Karnataka Polls: ಒಕ್ಕಲಿಗ ನಾಯಕರು ಟಿಪ್ಪುವನ್ನು ಕೊಂದಂತೆ ಸಿದ್ದುವನ್ನೂ ʻಮುಗಿಸಿʼ ಎಂದ ಸಚಿವ ಡಾ.ಅಶ್ವಥ್ ನಾರಾಯಣ್; ಕೇಸ್ ದಾಖಲು
Karnataka Polls: ಟಿಪ್ಪು ಸುಲ್ತಾನ್ ರೀತಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯನವರನ್ನು 'ಮುಗಿಸಿ' ಎಂದು ಜನರನ್ನು ಪ್ರಚೋದಿಸಿದ್ದಕ್ಕಾಗಿ ಐಟಿ ಮತ್ತು ಉನ್ನತ ಶಿಕ್ಷಣ ಸಚಿವ ಡಾ ಸಿಎನ್ ಅಶ್ವಥ್ ನಾರಾಯಣ್ ವಿರುದ್ಧ ಕರ್ನಾಟಕ ಕಾಂಗ್ರೆಸ್ ಗುರುವಾರ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
ಬೆಂಗಳೂರು: ಟಿಪ್ಪು ಸುಲ್ತಾನ್ ಹತ್ಯೆ ಮಾಡಿದ ರೀತಿಯಲ್ಲಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರನ್ನು ಮುಗಿಸಿ ಬಿಡಿ ಎಂದು ಐಟಿ ಮತ್ತು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ ಇತ್ತೀಚೆಗೆ ಸಾರ್ವಜನಿಕವಾಗಿ ಹೇಳಿದ್ದರು. ಇದರ ವಿರುದ್ಧ ಕರ್ನಾಟಕ ಕಾಂಗ್ರೆಸ್ ಗುರುವಾರ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದೆ.
ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ ಅವರ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಗುರುವಾರ ಪ್ರತಿಕ್ರಿಯಿಸಿದ್ದಾರೆ. ಟಿಪ್ಪು ಸುಲ್ತಾನ್ ಅವರ ಹತ್ಯೆ ನಡೆದ ಮಾದರಿಯಲ್ಲೆ ನನ್ನನ್ನೂ ಕೊಲ್ಲುವಂತೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ ಜನರನ್ನು ಪ್ರಚೋದಿಸಿದ್ದಾರೆ.
ಅಶ್ವಥ್ ನಾರಾಯಣ್, ನೀವು ಜನರನ್ನೇಕೆ ಪ್ರಚೋದಿಸುತ್ತೀರಿ, ನೀವೇ ಒಂದು ಗನ್ ತಗೊಳ್ಳಿ ಎಂದು ಮೊದಲ ಟ್ವೀಟ್ನಲ್ಲಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು ಎರಡನೇ ಟ್ವೀಟ್ನಲ್ಲಿ ಮುಖ್ಯಮಂತ್ರಿಯವರ ಅಧಿಕೃತ ಸರ್ಕಾರಿ ಟ್ವೀಟ್ ಖಾತೆ ಮತ್ತು ವೈಯಕ್ತಿಕ ಖಾತೆಯನ್ನು ಟ್ಯಾಗ್ ಮಾಡಿದ್ದು, ಸಚಿವರನ್ನು ಕೂಡಲೇ ವಜಾಗೊಳಿಸಬೇಕು ಮತ್ತು ಬಂಧಿಸಬೇಕು. ಈ ಕೂಡಲೇ ಈ ಕ್ರಮ ಜರುಗಿಸಬೇಕು. ಒಂದೊಮ್ಮೆ ಕ್ರಮ ಜರುಗಿಸಿಲ್ಲ ಎಂದಾದರೆ ಅವರ ಮನವಿ ಬಿಜೆಪಿಯ ಮನವಿ ಎಂದೇ ಪರಿಗಣಿಸಲ್ಪಡುತ್ತದೆ. ಅಥವಾ ಅಶ್ವಥ್ ನಾರಾಯಣ ಅವರು ಮಾನಸಿಕವಾಗಿ ಅಸ್ಥಿರವಾಗಿದ್ದಾರೆ ಎಂದು ಅವರು ತಿಳಿದುಕೊಂಡಾರು ಎಂದು ಹೇಳಿದ್ದಾರೆ.
ಮೂರನೇ ಟ್ವೀಟ್ನಲ್ಲಿ ಅವರು, ನನ್ನನ್ನು ಕೊಲ್ಲ ಬೇಕು ಎಂಬ ಮಾನಸಿಕ ಅಸ್ವಸ್ಥ ಅಶ್ವಥ್ ನಾರಾಯಣ ಅವರ ಹೇಳಿಕೆ ಕೇಳಿ ಕನ್ನಡಿಗರು ಕುಪಿತರಾಗಿದ್ದಾರೆ ಎಂಬುದರ ಅರಿವು ನನಗೆ ಇದೆ. ಆದರೂ ಅವರಿಗೆ ಹಾನಿ ಎಸಗಬೇಡಿ ಎಂದು ಬರೆದುಕೊಂಡಿದ್ದಾರೆ.
ಡಾ.ಸಿ.ಎನ್.ಅಶ್ವಥ ನಾರಾಯಣ್ ಹೇಳಿದ್ದೇನು?
ಸಾರ್ವಜನಿಕ ಸಮಾರಂಭ ಒಂದರಲ್ಲಿ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ ಮಾತನಾಡಿದ ವೇಳೆ, 17ನೇ ಶತಮಾನದಲ್ಲಿ ಒಕ್ಕಲಿಗ ನಾಯಕರಾದ ಉರಿ ಗೌಡ ಮತ್ತು ನಂಜೇಗೌಡ ಅವರು ಮೈಸೂರಿನ ಟಿಪ್ಪು ಸುಲ್ತಾನ್ ಅನ್ನು ಹತ್ಯೆ ಮಾಡಿದಂತೆ ಸಿದ್ದರಾಮಯ್ಯ ಅವರನ್ನೂ ʼಮುಗಿಸಿʼ ಎಂದು ಜನರನ್ನು ಉದ್ದೇಶಿಸಿ ಹೇಳಿದ್ದರು.
ಡಾ.ಅಶ್ವಥ್ ನಾರಾಯಣ ಅವರ ಹೇಳಿಕೆಯಿಂದ ನನಗೇನೂ ಅಚ್ಚರಿ ಆಗಿಲ್ಲ. ಮಹಾತ್ಮ ಗಾಂಧಿಯ ಕೊಲೆಗಡುಕರನ್ನು ಆರಾಧಿಸುವ ಪಕ್ಷದ ನಾಯಕರಿಂದ ಪ್ರೀತಿ ಮತ್ತು ಸ್ನೇಹವನ್ನು ನಿರೀಕ್ಷಿಸಲಾಗದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟೀಕಿಸಿ ಟ್ವೀಟ್ ಮಾಡಿದ್ದರು.