ಹಣ್ಣುಗಳ ರಾಜ ಮಾವು ಮಾರುಕಟ್ಟೆಗೆ ಆಗಮನ; ಗುಣಮಟ್ಟ ಓಕೆ,ಇಳುವರಿ ಕಡಿಮೆಯಾಗಿದ್ದು ಏಕೆ? ರೈತರು ವಿಜ್ಞಾನಿಗಳ ಅಭಿಪ್ರಾಯವೇನು
ಕನ್ನಡ ಸುದ್ದಿ  /  ಕರ್ನಾಟಕ  /  ಹಣ್ಣುಗಳ ರಾಜ ಮಾವು ಮಾರುಕಟ್ಟೆಗೆ ಆಗಮನ; ಗುಣಮಟ್ಟ ಓಕೆ,ಇಳುವರಿ ಕಡಿಮೆಯಾಗಿದ್ದು ಏಕೆ? ರೈತರು ವಿಜ್ಞಾನಿಗಳ ಅಭಿಪ್ರಾಯವೇನು

ಹಣ್ಣುಗಳ ರಾಜ ಮಾವು ಮಾರುಕಟ್ಟೆಗೆ ಆಗಮನ; ಗುಣಮಟ್ಟ ಓಕೆ,ಇಳುವರಿ ಕಡಿಮೆಯಾಗಿದ್ದು ಏಕೆ? ರೈತರು ವಿಜ್ಞಾನಿಗಳ ಅಭಿಪ್ರಾಯವೇನು

ಕರ್ನಾಟಕದಲ್ಲಿ ಈ ವರ್ಷದ ಮಾವಿನ ಹಣ್ಣಿನ ಹಂಗಾಮು ಶುರುವಾಗಿದೆ. ಚೆನ್ನಾಗಿರುವ ಹಣ್ಣು ಮಾರುಕಟ್ಟೆಗೆ ಬಂದರೂ ಇಳುವರಿ ಪ್ರಮಾಣ ಈ ಬಾರಿ ಕೊಂಚ ಕಡಿಮೆಯೇ ಇದೆ. ಇದಕ್ಕೆ ಕಾರಣ ಏನು ಎನ್ನುವ ಅಭಿಪ್ರಾಯ ಇಲ್ಲಿದೆ.ವರದಿ: ಎಚ್‌.ಮಾರುತಿ. ಬೆಂಗಳೂರು

ಕರ್ನಾಟಕದಲ್ಲಿ ಮಾವಿನ ಹಣ್ಣು ಮಾರುಕಟ್ಟೆ ಪ್ರವೇಶಿಸಿದೆ.
ಕರ್ನಾಟಕದಲ್ಲಿ ಮಾವಿನ ಹಣ್ಣು ಮಾರುಕಟ್ಟೆ ಪ್ರವೇಶಿಸಿದೆ.

ಬೆಂಗಳೂರು: ಕರ್ನಾಟಕದಲ್ಲಿ ಮತ್ತೆ ಮಾವಿನ ಹಣ್ಣಿನ ಸೀಸನ್‌ ಆರಂಭವಾಗಿದೆ. ಈಗಾಗಲೇ ಬಾದಾಮಿ, ಸಿಂಧೂರ, ಮೊದಲಾದ ತಳಿಗಳ ಮಾವಿನಹಣ್ಣುಗಳು ಮಾರುಕಟ್ಟೆಯಲ್ಲಿ ಕಾಣಬಹುದು. ಆದರೆ ರೈತರಿಗೆ ನೂರರಷ್ಟು ಖುಷಿ ತಂದಿದೆ ಎಂದು ಹೇಳುವಂತಿಲ್ಲ. ಮಾವಿನ ಹಣ್ಣಿನ ಗುಣಮಟ್ಟ ಉತ್ತಮವಾಗಿದೆ. ಆದರೆ ಇಳುವರಿ ನಿರೀಕ್ಷಿಸಿದ್ದಕ್ಕಿಂತ ಕಡಿಮೆಯಾಗಿದೆ. ಇಳುವರಿ ಕಡಿಮೆಯಾಗಲು ಕಾರಣ ಹುಡುಕಿದಾಗ ಈ ವರ್ಷ 8-10 ಲಕ್ಷ ಮೆಟ್ರಿಕ್‌ ಟನ್‌ಇಳುವರಿ ನಿರೀಕ್ಷಿಸಲಾಗಿದೆ. ಆದರೆ ಕಳೆದ ವರ್ಷ 12-15 ಲಕ್ಷ ಟನ್‌ ಇಳುವರಿ ಬಂದಿತ್ತು. ಹೂ ಕಟ್ಟಿದಾಗ ಆದ ವಾತಾವರಣ ಏರುಪೇರು, ಹಣ್ಣು ಬಿಡುವಾಗ ಹೆಚ್ಚಿದ ತಾಪಮಾನ ಮತ್ತು ಕೆಲವು ರೋಗಳ ಕಾರಣಗಳಿಗಾಗಿ ಇಳುವರಿ ಕಡಿಮೆಯಾಗಿದೆ ಎಂದು ಹೇಳುತ್ತಾರೆ.

