ಕನ್ನಡ ಸುದ್ದಿ  /  Karnataka  /  Karnataka Latest News Kannada Live Updates Karnataka Cm Siddaramaiah Oath Taking Dk Shivakumar Cabinet Ministers Uks

ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪದಗ್ರಹಣ

Karnataka CM Live Updates: ದೇವರ ಹೆಸರಿನಲ್ಲಿ ಸಿದ್ದರಾಮಯ್ಯ, ಗಂಗಾಧರ ಅಜ್ಜನ ಹೆಸರಿನಲ್ಲಿ ಡಿಕೆ ಶಿವಕುಮಾರ್ ಪ್ರಮಾಣವಚನ ಸ್ವೀಕಾರ

08:15 AM ISTMeghana B
  • twitter
  • Share on Facebook
08:15 AM IST

ಇಂದು ಕರ್ನಾಟಕದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್‌ ಪ್ರಮಾಣವಚನ ಸ್ವೀಕರಿಸಲಿದ್ದು, ಕೆಲ ಶಾಸಕರೂ ಕೂಡ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಪದಗ್ರಹಣ ಸಮಾರಂಭ ನಡೆಯಲಿದ್ದು, ಇದರ ಲೈಪ್​ ಅಪ್​ಡೇಟ್ಸ್​​ ಇಲ್ಲಿದೆ.

Sat, 20 May 202308:14 AM IST

ಒಗ್ಗಟ್ಟು ಪ್ರದರ್ಶನ

ಪದಗ್ರಹಣ ಸಮಾರಂಭದಲ್ಲಿ ಕರ್ನಾಟಕದ ಹಾಗೂ ರಾಷ್ಟ್ರೀಯ ಕಾಂಗ್ರೆಸ್​ ನಾಯಕರ ಜೊತೆ ಸೇರಿ ತಮಿಳುನಾಡು, ಬಿಹಾರ, ರಾಜಸ್ಥಾನ, ಜಮ್ಮು-ಕಾಶ್ಮೀರ, ಮಧ್ಯಪ್ರದೇಶ, ಜಾರ್ಖಂಡ್​, ಛತ್ತೀಸ್‌ಗಡದ ಘಟಾನುಘಟಿ ನಾಯಕರು ಒಗ್ಗಟ್ಟು ಪ್ರದರ್ಶಿಸಿದರು.

Sat, 20 May 202308:12 AM IST

ಪ್ರಣಾಳಿಕೆಯ ಎಲ್ಲ ಆಶ್ವಾಸನೆ ಈಡೇರಿಸುತ್ತೇವೆ:  ಸಿದ್ದರಾಮಯ್ಯ 

ನಾವು ಪ್ರಣಾಳಿಕೆಯಲ್ಲಿ ಕೊಟ್ಟಿರುವ ಎಲ್ಲ ಆಶ್ವಾಸನೆಗಳನ್ನು ಈಡೇರಿಸುತ್ತೇವೆ. ನುಡಿದಂತೆ ನಡೆಯುತ್ತೇವೆ ಎಂದು ಸಿದ್ದರಾಮಯ್ಯ ಭಾಷಣ ಮುಗಿಸಿದರು.

Sat, 20 May 202308:11 AM IST

ಇಂದಿನಿಂದಲೇ 5 ಗ್ಯಾರಂಟಿ ಜಾರಿ: ಸಿದ್ದರಾಮಯ್ಯ

ಕನ್ನಡದ ಎಲ್ಲ ಜನರಿಗೆ ಧನ್ಯವಾದ ಹೇಳ್ತೀನಿ. ಜನರ ನಿರೀಕ್ಷೆಗೆ ತಕ್ಕ ಆಡಳಿತ ಕೊಡ್ತೇವೆ. ಜನರು ಬದಲಾವಣೆ ಬಯಸಿದ್ದಾರೆ. ಅವರಿಗೆ ಕೊಟ್ಟಿರುವ 5 ಗ್ಯಾರೆಂಟಿಗಳನ್ನೂ ಇವತ್ತು ಕ್ಯಾಬಿನೆಟ್‌ ಒಪ್ಪಿಗೆ ಮೂಲಕ 5 ಗ್ಯಾರಂಟಿ ಜಾರಿ ಮಾಡ್ತೇವೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.

Sat, 20 May 202308:09 AM IST

ಕಾಂಗ್ರೆಸ್‌ಗೆ ಸಿಕ್ಕ ಜಯ, 7 ಕೋಟಿ ಕನ್ನಡಿಗರ ಜಯ: ಸಿದ್ದರಾಮಯ್ಯ

ನಾಡಿನ ಕೋಟ್ಯಂತರ ಜನರ ಆಶೀರ್ವಾದದಿಂದ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬರಲು ಈ ರಾಜ್ಯದ ಜನರ ಆಶೀರ್ವಾದ ಕಾರಣ. ರಾಜ್ಯದಲ್ಲಿ ಪ್ರಚಾರ ಆರಂಭವಾಗಿದ್ದು ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯ ಮೂಲಕ. ಪ್ರಚಾರ ಮಾಡಿದ ಎಲ್ಲ ನಾಯಕರಿಗೂ ನಾನು ಹೃದಯ ತುಂಬಿದ ಧನ್ಯವಾದ ಅರ್ಪಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು. ತಮ್ಮನ್ನು ಬೆಂಬಲಿಸಿದ ಸಾಹಿತಿಗಳು ಮತ್ತು ಚಿಂತರಕರನ್ನೂ ಸ್ಮರಿಸಿದರು.

Sat, 20 May 202308:07 AM IST

ಸಿದ್ದರಾಮಯ್ಯ ವಂದನಾರ್ಪಣೆ: ಜನರಿಂದ ಹರ್ಷೋದ್ಗಾರ

ವಂದನಾರ್ಪಣೆ ಮಾಡಲು ಸಿದ್ದರಾಮಯ್ಯ ಮೈಕ್ ಬಳಿಗೆ ಬಂದ ತಕ್ಷಣ ಜನರು ಶಿಳ್ಳೆ ಹೊಡೆದು ಸ್ವಾಗತಿಸಿದರು. ಹರ್ಷೋದ್ಗಾರ, ಘೋಷಣೆಗಳ ಆರ್ಭಟ ಹೆಚ್ಚಾದಾಗ ಸಿದ್ದರಾಮಯ್ಯ ಅವರೇ ಕೈ ಸನ್ನೆ ಮಾಡಿ ಸುಮ್ಮನಾಗಿಸಿದರು.

