Karnataka Rain Update: ಬೆಂಗಳೂರು, ಬೀದರ್ ಸೇರಿ ಹಲವು ಜಿಲ್ಲೆಗಳಲ್ಲಿ ಕೆಲವೇ ಹೊತ್ತಲ್ಲಿ ಶುರುವಾಗಲಿದೆ ಮಳೆ ಆರ್ಭಟ
Karnataka Rain Update: ಬೆಂಗಳೂರು, ಬಳ್ಳಾರಿ, ಬೀದರ್ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇನ್ನು ಕೆಲ ಹೊತ್ತಿನಲ್ಲಿ ಮಳೆ ಸುರಿಯಲಿದೆ. ಈ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನಿಮ್ಮೂರಲ್ಲೂ ಮಳೆ ಬರುತ್ತಾ ನೋಡಿ.

ಬೆಂಗಳೂರು: ಈ ವರ್ಷ ಬಿಸಿಲಿನ ತಾಪ ಬಹಳ ಜೋರಿದ್ದು, ರಾಜ್ಯದಾದ್ಯಂತ ಬಿಸಿಲಿನ ಝಳಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಭೂಮಿಯು ಕಾದ ಹೆಂಚಿನಂತಾಗಿದೆ. ಹಲವೆಡೆ ಬಿಸಿಗಾಳಿಯೂ ಬೀಸುತ್ತಿದ್ದು ಜನಜೀವನ ತೊಂದರೆಗೆ ಸಿಲುಕಿದೆ. ಅತಿಯಾದ ಬಿಸಿಲಿನ ತಾಪದಿಂದ ಕಂಗೆಟ್ಟ ಭೂಮಿಯ ಒಡಲನ್ನು ತಂಪು ಮಾಡಲು ನಿನ್ನೆ ರಾಜ್ಯದ ಕೆಲವು ಭಾಗಗಳಲ್ಲಿ ವರುಣರಾಯನ ಆಗಮನವಾಗಿತ್ತು. ಬೆಂಗಳೂರು ಸೇರಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ನಿನ್ನೆ ಮಳೆಯಾಗಿದ್ದು ಕೆಲವೆಡೆ ಅವಾಂತರವನ್ನೇ ಸೃಷ್ಟಿಸಿತ್ತು. ಇಂದು (ಮಾರ್ಚ್ 23) ಕೂಡ ಇನ್ನೇನು ಕೆಲ ಹೊತ್ತಿನಲ್ಲಿ ರಾಜ್ಯದ ಈ ಜಿಲ್ಲೆಗಳಲ್ಲಿ ಮಳೆ ಬೀಳುವ ನಿರೀಕ್ಷೆ ಇದೆ.
ಬಾಗಲಕೋಟೆ, ಬಳ್ಳಾರಿ, ಬೀದರ್, ಚಾಮರಾಜನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಕೊಡಗು, ಕೊಪ್ಪಳ, ರಾಯಚೂರು, ರಾಮನಗರ, ತುಮಕೂರು, ವಿಜಯನಗರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಇನ್ನು 3 ಗಂಟೆಗಳಲ್ಲಿ ಮಳೆಯಾಗುವ ನಿರೀಕ್ಷೆ ಇದೆ ಎಂದು ಸಂಜೆ 4.30 ರ ಹೊತ್ತಿಗೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ ಮಾಹಿತಿ ನೀಡಿದೆ.
ಬೆಂಗಳೂರಲ್ಲಿ ಮಳೆ ನಿರೀಕ್ಷೆ
ಬೆಂಗಳೂರಲ್ಲೂ ಇನ್ನು ಕೆಲ ಹೊತ್ತಿಗೆ ಮಳೆ ಅರ್ಭಟ ಶುರುವಾಗಲಿದೆ. ನಗರದಲ್ಲಿ ಇಂದು ಸಹ ಗುಡುಗು ಮಿಂಚು, ಗಾಳಿ ಸಹಿತ ಮಳೆಯಾಗಲಿದೆ. ನಿನ್ನೆ (ಮಾರ್ಚ್ 22) ಇದ್ದಕ್ಕಿದ್ದಂತೆ ಸುರಿದ ವರುಣರಾಯ ಬೆಂಗಳೂರಿನ ಜನತೆಯ ಬದುಕು ಅಲ್ಲೋಲ್ಲ ಕಲ್ಲೋಲ್ಲವಾಗುವಂತೆ ಮಾಡಿದ್ದ. ನಿನ್ನೆ ಸುರಿದ ಮಳೆಗೆ ಮರ ಬಿದ್ದು ಬಾಲಕಿಯೊಬ್ಬಳು ಮೃತಪಟ್ಟಿದ್ದಳು. ಹಲವಡೆ ರಸ್ತೆಗಳಲ್ಲಿ ನೀರು ತುಂಬಿ ವಾಹನ ಸವಾರರು ಪರದಾಡುವಂತಾಗಿತ್ತು. ಮಳೆರಾಯನ ಕಾರಣದಿಂದ ವಿಮಾನ ಸಂಚಾರವು ವ್ಯತ್ಯಯವಾಗಿತ್ತು.