ಎಲ್ಲೆಲ್ಲಿ ಬೆಳೆಗಾರರಿದ್ದಾರೆ

ರಾಜ್ಯದಲ್ಲಿ 2.8 ರೈತರು ಸುಮಾರು 1.5 ಲಕ್ಷ ಹೆಕ್ಟೇರ್‌ ನಲ್ಲಿ ಮಾವು ಬೆಳೆದಿದ್ದಾರೆ. ಕೋಲಾರ, ರಾಮನಗರ, ತುಮಕೂರು, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಶೇ.60 ರಷ್ಟು ಮಾವು ಬೆಳೆಯಲಾಗುತ್ತದೆ. ಉತ್ತರ ಕರ್ನಾಟಕದ ಬೆಳಗಾವಿ, ಧಾರವಾಡ ಮತ್ತು ಹಾವೇರಿ ಜಿಲ್ಲೆಗಳಲ್ಲೂ ಮಾವು ಕೃಷಿಯನ್ನು ಕಾಣಬಹುದು.

ಈಗಾಗಲೇ ರಾಮನಗರದ ಮಾವು ಮಾರುಕಟ್ಟೆಗೆ ದಾಂಗುಡಿ ಇಟ್ಟಿದೆ. ಮೂರನೇ ಎರಡರಷ್ಟು ಮಾವು ಬೆಳೆಯುವ ಕೋಲಾರ ಜಿಲ್ಲೆಯ ಮಾವು ತಡವಾಗುತ್ತಿದೆ. ರಾಜ್ಯದ ಒಟ್ಟು ಉತ್ಪಾದನೆಯ ಶೇ 35 ರಷ್ಟು ಮಾವನ್ನು ರಾಜ್ಯದಲ್ಲಿಯೇ ಬಳಕೆಯಾಗುತ್ತದೆ. ಶೇ.30-35 ರಷ್ಟು ಮಾವು ಹೊರ ರಾಜ್ಯಗಳಿಗೆ ಆಮದಾಗುತ್ತದೆ. ಶೇ.25ರಷ್ಟು ಹಾಳಾಗುತ್ತದೆ ಎಂದು ಕೃಷಿ ತಜ್ಞರು ಅಭಿಪ್ರಾಯಪಡುತ್ತಾರೆ.

ಫಸಲು ಪ್ರಮಾಣ ಕಡಿಮೆ

ಕೇವಲ ಶೇ.1ರಷ್ಟು ಮಾತ್ರ ರಫ್ತು ಮಾಡಲಾಗುತ್ತದೆ. ಇಲ್ಲಿ ಉತ್ಪಾದನೆಯಾಗುವುದೇ ಸಾಕಾಗುವುದರಿಂದ ಹೊರ ರಾಜ್ಯಗಳಿಂದ ರಾಜ್ಯಗಳಿಂದ ಮಾವನ್ನು ಆಮದು ಮಾಡಿಕೊಳ್ಳುವ ಅವಶ್ಯಕತೆ ಇಲ್ಲ.

ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಿ.ಜಿ. ನಾಗರಾಜು ಅವರ ಪ್ರಕಾರ ಬೇಗ ಹೂ ಕಟ್ಟಿದ್ದರಿಂದ ಬೇಗ ಫಸಲು ಬಂದಿದೆ.

ಫೆಬ್ರವರಿಯಲ್ಲಿ ಬೇಸಿಗೆ, ಬಿಸಿಲು ಮತ್ತು ಉಷ್ಣತೆ ಹೆಚ್ಚಾಗಿದ್ದ ಕಾರಣ ಫೆಬ್ರವರಿಯಲ್ಲಿ ಎರಡನೇ ಹಂತದ ಹೂ ಕಟ್ಟುವ ಪ್ರಕ್ರಿಯೆ ಕಡಿಮೆಯಾಗಿದೆ. ಒಟ್ಟಾರೆ ನೋಡುವುದಾದರೆ ಮಾವು ಉತ್ತಮ ಇಳುವರಿಗೆ ಮೋಸ ಇಲ್ಲ. ಜೂನ್‌ ವೇಳೆಗೆ ಮಾರುಕಟ್ಟೆಗೆ ಹೆಚ್ಚಿನ ಮಾವು ಬರಲಿದೆ ಎನ್ನುತ್ತಾರೆ.

ಹೇಗಿದೆ ಮಾರುಕಟ್ಟೆ ಮೂಡ್‌

ಆದರೆ ರೈತರ ಅನಿಸಿಕೆಗಳೇ ಬೇರೆ. ಕಳೆದ ಎರಡು ವರ್ಷಗಳಲ್ಲಿ ಉತ್ತಮ ಇಳುವರಿ ಕಾಣಲಾಗಲಿಲ್ಲ. ಈ ವರ್ಷವೂ ಭಿನ್ನವಾಗಿಲ್ಲ ಎನ್ನುತ್ತಾರೆ. ಕೋಲಾರ ಜಿಲ್ಲೆಯ ಪ್ರಮುಖ ಬೆಳೆಗಾರರಾದ ಶ್ರೀನಿವಾಸ್‌ ಅವರು, ಈ ವರ್ಷ ಈಗಾಗಲೇ ಶೇ 10 ರಷ್ಟು ಇಳುವರಿ ನಷ್ಟವಾಗಿದೆ. ರೋಗಳಿಂದಾಗಿ ಶೇ.30 ರಷ್ಟು ಇಳುವರಿ ಕಡಿಮೆಯಾಗಲಿದೆ. ಹೀಗಾಗಿ ಪ್ರತಿ ಎಕರೆಗೆ ಎರಡರಿಂದ ಮೂರು ಟನ್‌ ಮಾವು ಕಡಿಮೆಯಾಗಲಿದೆ ಎನ್ನುತ್ತಾರೆ.

ಈ ವರ್ಷ ಶೇ.35-40 ರಷ್ಟು ಇಳುವರಿ ಕಡಿಮೆಯಾಗಲಿದೆ ಎಂದು ಕೋಲಾರ ಜಿಲ್ಲಾ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ಎನ್.‌ ಚಿನ್ನಪ್ಪ ರೆಡ್ಡಿ ಹೇಳುತ್ತಾರೆ. ಅನೇಕ ಪ್ರದೇಶಗಳಲ್ಲಿ ಮಾರ್ಚ್‌ ವರೆಗೆ ಹೂ ಕಟ್ಟುವ ಪ್ರಕ್ರಿಯೆ ತಡವಾಗುತ್ತಿದೆ. ಇಡೀ ಕೋಲಾರ ಜಿಲ್ಲೆಯಲ್ಲಿ 32 ಸಾವಿರ ಎಕರೆಯಲ್ಲಿ ಮಾವು ಬೆಳೆಯಲಾಗುತ್ತಿದ್ದು, 10 ಲಕ್ಷ ಟನ್‌ ಇಳುವರಿ ಬರಬೇಕಿತ್ತು. ಆದರೆ ಈ ವರ್ಷ 5 ಲಕ್ಷ ಟನ್‌ ಮಾತ್ರ ಕಾಣಬಹುದು ಎನ್ನುತ್ತಾರೆ.

ತೋಟಗಾರಿಕಾ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳ ಪ್ರಕಾರ ಅಧಿಕ ಉಷ್ಣತೆ ಮತ್ತು ಹಣ್ಣಾಗುವ ದುರ್ಬಲ ಪ್ರಕ್ರಿಯೆಯಿಂದಾಗಿ ಇಳುವರಿ ಕಡಿಮೆಯಾಗಿದೆ. ರೈತರು ಅಧಿಕ ಲಾಭ ನಿರೀಕ್ಷಿಸುವಂತಿಲ್ಲ. ಮೇ ತಿಂಗಳಲ್ಲಿ ಮತ್ತೆ ಮಳೆ ಆರಂಭವಾಗಲಿದ್ದು, ಮತ್ತೆ ಇಳುವರಿಗೆ ಕಾರಣವಾಗಬಹುದು ಎನ್ನುತ್ತಾರೆ.

ವರದಿ: ಎಚ್‌.ಮಾರುತಿ. ಬೆಂಗಳೂರು

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.