ಕರ್ನಾಟಕ ಲಾರಿ ಮುಷ್ಕರ ಅಂತ್ಯ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಜತೆಗೆ ಮಾತುಕತೆ ಯಶಸ್ವಿ ಎಂದ ಲಾರಿ ಮಾಲೀಕರ ಸಂಘ
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕ ಲಾರಿ ಮುಷ್ಕರ ಅಂತ್ಯ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಜತೆಗೆ ಮಾತುಕತೆ ಯಶಸ್ವಿ ಎಂದ ಲಾರಿ ಮಾಲೀಕರ ಸಂಘ

ಕರ್ನಾಟಕ ಲಾರಿ ಮುಷ್ಕರ ಅಂತ್ಯ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಜತೆಗೆ ಮಾತುಕತೆ ಯಶಸ್ವಿ ಎಂದ ಲಾರಿ ಮಾಲೀಕರ ಸಂಘ

ಡೀಸೆಲ್ ಸುಂಕ ಇಳಿಕೆ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಲಾರಿ ಮಾಲೀಕರ ಸಂಘ ಆರಂಭಿಸಿದ್ದ ಅನಿರ್ದಿಷ್ಟಾವಧಿ ಮುಷ್ಕರ ಮೂರನೇ ದಿನವೇ ಅಂತ್ಯಗೊಂಡಿದೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಜತೆಗಿನ ಮಾತುಕತೆ ಯಶಸ್ವಿಯಾಗಿದ್ದು, ಕರ್ನಾಟಕ ಲಾರಿ ಮುಷ್ಕರ ತತ್‌ಕ್ಷಣವೇ ಅಂತ್ಯಗೊಳಿಸಿರುವುದಾಗಿ ಸಂಘ ಹೇಳಿದೆ.

ಕರ್ನಾಟಕ ಲಾರಿ ಮುಷ್ಕರ ಅಂತ್ಯವಾಗಿದ್ದು, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಜತೆಗೆ ಮಾತುಕತೆ ಯಶಸ್ವಿಯಾಗಿದೆ ಎಂದು ಲಾರಿ ಮಾಲೀಕರ ಸಂಘ ಹೇಳಿದೆ, (ಕಡತ ಚಿತ್ರ)
ಕರ್ನಾಟಕ ಲಾರಿ ಮುಷ್ಕರ ಅಂತ್ಯವಾಗಿದ್ದು, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಜತೆಗೆ ಮಾತುಕತೆ ಯಶಸ್ವಿಯಾಗಿದೆ ಎಂದು ಲಾರಿ ಮಾಲೀಕರ ಸಂಘ ಹೇಳಿದೆ, (ಕಡತ ಚಿತ್ರ)

ಬೆಂಗಳೂರು: ಕರ್ನಾಟಕ ಲಾರಿ ಮುಷ್ಕರ ಅಂತ್ಯವಾಗಿದೆ. ಡಿಸೇಲ್ ಬೆಲೆ ಇಳಿಕೆ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಲಾರಿ ಮಾಲೀಕರ ಸಂಘವು ಕಳೆದ ಮೂರು ದಿನಗಳಿಂದ ನಡೆಸುತ್ತಿದ್ದ ಮುಷ್ಕರವನ್ನು ಕೈಬಿಟ್ಟಿದೆ. ಗುರುವಾರ (ಏಪ್ರಿಲ್ 17) ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ಜತೆಗಿನ ಮಾತುಕತೆ ಬಳಿಕ ಕರ್ನಾಟಕ ಲಾರಿ ಮುಷ್ಕರ ಅಂತ್ಯಗೊಳಿಸಿರುವುದಾಗಿ ಸಂಘದ ರಾಜ್ಯ ಅಧ್ಯಕ್ಷ ಷಣ್ಮುಗಪ್ಪ ಹೇಳಿದರು.

ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಜತೆಗೆ ಮಾತುಕತೆ ಯಶಸ್ವಿ

ಲಾರಿ ಮುಷ್ಕರ ಮೂರನೇ ದಿನಕ್ಕೆ ಕಾಲಿರಿಸಿದ್ದು, ಲಾರಿ ಮಾಲೀಕರ ಸಂಘದ ಪ್ರತಿನಿಧಿಗಳ ಜತೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಇಂದು ಮತ್ತೆ ಮಾತುಕತೆ ನಡೆಸಿದರು. ಈ ಸಂಧಾನ ಮಾತುಕತೆ ಯಶಸ್ವಿಯಾಯಿತು. ಸಭೆಯ ಬಳಿಕ ಲಾರಿ ಮಾಲೀಕರ ಸಂಘದ ರಾಜ್ಯ ಅಧ್ಯಕ್ಷ ಷಣ್ಮುಗಪ್ಪ ಸುದ್ದಿಗಾರರ ಜತೆಗೆ ಮಾತನಾಡುತ್ತ, ಮಾತುಕತೆ ಯಶಸ್ವಿಯಾಗಿದೆ. ಕರ್ನಾಟಕ ಲಾರಿ ಮುಷ್ಕರ ಅಂತ್ಯವಾಗಿದೆ ಎಂದು ಹೇಳಿದರು.

ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಅವರ ಜತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಪ್ರತ್ಯೇಕವಾಗಿ ಎರಡು ಬಾರಿ ಸಭೆ ನಡೆಸಿದ್ದರೂ ಮಾತುಕತೆ ವಿಫಲವಾಗಿತ್ತು. ಹೀಗಾಗಿ ಮುಷ್ಕರ ಮುಂದುವರಿದಿತ್ತು. ನಿನ್ನೆ (ಏಪ್ರಿಲ್ 16) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆಗೆ ಮಾತುಕತೆ ನಡೆಸಿದ ಲಾರಿ ಮಾಲೀಕರ ಸಂಘ, ಅವರಿಗೆ ಮನವಿ ಸಲ್ಲಿಸಿ ಡೀಸೆಲ್ ಮೇಲಿನ ಸುಂಕ ಇಳಿಸುವಂತೆ ಆಗ್ರಹಿಸಿತ್ತು.

ಲಾರಿ ಮಾಲೀಕರ ಸಂಘದ ರಾಜ್ಯ ಅಧ್ಯಕ್ಷ ಷಣ್ಮುಗಪ್ಪ ಏನು ಹೇಳಿದ್ರು

1) ಗಡಿ ಚೆಕ್‌ಪೋಸ್ಟ್‌ ತೆರವಿಗೆ ಮನವಿ: ಎಲ್ಲವೂ ಡಿಜಿಟಲೀಕರಣ ಆಗಿರುವಾಗ ಗಡಿ ಪ್ರದೇಶಗಳಲ್ಲಿ ಚೆಕ್‌ಪೋಸ್ಟ್ ಸ್ಥಾಪಿಸಿ ತಪಾಸಣೆ ಹೆಸರಲ್ಲಿ ಲಾರಿ ಚಾಲಕರು, ಮಾಲೀಕರಿಗೆ ತೊಂದರೆ ಕೊಡುವುದನ್ನು ತಪ್ಪಿಸಬೇಕು ಎಂದು ಆಗ್ರಹಿಸಲಾಗಿತ್ತು. 14 ರಾಜ್ಯಗಳಲ್ಲಿ ಇದನ್ನು ತೆರವುಗೊಳಿಸಿದ್ದಾರೆ. ಅದನ್ನು ಸಾರಿಗೆ ಸಚಿವರು ಗಂಭೀರವಾಗಿ ಪರಿಗಣಿಸಿದ್ದು, ಈ ಬಗ್ಗೆ 3 ತಿಂಗಳಲ್ಲಿ ಹಂತ ಹಂತವಾಗಿ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು.

2) ಎಫ್‌ಸಿ ಶುಲ್ಕ: ಆರು ವರ್ಷ, ಏಳು ವರ್ಷ ಹಳೆಯ ಲಾರಿಗಳಿಗೆ 15,000 ರೂಪಾಯಿ ಕೊಡಬೇಕಾಗಿದೆ. ಹಳೆಯ ವಾಹನಗಳಿಗೆ ಎಫ್ ಸಿ ಶುಲ್ಕ ಪಾವತಿಸಬೇಕಾಗಿಲ್ಲ ಎಂದು ಸರ್ಕಾರ ಆಶ್ವಾಸನೆ ನೀಡಿದೆ.

