ಹೆಣ್ಣುಬಾಕರ ಮಟ್ಟ ಹಾಕಲು ಜನರೇ ಮುಂದೆ ಬರಬೇಕು, ವಿಧಾನಸೌಧ, ಸಂಸತ್ತಿನಲ್ಲಿ ಠಳಾಯಿಸುತ್ತಿವೆ ರಕ್ತಬೀಜಾಸುರರ ಸಂತತಿ: ರವಿ ಕೃಷ್ಣಾರೆಡ್ಡಿ
ರವಿ ಕೃಷ್ಣಾರೆಡ್ಡಿ ಬರಹ: ಹೆಣ್ಣುಬಾಕ ರಾಜಕಾರಣಿಗಳ ಕಾರಣದಿಂದಾಗಿ ಸಾರ್ವಜನಿಕ ಜೀವನ ಮತ್ತು ಆಡಳಿತವನ್ನು ಗಬ್ಬೆಬ್ಬಿಸಲು ಹೆಣ್ಣೂ ಒಂದು ಮೋಹನಾಸ್ತ್ರ, ಮನ್ಮಥಾಸ್ತ್ರವಾಗಿ ಬಳಕೆ ಆಗುತ್ತಿದ್ದಾಳೆ. ನೇರ ಮತ್ತು ಪ್ರಾಮಾಣಿಕ ದಾರಿಯ ಬದಲಿಗೆ ನೀಚ ಮತ್ತು ಕೊಳಕು ದಾರಿಯೂ ನಿಮ್ಮನ್ನು ವಿಧಾನಸೌಧಕ್ಕೆ, ಅಧಿಕಾರದ ಸ್ಥಾನಗಳಿಗೆ, ಕುಬೇರನ ತಿಜೋರಿಗೆ ಒಯ್ಯುತ್ತದೆ.

ಕರ್ನಾಟಕದಲ್ಲಿ ಕಳೆದ ಕೆಲ ದಿನಗಳಿಂದ ‘ಮಧುಬಲೆ’ (ಹನಿಟ್ರ್ಯಾಪ್) ವಿಚಾರ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದೆ. ಕರ್ನಾಟಕದ ವಿಧಾನಸಭೆಯಲ್ಲಿಯೇ ಈ ಕುರಿತು ಕಾವೇರಿದ ಚರ್ಚೆ ನಡೆದಿದ್ದು ಸರ್ಕಾರದ ಭಾಗವಾಗಿರುವ ಸಚಿವ ಕೆ.ಎನ್.ರಾಜಣ್ಣ ಅವರು 48 ಜನರ ಸಿಡಿಗಳಿವೆ. ಇದರಲ್ಲಿ ರಾಜಕಾರಿಣಿಗಳ ಜೊತೆಗೆ ಹಿರಿಯ ಅಧಿಕಾರಿಗಳು, ನ್ಯಾಯಾಧೀಶರದೂ ಇದೆ ಎಂದು ಹೇಳಿದ್ದಾರೆ. ಈ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವುದಾಗಿ ಗೃಹ ಸಚಿವ ಡಾ ಜಿ.ಪರಮೇಶ್ವರ ಭರವಸೆ ಕೊಟ್ಟಿದ್ದಾರೆ. ಯಾರಿಗೂ ದಯೆ ತೋರುವುದಿಲ್ಲ. ಕಟ್ಟುನಿಟ್ಟು ತನಿಖೆ ನಡೆಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ-ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಗಟ್ಟಿದನಿಯಲ್ಲಿ ಹೇಳಿದ್ದಾರೆ. ಅದರೆ ಈ ಚರ್ಚೆ, ಭರವಸೆಗಳಿಂದಾಚೆಗೆ ಚಾಚಿಕೊಂಡಿರುವ ಸಮಸ್ಯೆಯ ಮೂಲದ ಬಗ್ಗೆ ಯಾರೊಬ್ಬರೂ ಮಾತನಾಡುತ್ತಿಲ್ಲ ಎನ್ನುವುದು ಜನರ ಅಭಿಪ್ರಾಯ. ಈ ಹಿನ್ನೆಲೆಯಲ್ಲಿಯೇ ಕರ್ನಾಟಕ ರಾಷ್ಟ್ರಸಮಿತಿಯ ರವಿ ಕೃಷ್ಣಾರೆಡ್ಡಿ ಅವರ ಫೇಸ್ಬುಕ್ ಪೋಸ್ಟ್ ಎಲ್ಲ ಗಮನ ಸೆಳೆದಿದೆ. ಅವರ ಬರಹವನ್ನು ಇಲ್ಲಿ ಯಥಾವತ್ತಾಗಿ ಮರುಪ್ರಕಟಿಸಲಾಗಿದೆ.
