ಸ್ತನ-ಸ್ಥಾನ ಪುರಾಣ; ಪ್ರತಿಭಟನೆಯ “ನಾನೆಂಬ” ಮಮತೆ ಕಾವ್ಯ ಖಡ್ಗವಾಗಿ ಇರಿಯಿತೇ?: ಮುರಳೀಧರ ಖಜಾನೆ ಲೇಖನ
ಕರ್ನಾಟಕದಲ್ಲಿ ಈಗ ಮಮತಾ ಸಾಗರ ಅವರ ಕವನ ಸದ್ದು ಮಾಡುತ್ತಿದೆ. ಕವನದ ಸಾಲುಗಳಿಗಿಂತ ಅದರ ಹಿಂದಿನ ಆಶಯ,ಅಭಿವ್ಯಕ್ತಿಯೆ ಮುಖ್ಯವಾಗಬೇಕು ಎನ್ನುವುದು ಚರ್ಚೆಯ ಸಾರ. ಈ ಕುರಿತು ಹಿರಿಯ ಪತ್ರಕರ್ತ ಮುರಳೀಧರ ಖಜಾನೆ ಅವರ ಲೇಖನ ಇಲ್ಲಿದೆ

ಒಂದೆರಡು ದಿನಗಳ ಹಿಂದೆ kannada hindustantimes ʻʼಕಣ್ಣು ಕಾಣದ ʻಗಾವಿಲʼರಿಂದ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯʼ ಎಂಬ ಲೇಖನ ಪ್ರಕಟಿಸಿತ್ತು. ಅದರಲ್ಲಿ ಗೃಹ ಇಲಾಖೆಯ ಅಂಕಿ-ಅಂಶಗಳನ್ನು ಆಧರಿಸಿ ಮಹಿಳೆಯರ ಮೇಲೆ ಹೆಚ್ಚುತ್ತಿರುವ ಲೈಂಗಿಕ ದೌರ್ಜನ್ಯಕ್ಕೆ ಕಾರಣಗಳನ್ನು ಲೇಖಕರು ಅರಸಿದ್ದರು. ಆ ಲೇಖನದ ಆರಂಭದಲ್ಲಿ ಹದಿನೇಳನೇ ಶತಮಾನದ ಸಂಚಿ ಹೊನ್ನಮ್ಮ ಬರೆದ “ಹೆಣ್ಣು ಹೆಣ್ಣೆಂದೇಕೆ ಬೀಳುಗಳೆವರು ಕಣ್ಣು ಕಾಣದ ಗಾವಿಲರು…! ಎಂಬ ಸಾಲನ್ನು ಅವರು ಎತ್ತಿಕೊಂಡಿದ್ದಾರೆ. ಒಟ್ಟಾರೆಯಾಗಿ ಆ ಪದ್ಯದಲ್ಲಿ ನಮ್ಮೆಲ್ಲರನ್ನು ಹಡೆದವಳು ಹೆಣ್ಣಲ್ಲವೆ? ಕಾಪಾಡಿದವಳು ಹೆಣ್ಣಲ್ಲವೆ? ಹೀಗಿರುವಾಗ ಹೆಣ್ಣು ಹೆಣ್ಣು ಎಂದು ಯಾಕೆ ನಿಕೃಷ್ಟರಾಗಿ ಕಾಣುತ್ತಾರೋ ಕಣ್ಣು ಕಾಣದ ಈ ಮೂರ್ಖರು, ಎಂಬ ಮಾತಿನಲ್ಲಿ ಹೊನ್ನಮ್ಮ ಮುಖ್ಯವಾಗಿ ಗಂಡಸರನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ. ಅಷ್ಟೇ ಅಲ್ಲ, ಪರಂಪರಾಗತವಾಗಿ ಹೆಣ್ಣಿನ ಬಗ್ಗೆ ಒಂದು ಬಗೆಯ ಕೀಳು ಭಾವನೆಯನ್ನು ಬೆಳೆಯಿಸಿದ ಮನೋಧರ್ಮವನ್ನು ಹೊನ್ನಮ್ಮ ಖಂಡಿಸಿದ್ದಾರೆ.
ಈಗ ಈ ಸಂದರ್ಭದಲ್ಲಿ ಶರಣ ಜೇಡರ ದಾಸಿಮಯ್ಯ ಅವರ ವಚನವೊಂದನ್ನು ಗಮನಿಸಬೇಕೆಂದು ಅನ್ನಿಸುತ್ತಿದೆ.
