆದುಕೊಳ್ಳುವ ತೀರ್ಮಾನವನ್ನು ಮುಂದೂಡುತ್ತಲೇ ಇರಬೇಕಾಗುತ್ತದೆ.