ಕನ್ನಡ ಸುದ್ದಿ  /  Karnataka  /  Karnataka Is Standing Front In Agricultural Digitization Says Cm Bommai

Basavaraj Bommai: 'ಕೃಷಿ ಡಿಜಿಟಲೀಕರಣದಲ್ಲಿ ಕರ್ನಾಟಕವೇ ಮುಂದೆ, ರೈತರಿಂದಲೇ ಭೂಮಿಯ ಸಮೀಕ್ಷೆ'

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ಇಂದು ನೈಸರ್ಗಿಕ ‌ಕೃಷಿ ಮತ್ತು ಡಿಜಿಟಲ್ ಕೃಷಿ ಕುರಿತು ನಡೆದ ವಿಡಿಯೋ ಸಂವಾದದಲ್ಲಿ ಭಾಗವಹಿಸಿ ಸಿಎಂ ಮಾತನಾಡಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು : ಕೃಷಿ ಕ್ಷೇತ್ರದ ಡಿಜಿಟಲೀಕರಣದಲ್ಲಿ ನಮ್ಮದು ಮುಂಚೂಣಿಯಲ್ಲಿರುವ ರಾಜ್ಯ. ಈವರೆಗೆ ರೈತರು, ಸರ್ವೆ ನಂಬರ್ ಹಾಗೂ ಆಧಾರ್‌ಗಳನ್ನು ಜೋಡಿಸಲಾಗಿದ್ದು, 78 ಲಕ್ಷ ರೈತರನ್ನು ಈ ವ್ಯಾಪಿಗೆ ತರಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ಇಂದು ನೈಸರ್ಗಿಕ ‌ಕೃಷಿ ಮತ್ತು ಡಿಜಿಟಲ್ ಕೃಷಿ ಕುರಿತು ನಡೆದ ವಿಡಿಯೋ ಸಂವಾದದಲ್ಲಿ ಭಾಗವಹಿಸಿ ಸಿಎಂ ಮಾತನಾಡಿದರು.

ಕೇಂದ್ರ ಕೃಷಿ ಪ್ರಧಾನ ಕಾರ್ಯದರ್ಶಿಗಳು ಕೃಷಿ ಡಿಜಿಟಲೀಕರಣದಲ್ಲಿ ಕರ್ನಾಟಕ ಮುಂದಿರುವ ಬಗ್ಗೆ ಬೊಮ್ಮಾಯಿ ಪ್ರಸ್ತಾಪಿಸಿದರು. ಭೂಮಿ ತಂತ್ರಜ್ಞಾನದಡಿ ಈ ಹಿಂದೆಯೇ ಡಿಜಿಟಲೀಕರಣವಾಗಿದೆ. 62 ಲಕ್ಷ ಭೂಮಿಯುಳ್ಳ ಹಾಗೂ 16 ಲಕ್ಷ ಭೂ ರಹಿತರನ್ನೂ ತಂತ್ರಾಂಶದಲ್ಲಿ ಸೇರಿಸಲಾಗಿದೆ. ಫ್ರೂಟ್ಸ್ ಯೋಜನೆಯನ್ನು ಎಲ್ಲಾ ರಾಜ್ಯಗಳು ಅಳವಡಿಸಿಕೊಳ್ಳುತ್ತಿವೆ ಎಂದರು. ಈ ತಂತ್ರಾಂಶವನ್ನು ನಿರಂತರವಾಗಿ ಸುಧಾರಣೆ ಮಾಡಲಾಗುತ್ತಿದೆ. ಇದರ ಉಪಯೋಗ ಪಡೆದು ರೈತರನ್ನು ಜೋಡಿಸಲಾಗಿದೆ. ಕೇಂದ್ರ ಸರ್ಕಾರದ ಸ್ವಮಿತ್ವ ಯೋಜನೆಯನ್ನು ಕರ್ನಾಟಕದಲ್ಲಿ ಅಭಿಯಾನದ ರೀತಿಯಲ್ಲಿ ಕೈಗೊಂಡಿದೆ ಎಂದರು.

