ಕರ್ನಾಟಕ ಹೈಕೋರ್ಟ್‌ನ 4 ನ್ಯಾಯಮೂರ್ತಿಗಳ ವರ್ಗಾವಣೆ ವದಂತಿ; ಧಾರವಾಡ ವಕೀಲರ ಸಂಘದಿಂದ ವಿರೋಧ, ಸಿಜೆಐ ಅಂಗಳ ತಲುಪಿತು ವಿಚಾರ
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕ ಹೈಕೋರ್ಟ್‌ನ 4 ನ್ಯಾಯಮೂರ್ತಿಗಳ ವರ್ಗಾವಣೆ ವದಂತಿ; ಧಾರವಾಡ ವಕೀಲರ ಸಂಘದಿಂದ ವಿರೋಧ, ಸಿಜೆಐ ಅಂಗಳ ತಲುಪಿತು ವಿಚಾರ

ಕರ್ನಾಟಕ ಹೈಕೋರ್ಟ್‌ನ 4 ನ್ಯಾಯಮೂರ್ತಿಗಳ ವರ್ಗಾವಣೆ ವದಂತಿ; ಧಾರವಾಡ ವಕೀಲರ ಸಂಘದಿಂದ ವಿರೋಧ, ಸಿಜೆಐ ಅಂಗಳ ತಲುಪಿತು ವಿಚಾರ

ಕರ್ನಾಟಕ ಹೈಕೋರ್ಟ್‌ನ 4 ನ್ಯಾಯಮೂರ್ತಿಗಳ ವರ್ಗಾವಣೆ ವದಂತಿ ಹರಡಿದೆ. ಹೀಗಾಗಿ ಧಾರವಾಡ ವಕೀಲರ ಸಂಘದ ವಲಯದಲ್ಲಿ ಕಳವಳ ಕಂಡುಬಂದಿದೆ. ಈ ನಡುವೆ, ಈ ಪ್ರಕರಣ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಂಗಳಕ್ಕೂ ತಲುಪಿದೆ. ಹೇಗೆ ಎಂಬ ವಿವರ ಇಲ್ಲಿದೆ.

ಕರ್ನಾಟಕ ಹೈಕೋರ್ಟ್‌ (ಕಡತ ಚಿತ್ರ)
ಕರ್ನಾಟಕ ಹೈಕೋರ್ಟ್‌ (ಕಡತ ಚಿತ್ರ) (HT_PRINT)

ಬೆಂಗಳೂರು: ಕರ್ನಾಟಕ ಹೈಕೋರ್ಟ್‌ನ ನಾಲ್ವರು ನ್ಯಾಯಮೂರ್ತಿಗಳನ್ನು ಬೇರೆ ಬೇರೆ ಹೈಕೋರ್ಟ್‌ಗಳಿಗೆ ವರ್ಗಾವಣೆ ಮಾಡಲಾಗುತ್ತಿದೆ ಎಂಬ ವದಂತಿ ಹರಡಿದ ಕೂಡಲೇ, ಧಾರವಾಡ ವಕೀಲರ ಸಂಘದಿಂದ ವಿರೋಧ ವ್ಯಕ್ತವಾಗಿದೆ. ಧಾರವಾಡ ಪೀಠದ ವಕೀಲರ ಸಂಘದ ಅಧ್ಯಕ್ಷ ವಿ.ಎಂ.ಶೀಲವಂತ್ ಅವರು ಈ ಕುರಿತು ಭಾರತದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರಿಗೆ ಪತ್ರ ಬರೆದು ನ್ಯಾಯಮೂರ್ತಿಗಳ ವರ್ಗಾವಣೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಪ್ರಸಂಗ ಈ ದೇಶದ ಗಮನಸೆಳೆದಿದ್ದು, ಎಲ್ಲರ ಗಮನವೂ ಈಗ ಕರ್ನಾಟಕ ಹೈಕೋರ್ಟ್‌ ಕಡೆಗೆ ತಿರುಗಿದೆ.