Sat, 20 May 202308:06 AM IST

ನಮ್ಮದು ಪ್ರೀತಿಯ ಸರ್ಕಾರ: ಮಲ್ಲಿಕಾರ್ಜುನ ಖರ್ಗೆ

ನಾವು ಎಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗುತ್ತೇವೆ. ನಮ್ಮದು ಪ್ರೀತಿಯ ಸರ್ಕಾರ ಎಂದು ಖರ್ಗೆ ಹೇಳಿದರು.

Sat, 20 May 202308:05 AM IST

ಜಪಾನ್‌ಗೆ ಮೋದಿ ಹೋದರೆ ನೋಟ್ ಬಂದಿ ಆದೇಶ: ಖರ್ಗೆ ವ್ಯಂಗ್ಯ

ಹಿಂದೆ ಮೋದಿ ಜಪಾನ್‌ಗೆ ಹೋದಾಗ 1,000 ರೂಪಾಯಿ ನೋಟ್ ಬಂದಿ ಮಾಡಿದ್ದರು. ಈಗ ಹೋಗಿದ್ದಾರೆ 2,000 ನೋಟ್‌ ಬಂದಿ ಮಾಡಿದ್ದಾರೆ. ದೇಶಕ್ಕೆ ಆಗುವ ನಷ್ಟದ ಬಗ್ಗೆ ಅವರಿಗೆ ಲಕ್ಷ್ಯವಿಲ್ಲ. ಇದು ಈ ದೇಶದ ಜನರಿಗೆ ತೊಂದರೆ ಕೊಡುವ ಕೆಲಸ. ಆದರೆ ನಮ್ಮ ಸರ್ಕಾರ ಹಾಗಲ್ಲ ಎಂದು ಖರ್ಗೆ ಒತ್ತಿ ಹೇಳಿದರು.

Sat, 20 May 202308:04 AM IST

ಗ್ಯಾರೆಂಟಿಗಳನ್ನು ಈಡೇರಿಸುತ್ತೇವೆ: ಮಲ್ಲಿಕಾರ್ಜುನ ಖರ್ಗೆ

ನಾವು ನೀಡಿರುವ ಎಲ್ಲ ಭರವಸೆಗಳನ್ನು ಈಡೇರಿಸುತ್ತೇವೆ. ಹಿಂದೆಯೂ ನಾವು ಕೆಲಸ ಮಾಡಿ ತೋರಿಸಿದ್ದೇವೆ. ಬಿಜೆಪಿಯಂತೆ ನಮ್ಮದು ಹೇಳೋದೊಂದು-ಮಾಡೋದು ಮತ್ತೊಂದು ಅಲ್ಲ. ನಾವು ಏನು ಹೇಳ್ತೀವೋ ಅದನ್ನೇ ಮಾಡ್ತೀವಿ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು. 

Sat, 20 May 202308:02 AM IST

ಎಲ್ಲರಿಗೂ ನಮ್ಮ ಸರ್ಕಾರ ಆಸರೆ: ರಾಹುಲ್ ಗಾಂಧಿ

ರಾಜ್ಯದ ಎಲ್ಲ ಜನಸಾಮಾನ್ಯರ ಜೊತೆಗೆ ನಮ್ಮ ಸರ್ಕಾರ ನಿಲ್ಲುತ್ತದೆ. ಕರ್ನಾಟಕದ ಎಲ್ಲ ಯುವಜನರು, ಮಾತೆಯರು ಮತ್ತು ಭಗಿನಿಯರಿಗೆ ಧನ್ಯವಾದ ಅರ್ಪಿಸುತ್ತೇನೆ. ನಿಮ್ಮ ಪ್ರೀತಿಯ ಶಕ್ತಿಯನ್ನು ನಮಗೆ ಕೊಟ್ಟಿದ್ದೀರಿ. ಇದನ್ನು ಕಾಂಗ್ರೆಸ್ ಪಕ್ಷ ಎಂದಿಗೂ ಮರೆಯುವುದಿಲ್ಲ. ಈ ಸರ್ಕಾರವು ಕರ್ನಾಟಕದ ಜನರ ಸರ್ಕಾರ, ಇದು ನಿಮ್ಮ ಸರ್ಕಾರ. ಇದು ಮನಃಪೂರ್ವಕವಾಗಿ ನಿಮ್ಮ ಪರವಾಗಿ ಕೆಲಸ ಮಾಡುತ್ತದೆ ಎಂದು ರಾಹುಲ್ ಗಾಂಧಿ ತಮ್ಮ ಭಾಷಣ ಮುಗಿಸಿದರು.

Sat, 20 May 202308:00 AM IST

ನಮ್ಮ ಗ್ಯಾರೆಂಟಿಗಳನ್ನು ಈಡೇರಿಸುತ್ತೇವೆ: ರಾಹುಲ್ ಗಾಂಧಿ

ಉಚಿತ ವಿದ್ಯುತ್, ಅನ್ನಭಾಗ್ಯ, ಗೃಹಲಕ್ಷ್ಮೀ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ, ವಿದ್ಯಾವಂತ ಯುವಜನರಿಗಾಗಿ ಯುವನಿಧಿ ಗ್ಯಾರೆಂಟಿಗಳನ್ನು ನಮ್ಮ ಸರ್ಕಾರದ ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ಕಾನೂನಾಗಿ ಜಾರಿ ಮಾಡುತ್ತೇವೆ. ನಾನು ನುಡಿದಂತೆ ನಡೆಯುತ್ತೇವೆ ಎಂದು ರಾಹುಲ್ ಗಾಂಧಿ ಸ್ಪಷ್ಟಪಡಿಸಿದರು.

Sat, 20 May 202307:59 AM IST

ಬಿಜೆಪಿಯ ಭ್ರಷ್ಟಾಚಾರವನ್ನು ನೀವು ಸೋಲಿಸಿದ್ದೀರಿ: ರಾಹುಲ್ ಗಾಂಧಿ

ಬಿಜೆಪಿಯ ಎಲ್ಲ ಶಕ್ತಿಯನ್ನೂ ಕರ್ನಾಟಕದ ಜನಬಲ ಸೋಲಿಸಿದೆ. ಅವರ ದ್ವೇಷದ ರಾಜಕಾರಣವನ್ನು ನೀವು ತಿರಸ್ಕರಿಸಿದ್ದೀರಿ. ದ್ವೇಷವನ್ನು ತಿರಸ್ಕರಿಸಿ, ಪ್ರೀತಿ ಬೆಳೆಸಿ ಎಂಬ ನಮ್ಮ ಭಾರತ್ ಜೋಡೋ ಸಂದೇಶಕ್ಕೆ ನೀವು ಓಗೊಟ್ಟಿದ್ದೀರಿ. ನಿಮಗೆ ಧನ್ಯವಾದ ಎಂದು ರಾಹುಲ್ ಗಾಂಧಿ ಹೇಳಿದರು.

