ಬೆಂಗಳೂರು ಬೀದಿ ಜಗಳ ಕೇಸ್: ವಾಯುಪಡೆ ಅಧಿಕಾರಿ ವಿರುದ್ಧ ಬಲವಂತದ ಕ್ರಮ ಬೇಡ, ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಸೂಚನೆ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಬೀದಿ ಜಗಳ ಕೇಸ್: ವಾಯುಪಡೆ ಅಧಿಕಾರಿ ವಿರುದ್ಧ ಬಲವಂತದ ಕ್ರಮ ಬೇಡ, ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಸೂಚನೆ

ಬೆಂಗಳೂರು ಬೀದಿ ಜಗಳ ಕೇಸ್: ವಾಯುಪಡೆ ಅಧಿಕಾರಿ ವಿರುದ್ಧ ಬಲವಂತದ ಕ್ರಮ ಬೇಡ, ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಸೂಚನೆ

ಬೆಂಗಳೂರು ಬೀದಿ ಜಗಳ ಕೇಸ್‌ಗೆ ಸಂಬಂಧಿಸಿ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಆಧರಿಸಿ ಭಾರತೀಯ ವಾಯುಸೇನೆಯ ವಿಂಗ್‌ ಕಮಾಂಡರ್‌ ಶೀಲಾದಿತ್ಯ ಬೋಸ್‌ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಕರ್ನಾಟಕ ಹೈಕೋರ್ಟ್‌ ಕರ್ನಾಟಕ ಸರ್ಕಾರಕ್ಕೆ ಆದೇಶಿಸಿದೆ.

ಬೆಂಗಳೂರು ಬೀದಿ ಜಗಳ ಕೇಸ್‌ನಲ್ಲಿ ವಾಯುಪಡೆ ಅಧಿಕಾರಿ ವಿರುದ್ಧ ಬಲವಂತದ ಕ್ರಮ ಬೇಡ ಎಂದು ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಸೂಚನೆ ನೀಡಿದೆ. (ಕಡತ ಚಿತ್ರ)
ಬೆಂಗಳೂರು ಬೀದಿ ಜಗಳ ಕೇಸ್‌ನಲ್ಲಿ ವಾಯುಪಡೆ ಅಧಿಕಾರಿ ವಿರುದ್ಧ ಬಲವಂತದ ಕ್ರಮ ಬೇಡ ಎಂದು ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಸೂಚನೆ ನೀಡಿದೆ. (ಕಡತ ಚಿತ್ರ)

ಬೆಂಗಳೂರು ಬೀದಿ ಜಗಳ ಕೇಸ್: ಬೆಂಗಳೂರಿನ ಸಿವಿ ರಾಮನ್ ನಗರದ ಗೋಪಾಲನ್ ಗ್ರ್ಯಾಂಡ್ ಮಾಲ್ ಸಮೀಪ ಸೋಮವಾರ (ಏಪ್ರಿಲ್ 21) ಬೆಳಿಗ್ಗೆ ನಡೆದ ಬೀದಿ ಜಗಳ ಕೇಸ್‌ಗೆ ಸಂಬಂಧಿಸಿ ದಾಖಲಾಗಿರುವ ಎಫ್‌ಐಆರ್ ಆಧರಿಸಿ ಭಾರತೀಯ ವಾಯುಸೇನೆಯ ವಿಂಗ್‌ ಕಮಾಂಡರ್‌ ಶೀಲಾದಿತ್ಯ ಬೋಸ್‌ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಕರ್ನಾಟಕ ಹೈಕೋರ್ಟ್‌ ಕರ್ನಾಟಕ ಸರ್ಕಾರಕ್ಕೆ ಆದೇಶಿಸಿದೆ.

ಐಎಎಫ್‌ ಅಧಿಕಾರಿ ವಿರುದ್ಧ ಬಲವಂತದ ಕ್ರಮ ಬೇಡ; ಹೈಕೋರ್ಟ್

ನ್ಯಾಯಮೂರ್ತಿ ಹೇಮಂತ ಚಂದನಗೌಡರ ಅವರಿದ್ದ ಏಕಸದಸ್ಯ ನ್ಯಾಯಪೀಠವು ಶುಕ್ರವಾರ, ‘ನನ್ನ ವಿರುದ್ಧ ಬೈಯಪ್ಪನಹಳ್ಳಿ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ಮತ್ತು ಈ ಕುರಿತಾದ ನ್ಯಾಯಿಕ ಪ್ರಕ್ರಿಯೆ ರದ್ದುಮಾಡಬೇಕು. ಅದರಲ್ಲಿ ಹುರುಳಿಲ್ಲ’ ಎಂದು ಕೋರಿ ವಾಯುಪಡೆ ಅಧಿಕಾರಿಯೂ ಆಗಿರುವ ಕೋಲ್ಕತ್ತಾದ ಶೀಲಾದಿತ್ಯ ಬೋಸ್‌ ಸಲ್ಲಿಸಿದ ಕ್ರಿಮಿನಲ್‌ ಅರ್ಜಿ ವಿಚಾರಣೆ ನಡೆಸಿ, ಈ ಮಧ್ಯಂತರ ಆದೇಶ ನೀಡಿದೆ.

