ವಕ್ಫ್ ಬೋರ್ಡ್ ನೀಡುವ ಮದುವೆ, ವಿಚ್ಛೇದನ ಪ್ರಮಾಣ ಪತ್ರದ ಕಾನೂನು ಮಾನ್ಯತೆ, ಮಂಡಳಿಯ ಅಧಿಕಾರ ವ್ಯಾಪ್ತಿ ಪ್ರಶ್ನಿಸಿದ ಕರ್ನಾಟಕ ಹೈಕೋರ್ಟ್
Waqf Board's authority: ಕರ್ನಾಟಕ ವಕ್ಫ್ ಮಂಡಳಿಯ ಅಧಿಕಾರ ವ್ಯಾಪ್ತಿಯನ್ನು ಕರ್ನಾಟಕ ಹೈಕೋರ್ಟ್ ಇಂದು (ಫೆ 10) ಪ್ರಶ್ನಿಸಿದ್ದು, ಅದು ನೀಡುತ್ತಿರುವ ಮದುವೆ, ವಿಚ್ಛೇದನ ಪ್ರಮಾಣ ಪತ್ರದ ಕಾನೂನು ಮಾನ್ಯತೆ ಬಗ್ಗೆಯೂ ಸಂದೇಹ ವ್ಯಕ್ತಪಡಿಸಿದೆ ಎಂದು ಬಾರ್ ಆಂಡ್ ಬೆಂಚ್ ವರದಿ ಮಾಡಿದೆ

Waqf Board's authority: ಸಂಸತ್ನಲ್ಲಿ ವಕ್ಫ್ ಮಂಡಳಿ ಅಧಿಕಾರಕ್ಕೆ ಸಂಬಂಧಿಸಿ ಕಾನೂನು ಜಾರಿಗೊಳಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಇದೇ ವೇಳೆ, ವಕ್ಫ್ನ ಅಧಿಕಾರ ವ್ಯಾಪ್ತಿಯನ್ನು ಕರ್ನಾಟಕ ಹೈಕೋರ್ಟ್ ಪ್ರಶ್ನಿಸಿರುವುದು ಗಮನಸೆಳೆದಿದೆ. ಕರ್ನಾಟಕ ವಕ್ಫ್ ಮಂಡಳಿಯು ಮುಸ್ಲಿಂ ದಂಪತಿಗೆ ವಿವಾಹ ಮತ್ತು ವಿಚ್ಛೇದನ ಪ್ರಮಾಣಪತ್ರ ವಿತರಿಸುತ್ತಿದ್ದು, ಅವುಗಳ ಮಾನ್ಯತೆ ಹಾಗೂ ಮಂಡಳಿಯ ಅಧಿಕಾರ ವ್ಯಾಪ್ತಿಯ ಬಗ್ಗೆ ಕರ್ನಾಟಕ ಹೈಕೋರ್ಟ್ ಇಂದು (ಫೆ 10) ಸಂದೇಹ ವ್ಯಕ್ತಪಡಿಸಿದೆ. ಕರ್ನಾಟಕ ಸರ್ಕಾರ 2023ರ ಆಗಸ್ಟ್ 30 ರಂದು ಹೊರಡಿಸಿದ್ದ ಆದೇಶಕ್ಕೆ ತಡೆಯಾಜ್ಞೆ ನೀಡಿದ ಕರ್ನಾಟಕ ಹೈಕೋರ್ಟ್ ಈ ಸಂದೇಹವನ್ನು ವ್ಯಕ್ತಪಡಿಸಿತು.