Sat, 20 May 202307:59 AM IST

ನಮ್ಮ ಜೊತೆಗೆ ಬಡವರು ಇದ್ದಾರೆ: ರಾಹುಲ್ ಗಾಂಧಿ

ಕಳೆದ 5 ವರ್ಷಗಳಲ್ಲಿ ಆದ ತೊಂದರೆ ನಿಮಗೆ ಗೊತ್ತಿದೆ. ನಿಮ್ಮೆಲ್ಲರ ಸಹಕಾರದಿಂದ ಕಾಂಗ್ರೆಸ್‌ಗೆ ಗೆಲುವು ಬಂದಿದೆ. ಕರ್ನಾಟಕದ ಬಡವರು, ದಲಿತರು, ಹಿಂದುಳಿದವರ ಜೊತೆಗೆ ಕಾಂಗ್ರೆಸ್ ನಿಂತಿದೆ. ಆದರೆ ಬಿಜೆಪಿ ಜೊತೆಗೆ ಹಣಬಲ, ಪೊಲೀಸ್, ಅಧಿಕಾರ ಇತ್ತು ಎಂದು ರಾಹುಲ್ ಹೇಳಿದರು.

Sat, 20 May 202307:59 AM IST

Rahul Gandhi: ಕರ್ನಾಟಕದ ಜನರಿಗೆ ರಾಹುಲ್ ಗಾಂಧಿ ಧನ್ಯವಾದ

 ಬೆಂಗಳೂರಿನಲ್ಲಿ ಸಚಿವರು ಪ್ರಮಾಣವಚನ ಸ್ವೀಕರಿಸಿದ ಬಳಿಕ ಮಾತನಾಡುತ್ತಿರುವ ರಾಹುಲ್ ಗಾಂಧಿ, ಕರ್ನಾಟಕದ ಜನರಿಗೆ ಹೃದಯಪೂರ್ವಕ ಧನ್ಯವಾದ ಅರ್ಪಿಸಿದ್ದಾರೆ. 

Sat, 20 May 202307:47 AM IST

ರಾಷ್ಟ್ರಗೀತೆಯೊಂದಿಗೆ ಸಮಾರಂಭ ಮುಕ್ತಾಯ

ಸಿದ್ದರಾಮಯ್ಯ, ಡಿಕೆಶಿ ಸೇರಿ ಒಟ್ಟು 10  ಮಂದಿ ಇಂದು ಪ್ರಮಾಣವಚನ ಸ್ವೀಕರಿಸಿದ್ದು, ಕಾರ್ಯಕ್ರಮ ಮುಕ್ತಾಯವಾಗಿದೆ. ರಾಷ್ಟ್ರಗೀತೆಯೊಂದಿಗೆ ಸಮಾರಂಭಕ್ಕೆ ತೆರೆ ಎಳೆಯಲಾಯಿತು. 

Sat, 20 May 202307:45 AM IST

ತಾಯಿಯ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಜಮೀರ್ ಅಹಮದ್ ಖಾನ್

ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲು ಚಾಮರಾಜಪೇಟೆ ಶಾಸಕ ಬಿ.ಝಡ್.ಜಮೀರ್ ಅಹಮದ್ ಖಾನ್ ಅವರನ್ನು ಆಹ್ವಾನಿಸಿದಾಗ ನೆರೆದಿದ್ದ ಜನರು ಕೇಕೆ ಹಾಕಿ, ಜಯಕಾರ ಕೂಗಿ ಸಂಭ್ರಮಿಸಿದರು. ಜಮೀರ್ ಅವರು ಅಲ್ಲಾಹ್ ಹಾಗೂ ತಮ್ಮ ತಾಯಿಯ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ತಾಯಿಯ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು ಎಲ್ಲರ ಗಮನ ಸೆಳೆಯಿತು.

Sat, 20 May 202307:44 AM IST

ಇಂಗ್ಲಿಷ್​ನಲ್ಲಿ ಜಮೀರ್​ ಅಹ್ಮದ್ ಪ್ರಮಾಣವಚನ 

ಚಾಮರಾಜಪೇಟೆ ಶಾಸಕ ಜಮೀರ್​ ಅಹ್ಮದ್ ಇಂಗ್ಲಿಷ್​ನಲ್ಲಿ ಪ್ರಮಾಣವಚನ ಸ್ವೀಕರಿಸಿದರು. 

Sat, 20 May 202307:37 AM IST

ಪ್ರಿಯಾಂಕ್​ ಖರ್ಗೆ ಪದಗ್ರಹಣ 

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಪುತ್ರ, ಚಿತ್ತಾಪುರ ಶಾಸಕ ಪ್ರಿಯಾಂಕ್​ ಖರ್ಗೆ ಸಚಿವರಾಗಿ ಪದಗ್ರಹಣ ಮಾಡಿದ್ದಾರೆ. 

Sat, 20 May 202307:35 AM IST

ಸತೀಶ್​ ಜಾರಕಿಹೊಳಿ ಪ್ರಮಾಣವಚನ 

ಮಾಜಿ ಸಚಿವ ಸತೀಶ್​ ಜಾರಕಿಹೊಳಿ ಅವರು ಮತ್ತೊಮ್ಮೆ ಕರ್ನಾಟಕದ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

Sat, 20 May 202307:34 AM IST

ಪರಮೇಶ್ವರ್​,  ಜಾರ್ಜ್, ಎಂಬಿ ಪಾಟೀಲ್​, ಮುನಿಯಪ್ಪ ಪದಗ್ರಹಣ PHOTOS

Sat, 20 May 202307:31 AM IST

ಎಂ ಬಿ ಪಾಟೀಲ್​ ಪ್ರಮಾಣವಚನ

ಮಾಜಿ ಗೃಹ ಸಚಿವ ಎಂ ಬಿ ಪಾಟೀಲ್ ಅವರು ರಾಜ್ಯದ ಸಚಿವರಾಗಿ ಪ್ರಮಾಣವಚನ ಸ್ವೀಕರಿಸದ್ದಾರೆ.