ಶೀಲಾದಿತ್ಯ ಬೋಸ್ ವಿರುದ್ಧ ಬಲವಂತದ ಕ್ರಮ ಜರುಗಿಸಬಾರದು. ಕಾನೂನು ಪರಿಪಾಲಿಸಿಕೊಂಡೇ ವಿಚಾರಣೆ ನಡೆಸಬೇಕು. ಕಾನೂನು ಪರಿಪಾಲಿಸದೆ ಅರ್ಜಿದಾರರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಬಾರದು. ಅರ್ಜಿದಾರರು ಕೂಡ ತನಿಖೆಗೆ ಸಹಕರಿಸಬೇಕು. ನ್ಯಾಯಾಲಯದ ಅನುಮತಿ ಪಡೆಯದೇ ಸಕ್ಷಮ ನ್ಯಾಯಾಲಯಕ್ಕೆ ಈ ಕೇಸ್‌ಗೆ ಸಂಬಂಧಿಸಿದ ದೋ‍ಷಾರೋಪ ಪಟ್ಟಿ ಸಲ್ಲಿಸಬಾರದು ಎಂದು ನ್ಯಾಯಪೀಠ ತಾಕೀತು ಮಾಡಿದೆ.

ಇದಲ್ಲದೆ, ವಾಯುಪಡೆ ಅಧಿಕಾರಿ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿ ಆಕ್ಷೇಪಣೆ ಸಲ್ಲಿಸುವುದಕ್ಕೆ ಬೈಯಪ್ಪನಹಳ್ಳಿ ಪೊಲೀಸರು ಹಾಗೂ ಪ್ರತಿವಾದಿ ದೂರುದಾರ ಎಸ್‌ಜೆ ವಿಕಾಸ್‌ ಕುಮಾರ್‌ಗೂ ತುರ್ತು ನೋಟಿಸ್ ಅನ್ನು ಹೈಕೋರ್ಟ್ ನ್ಯಾಯಪೀಠ ಜಾರಿಗೊಳಿಸಿತು.

ಏನಿದು ಬೆಂಗಳೂರು ಬೀದಿ ಕಾಳಗದ ಕೇಸ್

ಬೆಂಗಳೂರಿನ ಸಿವಿ ರಾಮನ್ ನಗರದ ಗೋಪಾಲನ್ ಗ್ರ್ಯಾಂಡ್ ಮಾಲ್ ಸಮೀಪ ಸೋಮವಾರ (ಏಪ್ರಿಲ್ 21) ಬೆಳಿಗ್ಗೆ ಬೈಕ್ ಸವಾರ ಎಸ್‌ಜೆ ವಿಕಾಸ್ ಕುಮಾರ್ ಹಾಗೂ ವಾಯುಪಡೆ ಅಧಿಕಾರಿ ಶೀಲಾದಿತ್ಯ ಬೋಸ್ ನಡುವೆ ಬೀದಿ ಜಗಳ ನಡೆದಿತ್ತು. ಇದಾದ ಬಳಿಕ ವಾಯುಪಡೆ ಅಧಿಕಾರಿ ವಿಕಾಸ್ ಕುಮಾರ್ ವಿರುದ್ಧ ದೂರು ದಾಖಲಿಸಿದ್ದರು. ಪೊಲೀಸರು ವಿಕಾಸ್‌ನನ್ನು ಬಂಧಿಸಿದ್ದರು. ಬಳಿಕ ತನಿಖೆ ನಡೆಸಿದ ವೇಳೆ ಸಾಕ್ಷ್ಯಗಳನ್ನು ಸಂಗ್ರಹಿಸಿದಾಗ ಸಿಸಿಟಿವಿ ದೃಶ್ಯಗಳಲ್ಲಿ ಶೀಲಾದಿತ್ಯ ಬೋಸ್ ಆಕ್ರಮಣಕಾರಿಯಾಗಿ ವರ್ತಿಸಿ ವಿಕಾಸ್‌ ಕುಮಾರ್‌ಗೆ ಹಿಗ್ಗಾಮುಗ್ಗ ಥಳಿಸಿದ್ದು ಕಂಡುಬಂದಿತ್ತು. ಇದನ್ನು ಅನುಸರಿಸಿ ವಿಕಾಸ್ ಕುಮಾರ್ ಪ್ರತಿದೂರು ದಾಖಲಿಸಿದರು.

ವಿಕಾಸ್ ಕುಮಾರ್ ನೀಡಿದ ಪ್ರತಿದೂರು ಆಧರಿಸಿ ಬೈಯ್ಯಪ್ಪನಹಳ್ಳಿ ಠಾಣೆಯ ಪೊಲೀಸರು ಶೀಲಾದಿತ್ಯ ಬೋಸ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್‌ಗಳಾದ 109 (ಕೊಲೆ ಯತ್ನ), 115(2) (ಸ್ವಇಚ್ಛೆಯಿಂದ ಹಾನಿ ಮಾಡುವುದು), 304 (ಕಳವು ಮಾಡಲು ಕಿತ್ತುಕೊಳ್ಳುವುದು), 324 (ಕಿರುಕುಳ), 351 (ಬೆದರಿಕೆ), 352 (ಶಾಂತಿಗೆ ಭಂಗ ಉಂಟು ಮಾಡಲು ಉದ್ದೇಶಪೂರ್ವಕವಾಗಿ ಅವಮಾನಿಸುವುದು) ಅಡಿ ಪ್ರಕರಣ ದಾಖಲಿಸಿದರು. ಈ ದೂರು ಹಾಗೂ ಎಫ್‌ಐಆರ್ ರದ್ದು ಮಾಡಬೇಕು ಎಂದು ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್‌ ಶೀಲಾದಿತ್ಯ ಬೋಸ್ ಈಗ ಕರ್ನಾಟಕ ಹೈಕೋರ್ಟ್‌ನಲ್ಲಿ ಕ್ರಿಮಿನಲ್ ದಾವೆ ಹೂಡಿರುವಂಥದ್ದು.

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.