3) ಹೆದ್ದಾರಿ ಟೋಲ್‌: ರಾಜ್ಯದ ಪ್ರಮುಖ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹ ನಿರಂತರವಾಗಿ ನಡೆಯುತ್ತಿದೆ. ಟೋಲ್ ಸಂಗ್ರಹಿಸುತ್ತಿರುವ ಕಂಪನಿಗಳು ರಸ್ತೆ ನಿರ್ಮಾಣಕ್ಕೆ ಮಾಡಿರುವ ಹೂಡಿಕೆ ಹಣ ಸಂಗ್ರಹವಾಗಿದ್ದರೆ ಅಂತಹ ಟೋಲ್‌ಗಳನ್ನು ತೆರವುಗೊಳಿಸಲು ಕ್ರಮ ಜರುಗಿಸುವುದಾಗಿ ಸರ್ಕಾರ ತಿಳಿಸಿದೆ.

4) ಡೀಸೆಲ್ ದರ: ಇತ್ತೀಚೆಗೆ ಸರ್ಕಾರ ಡೀಸೆಲ್ ಸುಂಕ ಏರಿಕೆ ಮಾಡಿದ ಕಾರಣ ಡೀಸೆಲ್ ದರ ಹೆಚ್ಚಳವಾಗಿತ್ತು. ಆದರೆ, ಲಾರಿ ಬಾಡಿಗೆ ದರ ಹೆಚ್ಚಳವಾಗಿರಲಿಲ್ಲ. ಸರ್ಕಾರ ಲಾಡಿ ಬಾಡಿಗೆ ದರ ನಿಗದಿ ಮಾಡಲು ಹಾಗೂ ಕಾಲಕಾಲಕ್ಕೆ ಪರಿಷ್ಕರಿಸುವುದಕ್ಕೆ ಒಪ್ಪಿಕೊಂಡಿದೆ.

5) ನಗರ ಮಿತಿಯಲ್ಲಿ ಟ್ರ್ಯಾಕ್ಟರ್ ಬಳಕೆ: ಕೃಷಿ ಬಳಕೆಗೆ ಖರೀದಿಸಿದ ಟ್ರ್ಯಾಕ್ಟರ್‌ಗಳನ್ನು ಬೆಂಗಳೂರು ನಗರದೊಳಗೆ ಕಸ ಸಾಗಣೆ ಮತ್ತು ಇತರೆ ಸರಕು ಸಾಗಣೆಗೆ ಬಳಸಲಾಗುತ್ತಿದೆ. ಇದರಿಂದ ಲಾರಿ ಮಾಲೀಕರಿಗೆ ನಷ್ಟವಾಗುತ್ತಿದೆ. ಹೀಗಾಗಿ ಕೃಷಿ ಬಳಕೆ ಟ್ರ್ಯಾಕ್ಟರ್‌ಗಳ ವಾಣಿಜ್ಯ ಬಳಕೆ ತಡೆಯಲು ಕ್ರಮ ಜರುಗಿಸುವುದಾಗಿ ಸರ್ಕಾರ ಹೇಳಿದೆ.

ಲಾರಿ ಮಾಲೀಕರ ಸಂಘದ ಬೇಡಿಕೆಗಳನ್ನು ಸರ್ಕಾರ ಈಡೇರಿಸಲು ಒಪ್ಪಿಕೊಂಡಿರುವ ಕಾರಣ, ಕರ್ನಾಟಕ ಲಾರಿ ಮುಷ್ಕರ ಅಂತ್ಯಗೊಳಿಸಲಾಗಿದೆ ಎಂದು ಲಾರಿ ಮಾಲೀಕರ ಸಂಘದ ರಾಜ್ಯ ಅಧ್ಯಕ್ಷ ಷಣ್ಮುಗಪ್ಪ ತಿಳಿಸಿದರು.

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.