ಕ್ರಾಂತಿಕಾರಿ ನ್ಯಾನೋ ಯೂರಿಯಾ

ಕೃಷಿ ಕ್ಷೇತ್ರದಲ್ಲಿ ನ್ಯಾನೋ ಯೂರಿಯಾ ಕ್ರಾಂತಿಯನ್ನು ಉಂಟುಮಾಡಿದ್ದು, ಮೊದಲ ನ್ಯಾನೋ ಯೂರಿಯಾ ಘಟಕ ಬೆಂಗಳೂರಿನಲ್ಲಿದೆ. ಅಧ್ಯಯನ ಮಾಡಿ, ರೈತರಿಗೂ ಪರಿಚಯಿಸಲಾಗಿದೆ. ಮುಂದಿನ ದಿನಗಳಲ್ಲಿ ರಾಷ್ಟ್ರಮಟ್ಟದಲ್ಲಿ ಉತ್ತಮ ಪ್ರತಿಕ್ರಿಯೆ ಹಾಗೂ ಬೆಂಬಲವಿದೆ ಎಂದು ಸಿಎಂ ತಿಳಿಸಿದರು.

ಡಿಜಿಟಲ್ ತಂತ್ರಜ್ಞಾನದ ಮೂಲಕ ರೈತರೇ ತಮ್ಮ ಭೂಮಿಯ ಸಮೀಕ್ಷೆ ಮಾಡುತ್ತಿದ್ದಾರೆ. ಈವರೆಗೆ 212 ಕೋಟಿ ಭೂ ಪ್ರದೇಶವನ್ನು ಡಿಜಿಟಲೀಕರಣಗೊಳಿಸಲಾಗಿದೆ. ಬೆಳೆ ಸಮೀಕ್ಷೆಯನ್ನು ರೈತರೇ ಮಾಡುತ್ತಿದ್ದಾರೆ. 212 ಕೋಟಿ ಪೈಕಿ16,584 ಬೆಳೆಗಳನ್ನು ರೈತರೇ ಸಮೀಕ್ಷೆ ಮಾಡಿದ್ದಾರೆ. 1.61ಕೋಟಿ ಪ್ರದೇಶವನ್ನು ಇಲಾಖೆ ಮಾಡಿದೆ. ಯಾವುದೇ ವ್ಯಾಜ್ಯಕ್ಕೆ ಎಡೆ ಮಾಡಿಕೊಡದಿರಲು ಶೇ.100 ರಷ್ಟು ರೈತರೇ ಸಮೀಕ್ಷೆ ಮಾಡಲು ಕ್ರಮ ವಹಿಸಲಾಗುತ್ತಿದೆ. ರೈತರು ಅತ್ಯಂತ ಪ್ರಾಮಾಣಿಕವಾಗಿ ಇದನ್ನು ನಡೆಸಿದ್ದಾರೆ ಎಂದು ತಿಳಿಸಿದರು.

ಕರ್ನಾಟಕ ನೈಸರ್ಗಿಕ ಕೃಷಿಯಲ್ಲಿ ಸಕ್ರಿಯ

ನೈಸರ್ಗಿಕ ಕೃಷಿ ದೀರ್ಘಕಾಲಿಕ ಯೋಜನೆಯಾಗಿದ್ದು, ಈ ಕುರಿತು ಸಂಶೋಧನೆ ಹಾಗೂ ಪ್ರಮಾಣೀಕರಣ ಅತ್ಯಂತ ಪ್ರಮುಖ ಅಂಶಗಳು ಮುಖ್ಯಮಂತ್ರಿ ಹೇಳಿದರು

ಪ್ರಧಾನಿ ನರೇಂದ್ರ ಮೋದಿಯವರ ರೈತರ ಆದಾಯ ದ್ವಿಗುಣಗೊಳಿಸುವ ಆಶಯದಂತೆ ಕರ್ನಾಟಕ ರಾಜ್ಯ ಮಹಾರಾಷ್ಟ್ರ ಹಾಗೂ ಗುಜರಾತ್ ರಾಜ್ಯಗಳೊಂದಿಗೆ ನೈಸರ್ಗಿಕ ಕೃಷಿಯನ್ನು ಸಕ್ರಿಯವಾಗಿ ಕೈಗೊಂಡಿದೆ.