***
ರವಿ ಕೃಷ್ಣಾರೆಡ್ಡಿ ಬರಹ: ಕಳೆದ 25 ವರ್ಷಗಳಲ್ಲಿ ರಾಜ್ಯದ ಮುಖ್ಯಮಂತ್ರಿಗಳಾದ ಏಳೆಂಟು ಜನರಲ್ಲಿ ಯಾರು ಲಂಪಟ, ವ್ಯಭಿಚಾರಿ, ಕಾಮುಕ, ಭೋಗಲೋಲುಪ ಆಗಿರಲಿಲ್ಲ ಎಂದು ಹುಡುಕಿ ನೋಡಿ ಅಥವಾ ಅವರಿವರನ್ನು ಕೇಳಿ ನೋಡಿ. ನಿಮಗೆ ಒಬ್ಬಿಬ್ಬರ ಹೆಸರು ಸಿಗಬಹುದು ಅಷ್ಟೇ. ಆ ಒಬ್ಬಿಬ್ಬರನ್ನು ಹೊರತುಪಡಿಸಿದರೆ ರಾಜ್ಯದ ಇತ್ತೀಚಿನ ಬಹುತೇಕ ಮುಖ್ಯಮಂತ್ರಿಗಳೆಲ್ಲರೂ ಕಚ್ಚೆಹರುಕರೇ, ಹೆಣ್ಣುಬಾಕರೇ, ಲಂಪಟರೇ, ತಮ್ಮ ಹೆಂಡತಿಯರೊಂದಿಗೆ ದಾಂಪತ್ಯನಿಷ್ಠೆ ಇಲ್ಲದಿದ್ದ ಕೊಳಕರೇ.
ಇವರಿಗೆ ಬೇಕಾದ ಹೆಣ್ಣುಗಳನ್ನು ಸಪ್ಲೈ ಮಾಡಿದವರೆಲ್ಲರೂ ಬಹುತೇಕವಾಗಿ ಅವರ ಪಕ್ಷಗಳ ಶಾಸಕರು, ಮಂತ್ರಿಗಳೇ. ತಮ್ಮ ತಲೆಹಿಡುಕ ಸೇವೆಗಳಿಗೆ ಅವರೂ ಸಾಕಷ್ಟು ಅನುಕೂಲ ಮಾಡಿಕೊಂಡರು ಮತ್ತು ಈಗಲೂ ಅವರು ನಮ್ಮ ರಾಜ್ಯದ ಶಾಸಕ, ಸಂಸದ, ಮಂತ್ರಿಗಳಾಗಿ ಪ್ರಾಮಾಣಿಕವಾಗಿ ತಮ್ಮ ಜನಸೇವೆ ಮಾಡುತ್ತಿದ್ದಾರೆ.