ವಕ್ಫ್ ಬೋರ್ಡ್ ಅಧಿಕಾರ ವ್ಯಾಪ್ತಿ ಪ್ರಶ್ನಿಸಿದ ಕರ್ನಾಟಕ ಹೈಕೋರ್ಟ್
ಕರ್ನಾಟಕ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಎನ್ವಿ ಅಂಜರಿಯಾ ಮತ್ತು ನ್ಯಾಯಮೂರ್ತಿ ಎಂಐ ಆರುಣ್ ಅವರಿದ್ದ ನ್ಯಾಯಪೀಠವು ಸೋಮವಾರ (ಫೆ 10) ಕರ್ನಾಟಕ ವಕ್ಫ್ ಮಂಡಳಿಯ ಅಧಿಕಾರ ವ್ಯಾಪ್ತಿಯನ್ನು ಪ್ರಶ್ನಿಸಿದ್ದು, ಅದು ಮುಸ್ಲಿಂ ದಂಪತಿಗೆ ವಿತರಿಸಿದ ವಿವಾಹ ಮತ್ತು ವಿಚ್ಛೇದನ ಪ್ರಮಾಣಪತ್ರದ ಮಾನ್ಯತೆಯ ಬಗ್ಗೆ ಸಂದೇಹ ವ್ಯಕ್ತಪಡಿಸಿದೆ. ಅಷ್ಟೇ ಅಲ್ಲ, ಕರ್ನಾಟಕ ಸರ್ಕಾರವು 2023ರ ಆಗಸ್ಟ್ 30ರಂದು ಹೊರಡಿಸಿದ್ದ ಆದೇಶಕ್ಕೆ ತಡೆಯಾಜ್ಞೆ ನೀಡಿದೆ ಎಂದು ಬಾರ್ ಆಂಡ್ ಬೆಂಚ್ ವರದಿ ಮಾಡಿದೆ.
ಕರ್ನಾಟಕ ಸರ್ಕಾರವು 2023ರ ಆಗಸ್ಟ್ 30ರಂದು ಹೊರಡಿಸಿದ್ದ ಆದೇಶದಲ್ಲಿ ಮುಸ್ಲಿಂ ದಂಪತಿಗಳಿಗೆ ವಿವಾಹ ಮತ್ತು ವಿಚ್ಛೇದನ ಪ್ರಮಾಣಪತ್ರಗಳನ್ನು ನೀಡುವ ಅಧಿಕಾರವನ್ನು ನೀಡಲಾಗಿತ್ತು.
ಕರ್ನಾಟಕ ಹೈಕೋರ್ಟ್ನಲ್ಲಿ ಸರ್ಕಾರದ ಪ್ರತಿನಿಧಿಗಳು ಇದಕ್ಕೆ ಪ್ರತಿಕ್ರಿಯೆ ನೀಡಲು ಸಮಯಾವಕಾಶ ಕೋರಿದ ಕಾರಣ, ಈ ಕೇಸ್ನ ವಿಚಾರಣೆಯನ್ನು ಫೆ 19ಕ್ಕೆ ಮುಂದೂಡಿದೆ.
ವಕ್ಫ್ ಮಂಡಳಿ ವಿವಾಹ ಪ್ರಮಾಣಪತ್ರ ಹಾಗೂ ವಿಚ್ಛೇದನ ಪ್ರಮಾಣಪತ್ರವನ್ನೂ ವಿತರಿಸುತ್ತಿದೆಯೇ? ಉತ್ತರಿಸುವುದಕ್ಕೆ ಬಹಳಷ್ಟು ಸಮಯಾವಕಾಶ ನೀಡಲಾಗದು. ಇದು ಬಹಳ ಮುಖ್ಯವಿಚಾರ. ವಕ್ಫ್ ಕಾಯ್ದೆಯಲ್ಲಿ ಇದಕ್ಕೆ ಅವಕಾಶ ಇಲ್ಲ ಎಂದು ಹೈಕೋರ್ಟ್ ಸ್ಪಷ್ಟವಾಗಿ ಸರ್ಕಾರವನ್ನು ಎಚ್ಚರಿಸಿದ್ದಾಗಿ ವರದಿ ವಿವರಿಸಿದೆ.