ರಾಜ್ಯದಲ್ಲಿ 5 ಕೃಷಿ ಹಾಗೂ ತೋಟಗಾರಿಕಾ ವಿಶ್ವ ವಿದ್ಯಾಲಯಗಳಿದ್ದು, ವಿಶ್ವವಿದ್ಯಾಲಯಗಳ ನಿರಂತರ ಮೇಲ್ವಿಚಾರಣೆಯಲ್ಲಿ ನೈಸರ್ಗಿಕ ಕೃಷಿಯನ್ನು ತಲಾ ಒಂದು ಸಾವಿರ ಎಕರೆ ಪ್ರದೇಶದಲ್ಲಿ ಕೈಗೊಳ್ಳಲಾಗಿದೆ. ಬೆಳೆಗಳ ಗುಣಮಟ್ಟದಿಂದ ಹಿಡಿದು, ಉತ್ಪನ್ನ, ಪರೀಕ್ಷೆಗಳನ್ನು ಕೃಷಿ ಪ್ರಯೋಗಾಲಯದಲ್ಲಿ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

ನೈಸರ್ಗಿಕ ಕೃಷಿಗೆ ಪರಿವರ್ತನೆ

ರಾಜ್ಯದಲ್ಲಿ 2.4 ಲಕ್ಷ ಎಕರೆ ಭೂ ಪ್ರದೇಶದಲ್ಲಿ ಕೈಗೊಂಡಿರುವ ಸಾವಯವ ಕೃಷಿ ಭೂಮಿಯನ್ನು ನೈಸರ್ಗಿಕ ಕೃಷಿಗೆ ಕ್ರಮೇಣ ಪರಿವರ್ತಿಸಲಾಗುತ್ತಿದೆ. ಮುಂದಿನ ಮಾರ್ಚ್ ಒಳಗೆ ಹೊಸದಾಗಿ 1 ಲಕ್ಷ ಎಕರೆ ಪ್ರದೇಶವನ್ನು ನೈಸರ್ಗಿಕ ಕೃಷಿಗೆ ಪರಿವರ್ತನೆ ಮಾಡಲು ಗುರಿ ನಿಗದಿಪಡಿಸಲಾಗಿದೆ ಎಂದರು.

ನೈಸರ್ಗಿಕ ಕೃಷಿಗೆ 41,434 ಕೃಷಿಕರನ್ನು ಆಯ್ಕೆ ಮಾಡಲಾಗಿದ್ದು, 1100 ತರಬೇತಿ ಕಾರ್ಯಕ್ರಮಗಳು, 200 ಕ್ಷೇತ್ರ ಭೇಟಿಗಳನ್ನು ಕೈಗೊಂಡಿದೆ. ಅಲ್ಲದೆ ಕಾರ್ಯಾಗಾರಗಳನ್ನು ಕೈಗೊಳ್ಳಲಾಗಿದೆ. ಒಟ್ಟಾರೆ ಯೋಜನೆಯನ್ನು ಮಿಷನ್ ಮಾದರಿಯಲ್ಲಿ ಕಾರ್ಯಗತ ಮಾಡಲಾಗುತ್ತಿದೆ ಎಂದರು.

ಮಣ್ಣಿನ ಫಲವತ್ತತೆ

ನೈಸರ್ಗಿಕ ಕೃಷಿಯಲ್ಲಿ ವೈಜ್ಞಾನಿಕ ಅಂಶಗಳನ್ನು ಕೂಡ ಗಮನದಲ್ಲಿಟ್ಟುಕೊಂಡು ಮಣ್ಣಿನ ಫಲವತ್ತತೆ ಕಾಯ್ದುಕೊಳ್ಳಲು ಒತ್ತು ನೀಡಲಾಗಿದೆ. ಮಣ್ಣಿನಲ್ಲಿ ಸಾರಜನಕ ಹಾಗೂ ಕಾರ್ಬನ್ ಪ್ರಮಾಣ ಸೇರಿದಂತೆ ನೈಸರ್ಗಿಕ ಗೊಬ್ಬರ ಬಳಕೆಗೂ ಮಹತ್ವ ನೀಡಲಾಗಿದೆ. ಪೈಟೋಸೈನಾಸಿಸಿಸ್ ಪರಿಣಾಮದ ಬಗ್ಗೆ ಅಧ್ಯಯನ ಕೈಗೊಳ್ಳಲಾಗಿದೆ. ಈ ಕುರಿತಂತೆ ಅಧ್ಯಯನಗಳು ಉತ್ತಮ ಇಳುವರಿ ಹಾಗೂ ಉತ್ಪಾದನೆಗೆ ಎಡೆ ಮಾಡಿಕೊಡುತ್ತದೆ ಎಂದು ತಿಳಿಸಿದರು. ರೈತರು ಕೂಡ ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ ಎಂದರು.