Sat, 20 May 202307:30 AM IST

ಕೆಜೆ ಜಾರ್ಜ್​ ಪದಗ್ರಹಣ

 ಮಾಜಿ ಸಚಿವ ಕೆಜೆ ಜಾರ್ಜ್​ ಅವರು ಮತ್ತೊಮ್ಮೆ ಕರ್ನಾಟಕದ ಮಂತ್ರಿಯಾಗಿ ಪದಗ್ರಹಣ ಮಾಡಿದರು 

Sat, 20 May 202307:28 AM IST

Video: ಸಿದ್ದರಾಮಯ್ಯ ಪದಗ್ರಹಣ ಕಾರ್ಯಕ್ರಮಕ್ಕೆ ಹರಿದು ಬಂದ ಜನಸಾಗರ

Sat, 20 May 202307:26 AM IST

ಕೆ ಹೆಚ್​ ಮುನಿಯಪ್ಪ ಪ್ರಮಾಣವಚನ 

ಮಾಜಿ ಸಂಸದ ಕೆ ಹೆಚ್​ ಮುನಿಯಪ್ಪ ಅವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಹಲವು ಬಾರಿ ಸಂಸದರಾಗಿದ್ದ ಇವರು ಇದೇ ಮೊದಲ ಬಾರಿಗೆ ಕರ್ನಾಟಕ ವಿಧಾನಸಭೆ ಪ್ರವೇಶಿಸಿದ್ದಾರೆ. 

Sat, 20 May 202307:21 AM IST

ಸಚಿವರಾಗಿ ಡಾ.ಜಿ.ಪರಮೇಶ್ವರ ಪದಗ್ರಹಣ

ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಪ್ರಮಾಣವಚನ ಬೋಧಿಸಿದರು. ಅವರು ಸಂವಿಧಾನದ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.

Sat, 20 May 202307:23 AM IST

ಉಪಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್‌ ಪದಗ್ರಹಣ

ಹಾಲಿ ಕಾಂಗ್ರೆಸ್‌ ಸರ್ಕಾರದ ಏಕೈಕ ಉಪಮುಖ್ಯಮಂತ್ರಿಯಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಪ್ರಮಾಣವಚನ ಬೋಧಿಸಿದರು. ಇದೇ ಮೊದಲ ಸಲ ಉಪಮುಖ್ಯಮಂತ್ರಿಯಾಗಿ ಅವರು ಅಧಿಕಾರ ಸ್ವೀಕರಿಸಿದರು. ಅವರು ಶ್ರೀ ಗಂಗಾಧರ ಅಜ್ಜನ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದರು.

 ಡಿಕೆ ಶಿವಕುಮಾರ್‌ ಪದಗ್ರಹಣ
ಡಿಕೆ ಶಿವಕುಮಾರ್‌ ಪದಗ್ರಹಣ

Sat, 20 May 202307:14 AM IST

ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪದಗ್ರಹಣ

ಸಿದ್ದರಾಮಯ್ಯ ಅವರು ಎರಡನೇ ಸಲ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದರು. ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಪ್ರಮಾಣವಚನ ಬೋಧಿಸಿದರು. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.

Sat, 20 May 202307:11 AM IST

ವೇದಿಕೆಗೆ ರಾಜ್ಯಪಾಲರ ಆಗಮನ

ರಾಜ್ಯಪಾಲ ಥಾವರ್‌ಚಂದ ಗೆಹ್ಲೋಟ್‌ ಅವರು ಕಾರ್ಯಕ್ರಮದ ವೇದಿಕೆಗೆ ಆಗಮಿಸಿದರು. ಪ್ರಮಾಣವಚನ ಕಾರ್ಯಕ್ರಮ ಶೀಘ್ರವೇ ಶುರುವಾಗಲಿದೆ. ಪಕ್ಷದ ಯೂಟ್ಯೂಬ್‌ ಚಾನೆಲ್‌ನಲ್ಲಿ ಕಾರ್ಯಕ್ರಮದ ನೇರ ಪ್ರಸಾರ ಇರಲಿದೆ.

Sat, 20 May 202307:07 AM IST

ವೇದಿಕೆ ಮೇಲೆ ಗಣ್ಯರ ಸಾಲು

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ, ತೇಜಸ್ವಿ ಯಾದವ್‌, ನಿತೀಶ್‌ ಕುಮಾರ್‌, ಫಾರೂಕ್‌ ಅಬ್ದುಲ್ಲಾ, ಶರದ್‌ ಪವಾರ್‌, ಎಂ.ಕೆ.ಸ್ಟಾಲಿನ್‌, ಅಶೋಕ್‌ ಗೆಹ್ಲೋಟ್‌, ಕಮಲನಾಥ್‌ ಮತ್ತು ಇತರೆ ಗಣ್ಯರ ಉಪಸ್ಥಿತಿ ಇದೆ.

Sat, 20 May 202307:05 AM IST

ಬಿಹಾರ, ಛತ್ತೀಸ್‌ಗಢ, ಹಿಮಾಚಲ ಸಿಎಂಗಳು..

ಬಿಹಾರ ಸಿಎಂ ನಿತೀಶ್ ಕುಮಾರ್, ಛತ್ತೀಸ್‌ಗಢ ಸಿಎಂ ಭೂಪೇಶ್ ಬಾಘೇಲ್, ಹಿಮಾಚಲ ಪ್ರದೇಶ ಸಿಎಂ ಸುಖವಿಂದರ್ ಸಿಂಗ್ ಸುಖು ಮತ್ತು ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಬೆಂಗಳೂರಿನಲ್ಲಿ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಿದ್ದಾರೆ.

Sat, 20 May 202307:03 AM IST

ಹೊಸ ಹುರುಪಿನೊಂದಿಗೆ ಸಿದ್ದರಾಮಯ್ಯ

ಪ್ರಮಾಣವಚನ ಕಾರ್ಯಕ್ರಮದ ವೇದಿಕೆ ಏರಿದ ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊಸ ಹುರುಪಿನಲ್ಲಿರುವುದು ಕಂಡುಬಂದಿದೆ. ನಿಯೋಜಿತ ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಅವರ ಕೈ ಮೇಲೆತ್ತಿ ಹೊಂದಾಣಿಕೆ ಪ್ರದರ್ಶನ ಮಾಡಿದರು. ರಾಹುಲ್‌ ಗಾಂಧಿ ಕೂಡ ಈ ಸಂದರ್ಭದಲ್ಲಿ ಜತೆಗೂಡಿ ಒಗ್ಗಟ್ಟು ಪ್ರದರ್ಶನಕ್ಕೆ ಸಾಥ್‌ ನೀಡಿದರು.