ಇಂದು ಸಂಜೆ ಹೊತ್ತಿಗೆ ಮತ್ತೆ ಮಳೆ ಸುರಿಯಲಿದ್ದು, ವೀಕೆಂಡ್ ಕಾರಣದಿಂದ ಹೊರಗಡೆ ಹೋದ ಜನರು ಆದಷ್ಟು ಬೇಗ ಮನೆ ಸೇರಿಕೊಳ್ಳುವುದು ಉತ್ತಮ. ಇಲ್ಲದಿದ್ದರೆ ಟ್ರಾಫಿಕ್ನಲ್ಲಿ ಸಿಕ್ಕಿಕೊಳ್ಳುವ ಸಾಧ್ಯತೆ ಎದುರಾಗಬಹುದು. ನಗರದಲ್ಲಿ ಇಂದು ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣವಿತ್ತು. ನಿನ್ನೆ ಮಳೆಯು ಸಿಲಿಕಾನ್ ಸಿಟಿಯುನ್ನು ಕೊಂಚ ತಂಪು ಮಾಡಿತ್ತು.
ಬೆಂಗಳೂರಿನ ಬೊಮ್ಮನಹಳ್ಳಿ ಭಾಗದಲ್ಲಿ ಜೋರು ಮಳೆ
ನಗರದ ಯಲಹಂಕ, ಮಹದೇವಪುರ, ಕೆಆರ್ಪುರ ಹಾಗೂ ದಕ್ಷಿಣ ಭಾಗದಲ್ಲಿ ಹಗುರ ಮಳೆಯಾಗುವ ನಿರೀಕ್ಷೆ ಇದ್ದರೆ, ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ ಇಂದು ಜೋರು ಮಳೆ ಸುರಿಯುವ ಸಾಧ್ಯತೆ ಇದೆ. ನಿನ್ನೆ ಆರಂಭದಲ್ಲಿ ಯಲಹಂಕ ಹಾಗೂ ಹೆಬ್ಬಾಳ ಭಾಗದಲ್ಲಿ ಮಳೆ ಶುರುವಾಗಿತ್ತು. ಸಂಜೆ ಸುಮಾರು 6 ಗಂಟೆಗೆ ಶುರುವಾದ ಮಳೆ ರಾತ್ರಿ 12ರ ತನಕವೂ ಮುಂದುವರಿದಿತ್ತು. ಕೆಲವೆಡೆ ವಿದ್ಯುತ್ ಸಂಪರ್ಕವೂ ಕಡಿತಗೊಂಡಿತ್ತು. ಮನೆಗಳಿಗೂ ನೀರು ನುಗ್ಗಿತ್ತು. ಒಳಚರಂಡಿ ಅವ್ಯವಸ್ಥೆ ಬಗ್ಗೆ ಬಿಬಿಎಂಪಿಗೆ ಸಾಮಾಜಿಕ ಜಾಲತಾಣಗಳಲ್ಲಿ ಜನರು ಹಿಡಿಶಾಪ ಹಾಕುತ್ತಿದ್ದಾರೆ.
21 ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ
ಬೆಂಗಳೂರು ಸೇರಿದಂತೆ 21 ಜಿಲ್ಲೆಗಳಲ್ಲಿ ಇಂದು ಮಳೆಯಾಗುವ ಸಾಧ್ಯತೆಯ ಮುನ್ಸೂಚನೆಯನ್ನು ನೀಡಿತ್ತು ಹವಾಮಾನ ಇಲಾಖೆ. ಬಹುತೇಕ ಜಿಲ್ಲೆಗಳಲ್ಲಿ ಇಂದು ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ಇದರೊಂದಿಗೆ ಗಾಳಿ, ಗುಡಗು ಮಿಂಚು ಕೂಡ ಇರಲಿದೆ. ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ಒಂದೆರಡು ಕಡೆಗಳಲ್ಲಿ 40- 50 ಕಿಮೀ ವೇಗದ ಗಾಳಿ ಬೀಸುವ ಸಾಧ್ಯತೆ ಇದೆ.