ಕರ್ನಾಟಕ ಹೈಕೋರ್ಟ್‌ನ 4 ನ್ಯಾಯಮೂರ್ತಿಗಳ ವರ್ಗಾವಣೆ ವದಂತಿ

ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಕೃಷ್ಣ ದೀಕ್ಷಿತ್, ಕೆ.ನಟರಾಜನ್, ಹೇಮಂತ್ ಚಂದನಗೌಡರ್ ಮತ್ತು ಸಂಜಯ್ ಗೌಡ ಅವರ ವರ್ಗಾವಣೆಯ ಸುದ್ದಿ ಧಾರವಾಡ ಪೀಠದ ವಕೀಲರ ಸಂಘದ ವಲಯದಲ್ಲಿ ಕಳವಳ ಮೂಡಿಸಿದೆ. ಹೀಗಾಗಿ, ನ್ಯಾಯಮೂರ್ತಿಗಳನ್ನು ಬೇರೆ ಬೇರೆ ಹೈಕೋರ್ಟ್‌ಗಳಿಗೆ ವರ್ಗಾವಣೆ ಮಾಡುವುದನ್ನು ವಿರೋಧಿಸಿ ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠದ ವಕೀಲರ ಸಂಘದ ಅಧ್ಯಕ್ಷ ವಿ.ಎಂ.ಶೀಲವಂತ್ ಭಾರತದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರಿಗೆ ಪತ್ರ ಬರೆದು ವರ್ಗಾವಣೆ ತಡೆಯುವಂತೆ ಮನವಿ ಮಾಡಿದ್ದಾರೆ ಎಂದು ಬಾರ್‌ ಆಂಡ್ ಬೆಂಚ್ ವರದಿ ಮಾಡಿದೆ.

ಧಾರವಾಡ ಪೀಠಧ ವಕೀಲರ ಸಂಘದಿಂದ ವಿರೋಧ

ನ್ಯಾಯಮೂರ್ತಿಗಳಾದ ಕೃಷ್ಣ ದೀಕ್ಷಿತ್, ಕೆ.ನಟರಾಜನ್, ಹೇಮಂತ್ ಚಂದನಗೌಡರ್ ಮತ್ತು ಸಂಜಯ್ ಗೌಡ ಅವರ ವರ್ಗಾವಣೆಯ ಸುದ್ದಿ ಕೇಳಿ ಕರ್ನಾಟಕ ಹೈಕೋರ್ಟ್‌ನ ವಕೀಲರು ಆಘಾತಕ್ಕೆ ಒಳಗಾಗಿದ್ದಾರೆ. ಈ ನಾಲ್ವರು ನ್ಯಾಯಮೂರ್ತಿಗಳು ತಮ್ಮ ನಿಸ್ವಾರ್ಥ ಸೇವೆ, ಪ್ರಮಾಣಿಕತೆ ಹಾಗೂ ಅಸಾಧಾರಣ ಕಾನೂನು ಜ್ಞಾನ, ಸೂಕ್ಷ್ಮ ಹಾಗೂ ದಕ್ಷತೆ ಹೆಸರುವಾಸಿ. ಅವರ ವರ್ಗಾವಣೆಯು ವಕೀಲರ ನೈತಿಕ ಸ್ಥೈರ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನ್ಯಾಯಾಲಯದ ಕಾರ್ಯನಿರ್ವಹಣೆಯ ಮೇಲೂ ಇದು ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಬಾರ್ ಅಸೋಸಿಯೇಷನ್ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗೆ ಬರೆದ ಪತ್ರದಲ್ಲಿ ಹೇಳಿದ್ದಾಗಿ ವರದಿ ವಿವರಿಸಿದೆ.

ಇಂತಹ ಕ್ರಮವು ಪ್ರತಿ-ಉತ್ಪಾದಕ ಮತ್ತು ನ್ಯಾಯಾಂಗ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. ಇದು ವಕೀಲರಿಗೆ ಮಾತ್ರವಲ್ಲ, ನ್ಯಾಯವನ್ನು ಹುಡುಕಿಕೊಂಡು ಬರುವ ಸಾಮಾನ್ಯ ಜನರಿಗೂ ಹಾನಿ ಮಾಡುತ್ತದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಕೂಡ ಈ ರೀತಿ ವರ್ಗಾವಣೆ ಕ್ರಮಕ್ಕೆ ಮುಂದಾಗಬಾರದು. ಇದ ನ್ಯಾಯಾಲಯ, ನ್ಯಾಯವಾದಿಗಳ ಕೆಲಸದ ಮೇಲೂ ಪರಿಣಾಮ ಬೀರುತ್ತದೆ. ಇದನ್ನು ಧಾರವಾಡ ಪೀಠದ ವಕೀಲರ ಸಂಘ ವಿರೋಧಿಸುತ್ತದೆ. ಈ ನಿಲುವಿನಲ್ಲಿ ಸಂಘ ದೃಢವಾಗಿದೆ. ಹೀಗಾಗಿ ತಮ್ಮ ಮನವಿಯನ್ನು ಪುರಸ್ಕರಿಸಬೇಕು ಎಂದು ಶೀಲವಂತ್ ಪತ್ರದಲ್ಲಿ ವಿನಂತಿಸಿರುವುದಾಗಿ ವರದಿ ಹೇಳಿದೆ.

ಆದಾಗ್ಯೂ, ಈ ವಿಷಯದ ಬಗ್ಗೆ ಸುಪ್ರೀಂ ಕೋರ್ಟ್ ಕೊಲಿಜಿಯಂನಿಂದ ಇಲ್ಲಿಯವರೆಗೆ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ ಪ್ರಕಟವಾಗಿಲ್ಲ ಎಂದು ವರದಿ ವಿವರಿಸಿದೆ.

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.