Sat, 20 May 202306:58 AM IST

ರಾಜಭವನದಿಂದ ಹೊರಟ ರಾಜ್ಯಪಾಲರು

ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪ್ರಮಾಣ ವಚನ ಬೋಧಿಸಲೆಂದು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ರಾಜಭವನದಿಂದ ಹೊರಟರು. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೂ ಸೇರಿದಂತೆ ಹಲವು ಗಣ್ಯರು ನೆರೆದಿದ್ದು ಇನ್ನು ಕೆಲವೇ ನಿಮಿಷಗಳಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ಆರಂಭವಾಗಲಿದೆ.

Sat, 20 May 202306:58 AM IST

ಅಶೋಕ್ ಗೆಹ್ಲೋಟ್-ಡಿಕೆಶಿ ಆತ್ಮೀಯ ಕ್ಷಣ

ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಮತ್ತು ಡಿಕೆ ಶಿವಕುಮಾರ್ ಅವರ ಆತ್ಮೀಯ ಕ್ಷಣ ನೋಡಿ 

Sat, 20 May 202306:55 AM IST

ಕಾರ್ಯಕ್ರಮಕ್ಕೆ ಮೆಹಬೂಬಾ ಮುಫ್ತಿ

ಜಮ್ಮು-ಕಾಶ್ಮೀರದ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು ಬೆಂಗಳೂರಿನಲ್ಲಿ ನಡೆಯಲಿರುವ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಿದ್ದಾರೆ.

Sat, 20 May 202306:46 AM IST

ತಮಿಳುನಾಡು ಸಿಎಂ ಸ್ಟಾಲಿನ್​ಗೆ ಸ್ಚಾಗತ 

ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ಆಗಮಿಸಿಸ ತಮಿಳುನಾಡು ಸಿಎಂ ಎಂ ಕೆ ಸ್ಟಾಲಿನ್​ ಹಾಗೂ ಇತರ ಡಿಎಂಕೆ ನಾಯಕರನ್ನು ಡಿಕೆ ಶಿವಕುಮಾರ್​ ಬರಮಾಡಿಕೊಂಡರು. 

Sat, 20 May 202306:44 AM IST

ಸಮಾರಂಭಕ್ಕೆ ಕಮಲ್​ ಹಾಸನ್​ 

ಪದಗ್ರಹಣ ಸಮಾರಂಭಕ್ಕೆ ಬಹುಭಾಷಾ ನಟ ಮತ್ತು ಮಕ್ಕಳ್‌ ನಿಧಿ ಮೈಯಂ ಪಕ್ಷದ  ಮುಖ್ಯಸ್ಥ ಕಮಲ್​ ಹಾಸನ್​ ಬಂದಿದ್ದಾರೆ. ಸ್ಯಾಂಡಲ್​ವುಡ್​ ಹಿರಿಯ ನಟಿ, ಕಾಂಗ್ರೆಸ್​ ನಾಯಕಿ ಉಮಾಶ್ರೀ, ನಟ ದುನಿಯಾ ವಿಜಯ್​ ಕೂಡ ಹಾಜರಿದ್ದಾರೆ.

Sat, 20 May 202306:41 AM IST

ಪ್ರಿಯಾಂಕ್ ಖರ್ಗೆ, ಪರಮೇಶ್ವರ್ ಆಗಮನ 

ಕಾಂಗ್ರೆಸ್ ಶಾಸಕರಾದ ಪ್ರಿಯಾಂಕ್ ಖರ್ಗೆ, ಡಾ ಜಿ ಪರಮೇಶ್ವರ್​ ಮತ್ತು ಸಂಸದ ಡಿ ಕೆ ಸುರೇಶ್ ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣಕ್ಕೆ ಆಗಮಿಸಿದ್ದಾರೆ.

ಪ್ರಿಯಾಂಕ್ ಖರ್ಗೆ ಮತ್ತು ಡಾ ಜಿ ಪರಮೇಶ್ವರ ಅವರು ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. 

Sat, 20 May 202306:35 AM IST

Karnataka CM oath taking: ಪದಗ್ರಹಣ ಸಮಾರಂಭದ ನೇರಪ್ರಸಾರ​ ಇಲ್ಲಿ ವೀಕ್ಷಿಸಿ 

ಕರ್ನಾಟಕದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ಡಿಸಿಎಂ ಆಗಿ ಡಿಕೆ ಶಿವಕುಮಾರ್‌ ಮತ್ತು 8 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿತವಾಗಿರುವ ಈ ಕಾರ್ಯಕ್ರಮದ ನೇರ ಪ್ರಸಾರ ಇಲ್ಲಿದೆ.

Sat, 20 May 202306:30 AM IST

ಕಂಠೀರವ ಸ್ಟೇಡಿಯಂಗೆ ಬಂದ ಡಿಕೆಶಿ

ಪದಗ್ರಹಣ ಸಮಾರಂಭ ನಡೆಯಲಿರುವ ಬೆಂಗಳೂರಿನ ಠೀರವ ಸ್ಟೇಡಿಯಂಗೆ ಡಿಕೆ ಶಿವಕುಮಾರ್​ ಬಂದಿದ್ದು, ಶೀಘ್ರದಲ್ಲೇ ಕರ್ನಾಟಕ ಡಿಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

Sat, 20 May 202306:23 AM IST

ಡಿಕೆಶಿ ಪದಗ್ರಹಣ

Sat, 20 May 202306:22 AM IST

ಬೆಂಗಳೂರಿಗೆ ಬಂದ ರಾಹುಲ್​, ಪ್ರಿಯಾಂಕಾ 

ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ಬೆಂಗಳೂರಿಗೆ ಬಂದ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಡಿಕೆ ಶಿವಕುಮಾರ್​ ಸ್ವಾಗತಿಸಿದರು.

