Weather Report Today: ಕರ್ನಾಟಕದಲ್ಲಿ ಮುಂದುವರೆಯಲಿದೆ ಬಿಸಿಗಾಳಿ ಹಗುರಮಳೆ, ಹಲವೆಡೆ ಕೂಲ್ಕೂಲ್, ಇಂದಿನ ಹವಾಮಾನ ವರದಿ
ಕರ್ನಾಟಕ ಹವಾಮಾನ ಇಲಾಖೆ (Met Centre Bengaluru - IMD) ಮುಂದಿನ 48 ಗಂಟೆಗಳ ಹವಾಮಾನ ಮುನ್ಸೂಚನೆ (Karnataka Weather Forecast) ನೀಡಿದೆ. ರಾಜ್ಯದ ಕೆಲವು ಕಡೆಗಳಲ್ಲಿ ಹಗುರ ಮಳೆ, ಹಲವು ಕಡೆಗಳಲ್ಲಿ ಬಿಸಿಲಿನ ಪ್ರಖರತೆ ಮುಂದುವರೆಯಲಿದೆ.
ಬೆಂಗಳೂರು: ಕರ್ನಾಟಕ ಹವಾಮಾನ ಇಲಾಖೆ (Met Centre Bengaluru - IMD) ಮುಂದಿನ 48 ಗಂಟೆಗಳ ಹವಾಮಾನ ಮುನ್ಸೂಚನೆ (Karnataka Weather Forecast) ನೀಡಿದೆ. ಇಲಾಖೆಯು ಸೋಮವಾರ ರಾಜ್ಯದ ಯಾವುದೇ ಭಾಗದಲ್ಲಿ ಹವಾಮಾನ ಎಚ್ಚರಿಕೆ ನೀಡದೆ ಇದ್ದರೂ ಕೆಲವು ಕಡೆ ಏಪ್ರಿಲ್ 27ರವರೆಗೆ ಅನಿರೀಕ್ಷಿತ ಗುಡುಗು ಸಹಿತ ಭಾರೀ ಮಳೆಯಾಗುವ ಸೂಚನೆಯನ್ನು ನೀಡಿದೆ. ಇಂದು ಸೋಮವಾರ ರಾಜ್ಯದ ಕೆಲವು ಕಡೆಗಳಲ್ಲಿ ಒಣಹವೆ, ಪ್ರಖರ ಬಿಸಿಲು (severe heat wave) ಮುಂದುವರೆಯಲಿದೆ. ಕೆಲವು ಕಡೆಗಳಲ್ಲಿ ಹಗುರ/ಸಾಧಾರಣ ಮಳೆಯಾಗಲಿದೆ.
ಹವಾಮಾನ ಇಲಾಖೆಯು ತನ್ನ ಅಧಿಕೃತ ವೆಬ್ಸೈಟ್ನಲ್ಲಿ ನೀಡಿರುವ ಮುನ್ಸೂಚನೆಯಲ್ಲಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಗುಡುಗುಮಿಂಚು ಸಹಿತ ಹಗುರ ಮಳೆ ಇರಲಿದೆ ಎಂದು ಹೇಳಿದೆ. ರಾಜ್ಯದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಬೀದರ್, ಗದಗ, ಹಾವೇರಿ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಇಂದು ಒಣಹವೆ ಮತ್ತು ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.
ಕರಾವಳಿ ಹವಾಮಾನ ಮುನ್ಸೂಚನೆ
ದಕ್ಷಿಣ ಕನ್ನಡ, ಉಡುಪಿಯಲ್ಲಿ ಉತ್ತರ ಕನ್ನಡದಲ್ಲಿ ಒಣ ಹವೆ ಮುಂದುವರೆಯಲಿದೆ. ಗರಿಷ್ಠ ಉಷ್ಣಾಂಶವು ಕರಾವಳಿಯ ಕೆಲವು ಕಡೆಗಳಲ್ಲಿ ವಾಡಿಕೆಗಿಂತ 2ರಿಂದ 3 ಡಿಗ್ರಿ ಹೆಚ್ಚಿರಲಿದೆ. ಕರಾವಳಿಯ ಒಂದೆರಡು ಕಡೆಗಳಲ್ಲಿ ಏಪ್ರಿಲ್ 26 ಮತ್ತು 27ರಂದು ಗುಡುಗು ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ವರದಿ ತಿಳಿಸಿದೆ.
