ಬೈಕ್-ಟ್ಯಾಕ್ಸಿ 6 ವಾರಗಳ ನಿಷೇಧ; ಪ್ರಯಾಣಿಕರಿಗೂ ಸಂಕಷ್ಟ, ಅದನ್ನೇ ನಂಬಿದ ಸವಾರರ ಜೀವನೋಪಾಯಕ್ಕೂ ಪೆಟ್ಟು!
ಬೈಕ್ ಟ್ಯಾಕ್ಸಿ ನಿಷೇಧಕ್ಕೆ ಹೈಕೋರ್ಟ್ ಆದೇಶಿಸಿದೆ. ಆದರಿದು ಬೈಕ್ಸ್ ಟ್ಯಾಕ್ಸಿ ಸವಾರರ ಜೊತೆಗೆ ಪ್ರಯಾಣಿಕರಿಗೂ ಸಂಕಷ್ಟ ತಂಡದೊಡ್ಡಿದೆ. ಬೈಕ್ ಟ್ಯಾಕ್ಸಿ ಸೇವೆಗಳ ನಿಯಮ ರೂಪಿಸಲು ಹೈಕೋರ್ಟ್ ರಾಜ್ಯ ಸರಕಾರಕ್ಕೆ 3 ತಿಂಗಳ ಗಡುವು ನೀಡಿದೆ.

ಬೆಂಗಳೂರು: ಆರು ವಾರಗಳ ಕಾಲ ಬೈಕ್-ಟ್ಯಾಕ್ಸಿ ಕಾರ್ಯಾಚರಣೆ ನಿಲ್ಲಿಸುವಂತೆ ಹೈಕೋರ್ಟ್ ಆದೇಶ ಹೊರಡಿಸಿದೆ. ಇದು ನಗರದ ಸಾವಿರಾರು ಪ್ರಯಾಣಿಕರಿಗೆ ಸಂಕಷ್ಟ ತಂದೊಡ್ಡಿದೆ. ಉಬರ್, ರಾಪಿಡೊ, ಓಲಾ ಮುಂತಾದ ವೇದಿಕೆಗಳೊಂದಿಗೆ ತಮ್ಮ ದ್ವಿಚಕ್ರ ವಾಹನ ಪಾಲುದಾರಿಕೆ ಮಾಡಿಕೊಂಡಿರುವ ಸವಾರರು ತಮ್ಮ ಪ್ರಾಥಮಿಕ ಜೀವನೋಪಾಯದ ಮೂಲ ಕಳೆದುಕೊಳ್ಳುವ ಬಗ್ಗೆ ಚಿಂತಿಸುತ್ತಿದ್ದಾರೆ. ಅನೇಕ ಯುವಕರಿಗೆ, ಬೈಕ್-ಟ್ಯಾಕ್ಸಿ ಸೇವೆಗಳು ಅವರ ಶಿಕ್ಷಣಕ್ಕೆ ಹಣಕಾಸು ಒದಗಿಸಲು ಮತ್ತು ಅವರ ಕುಟುಂಬಗಳನ್ನು ಪೋಷಿಸಲು ಸಹಾಯ ಮಾಡಿವೆ. ಜೊತೆಗೆ ಮೆಟ್ರೋ ಕೊನೆ ಮೈಲಿ ಸಂಪರ್ಕದ ಮೇಲೂ ಪರಿಣಾಮ ಬೀರಲಿದೆ.