ಆಲಂ ಪಾಷಾ ಎಂಬುಬವರು ಸಲ್ಲಿಸಿದ್ದ ಪಿಐಎಲ್ ಅರ್ಜಿ
ಕರ್ನಾಟಕ ಹೈಕೋರ್ಟ್ ನ್ಯಾಯಪೀಠವು ಆಲಂ ಪಾಷಾ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಗೆತ್ತಿಕೊಂಡಿದ್ದು, ಈ ವೇಳೆ ಈ ಸಂದೇಹವನ್ನು ವ್ಯಕ್ತಪಡಿಸಿತ್ತು. ಆಲಂ ಪಾಷಾ ಅವರು ಕರ್ನಾಟಕ ರಾಜ್ಯ ಸರ್ಕಾರದ ಅಲ್ಪಸಂಖ್ಯಾತ, ವಕ್ಫ್, ಹಜ್ ಇಲಾಖೆಯ ಅಧೀನ ಕಾರ್ಯದರ್ಶಿಯು ಹೊರಡಿಸಿದ್ದ ಆದೇಶ ರದ್ದುಗೊಳಿಸುವಂತೆ ಪಿಐಎಲ್ನಲ್ಲಿ ಮನವಿ ಮಾಡಿದ್ದರು.
ಮುಸ್ಲಿಂ ಜೋಡಿಗಳ ವಿವಾಹ ಸಮಾರಂಭದ ಸಮಯದಲ್ಲಿ ಕುರಾನ್ ಪಠ್ಯ ಪಠಿಸುವ ಕಾಜಿಗೆ ವಿವಾಹ ಪ್ರಮಾಣಪತ್ರ ನೀಡುವ ಅಧಿಕಾರವನ್ನು 1988ರ ಕಾಜಿ ಕಾಯ್ದೆ ನೀಡಿತ್ತು. ಆದರೆ ಈ ಕಾಯ್ದೆಯನ್ನು 2013ರಲ್ಲಿ ಹಿಂಪಡೆಯಲಾಗಿದೆ. ಅದಾದ ಬಳಿಕ ರಾಜ್ಯ ಸರ್ಕಾರ ಈ ಆದೇಶವನ್ನು ಹೊರಡಿಸಿದೆ ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ತಿಳಿಸಿದರು.
ವಕ್ಫ್ ಕಾಯ್ದೆಯು ಚಲಿಸಬಲ್ಲ ಮತ್ತು ಸ್ಥಿರವಾದ ಆಸ್ತಿಗಳಿಗೆ ಮಾತ್ರ ಸಂಬಂಧಿಸಿದೆ. ಅದರಲ್ಲಿ ವಿವಾಹ ಅಥವಾ ವಿಚ್ಛೇದನ ಪ್ರಮಾಣಪತ್ರ ನೀಡುವುದಕ್ಕೆ ಅಧಿಕಾರ ಇಲ್ಲ. ಅಥವಾ ಅಂತಹ ಅಧಿಕಾರವನ್ನು ವಕ್ಫ್ ಮಂಡಳಿ ಅಧಿಕಾರಿಗಳಿಗೆ ನೀಡುವ ನಿಬಂಧನೆಯೂ ಇಲ್ಲ ಎಂದು ಅರ್ಜಿದಾರರು ಪಿಐಎಲ್ನಲ್ಲಿ ವಿವರಿಸಿದ್ದಾರೆ.
ಈ ಕೇಸ್ನ ವಿಚಾರಣೆ 2024ರ ನವೆಂಬರ್ನಲ್ಲಿ ನಡೆದಾಗ, ವಿದೇಶಕ್ಕೆ ತೆರಳುವ ಮುಸ್ಲಿಂ ದಂಪತಿಗೆ ವಿವಾಹ ಪ್ರಮಾಣಪತ್ರ ಇಲ್ಲದೆ ತೊಂದರೆ ಆಗುತ್ತಿತ್ತು. ಹೀಗಾಗಿ, ಸರ್ಕಾರಿ ಆದೇಶವನ್ನು ವಕ್ಫ್ ಮಂಡಳಿಗೆ ಅಧಿಕಾರ ನೀಡಿ ಹೊರಡಿಸಲಾಗಿತ್ತು ಎಂದು ಕರ್ನಾಟಕ ಉಚ್ಛ ನ್ಯಾಯಾಲಯಕ್ಕೆ ಸರ್ಕಾರದ ಪರ ವಕೀಲರು ತಿಳಿಸಿದ್ದರು ಎಂಬುದನ್ನು ವರದಿ ನೆನಪಿಸಿದೆ.