Sat, 20 May 202305:59 AM IST

Video: ಚಾಲೆಂಜ್‌ಗಳಿಗೆ ಎದೆಯೊಡ್ಡುವ ಟ್ರಬಲ್ ಶೂಟರ್‌ ಡಿಕೆ ಶಿವಕುಮಾರ್‌

ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕು, ದೊಡ್ಡ ಆಲಹಳ್ಳಿ ಗ್ರಾಮದ ಕೆಂಪೇಗೌಡ ಹಾಗೂ ಗೌರಮ್ಮ ದಂಪತಿಯ ಪ್ರಥಮ ಪುತ್ರನಾಗಿ ಡಿ.ಕೆ.ಶಿವಕುಮಾರ್ 15ನೇ ಮೇ, 1962ರಂದು ಜನಿಸಿದರು. ತಮ್ಮ 18ನೇ ವಯಸ್ಸಿನಲ್ಲಿಯೇ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ವಿಭಾಗವಾದ ಎನ್‌ಎಸ್‌ಯುಐಗೆ ಸೇರ್ಪಡೆಯಾದರು. 1985ರ ಸಾತನೂರು ವಿಧಾನಸಭಾ ಕ್ಷೇತ್ರದಲ್ಲಿ ದೇವೇಗೌಡರ ವಿರುದ್ಧ ಸ್ಪರ್ಧಿಸಿ ಸೋತರು. ಆದರೆ ಚುನಾವಣೆಯಲ್ಲಿ ದೇವೇಗೌಡರಿಗೆ ಸಾಕಷ್ಟು ಪ್ರಬಲ ಪ್ರತಿರೋಧ ತೋರಿ ಗಮನ ಸೆಳೆದರು. ನಂತರ ಒಂದೊಂದೇ ಮೆಟ್ಟಿಲುಗಳನ್ನ ಹತ್ತಿದ ಡಿಕೆ ಶಿವಕುಮಾರ್ ಈಗ ರಾಜ್ಯದ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

Sat, 20 May 202305:55 AM IST

Video: ಬೆಟ್ಟದಂಥ ಸವಾಲುಗಳನ್ನೂ ಗೆದ್ದ ರಾಜ್ಯದ ಮಹಾನಾಯಕ ಸಿದ್ದರಾಮಯ್ಯ

ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಎರಡನೇ ಬಾರಿಗೆ ಅಧಿಕಾರ ಸ್ವೀಕರಿಸುತ್ತಿದ್ದಾರೆ. ರಾಜಕೀಯವಾಗಿ ಸಿದ್ದರಾಮಯ್ಯನವರು ಎಷ್ಟು ಕ್ರೀಯಾಶೀಲರೋ, ವೈಯಕ್ತಿಕ ಬದುಕಿನಲ್ಲೂ ಅಷ್ಟೇ ವಿಭಿನ್ನ.. ಮೈಸೂರು ತಾಲೂಕು ವರುಣಾ ಹೋಬಳಿಯ ಸಿದ್ಧರಾಮನಹುಂಡಿ ಸಿದ್ದರಾಮಯ್ಯನವರ ಹುಟ್ಟೂರು. 1948 ರ ಆಗಸ್ಟ್ 12 ರಂದು ಅವರು ಸಿದ್ಧರಾಮೇಗೌಡ ಹಾಗೂ ಬೋರಮ್ಮ ದಂಪತಿಯ ಪುತ್ರರಾಗಿ ಜನಿಸಿದರು. ಅವಿಭಕ್ತ ಕುಟುಂಬ ಸದಸ್ಯರಾಗಿದ್ದ ಅವರು ಬಾಲ್ಯದಲ್ಲೇ ಜಾನಪದ ನೃತ್ಯ ವೀರಗಾಸೆ, ಡೊಳ್ಳು ಕುಣಿತ, ಕಂಸಾಳೆ ನೃತ್ಯಗಳನ್ನು ಕಲಿತವರು.

Sat, 20 May 202305:47 AM IST

ಬೆಂಗಳೂರಿಗೆ ಬಂದ ಮಲ್ಲಿಕಾರ್ಜುನ ಖರ್ಗೆ

ಸಿದ್ದರಾಮಯ್ಯ, ಡಿಕೆಶಿ ಮತ್ತು ಇತರ ಸಚಿವರ ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಳ್ಳಲು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬೆಂಗಳೂರಿಗೆ ಆಗಮಿಸಿದ್ದಾರೆ.

Sat, 20 May 202305:17 AM IST

ಬೆಂಗಳೂರಿಗೆ ಬಂದ ಡಿಕೆ ಶಿವಕುಮಾರ್, ಪದಗ್ರಹಣಕ್ಕೆ ಕ್ಷಣಗಣನೆ

ನಿನ್ನೆ ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿ ಹಿಡಿದು ಸಿದ್ದರಾಮಯ್ಯ ಜೊತೆ ದೆಹಲಿಗೆ ತರೆಳಿದ್ದ ನಿಯೋಜಿತ ಡಿಸಿಎಂ ಡಿಕೆ ಶಿವಕುಮಾರ್​ ಇದೀಗ ಬೆಂಗಳೂರಿಗೆ ಆಗಮಿಸಿದ್ದಾರೆ.  ಮಧ್ಯಾಹ್ನ 12.30ಕ್ಕೆ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಪದಗ್ರಹಣ ಸಮಾರಂಭ ನಡೆಯಲಿದೆ.

Sat, 20 May 202305:10 AM IST

ಅಭಿಮಾನಿಯ ಎದೆ ಮೇಲೆ ಡಿಕೆಶಿ ಹಚ್ಚೆ 

ಡಿಕೆ ಶಿವಕುಮಾರ್ ಅವರ ಬೆಂಬಲಿಗರೊಬ್ಬರು ತಮ್ಮ ಎದೆಯ ಮೇಲೆ ಡಿಕೆಶಿ ಮುಖ ಮತ್ತು ಹೆಸರಿನ ಹಚ್ಚೆ ಹಾಕಿಸಿಕೊಂಡಿದ್ದಾರೆ. 