ಇನ್ನು ಈ ಮುಖ್ಯಮಂತ್ರಿಗಳ ಮುದಿ ಅಥವಾ ಕೊಳಕು ದೇಹಗಳ ಸೇವೆ ಮಾಡಿದ ಪುನೀತರಾದ ಮಹಿಳೆಯರು? ಅವರಲ್ಲಿ ಬಹುತೇಕರು ಹಾಲಿ ಅಥವ ಮಾಜಿ ಸಿನೆಮಾ ನಟಿಯರು. ಒಬ್ಬ ಮುಖ್ಯಮಂತ್ರಿಯ ಬಗ್ಗೆ ಮಾತನಾಡುತ್ತಾ ಪತ್ರಕರ್ತರೊಬ್ಬರು ನನಗೆ ಹೇಳಿದ್ದೇನೆಂದರೆ, ‘ಈವಯ್ಯನಿಗೆ ಆಂಟಿಯರೇ ಬೇಕು ಸಾರ್‘. ನಂತರ ಗಮನಿಸಿ ನೋಡಿದಾಗ ಆತನ ಅವಧಿಯಲ್ಲಿ ಮಧ್ಯವಯಸ್ಸಿನ ಅನೇಕ ಮಹಿಳೆಯರು ಒಳ್ಳೊಳ್ಳೆಯ ಸ್ಥಾನಗಳಲ್ಲಿ, ಅವರು ರಾಜಕೀಯವಾಗಿ ಮತ್ತೇನೂ ಜನಸೇವೆ ಮಾಡದಿದ್ದರೂ, ವಿರಾಜಮಾನರಾಗಿದ್ದದ್ದು ಕಂಡಿತು.
ಇದರಿಂದ ನಮಗೇನಾಗಬೇಕು ಎನ್ನುವ ಪ್ರಶ್ನೆ
ಸರಿಯಾದ ಪ್ರಶ್ನೆ. ಬಹುಜನರ ಪ್ರಶ್ನೆ. ಸಮಾಜ ಮತ್ತು ಪ್ರಜಾಪ್ರಭುತ್ವದ ಪರಿಜ್ಞಾನ ಇಲ್ಲದವರ ಪ್ರಶ್ನೆ. ಇಂತಹವರ ದೌರ್ಬಲ್ಯಗಳಿಂದ ರಾಜ್ಯಕ್ಕೆ ಆಗುವ ಅನ್ಯಾಯ ಮತ್ತು ಅಪಾಯದ ಬಗ್ಗೆ ಮೊದಲಿಗೆ ಯೋಚಿಸೋಣ. ಹೀಗೆ ಮಂತ್ರಿ, ಮುಖ್ಯಮಂತ್ರಿಗಳಿಗೆ ದೇಹಸೇವೆ ಮಾಡುವ ಮಹಿಳೆಯರು ಅಥವಾ ಅವರನ್ನು ಸೇವೆಗೆ ಕಳುಹಿಸಿರುವ ಪಿಂಪ್ಗಳು ಮುಖ್ಯಮಂತ್ರಿಯ ಪ್ರಭಾವ ಬಳಸಿ ಅನೇಕ ಸರ್ಕಾರಿ ಕೆಲಸಗಳನ್ನು ಅಕ್ರಮವಾಗಿ ಮಾಡಿಸಿಕೊಳ್ಳುತ್ತಾರೆ. ಸರ್ಕಾರಿ ಆಸ್ತಿಯನ್ನು ಅಂದರೆ ಜನರಿಗೆ ಸೇರಿದ ಆಸ್ತಿಯನ್ನು ಬರೆಸಿಕೊಳ್ಳುತ್ತಾರೆ. ಅಧಿಕಾರಿಗಳ ಬಳಿ ಕೋಟ್ಯಾಂತರ ರೂಪಾಯಿ ದುಡ್ಡು ತೆಗೆದುಕೊಂಡು ಅವರನ್ನು ಆಯಕಟ್ಟಿನ ಸ್ಥಳಕ್ಕೆ ವರ್ಗಾವಣೆ ಮಾಡಿಸುತ್ತಾರೆ. ನೂರಾರು, ಸಾವಿರಾರು