“ಮೊಲೆ ಮುಡಿ ಬಂದೆಡೆ ಹೆಣ್ಣೆಂಬರು,
ಗಡ್ಡ ಮೀಸೆ ಬಂದೆಡೆ ಗಂಡೆಂಬರು.
ನಡುವೆ ಸುಳಿವ ಆತ್ಮನು ಹೆಣ್ಣೂ ಅಲ್ಲ. ಗಂಡೂ ಅಲ್ಲ
ಕಾಣಾ! ರಾಮನಾಥ”
ಸದ್ಯದ ಸ್ಥಿತಿಯಲ್ಲಿ . “ಮೊಲೆ ಮುಡಿ ಬಂದೆಡೆ ಹೆಣ್ಣೆಂಬರು, ಗಡ್ಡ ಮೀಸೆ ಬಂದೆಡೆ ಗಂಡೆಂಬರು” ಎಂಬ ಸಾಲನ್ನು ಉದಹರಿಸಲು ಒಂದು ನಿರ್ದಿಷ್ಟ ಕಾರಣವಿದೆ. ಖ್ಯಾತ ಕವಯಿತ್ರಿ , ಲೇಖಕಿ, ಚಿಂತಕಿ ಮಮತಾ ಜಿ ಸಾಗರ ಅವರ ’ನಾನು ಎಂದರೆ…ʼ ಕವನದ
ನಾನು
ಅಂದರೆ;
ಒಂದು ಜೊತೆ
ಮೆತ್ತಗಿನ ಮೊಲೆ,
ತೋಡೆಸಂದಿಯಲ್ಲಿ ಅಡತಿರುವ
ಕತ್ತಲ ಕೋಣೆ…
ಎಂಬ ಈ ಆರು ಸಾಲುಗಳಿಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ವಿವಾದಕ್ಕೊಳಗಾಗಿರುವ ಆ ನಾಲ್ಕು ಸಾಲುಗಳು ಒಂದು ರೀತಿಯ ಪ್ರತಿರೋಧದ ಧ್ವನಿ. ಹೆಣ್ಣಿನ ಅಸ್ಮಿತೆಯ ಧ್ವನಿಯಾಗಿ ಗ್ರಹಿಸಿದವರಿಗೆ ಅದು ಅವರ ಅರಿವಿನ ವಿಸ್ತರಣೆ. ಇನ್ನುಳಿದವರಿಗೆ ನೋಡುವ ಕ್ರಮದಲ್ಲಿರುವ ದೋಷ ಎನ್ನಿಸುತ್ತಿದೆ.
ಈ ಸಂದರ್ಭದಲ್ಲಿ ನೆನಪಾಗುವುದು ಮತ್ತೊಂದು ಪ್ರತಿಮೆ. ಅದು ನಿಜಗುಣ ಶಿವಯೋಗಿ ಅವರದು. ಅವರೆನ್ನುತ್ತಾರೆ. “ಅವರವರ ಭಾವಕ್ಕೆ ಅವರವರ ಭಕುತಿಗೆ ಅವರವರ ತೆರನಾಗಿ ಇರುತಿಹನು ಶಿವಯೋಗಿ. ಹರಿಯ ಭಕ್ತರಿಗೆ ಹರಿ, ಹರನ ಭಕ್ತರಿಗೆ ಹರ ನರರೇನು ಭಾವಿಪರೋ ಅದರಂತೆ ತೋರುವನು”. ಇಲ್ಲಿ ಶಿವಯೋಗಿ ಒಂದು ಪ್ರತಿಮೆ ಮಾತ್ರ. ಅದನ್ನು ನಾವು ವಸ್ತುಸ್ಥಿತಿಯೆಂದೋ, ದೇವರೆಂದೋ ಸತ್ಯವೆಂದೋ ಭಾವಿಸಲೂ ಬಹುದು. ಹಾಗಾಗಿ ಒಂದು ಸಂಗತಿಯನ್ನು ಕುರಿತ ನಮ್ಮ ಗ್ರಹಿಕೆ ಅಂತಿಮ ಸತ್ಯವೆಂದು ಭಾವಿಸಲಾಗದು. ಅದನ್ನು ಗ್ರಹಿಸುವಾಗ ನಮಗಿದ್ದ ಮನಃಸ್ಥಿತಿ ಮತ್ತು ಪೂರ್ವಾಗ್ರಹಗಳು ನಮ್ಮ ಕಾಣ್ಕೆಯ ಮೇಲೆ ಖಂಡಿತಾ ತನ್ನ ಪರಿಣಾಮ ಬೀರುತ್ತದೆ. ಹಾಗೆಯೇ ಮಮತಾ ಅವರ ಕವಿತೆ ಓದುಗರಿಗೆ ಓದುಗಳಿಗೆ ಅವರವರ ಭಾವಕ್ಕೆ ಅವರವರ ಭಕುತಿಗೆ ಎನ್ನಲೇ ಬೇಕು.