ಉತ್ತರ ಒಳನಾಡು ಹವಾಮಾನ ವರದಿ
ಬಾಗಲಕೋಟೆ ಮತ್ತು ಬೆಳಗಾವಿಯಲ್ಲಿ ಒಣಹವೆ, ಬೀದರ್ನಲ್ಲಿ ಗುಡುಗು ಮಿಂಚು ಸಹಿತ ಹಗುರ ಮಳೆಯಾಗಲಿದೆ. ಧಾರವಾಡ, ಗದಗ, ಹಾವೇರಿಯಲ್ಲಿ ಒಣಹವೆ ಇರಲಿದೆ. ಕಲಬುರಗಿಯಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ಕೊಪ್ಪಳದಲ್ಲಿ ಒಣಹವೆ, ರಾಯಚೂರು, ಯಾದಗಿರಿಯಲ್ಲಿ ಹಗುರ ಮಳೆಯಾಗಲಿದೆ. ವಿಜಯಪುರ,, ಕೊಪ್ಪಳ ಮತ್ತು ಹಾವೇರಿಯಲ್ಲಿ ಒಣಹವೆಯ ಮುನ್ಸೂಚನೆಯನ್ನು ನೀಡಲಾಗಿದೆ. ಉತ್ತರ ಒಳನಾಡಿನ ಅಲ್ಲಲ್ಲಿ ಏಪ್ರಿಲ್ 27ರವರೆಗೆ ಮಿಂಚು ಸಹಿತ ಗುಡುಗಿನಿಂದ ಕೂಡಿದ ಮಳೆಯಾಗುವ ಸಾಧ್ಯತೆಯಿದೆ. ಇಂದು ಕೆಲವು ಕಡೆಗಳಲ್ಲಿ ಸಾಮಾನ್ಯಕ್ಕಿಂತ ಉಷ್ಣಾಂಶವು 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆಯಿದೆ.
ದಕ್ಷಿಣ ಒಳನಾಡು ವರದಿ
ಬಳ್ಳಾರಿಯಲ್ಲಿ ಒಣಹವೆ ಇರಲಿದ್ದು, ಬೆಂಗಳೂರು, ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರಗಳಲ್ಲಿ ಗುಡುಗು ಮಿಂಚು ಸಹಿತ ಹಗುರ ಮಳೆಯಾಗುವ ಸಾಧ್ಯತೆಯಿದೆ. ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನದಲ್ಲಿ ಒಣಹವೆ ಇರಲಿದೆ. ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರಗಳಲ್ಲಿ ಹಗುರ ಮಳೆಯಾಗಲಿದೆ. ಶಿವಮೊಗ್ಗ, ತುಮಕೂರು, ವಿಜಯನಗರಗಳಲ್ಲಿ ಒಣಹವೆ ಮುಂದುವರೆಯಲಿದೆ. ಏಪ್ರಿಲ್ 27ರವರೆಗೆ ದಕ್ಷಿಣ ಒಳನಾಡಿನ ಒಂದೆರಡು ಕಡೆ ಮಿಂಚು ಸಹಿತ ಗುಡುಗಿನಿಂದ ಕೂಡಿದ ಮಳೆಯಾಗುವ ಸಾಧ್ಯತೆ ಇದೆ. ಕೆಲವು ಕಡೆಗಳಲ್ಲಿ ಸಾಮಾನ್ಯಕ್ಕಿಂತ ಉಷ್ಣಾಂಶವು 2 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆ ಇದೆ.
ನಿನ್ನೆ ರಾಜ್ಯದ ಬಹುತೇಕ ಕಡೆಗಳಲ್ಲಿ ಮೋಡ ಕವಿದ ವಾತಾವರಣವಿತ್ತು. ಕೆಲವು ಕಡೆಗಳಲ್ಲಿ ಮಳೆಯಾಗಿದೆ. ದೆಹಲಿಯಲ್ಲಿ ನಿನ್ನೆ ಉಷ್ಣಾಂಶ ತಗ್ಗಿದ್ದು, ಏಪ್ರಿಲ್ 3ರ ಬಳಿಕ ಕೂಲ್ ಕೂಲ್ ಅನುಭವವಾಗಿದೆ. ಸಾಮಾನ್ಯಕ್ಕಿಂತ ಮೂರು ನಾಲ್ಕು ಡಿಗ್ರಿ ಉಷ್ಣಾಂಶ ತಗ್ಗಿದೆ. ದೆಹಲಿಯಹವಾಮಾನ ಕೇಂದ್ರವಾದ ಸಫ್ದರ್ಜಂಗ್ ವೀಕ್ಷಣಾಲಯದಲ್ಲಿ ಭಾನುವಾರದಂದು ಗರಿಷ್ಠ ತಾಪಮಾನವು 31.3 ಡಿಗ್ರಿ ಸೆಲ್ಸಿಯಸ್ಗೆ ಇಳಿದಿದೆ, ಹಿಂದಿನ ದಿನ 36.8 ಡಿಗ್ರಿ ಸೆಲ್ಸಿಯಸ್ಗಿಂತ ಐದು ಡಿಗ್ರಿಗಿಂತ ಕಡಿಮೆಯಾಗಿದೆ.