ಕೋಟಿ ರೂಪಾಯಿ ಮೊತ್ತದ ನಿರುಪಯೋಗಿ ಅಥವಾ ಜನವಿರೋಧಿ ಯೋಜನೆಗೆಳ ಕಡತಗಳಿಗೆ ಮುಖ್ಯಮಂತ್ರಿಯಿಂದ ಅನುಮೋದನೆ ಕೊಡಿಸುತ್ತಾರೆ. ಶಾಸಕ, ಮಂತ್ರಿಯಾಗಬೇಕು ಎಂದು ಆಸೆ ಪಡುವವರಿಂದ ಕೋಟ್ಯಾಂತರ ರೂಪಾಯಿ ಹಣ ಪಡೆದು ಅಂತಹ ಅಯೋಗ್ಯರನ್ನು, ನೀಚರನ್ನು ಶಾಸಕ/ಮಂತ್ರಿ ಮಾಡಿ ರಾಜ್ಯ ಜನತೆಯ ಮೇಲೆ ಹೇರುತ್ತಾರೆ. ಭ್ರಷ್ಟ ಅಧಿಕಾರಿಗಳನ್ನು ಶಿಕ್ಷೆಯಿಂದ ರಕ್ಷಿಸುತ್ತಾರೆ. ನ್ಯಾಯ, ನೀತಿ, ನಿಜಾಯಿತಿ ಇರುವವರ morale ಅನ್ನು ನಾಶ ಮಾಡುತ್ತಾರೆ. ಮತ್ತಷ್ಟು ಅಸಹಾಯಕ ಅಥವಾ ಕೇಡಿಗ ಬುದ್ಧಿಯ ಮಹಿಳೆಯರನ್ನು ರಾಜಕಾರಣಿಗಳ ದೇಹಸೇವೆ ಮಾಡಲು ಪ್ರಚೋದಿಸುತ್ತಾರೆ.
ಇವೆಲ್ಲಾ ಮಾಡುತ್ತಾ ಮಾಡುತ್ತಾ ಆ ಪ್ರಣಯಸಖಿಯರು ತಾವೂ ದುಂಡಗಾಗುತ್ತಾರೆ, ಎಲ್ಲಾ ರೀತಿಯಿಂದಲೂ ಮತ್ತು ಅವರ ಸೇವೆಗಳೂ ಕಾಲಾಧೀನ. ಕೆಲವೇ ತಿಂಗಳು/ವರ್ಷ ಮಾತ್ರ. ಅಲ್ಪಕಾಲಿಕ. ಅಷ್ಟೊತ್ತಿಗೆ ಅವನಿಗೆ ಇನ್ನೂ ಹಲವು ಸಖಿಯರು ಮುತ್ತಿಕೊಂಡಿರುತ್ತಾರೆ. ಈ ಹೆಣ್ಣುಬಾಕ ರಾಜಕಾರಣಿಗಳ ಕಾರಣದಿಂದಾಗಿ ಸಾರ್ವಜನಿಕ ಜೀವನ ಮತ್ತು ಆಡಳಿತವನ್ನು ಗಬ್ಬೆಬ್ಬಿಸಲು ಹೆಣ್ಣೂ ಒಂದು ಮೋಹನಾಸ್ತ್ರ, ಮನ್ಮಥಾಸ್ತ್ರವಾಗಿ ಬಳಕೆ ಆಗುತ್ತಿದ್ದಾಳೆ. ನೇರ ಮತ್ತು ಪ್ರಾಮಾಣಿಕ ದಾರಿಯ ಬದಲಿಗೆ ನೀಚ ಮತ್ತು ಕೊಳಕು ದಾರಿಯೂ ನಿಮ್ಮನ್ನು ವಿಧಾನಸೌಧಕ್ಕೆ, ಅಧಿಕಾರದ ಸ್ಥಾನಗಳಿಗೆ, ಕುಬೇರನ ತಿಜೋರಿಗೆ ಒಯ್ಯುತ್ತದೆ.
ವಿಧಾನಸಭೆಯಿಂದ ಹೊರಹಾಕಬೇಕಿತ್ತು, ಆದರೆ…!