ಮಣಿಪುರದ ತಾಯಂದಿರ ಬೆತ್ತಲೆ ಪ್ರತಿಭಟನೆ
ಇದೆಲ್ಲ ನಡೆಯುತ್ತಿರುವಾಗ ಮತ್ತೊಂದು ಮನಕುಲದ ಮನಕಲಕುವ ಘಟನೆಯೊಂದು ನೆನಪಾಗುತ್ತಿದೆ.
ಈಶಾನ್ಯ ಭಾರತದ ಮಣಿಪುರದ ತಾಯಂದಿರು ಇಂಫಾಲ್ ನಲ್ಲಿ ಭಾರತೀಯ ಸೇನೆಯು ಮಣಿಪುರದ ಹೆಣ್ಣುಮಕ್ಕಳ ಮೇಲೆ ನಡೆಸಿದ ಲೈಂಗಿಕ ದೌರ್ಜನ್ಯದ ವಿರದ್ಧ ʼಬೆತ್ತಲೆಯಾಗಿʼ ನಿಂತು ಪ್ರತಿಭಟಿಸಿದ ದೃಶ್ಯ. ಈ ಚಿತ್ರ ಪತ್ರಿಕೆಗಳಲ್ಲಿ ಪ್ರಕಟವಾದಾಗ ಇಡೀ ವಿಶ್ವದ ನಾಗರಿಕ ಸಮಾಜ ತನ್ನ ಕೃತ್ಯಕ್ಕೆ ತಾನೇ ನಾಚಿ ತಲೆತಗ್ಗಿಸಿದ ಚಿತ್ರ ಕಣ್ಣಿಗೆ ಕಟ್ಟುತ್ತದೆ. ಮಣಿಪುರದಂತೆ ಉತ್ತರ ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಹೆಣ್ಣಿನ ಮೇಲೆ, ವಿಶೇಷವಾಗಿ ದಲಿತ ಹೆಣ್ಣುಮಕ್ಕಳ ಮೇಲೆ ನಡೆಸುತ್ತಿರುವ ಸಾಮೂಹಿಕ ಅತ್ಯಾಚಾರ ಪ್ರಕರಣ, ಲೈಂಗಿಕ ಹಿಂಸೆಯ ವಿಕೃತಿಗಳು ಕಣ್ಣಿಗೆ ಕಟ್ಟುತ್ತವೆ. ಇಂಥ ಸಂದರ್ಭದಲ್ಲಿ. ಪದ್ಯ ಬರೆಯದೆ ಗದ್ಯ ಬರೆದರೆ ದೇಶದ್ರೋಹವೆನ್ನುವ ಕಾಲವಿದು. ಕಣ್ಣೀರಿಡಲು ಅಂಜಬೇಕಾದ ಸಂದರ್ಭವಿದು ಎಂಬುದು ಈಗಿನ ನಾಗರಿಕ ಸಮಾಜಕ್ಕೆ ಅರ್ಥವಾಗದಿರುವುದಕ್ಕೆ ಯಾರನ್ನು ದೂರುವುದು?