Sat, 20 May 202306:16 AM IST

ವಿಜಯೇಂದ್ರಗೆ ಇನ್ನಾದರೂ ಅರ್ಥವಾಗಲಿ: ಎಂಬಿ ಪಾಟೀಲ

ಲಿಂಗಾಯತರಿಗೆ ಕಾಂಗ್ರೆಸ್‌ನಿಂದ ಅನ್ಯಾಯವಾಗಿದೆ ಎನ್ನುವ ಯಡಿಯೂರಪ್ಪ ಪುತ್ರ ವಿಜಯೇಂದ್ರ ಹೇಳಿಕೆಗೆ ಕಾಂಗ್ರೆಸ್ ನಾಯಕ ಎಂಬಿ ಪಾಟೀಲ ಬೆಂಗಳೂರಿನಲ್ಲಿ ತಿರುಗೇಟು ನೀಡಿದರು. ಯಡಿಯೂರಪ್ಪಗೆ ಮೊದಲ ಅವಧಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿರಲು ಬಿಜೆಪಿ ಬಿಡಲಿಲ್ಲ. ನಂತರ ಸಾವಿರಾರು ಕೋಟಿ ಖರ್ಚು ಮಾಡಿ ಅಧಿಕಾರಕ್ಕೆ ಬಂದರು. ಆದರೆ ಆಗಲೂ ಅವರಿಗೆ ಅಧಿಕಾರಕ್ಕೆ ಸಿಗಲಿಲ್ಲ. ಆಗ ಯಡಿಯೂರಪ್ಪ ಕಣ್ಣೀರು ಹಾಕಲಿಲ್ವಾ? ವಿಜಯೇಂದ್ರ ಇನ್ನಾದರೂ ಅರ್ಥ ಮಾಡಿಕೊಳ್ಳಬೇಕು ಎಂದು ಎಂಬಿ ಪಾಟೀಲ ಸಲಹೆ ನೀಡಿದರು.

Sat, 20 May 202304:27 AM IST

ಡಿಕೆಶಿ ಮನೆ ಸುತ್ತ ಬಿಗಿ ಭದ್ರತೆ 

ಇಂದು ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದ್ದು, ನಿಯೋಜಿತ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಬೆಂಬಲಿಗರು ಬೆಂಗಳೂರಿನ ನಿವಾಸದ ಹೊರಗೆ ಜಮಾಯಿಸಿದ್ದಾರೆ. ಭದ್ರತೆಗಾಗಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ಡಿಕೆಶಿ ಮನೆ ಸುತ್ತ ನಿಯೋಜಿಸಲಾಗಿದೆ. 

Sat, 20 May 202303:57 AM IST

ಸಿದ್ದರಾಮಯ್ಯ ಮನೆ ಮುಂದೆ ತಿಂಡಿ ವ್ಯವಸ್ಥೆ

ಇಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಸಿದ್ದರಾಮಯ್ಯ ಅವರನ್ನು ನೋಡಲು ಅವರ ನಿವಾಸಕ್ಕೆ ಅಭಿಮಾನಿಗಳ ಸಂಡು ಹರಿದು ಬಂದಿದೆ. ಹೀಗಾಗಿ ಸಿದ್ದರಾಮಯ್ಯ ಅಭಿಮಾನಿಗಳು ಸುಮಾರು 5000 ಜನಕ್ಕೆ ತಿಂಡಿ ವ್ಯವಸ್ಥೆ ಮಾಡಿಸಿದ್ದಾರೆ. 

Sat, 20 May 202303:42 AM IST

ಸಿದ್ದರಾಮಯ್ಯ  ಮನೆ ಮುಂದೆ ಸಂಗೀತ ವಾದ್ಯ

ಬೆಂಗಳೂರಿನಲ್ಲಿರುವ ಸಿದ್ದರಾಮಯ್ಯ ಅವರ ನಿವಾಸದ ಹೊರಗೆ ಸಾಂಪ್ರದಾಯಿಕ ಸಂಗೀತ ವಾದ್ಯಗಳನ್ನು ನುಡಿಸಲಾಗುತ್ತಿದೆ, ಪ್ರಮಾಣವಚನ ಸಮಾರಂಭಕ್ಕೂ ಮುನ್ನ ಬೆಂಬಲಿಗರು ಅವರ ನಿವಾಸದ ಹೊರಗೆ ಜಮಾಯಿಸುತ್ತಿದ್ದಾರೆ.

Sat, 20 May 202303:41 AM IST

ಸಿದ್ದು ನಿವಾಸದ ಎದುರು ಹಾಡು-ಸಿಹಿ

ಕರ್ನಾಟಕದ ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಮಾಣ ವಚನ ಸಮಾರಂಭಕ್ಕೂ ಮುನ್ನ ಅವರ ಬೆಂಬಲಿಗರು ಬೆಂಗಳೂರಿನಲ್ಲಿರುವ ಅವರ ನಿವಾಸದ ಎದುರು ಜಾನಪದ ಹಾಡುಗಳನ್ನು ಹಾಡಿ, ಸಿಹಿ ಹಂಚಿದರು.

Sat, 20 May 202303:08 AM IST

ಜಮೀರ್, ಜಾರ್ಜ್‌, ಪರಮೇಶ್ವರ ಸೇರಿ 8 ಮಂದಿಗೆ ಸಚಿವ ಸ್ಥಾನ

Sat, 20 May 202303:03 AM IST

ಇಂದು ಬೆಂಗಳೂರಿನಲ್ಲಿ ಜನವೋಜನ; ಮನೆಯಿಂದ ಹೊರಡುವ ಮೊದಲು ಇಷ್ಟು ನಿಮಗೆ ಗೊತ್ತಿರಬೇಕು

Sat, 20 May 202302:58 AM IST

ಬೆಂಗಳೂರಲ್ಲಿ ಎಲ್ಲೆಲ್ಲೂ ಬ್ಯಾನರ್​ಗಳು

ಬೆಂಗಳೂರಿನ ಎಲ್ಲೆಲ್ಲೂ ಕಾಂಗ್ರೆಸ್​ ನಾಯಕರಾದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್​, ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್​ ಗಾಂಧಿ ಅವರ ಭಾವಚಿತ್ರವುಳ್ಳ ಬ್ಯಾನರ್​ಗಳು ರಾರಾಜಿಸುತ್ತಿವೆ.