ಸದ್ಯ ನಮ್ಮ ಶಾಸಕರಾಗಿರುವವರಲ್ಲಿ ಇಬ್ಬರನ್ನು ಇಷ್ಟೊತ್ತಿಗೆ ಚಪ್ಪಲಿಯಲ್ಲಿ ಹೊಡೆದು ವಿಧಾನಸಭೆಯಿಂದ ಹೊರಹಾಕಬೇಕಿತ್ತು. ಮಗನ ಜೊತೆಗೆ ತಂದೆಯಾದವನೂ ಸೇರಿ ಅಸಹಾಯಕ ಹೆಣ್ಣಿನ ಮೇಲೆ ಅತ್ಯಾಚಾರ ಮಾಡಿದ ವಿಷಯದಲ್ಲಿ ಒಬ್ಬನನ್ನಾದರೆ, ಮುಖ್ಯಮಂತ್ರಿಗಳಾದವರ ಶಯ್ಯಾಗೃಹಕ್ಕೆ ಅವರೊಂದಿಗೆ ಕಾಮಕೇಳಿ ನಡೆಸಲು ಏಡ್ಸ್ ಇರುವ ಮಹಿಳೆಯರನ್ನು ಕಳುಹಿಸಿ, ಅದನ್ನು ವಿಡಿಯೊ ಮಾಡಿಕೊಂಡು, ಆ ವಿಡಿಯೊ ಬಳಸಿ ಬ್ಲ್ಯಾಕ್ ಮೇಲ್ ಮಾಡಿ ಮಂತ್ರಿಯಾದ ಇನ್ನೊಬ್ಬನನ್ನು. ಆ ಪುಣ್ಯಾತ್ಮರಿಬ್ಬರೂ ನಿನ್ನೆ ಸದನದಲ್ಲಿ ಇದ್ದರು. ಒಬ್ಬನಂತೂ ಅವನೇ ಶೀಲವನ್ನು ಕಳೆದುಕೊಂಡಂತೆ ಗೋಳಾಡುತ್ತಿದ್ದ. ನಮ್ಮ ಒಬ್ಬನೇ ಒಬ್ಬ ಶಾಸಕನೂ ಅವನನ್ನು, ‘ಥೂ ಕೂತ್ಕೊಳಯ್ಯ, ಗಲೀಜು ನೀನು‘ ಎನ್ನಲಿಲ್ಲ. ಎಲ್ಲರೂ ಅವರೇ ಇದ್ದಾಗ ಅವರೇಕೆ ಹೇಳುತ್ತಾರೆ?
ಇಂತಹವು ಇನ್ನೆಷ್ಟೋ! ಬೇರೆ ರಾಜ್ಯ, ವಿದೇಶಗಳಲ್ಲಿ ಹೈಕಮಾಂಡಿನ ಸೇವೆ ಮಾಡಿದವನೊಬ್ಬ ಇಂದು ದಿಲ್ಲಿ ಮುಟ್ಟಿದ್ದಾನೆ. ಇವರ ಅನೇಕ ಪುರಾತನರು ನಾಶವಾಗಿ ಗತಿಸಿದ್ದಾರೆ. ಅವರ ರಕ್ತಬೀಜಾಸುರ ಸಂತತಿಗಳು ನಮ್ಮ ವಿಧಾನಸೌಧ, ಸಂಸತ್ತಿನಲ್ಲಿ ನಾಚಿಕೆ, ಮಾನ, ಮರ್ಯಾದೆಗಳನ್ನು ತ್ಯಜಿಸಿ ಠಳಾಯಿಸುತ್ತಿದ್ದಾರೆ. ಇವೆಲ್ಲವೂ ಗೊತ್ತಿರುವ ಜನ ಬೆಚ್ಚಿಬಿದ್ದು ಮುದುಡಿಕೊಂಡಿದ್ದಾರೆ. ಸಮಾಜದಲ್ಲಿ ವೈಯಕ್ತಿಕ/ಕೌಟುಂಬಿಕ/ಸಾಮುದಾಯಿಕ ಮೌಲ್ಯಗಳು ಕೆಟ್ಟಾಗ ಏನು ಮಾಡಬೇಕು? ಯಾವುದಾದರೂ ಒಂದು ಮೌಲ್ಯವನ್ನಾದರೂ ಕಟ್ಟಲು