ಪದಸಂಚಾರ ಕವನ ಸಂಕಲನ
ಆಶ್ಚರ್ಯದ ಸಂಗತಿ ಎಂದರೆ ಮಮತಾ ಅವರ ಇದೇ ಕವಿತೆ ಇರುವ ಕವನ ಸಂಕಲನ ʻಪದಸಂಚಾರʼ ಓದುಗರ ಕೈ ತಲುಪಿ ಸುಮಾರು ಐದು ತಿಂಗಳಾಗಿದೆ . ಸಂಕಲನದಲ್ಲಿ ಈ ಕವಿತೆಯನ್ನು ಓದಿದವರು ಬೆಚ್ಚಿಬಿದ್ದ ಸುದ್ದಿ ಬಂದಿಲ್ಲ ಕರ್ನಾಟಕ ಲೇಖಕಿಯರ ಸಂಘದ ಕಾರ್ಯಕ್ರಮದಲ್ಲಿ ಮಮತಾ ಈ ಪದ್ಯ ಓದಿದಾಗ ಚಪ್ಪಾಳೆ ಬಿತ್ತೆ, ಹೊರತು, ಕಲ್ಲು ತೂರಾಟವೇನೂ ನಡೆಯಲಿಲ್ಲವೆಂದೂ ವರದಿಯಾಗಿದೆ. ಹಾಗಿದ್ದರೆ, ಈ ಕವಿತೆ ಸತ್ಯ ಹೇಳುತ್ತಿದೆ ಎಂದರ್ಥವಲ್ಲವೇ?, ನಮ್ಮ ರೂಡಿಗತ ನಂಬಿಕೆಗಳನ್ನು ಅಲ್ಲಾಡಿಸುತ್ತಿದೆ ಎನ್ನಿಸುವುದಿಲ್ಲವೇ?. ಇನ್ನೊಂದು ಅರ್ಥದಲ್ಲಿ ಅದನ್ನು ಶಕ್ತವಾಗಿ ಎದುರಿಸುವ ಮಾರ್ಗ ತಿಳಿಯದವರು ಹೂಂಕಾರವಿದು ಅಷ್ಟೆ ಎನ್ನಬಹುದು. “ಖಡ್ಗವಾಗಲಿ ಕಾವ್ಯ” ಎಂದು ಅಂದು ಡಿ.ಆರ್. ನಾಗಾರಾಜ್ ಅಂದು ಹೇಳಿದ್ದು ಈಗ ಮಮತಾ ಅವರ ʼನಾನುʼ ಖಡ್ಗವಾಗಿರುವಂತೆ ಕಾಣಿಸುತ್ತಿದೆ. ಹೆಣ್ಣಿನ ಮೇಲೆ ನಿಲ್ಲದ ಈ ಅತ್ಯಾಚಾರ, ಕೊಲೆಗಳನ್ನು ಕಂಡು ಮತ್ತು ಅದರ ಕಾರಣವನ್ನು ಕಾಣಿಸುವ, ಗಂಡಾಳಿಕೆಯ ದುಷ್ಟತನವನ್ನು ತೀವ್ರವಾಗಿ ಹಣಿಯಲು ಮಮತಾ ಸಾಗರ ಅವರ ಕವಿತೆ ಶೀಲ-ಆಶ್ಲೀಲಗಳ ಆವರಣವನ್ನು ಜಿಗಿದು ಬೀದಿಗೆ ಬಂದ ಕವಿತೆ ಎನ್ನಬಹುದು
ಅರ್ಥವಾಗುವಂತೆ ಬರೆಯುವುದು ಹೇಗೆ
ಆದರೆ, ಈ ವಿವಾದವನ್ನು ಕೇವಲ ಪದ್ಯಕ್ಕಷ್ಟೇ ಸೀಮಿತಗೊಳಿಸಿರುವುದರಿಂದ, ಇದನ್ನು ಇನ್ನೊಂದು ಕೋನದಿಂದ ನೋಡಬೇಕಾದ ಅಗತ್ಯವಿದೆ ಎನ್ನಿಸುತ್ತಿದೆ. ಇದು ಒಂದು ರೀತಿಯ ಸಂಕಷ್ಟದ ಕಾಲ. ನಗು ಈಗ ಸಹಜದ ಧರ್ಮವಾಗಿಲ್ಲ. ನಕ್ಕರೆ, ನಗಿಸಿದರೆ ಅದು ಬಾರಿ ದೊಡ್ಡ ಗುನ್ಹೆ. ಬರೆದರೆ ʻಎಲ್ಲರಿಗೂ ಅರ್ಥವಾಗುವಂತೆ ಬರೆಯಬೇಕುʼ ಎಂಬ ಅಡಿಗರ ತೀಕ್ಷ್ಣ ಕೂರಂಬುಗಳು. “ಕಾವ್ಯವೇನು ಶ್ರಾದ್ಧದ ಪಿಂಡವೇ, ಅರ್ಥವಿವರಿಸಿ ಹೇಳಲು” …..ಎಂಬ ಗಾರುಡಿಗ ಬೇಂದ್ರೆ ಮಾತು ಕೂಡ ಅರ್ಥವಾಗುವಂತೆ ಗ್ರಹಿಸುವ ಕಾಲದಲ್ಲೂ ನಾವಿಲ್ಲ. “ಬರೆಯುವುದು ಸುಲಭ ಸ್ವಾಮಿ, ಬರೆಯದಿರುವುದೇ ಕಷ್ಟ” ಎಂದಿದ್ದರು, ಎ.