ಹೈಕೋರ್ಟ್ ಆದೇಶದಿಂದ ನಮ್ಮ ಮೆಟ್ರೋ ಬಳಸುವ ಪ್ರಯಾಣಿಕರಿಗೆ ಸಂಕಷ್ಟ ಎದುರಾಗಿದೆ. ತಮ್ಮ ಮನೆಗಳಿಂದ ಮೆಟ್ರೋ ಸಂಪರ್ಕ ಕಲ್ಪಿಸಲು ಬಸ್ಗಳ ಕೊರತೆಯ ಕಾರಣ ಅಂತಹ ಪ್ರಯಾಣಿಕರು ಬೈಕ್ ಟ್ಯಾಕ್ಸಿಗಳನ್ನೇ ನೆಚ್ಚಿಕೊಂಡಿದ್ದರು. ಏಕೆಂದರೆ ಬಸ್ ಸೇವೆಯ ಕೊರತೆ, ಆಟೋ ಚಾಲಕರು ಕರೆದ ಕಡೆಗಲ್ಲ ಬರುವುದಿಲ್ಲ, ಬಂದರೂ ತಮಗೆ ಬಾಯಿಗೆ ಬಂದಂತೆ ಇಷ್ಟೇ ಹಣ ಬೇಕೆಂದು ಕೇಳುತ್ತಾರೆ. ಇನ್ನೂ ಕೆಲವರು ಮೀಟರ್ ಹಾಕದೆಯೇ ದೊಡ್ಡ ಮೊತ್ತಕ್ಕೆ ಬೇಡಿಕೆ ಇಡುತ್ತಾರೆ. ಆದರೆ ಬೈಕ್ ಟ್ಯಾಕ್ಸಿ ಆದರೆ ಮನೆ ತನಕ ಸುಲಭವಾಗಿ ಹೋಗಬಹುದು, ಟ್ರಾಫಿಕ್ ಇದ್ದರೂ ಸುಲಭವಾಗಿ ಪ್ರಯಾಣಿಸಬಹುದು. ಅದು ಕೂಡ ಕಡಿಮೆ ದರದಲ್ಲಿ. ಹೀಗಾಗಿ ಬೈಕ್ ಟ್ಯಾಕ್ಸಿ ನಿಷೇಧದ ಕಾರಣ ಬಡ ಮತ್ತು ಮಧ್ಯಮ ವರ್ಗದ ಜನರ ಜೇಬಿಗೆ ಕತ್ತರಿ ಬೀಳಲಿದೆ.
2020ರಲ್ಲಿ ಕೋವಿಡ್-19 ನಂತರ ಅನೇಕ ಪ್ರಯಾಣಿಕರು ಸಾರ್ವಜನಿಕ ಸಾರಿಗೆ ಬಳಸಲು ಹಿಂಜರಿಯುತ್ತಿದ್ದರು. ಹೀಗಿದ್ದಾಗ ಬೈಕ್ ಟ್ಯಾಕ್ಸಿಗಳು ನಗರದಲ್ಲಿ ಜನಪ್ರಿಯತೆ ಗಳಿಸಿದವು. ಕೈಗೆಟಕುವ ದರದಲ್ಲಿ ಬೈಕ್ ಟ್ಯಾಕ್ಸಿಗಳು ಸೇವೆ ಸಲ್ಲಿಸುತ್ತಿದ್ದ ಹಿನ್ನೆಲೆ ಕಾಲಾನಂತರ ಅವುಗಳನ್ನೇ ಹೆಚ್ಚು ಬಳಸಲು ಮುಂದಾದರು. ಇಂದು ನಗರದಲ್ಲಿ 75,000 ರಿಂದ 1 ಲಕ್ಷ ಬೈಕ್-ಟ್ಯಾಕ್ಸಿ ಸವಾರರು ಸೇವೆ ಸಲ್ಲಿಸುತ್ತಿದ್ದಾರೆ. ಆದರೀಗ ಹೈಕೋರ್ಟ್ ಆದೇಶ ಇವರ ಆದಾಯದ ಮೂಲಕ್ಕೆ ಕತ್ತರಿ ಬೀಳುವಂತೆ ಮಾಡಿದೆ. ಇವರ ಜೀವನೋಪಾಯಕ್ಕೂ ಹೆಚ್ಚು ತೊಂದರೆಯಾಗಿದೆ. ಈ ಆದೇಶಕ್ಕೆ ತಡೆ ನೀಡುವಂತೆ ಕೋರಿ ಬೈಕ್ ಟ್ಯಾಕ್ಸಿ ಸಂಸ್ಥೆಗಳು ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಮುಂದಾಗಿವೆ.
3 ತಿಂಗಳ ಗಡುವು ನೀಡಿದ ಹೈಕೋರ್ಟ್
ಈ ಹಿಂದೆ ಸಾರಿಗೆ ಇಲಾಖೆಯು ಬೈಕ್-ಟ್ಯಾಕ್ಸಿಗಳ ವಿರುದ್ಧ ಕ್ರಮ ಕೈಗೊಂಡಿತ್ತು. ವಾಣಿಜ್ಯ ಉದ್ದೇಶಗಳಿಗಾಗಿ ಖಾಸಗಿ ವಾಹನಗಳನ್ನು ಬಳಸುವುದರಿಂದ 'ಕಾನೂನುಬಾಹಿರ' ಎಂದು ಲೇಬಲ್ ಅಂಟಿಸಿತ್ತು. ಹಲವು ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಬೈಕ್ ಟ್ಯಾಕ್ಸಿಗಳ ನಿಷೇಧಕ್ಕೆ ಆಟೋರಿಕ್ಷಾ ಚಾಲಕರು ಒತ್ತಾಯಿಸಿದ್ದರು. 2021ರಲ್ಲಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ನೀತಿಯನ್ನು ಪ್ರಾರಂಭಿಸುವ ಮೂಲಕ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿತ್ತು. ಆದರೆ ಆಟೋ ರಿಕ್ಷಾ ಸಂಘಟನೆಗಳ ಒತ್ತಡದಿಂದ 2024ರಲ್ಲಿ ಈ ಸರ್ಕಾರದ ನೀತಿಯನ್ನು ಹಿಂಪಡೆಯಲಾಗಿತ್ತು. ಆಟೋ ಸಂಘಟನೆಗಳ ವಿರೋಧ, ಮಹಿಳಾ ಸುರಕ್ಷತೆ ಸೇರಿದಂತೆ ಹಲವು ಸವಾಲುಗಳು ಎದುರಾದ ಕಾರಣ ಈ ನಿರ್ಧಾರಕ್ಕೆ ಬರಲಾಗಿದೆ. ಬೈಕ್ ಟ್ಯಾಕ್ಸಿ ಸೇವೆಗಳ ನಿಯಮ ರೂಪಿಸಲು ಹೈಕೋರ್ಟ್ ರಾಜ್ಯ ಸರಕಾರಕ್ಕೆ 3 ತಿಂಗಳ ಗಡುವು ನೀಡಿದೆ.
ಈ ನಿಷೇಧಕ್ಕೆ ಸಂಬಂಧಿಸಿ ಬೈಕ್-ಟ್ಯಾಕ್ಸಿ ಸಂಸ್ಥೆಗಳು ಹೊಸ ಮಾರ್ಗ ಸೂಚಿಗಳನ್ನು ಪರಿಚಯಿಸುವಂತೆ ಕೇಳಿಕೊಂಡಿವೆ. ಬೈಕ್ ಟ್ಯಾಕ್ಸಿಗಳ ನಿಯಮಿತ ಬಳಕೆದಾರರು ಮಹಾನಗರದಲ್ಲಿ ಮೊದಲ ಮತ್ತು ಕೊನೆಯ ಮೈಲಿಗೆ ಬಹು ಸಾರಿಗೆ ಆಯ್ಕೆಗಳು ಅತ್ಯಗತ್ಯ ಎಂದು ವಾದಿಸಿದ್ದಾರೆ. ಸೇವೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವ ಬದಲು ವಾಹನ ಮಾನದಂಡಗಳು, ಶುಲ್ಕ ನಿಯಂತ್ರಣಗಳು ಮತ್ತು ಸವಾರರ ಹಿನ್ನೆಲೆ ಪರಿಶೀಲನೆಗಳಂತಹ ಸ್ಪಷ್ಟ ಮಾರ್ಗಸೂಚಿ ರೂಪಿಸಬಹುದು ಎಂದು ಹಲವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕಾನೂನುಬಾಹಿರ ಎಂದ ರಾಮಲಿಂಗಾ ರೆಡ್ಡಿ
ಆದರೆ ಸರ್ಕಾರದ ನಿಲುವಿನ ಬಗ್ಗೆ ಪ್ರಶ್ನಿಸಿದಾಗ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದು ಹೀಗೆ.. ನಮ್ಮ ನಿಲುವು ಯಾವಾಗಲೂ ಸ್ಪಷ್ಟವಾಗಿದೆ. ಬೈಕ್-ಟ್ಯಾಕ್ಸಿ ವ್ಯವಹಾರವು ಕಾನೂನುಬಾಹಿರವಾಗಿದೆ. ಏಕೆಂದರೆ ಇದು ವಾಣಿಜ್ಯ ಉದ್ದೇಶಗಳಿಗಾಗಿ ಖಾಸಗಿ ವಾಹನಗಳ ಬಳಕೆ ಮಾಡಲಾಗುತ್ತಿದೆ. ಇದು ಅಸ್ತಿತ್ವದಲ್ಲಿರುವ ಕಾನೂನು ಉಲ್ಲಂಘಿಸುತ್ತದೆ. ನ್ಯಾಯಾಲಯವು ಈಗ ಈ ಕಾರ್ಯಾಚರಣೆಗಳನ್ನು ನಿಲ್ಲಿಸಲು ಆದೇಶಿಸಿದೆ. ಈ ಆದೇಶವನ್ನು ಎಲ್ಲರೂ ಪಾಲಿಸಬೇಕು. ಬೈಕ್ ಟ್ಯಾಕ್ಸಿಗಳ ಭವಿಷ್ಯದ ಬಗ್ಗೆ ನನಗೆ ಯಾವುದೇ ಹೆಚ್ಚಿನ ಮಾಹಿತಿ ಇಲ್ಲ ಎಂದಿದ್ದಾರೆ.