ಮುಂದಾಗಬೇಕು. ಜನಸಾಮಾನ್ಯರಲ್ಲಿ ನ್ಯಾಯ ಮತ್ತು ನೀತಿಯ ಪ್ರಜ್ಞೆ ಮೂಡಿಸುವ ಒಂದು ಮೌಲ್ಯವನ್ನು ಕಟ್ಟಿ ಪ್ರಸ್ತುತ ಮಾಡಿದರೆ ಅದು ಸಹಜವಾಗಿಯೇ ಇನ್ನೂ ದೊಡ್ಡದೊಡ್ಡ ಮೌಲ್ಯಗಳನ್ನು ಹೇಳಲು ಮತ್ತು ಕಟ್ಟಲು ಅವಕಾಶ ಕಲ್ಪಿಸುತ್ತದೆ. ಅದಕ್ಕಾಗಿಯೇ ನಾನು ಬಹುಸಂಖ್ಯಾತ ಸಾಮಾನ್ಯ ಜನರನ್ನು ಪ್ರತಿದಿನವೂ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಬಾಧಿಸುತ್ತಿರುವ ಭ್ರಷ್ಟಾಚಾರದ ವಿಚಾರವಾಗಿ ಜನರಲ್ಲಿ ಪ್ರಜ್ಞೆ ಮೂಡಿಸುವ ಕೆಲಸ ಮಾಡುತ್ತಿದ್ದೇನೆ ಮತ್ತು ಆ ಮೌಲ್ಯವನ್ನು ಗೌರವಿಸುವ ಸ್ಥಿತಿ ಏರ್ಪಡಲಿ ಎಂದು ಹೋರಾಡುತ್ತಿದ್ದೇನೆ. ಇದರಿಂದ ಸಬಲೀಕರಣಗೊಂಡ ಜನರು ನಾಳೆಗೆ ಮತ್ತೊಂದು ಮೌಲ್ಯವನ್ನು ಕಟ್ಟುತ್ತಾರೆ. ಅದು ಹಾಗೆಯೇ ಮಗದೊಂದಕ್ಕೆ ಮುಂದುವರೆದು, ಕೆಲವು ವರ್ಷ, ದಶಕಗಳ ಕಾಲವಾದರೂ ಒಂದು ಮೌಲ್ಯ ವ್ಯವಸ್ಥೆ ಏರ್ಪಡುತ್ತದೆ.
ಜಾತಿಗ್ರಸ್ತ ಸಮಾಜ ಬದಲಾಗಬೇಕಿದೆ
ನಮ್ಮದು ಜಾತಿಗ್ರಸ್ತ ಸಮಾಜ. ಗುಲಾಮಿ ಮನಸ್ಥಿತಿಯ ಸಮಾಜ. ಸಿರಿವಂತರ ಕೃಪಾಕಟಾಕ್ಷಕ್ಕೆ ಪಾತ್ರರಾಗಲು ಹಾತೊರೆಯುವ ಸಮಾಜ. ಬಲಿಷ್ಠರಿಗೆ ಹೆದರಿ ಸಾಯುವ ಪುಕ್ಕಲು ಸಮಾಜ. ಸಮಾಜದ ಹಿತಕ್ಕಿಂತ ಸ್ವಹಿತಕ್ಕೆ ಹೆಚ್ಚು ಬೆಲೆ ಕೊಡುವ ಸಂಕುಚಿತ ಬುದ್ಧಿಯ ಸ್ವಾರ್ಥ ಮನಸ್ಥಿತಿಯ ಸಮಾಜ. ಇಂತಹ ಸಮಾಜದಲ್ಲಿ ಮೌಲ್ಯಗಳ ಬಗ್ಗೆ ಮಾತನಾಡುವುದೂ ಬಹುತೇಕರಿಗೆ ಅಪ್ರಿಯ. ತಮ್ಮ ಜಾತಿಯ ನಾಯಕ ಅಥವಾ ತಾವು ಒಪ್ಪಿಕೊಂಡ ಪಕ್ಷದ ನಾಯಕ ಅಥವಾ ತನಗೆ ನಾಯಿಬಿಸ್ಕತ್ ಎಸೆಯುತ್ತಾ ಸಾಕಿಕೊಂಡಿರುವ ನಾಯಕ ಏನು ಮಾಡಿದರೂ ಈ ಜನಕ್ಕೆ ಸರಿ. ಬೇರೆ ನಾಯಕರು ಮಾಡಿಲ್ಲವೇ ಎನ್ನುವುದು ಮುಗ್ಧ ಅಥವಾ ಸುಲಭ ಪ್ರಶ್ನೆ ಇವರಿಗೆ. ಯಾಕೆಂದರೆ ಅದು ಈಗಾಗಲೇ ಉತ್ಪಾದಿತ ಸತ್ಯ/ಒಪ್ಪಿಗೆ (manufactured truth, manufactured consent). ‘ಹೌದು, ಏನೀಗ‘ ಎನ್ನುವುದು ಎಲ್ಲಾ ರೀತಿಯ ಮೌಲ್ಯ ಮತ್ತು ಸಾರ್ವಜನಿಕ ಲಜ್ಜೆಯನ್ನು ದಾಟಿದ ಭಂಡತನದ ಭಯೋತ್ಪಾದಕ ಪ್ರತಿಕ್ರಿಯೆ. ನಮ್ಮ ಭ್ರಷ್ಟ ಮತ್ತು ನೀಚ ರಾಜಕಾರಣಿಗಳು ಮತ್ತವರ ಸಮರ್ಥಕರು ಈಗ ಈ ಹಂತ ತಲುಪಿದ್ದಾರೆ.
ಸಮಾಜದಲ್ಲಿ ನೆಮ್ಮದಿಯ ಮತ್ತು ನ್ಯಾಯಯುತ ಬದುಕಿಗಾಗಿ ಉತ್ತಮ ಹಾಗೂ ಸಾರ್ವಕಾಲಿಕ ಮೌಲ್ಯಗಳನ್ನು ಹೇಳುವ ಸಜ್ಜನರು ಮತ್ತು ಸಾಧಕರು ಕೆಲವರಾದರೂ ಇರಬೇಕು ಮತ್ತು ಅವರನ್ನು ಸಮಾಜ ಗೌರವಿಸಬೇಕು. ಆದರೆ ಕರ್ನಾಟಕದ ಇಂದಿನ ಸಾಂಸ್ಕೃತಿಕ, ಸಾಮಾಜಿಕ, ಸಾಹಿತ್ಯ ಲೋಕದ ಬಹುತೇಕ ಕಲಾವಿದರು, ಹೋರಾಟಗಾರರು, ಸಾಹಿತಿಗಳು, ಚಿಂತಕರು, ಬುದ್ಧಿಜೀವಿಗಳು ಇಂದು ಭಯಭೀತರಾಗಿದ್ದಾರೆ, ಸ್ವಾರ್ಥಿಗಳಾಗಿದ್ದಾರೆ, ಅಡ್ಡದಾರಿ ಹಿಡಿದಿದ್ದಾರೆ, ಸಿನಿಕರಾಗಿದ್ದಾರೆ, ಆಸ್ಥಾನ ವಿದೂಷಕರಾಗಿದ್ದಾರೆ, ಆಸ್ಥಾನ ನರ್ತಕ/ನರ್ತಕಿಯರಾಗಿದ್ದಾರೆ, ವಿಕೃತ ಲೈಂಗಿಕ ಕೃತ್ಯಗಳಲ್ಲಿ ರಾಜಕಾರಣಿಗಳ ಸಂಗಾತಿಗಳಾಗಿದ್ದಾರೆ, ಅವ್ಯವಹಾರಗಳಲ್ಲಿ ಪಾಲುದಾರರಾಗಿ ರಾಜಕಾರಣಿಗಳ ಬೇನಾಮಿಗಳಾಗಿದ್ದಾರೆ. ಒಟ್ಟಾರೆ ಬಹುತೇಕರು ದಾರಿತಪ್ಪಿದ್ದಾರೆ ಮತ್ತು ಕೊಳೆತು ನಾರುತ್ತಿದ್ದಾರೆ.