ಕೆ. ರಾಮಾನುಜನ್. ಹಾಗೆ ಬರೆಯುವುದು ಮತ್ತು ಬರೆದದ್ದನ್ನು ಅರಗಿಸಿಕೊಳ್ಳುವುದೂ ಅಷ್ಟೆ ಕಷ್ಟ ಎನ್ನುವ ಕಾಲವಿದು. ಹಾಗೆಯೇ ಎ.ಕೆ. ರಾಮಾನಜನ್. “ನೋಡುವುದಕ್ಕೆ ಎರಡು ಕಣ್ಣಿದ್ದರಷ್ಟೇ ಸಾಲದು. ಅದೃಷ್ಟವೂ ಬೇಕು” ಎಂದಿದ್ದರು. ಅದೃಷ್ಟವೆಂದರೆ, ಪದ್ಯದ ಗೂಡಾರ್ಥ, ನಿಜಾರ್ಥ, ರೂಪಕಾರ್ಥ, ದಕ್ಕಬೇಕೆಂದರೆ ಕೂಡ ಅದೃಷ್ಟಬೇಕು ಎನ್ನಿಸುವ ಸಂದರ್ಭದಲ್ಲಿ ನಾವಿದ್ದೇವೆ.
ಈ ಪ್ರಶ್ನೆಗಳಿಗೆ ಉತ್ತರವಿಲ್ಲವೇ?
ಕವಿ ರವಿಕುಮಾರ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಇಂಥ ಕಣ್ಣು ಕಾಣದ ಗಾವಿಲರನ್ನು ಸರಿಯಾಗಿಯೇ ಪ್ರಶ್ನಿಸಿದ್ದಾರೆ. ಅವರ ಅನಿಸಿಕೆಗಳನ್ನು ಪ್ರಶ್ನೆಗಳನ್ನು ದಾಖಲಿಸಿದರೆ ಉತ್ತಮ. ಬೇಲೂರು-ಹಳೇಬೀಡು ದೇಗುಲಗಳಲ್ಲಿ ಕೆತ್ತಲ್ಪಟ್ಟ ಶಿಲ್ಪಕೃತಿಗಳಲ್ಲಿ ಅಶ್ಲೀಲತೆ ಕಾಣದ ಸಮಾಜ ಮಮತಾ ಸಾಗರ ಅವರ ಕವಿತೆಯ ಪದಗಳಲ್ಲಿ ಕಂಡು ವ್ಯಗ್ರ ಗೊಂಡಿದ್ದಾರೆ. ಹೆಣ್ಣಿನ ಮೇಲೆ ನಡೆಯುತ್ತಿರುವ ಅತ್ಯಾಚಾರ, ಹತ್ಯೆಗಳಿಗೆ ಆಕೆ ಹೊಂದಿರುವ, ಮಮತಾ ಸಾಗರ ಅವರು ಕವಿತೆಯಲ್ಲಿ ಕಾಣಿಸುವ ಒಂದು ಜೊತೆ ಮೊಲೆ, ತೊಡೆಸಂದಲ್ಲಿ ಅಡಗಿದ ಕತ್ತಲ ಶವೇ ಗುರಿಯಾಗಿರುತ್ತದೆ ಅನ್ನೋದನ್ನು ಅರ್ಥಮಾಡಿಕೊಳ್ಳಲಾಗದ ಸಮಾಜ ಹೆಣ್ಣಿನ ಶೀಲ ಹರಣ ಎಂದು ಬೊಬ್ಬೆ ಹೊಡೆಯುತ್ತಿರುವುದು ಅತ್ಮವಂಚನೆಯ ನಡೆ. ಹೆಣ್ಣಿನ ಮೊಲೆಗಳ ಸುತ್ತಳೆತೆಯ ಆಧರಿಸಿ ತೆರಿಗೆ ವಸೂಲಿ ಮಾಡುತ್ತಿದ್ದ ದುಷ್ಟ ಜಾತಿ ಸಮಾಜವನ್ನು ಎದುರಿಸಲು ನಂಗಲಿ ಎಂಬ ಹೆಣ್ಣುಮಗಳು ತನ್ನ ಎರಡು ಮೊಲೆಗಳನ್ನು ಕತ್ತರಿಸಿಕೊಂಡು ತೋರಿದ ಪ್ರತಿರೋಧ ಚಳವಳಿ, ದೇವರ ಹೆಸರಿನಲ್ಲಿ ದಮನಿತ ಹೆಣ್ಣು ಮಕ್ಕಳನ್ನು ಎಡೆಯಾಗಿ ತಿಂದ ಸನಾತನ ಇತಿಹಾಸ ಯಾವ ಕಾಲಕ್ಕೂ ಮರೆಯಲಾಗದು. ಈ ದೇಶದಲ್ಲಿ ಈ ಕ್ಷಣದವರೆಗೂ ಹೆಣ್ಣಿನ ಮೇಲೆ ನಡೆಯುತ್ತಿರುವ ಅತ್ಯಾಚಾರ, ಹತ್ಯೆಗಳು ಸಹಜಸೃಷ್ಟಿಯಿಂದ ಹೊಂದಿರಬಹುದಾದ ಅಂಗಾಗಂಗಗಳ ಮೇಲೆಯೇ ಆಗಿದೆ. ಇವುಗಳನ್ನು ಗುರಿಯಾಗಿಸಿಕೊಂಡೆ ಗಂಡು ಸಮಾಜ ಇಂತಹ ಕ್ರೌರ್ಯವನ್ನು ಮೆರೆಯುತ್ತಿದೆ. ಇದು ಅನಾಗರೀಕ ನಡೆ ಎಂಬುದನ್ನು ಅರ್ಥಮಾಡಿಕೊಳ್ಳದ ಮಂದಿ ಮಮತಾ ಸಾಗರ ಅವರ ಕವಿತೆಯ ಪದಗಳನ್ನು ಹಿಡಿದು ತಮ್ಮ ಸಜ್ಜನಶೀಲತೆಯನ್ನು ಕಾಪಾಡಿಕೊಳ್ಳಲು ಹೆಣಗಾಡುತ್ತಿದೆ.
ಏಕಕಾಲಕ್ಕೆ ಹಲವು ಶತಮಾನಗಳಲ್ಲಿ
ಮೊಲೆಯ ವಿಷಯ ಇತ್ತೀಚೆಗೆ ಮತ್ತೊಂದು ಕಾರಣಕ್ಕೆ ವಿವಾದವಾಗಿತ್ತು. ನಟಿಯಾದ ಹೆಣ್ಣುಮಗಳು ನಿವೇದಿತಾ ಗೌಡ ಅವರ ದೇಹದ ಕುರಿತು ಬಂದಂತಹ ಕೆಲವು ಕಾಮೆಂಟ್ ಗಳನ್ನ ಲೇಖಕಿ ಸಂಜ್ಯೋತಿ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿದ್ದಾರೆ. ಈ ಎಲ್ಲ ಬೆಳವಣಿಗೆಯನ್ನು ಗಮನಿಸಿದಾಗ ಲೇಖಕ, ಚಿಂತಕ, ಡಾ. ಯು. ಆರ್. ಅನಂತಮೂರ್ತಿ ಅವರು ʼಸಂಸ್ಕಾರʼ ಬರೆದ ಸಂದರ್ಭದಲ್ಲಿ ಹೇಳಿದ ಮಾತುಗಳು ನೆನಪಾಗುತ್ತವೆ. . “ನನ್ನ ಸಮಾಜ ಏಕಕಾಲಕ್ಕೆ ಹಲವು ಶತಮಾನಗಳಲ್ಲಿ ಬದುಕುತ್ತಿರುವುದು ನನಗೆ ಕಂಡಿದೆ.” ಎಂದವರು ಅರವತ್ತರ ದಶಕದಲ್ಲಿ ತಾವು ಕಲಿಯುತ್ತಿರುವಾಗಲೇ ಪೂರ್ವದ ವಿದ್ವಾಂಸರಿಗೆ ಮನವರಿಕೆ ಮಾಡಿಕೊಟ್ಟಿದ್ದರು. ಈಗ ಇಪ್ಪತೊಂದನೇ ಶತಮಾನ. ಅರ್ಥಿಕವಾಗಿ, ಸಾಮಾಜಿಕವಾಗಿ, ಬೌದ್ಧಿಕವಾಗಿ ಟ್ರಿಲಿಯಾತರ ಗಾವುದಗಳನ್ನು ದಾಟಿ ನಮ್ಮ ಸಮಾಜ ಬಂದು ನಿಂತದೆ. ಆದರೆ ಈಗಲೂ ಹಲವು ಶತಮಾನಗಳ ಸಂಗತಿಗಳೊಂದಿಗೆ ಒಟ್ಟಾಗಿ ನಡೆಯುತ್ತಿದೆ ಎಂದು ಅನ್ನಿಸಲು ಆರಂಭವಾಗಿದೆ. ಸ್ತ್ರೀವಾದ ಐದನೇ ಮಜಲು ಅಥವಾ ಅಲೆಯನ್ನು ಹಾದು ಬರುತ್ತಿದೆ. ಹಾಗಿದ್ದರೂ, ಗದ್ಯದಲ್ಲಿ ಹೇಳಲಾಗದ್ದನ್ನು ಪದ್ಯದಲ್ಲಿ ಹೇಳಲು ಪ್ರಯತ್ನಿಸುತ್ತಿರುವ ಮನಸ್ಸುಗಳು ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಬೇಕಾದಂಥ ಪರಿಸ್ಥಿತಿ ಎದುರಾಗಿರುವುದು ಕಾಲದ ದುರಂತ.