Sat, 20 May 202302:42 AM IST

Karnataka Cabinet: ಸಚಿವರ ಪಟ್ಟಿಯೊಂದಿಗೆ ಬೆಂಗಳೂರಿಗೆ ಬಂದ ಸಿದ್ದರಾಮಯ್ಯ

ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಎಸ್.ಸಿದ್ದರಾಮಯ್ಯ ಹೈಕಮಾಂಡ್ ಅನುಮೋದಿಸಿದ ಸಚಿವರ ಪಟ್ಟಿಯೊಂದಿಗೆ ಬೆಂಗಳೂರಿಗೆ ಆಗಮಿಸಿದರು. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ತಮ್ಮ ಆಯ್ಕೆ ಖಚಿತವಾದ ನಂತರ ನಿಯೋಜಿತ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಸಿದ್ದರಾಮಯ್ಯ ಮತ್ತೆ ದೆಹಲಿಗೆ ತೆರಳಿ ಸಚಿವ ಸಂಪುಟದ ಬಗ್ಗೆ ಹೈಕಮಾಂಡ್ ಜೊತೆಗೆ ಚರ್ಚಿಸಿದ್ದರು. ಬೆಂಗಳೂರಿಗೆ ಹಿಂದಿರುಗುವಾಗ ಇವರು ಶಿವಕುಮಾರ್ ಅವರೊಂದಿಗೆ ಬಂದಿಲ್ಲ ಎನ್ನುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ. ಡಿ.ಕೆ.ಶಿವಕುಮಾರ್ ಸಹ ತಮ್ಮ ಬೆಂಬಲಿಗರಿಗೆ ಸಚಿವ ಸ್ಥಾನ ದೊರಕಿಸಲು ಯತ್ನಿಸಿದ್ದರು. ಅವರು ಈಗಷ್ಟೇ ದೆಹಲಿಯಿಂದ ಹೊರಟಿದ್ದು ಶೀಘ್ರ ಬೆಂಗಳೂರು ತಲುಪಲಿದ್ದಾರೆ. ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

Sat, 20 May 202302:17 AM IST

ಬೆಂಗಳೂರಿಗೆ ಹೊರಟ ಖರ್ಗೆ

ಇಂದು ಸಿಎಂ, ಡಿಸಿಎಂ ಹಾಗೂ ಎಂಟು ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಎಲ್ಲರೂ ಪಾಲ್ಗೊಳ್ಳುತ್ತಿದ್ದಾರೆ. ನಾನು ಅಲ್ಲಿಗೆ ಹೋಗುತ್ತಿದ್ದೇನೆ. ಕರ್ನಾಟಕದಲ್ಲಿ ಹೊಸ ಮತ್ತು ಬಲಿಷ್ಠ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿರುವುದು ಸಂತಸದ ವಿಷಯ. ಇದರಿಂದ ಕರ್ನಾಟಕಕ್ಕೆ ಅನುಕೂಲವಾಗಲಿದ್ದು, ದೇಶದಲ್ಲಿ ಉತ್ತಮ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ದೆಹಲಿಯಿಂದ ಬೆಂಗಳೂರಿಗೆ ಹೊರಟ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. 

Sat, 20 May 202302:54 AM IST

 10 ಶಾಸಕರಿಂದ ಇಂದು ಪ್ರಮಾಣವಚನ 

ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್​​ ಸೇರಿದಂತೆ ಇಂದು 10 ಮಂದಿ ಶಾಸಕರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಉಳಿದ 8 ಮಂದಿ ಶಾಸಕರು - ಡಾ.ಜಿ.ಪರಮೇಶ್ವರ್, ಕೆ.ಎಚ್.ಮುನಿಯಪ್ಪ, ಎಂ.ಬಿ. ಪಾಟೀಲ್, ಸತೀಶ್ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆ, ಕೆ.ಜೆ.ಜಾರ್ಜ್, ಜಮೀರ್ ಅಹ್ಮದ್ ಹಾಗೂ ರಾಮಲಿಂಗಾರೆಡ್ಡಿ. 

ಸಚಿವ ಸಂಪುಟಕ್ಕೆ ಆಯ್ಕೆಯಾದ 8 ಶಾಸಕರು
ಸಚಿವ ಸಂಪುಟಕ್ಕೆ ಆಯ್ಕೆಯಾದ 8 ಶಾಸಕರು

Sat, 20 May 202302:03 AM IST

ಇತರ ರಾಜ್ಯಗಳ ನಾಯಕರಿಗೆ ಆಹ್ವಾನ 

ನೆರೆಯ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್, ಜಮ್ಮುಕಾಶ್ಮೀರದ ಮೆಹಬೂಬ ಮುಫ್ತಿ, ಫಾರೂಕ್ ಅಬ್ದುಲ್ಲಾ, ಸಿಪಿಎಂನ ಸೀತಾರಾಮ್ ಯೆಚೂರಿ, ಸಿಪಿಐನ ಡಿ ರಾಜಾ ಸೇರಿದಂತೆ ಹಲವು ಪಕ್ಷಗಳು ಗಣ್ಯರನ್ನು ಪ್ರಮಾಣವಚನ ಸಮಾರಂಭಕ್ಕೆ ಆಹ್ವಾನಿಸಲಾಗಿದೆ.

Sat, 20 May 202302:00 AM IST

ಸಚಿವರ ಪಟ್ಟಿ ಅಂತಿಮಗೊಳಿಸಿದ ಸಿದ್ದು, ಡಿಕೆಶಿ 

ಸಚಿವ ಸ್ಥಾನದ ಆಕಾಂಕ್ಷಿಗಳಾಗಿರುವ ಶಾಸಕರ ಪಟ್ಟಿ ಹಿಡಿದು ನಿನ್ನೆ ( ಮೇ 19) ದೆಹಲಿಗೆ ತೆರಳಿದ್ದ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್​ ಅವರು ಕಾಂಗ್ರೆಸ್​ ರಾಷ್ಟ್ರನಾಯಕರ ಜೊತೆ ಚರ್ಚಿಸಿ ಸಚಿವರ ಪಟ್ಟಿಯನ್ನು ಅಂತಿಮಗೊಳಿಸಿ, ಬೆಂಗಳೂರಿಗೆ ಹಿಂದಿರುಗಿದ್ದಾರೆ. 

Sat, 20 May 202302:02 AM IST

ಇಂದು ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌ ಪ್ರಮಾಣವಚನ

ಇಂದು ಕರ್ನಾಟಕದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್‌ ಪ್ರಮಾಣವಚನ ಸ್ವೀಕರಿಸಲಿದ್ದು, ಕೆಲ ಶಾಸಕರೂ ಕೂಡ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ  ಮಧ್ಯಾಹ್ನ 12.30ಕ್ಕೆ ಪದಗ್ರಹಣ ಸಮಾರಂಭ ನಡೆಯಲಿದೆ.