ಇಂತಹ ಸ್ಥಿತಿಯ ಒಟ್ಟು ಫಲಿತಾಂಶವೇ ಇಂದಿನ ದುಸ್ಥಿತಿ. ರಾವಣ, ದುರ್ಯೋಧನ, ದುಶ್ಯಾಸನ, ಕೀಚಕರೇ ನಮ್ಮನ್ನಾಳುತ್ತಿರುವ ಹೀನಾತಿಹೀನಸ್ಥಿತಿ. ಸಾರ್ವಜನಿಕ ಜೀವನ ಎಂದರೆ ಸಾಕು ಮಾರ್ಯಾದಸ್ತರು ಮುಖ ತಿರುಗಿಸಿ ಅಸಹ್ಯ ಪಡುವ ದೌರ್ಭಾಗ್ಯ ಪರಿಸ್ಥಿತಿ.
ಅಂತಿಮವಾಗಿ, ಇದನ್ನು ಜನರೇ ಸರಿಪಡಿಸಬೇಕು. ಇಂದಲ್ಲ ನಾಳೆ ಅವರೇ ಸರಿ ಮಾಡುತ್ತಾರೆ. ಮಂಡಿ ಮುರಿದಿದ್ದರೂ ಪರಸ್ತ್ರೀಯರೊಂದಿಗೆ ಅನೈತಿಕ ಕಾಮಕೇಳಿಯಲ್ಲಿ ತೊಡಗಿ ರಾಜ್ಯವನ್ನು ಹಾಳು ಮಾಡುತ್ತಿರುವ ನೀಚರ ಸೊಂಟ ಮುರಿಯುತ್ತಾರೆ. ಅತ್ಯಾಚಾರಿ ರಾಕ್ಷಸರ ಸೊಕ್ಕಡಗಿಸುತ್ತಾರೆ. ಅವರ ಸಮರ್ಥಕರನ್ನು ಅಟ್ಟಾಡಿಸುತ್ತಾರೆ.
ಬದುಕಿನ ಚಲನೆ ಇರುವುದೇ ಹೀಗೆ. ಯಾವ ಕಾಲದಲ್ಲಿ ನಾವು ಬದುಕುತ್ತಿದ್ದೇವೆ ಎನ್ನುವುದಷ್ಟೇ ನಮ್ಮ ಪಾಪ ಅಥವಾ ಪುಣ್ಯ. ಅದಕ್ಕಾಗಿಯೇ, ಏನೇ ಆಗಲಿ, ಒಳ್ಳೆಯದನ್ನೇ ಮಾಡಿ; ಮಾಡುತ್ತಲೇ ಇರಿ.
ಬರಹ: ರವಿ ಕೃಷ್ಣಾರೆಡ್ಡಿ, ರಾಜ್ಯಾಧ್ಯಕ್ಷ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ
(ಗಮನಿಸಿ: ಇಲ್ಲಿರುವುದು ಲೇಖಕರ ವೈಯಕ್ತಿಕ ಅಭಿಪ್ರಾಯ. ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಜಾಲತಾಣದ ಸಿಬ್ಬಂದಿ ಈ ಬರಹದ ಕರಡು ಓದಿ, ಕಾಗುಣಿತ ಸರಿಪಡಿಸಿರುವುದು ಬಿಟ್ಟರೆ ಯಾವುದೇ ವಿಚಾರವನ್ನು ತಿದ್ದಿಲ್ಲ, ಬದಲಿಸಿಲ್ಲ. ಅವರ ಫೇಸ್ಬುಕ್ ಬರಹವನ್ನು ಕೆಳಗೆ ನೀಡಲಾಗಿದೆ).