ಖಡ್ಗವಾಗಲಿ ಕಾವ್ಯ
ನೆರೂಡನಂಥವರಿಗೆ, ಅವರಂಥ ಲಕ್ಷಾಂತರ ಮಂದಿ ಲೇಖಕರಿಗೆ ಸರ್ವಾಧಿಕಾರವನ್ನು ಪ್ರತಿಭಟಿಸಲು, ವ್ಯಕ್ತಿ ಸ್ವಾತಂತ್ರ್ಯ, ಆಭಿವ್ಯಕ್ತಿ ಸ್ವಾತಂತ್ರ್ಯ ಉಳಿಸಿಕೊಳ್ಳಲು ಇದ್ದ ಒಂದೇ ಮಾರ್ಗ ಕಾವ್ಯ. ಹಾಗಾಗೇ ʼನಾಗರಾಜ್ ಆಗ ದಮನಿತರ ಧ್ವನಿಗೆ ʼಖಡ್ಗವಾಗಲಿ ಕಾವ್ಯʼ ಎಂದಿರಬೇಕು. ಈ ಹಿನ್ನೆಲೆಯಲ್ಲಿಯೇ ಸರ್ವಾಧಿಕಾರಿಯನ್ನುಓಲೈಸುವ, ಕವಿತೆ ದೇಶದ್ರೋಹದ ಅಪರಾಧ ಎಂದು ಭಾವಿಸುವ ಬಹುಮಂದಿಗೆ ಈ ಮಮತಾ ಅವರ ಸಾಲುಗಳು ದೇಶದ್ರೋಹ, ಧರ್ಮದ್ರೋಹದಂತೆ ಕಂಡಿದ್ದರೆ ಆಶ್ಚರ್ಯವೇನು ಪಡಬೇಕಿಲ್ಲ. ಹಾಗಾಗಿ ಅಂಥವರ ಟೀಕೆಯನ್ನು ಎಷ್ಟರ ಮಟ್ಟಿಗೆ ತೀವ್ರವಾಗಿ ಪರಿಗಣಿಸಬೇಕೆಂಬ ಪ್ರಶ್ನೆ ಕಾಡುತ್ತದೆ ಅಷ್ಟೆ. ಹಾಗೆಂದು ಅದನ್ನು ನಿರ್ಲಕ್ಷಿಸಿವೆಂದಿಟ್ಟುಕೊಳ್ಳಿ,, ಅದು ಪದ್ಯಕ್ಕೆ, ಮತ್ತು ಸೃಜನಶೀಲ ಸಾಹಿತ್ಯಕ್ಕೆ ಬಗೆಯುವ ದ್ರೋಹವೂ ಆಗುತ್ತದೆ. ತಪ್ಪಾದಾಗ ಮೌನವಾಗಿ ಸಹಿಸಿಕೊಳ್ಳುವ ಅಪರಾಧದಷ್ಟೇ ದೊಡ್ಡ ಅಪರಾಧ ಅದು. ಹಾಗಾಗಿ ಅಂಥವರಿಗೆಲ್ಲ “ಅರ್ಥವಾಗುವಂತೆ” ಉತ್ತರಿಸುವುದು. ಎಲ್ಲ ಪ್ರಜ್ಞಾವಂತರ ಕರ್ತವ್ಯ ಕೂಡ. ಹಾಗೆ ಮಾಡದಿದ್ದರೆ, ಇಂಥ ಕವಿತೆಯನ್ನು ನಿಷೇಧಿಸುವ (ಈಗಾಗಲೇ ಈ ಪ್ರಕ್ರಿಯೇ ಜಾರಿಯಲ್ಲಿದೆ) ಬರೆದ, ಕವಿ, ಲೇಖಕರನ್ನು ಬೆನ್ನಟ್ಟು ಅಕ್ಷೋಹಿಣಿ ಸೈನ್ಯದೆದರು, ಪದ್ಯವನ್ನು ಒಂಟಿಯಾಗಿ ನಿಲ್ಲಿಸಿದಂತಾಗುತ್ತದೆ. ಇನ್ನೊಂದು ರೀತಿಯಲ್ಲಿ ಬೌದ್ಧಿಕ ದಿವಾಳಿತನಕ್ಕೆ ಪ್ರತಿಭಟನೆಯಿಲ್ಲದೆ ಶರಣಾದಂತಾಗುತ್ತದೆ.
ಇಲ್ಲಿ ನೆಮ್ಮದಿ ತರುವ ಸಂಗತಿಯೆಂದರೆ, ನೂರಾರು ಹೃದಯವಂತ, ಸೃಜನಶೀಲ ಮನಸ್ಸುಗಳು ಮಮತಾ ಅವರ ಪರವಾಗಿ ಧ್ವನಿ ಎತ್ತಿರುವುದು. “ಇನ್ನು ಕವಿತೆಯ ಕಾಲ ಮುಗಿಯಿತು. ಎಲ್ಲಿಗೆ ಬಂತು ನೋಡಿ ಕಾವ್ಯ ಎನ್ನುವ ಮಾತುಗಳನ್ನು ಕೇಳಿ ಕವಿತೆ ಮುಗುಳ್ನಗುತ್ತಿರಬಹುದು…” ಎನ್ನುವ ಕವಿ ಜೋಗಿ ಹೀಗೆ ಬೆಚ್ಚಿ ಬೀಳಿಸುವುದು ಕವಿತೆಗೆ ಹೊಸತಲ್ಲ. ಕವಿತೆ ಕೆಂಪಗೆ ಕಾದ ಕಬ್ಬಿಣದ ಸರಳು. ಅದು ಯಾವಾಗ ಬರೆ ಇಡುತ್ತದೆ ಎನ್ನುವುದನ್ನು ಊಹಿಸುವುದು ಕಷ್ಟ. ಕವಿತೆ ಸಾಯುವುದು ಪ್ರತಿರೋಧದಿಂದ. ತನ್ನನ್ನು ವಿರೋಧಿಸುವ ಪಡೆಯನ್ನು ಹುಟ್ಟುಹಾಕುವುದನ್ನು ಕೂಡ ಕವಿತೆಯೇ ಮಾಡುತ್ತದೆ. ಇದು ಕವಿತೆಗೆ ಇರುವ ಪರಮ ಶಕ್ತಿ. ಪದ್ಯದ ಆರು ಸಾಲುಗಳು ಇಂಥ ತಲ್ಲಣ ಉಂಟು ಮಾಡಬಹುದು ಎಂಬುದು ನನ್ನ ಪ್ರಕಾರ ಕವಿತೆಗೆ ಸಲ್ಲುವ ಗೌರವ. ಕವಿಗಳೆಲ್ಲರೂ ಸಂಭ್ರಮ ಪಡಬೇಕಾದ ಸಂಗತಿ. ಆ ಆರು ಸಾಲುಗಳು ಕವಿತೆಯಷ್ಟೇ ಅಲ್ಲ. ಅದೊಂದು ಪ್ರತಿಪಾದನೆ ಪ್ರತಿರೋಧ ಕೂಡ ಎಂಬ ಅರ್ಥಪೂರ್ಣ ಷರಾ ಬರೆದಿದ್ದಾರೆ. ಇಂಥ ಈ ಕ್ಷಣದ ಮೌನ ಅಪರಾಧ ಎಂದು ಭಾವಿಸಿದ ಮನಸ್ಸುಗಳಿಗೆ ಧನ್ಯವಾದಗಳು.
ಬರಹ: ಮುರಳೀಧರ ಖಜಾನೆ, ಲೇಖಕ- ಪತ್ರಕರ್ತ
ವಿಭಾಗ