ಕರ್ನಾಟಕ ಶಾಲಾ ಪ್ರವೇಶ ನಿಯಮ; 1ನೇ ತರಗತಿ ಸೇರ್ಪಡೆಗೆ ಈ ಬಾರಿ ವಯೋಮಿತಿ ಸಡಿಲಿಕೆ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಘೋಷಣೆ
ಕರ್ನಾಟಕ ಶಾಲಾ ಪ್ರವೇಶ ನಿಯಮ: ಕರ್ನಾಟಕದಲ್ಲಿ 1ನೇ ತರಗತಿಗೆ ಮಕ್ಕಳನ್ನು ಸೇರ್ಪಡೆ ಮಾಡಲು ವಯೋಮಿತಿ 6 ವರ್ಷ ಎಂದು ಸರ್ಕಾರ ಘೋಷಿಸಿತ್ತು. ಆದರೆ ಈ ಸಲದ ಮಟ್ಟಿಗೆ ಈ ನಿಯಮ ಸಡಿಲಿಕೆ ಮಾಡುತ್ತಿರುವುದಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರಕಟಿಸಿದರು.

ಕರ್ನಾಟಕ ಶಾಲಾ ಪ್ರವೇಶ ನಿಯಮ: ಕರ್ನಾಟಕದಲ್ಲಿ ಒಂದನೇ ತರಗತಿಗೆ ಮಕ್ಕಳ ಸೇರ್ಪಡೆಗೆ ಈಗಾಗಲೇ ಇರುವ ವಯೋಮಿತಿ ನಿಯಮವನ್ನು ಕರ್ನಾಟಕ ಶಿಕ್ಷಣ ಇಲಾಖೆ ಈ ವರ್ಷದ ಮಟ್ಟಿಗೆ ತುಸು ಸಡಿಲಗೊಳಿಸಿದೆ. ಇದು ಷರತ್ತುಬದ್ಧ ಸಡಿಲಿಕೆಯಾಗಿದ್ದು, ಮಗುವಿಗೆ ಆರು ವರ್ಷ ಆಗಿರಬೇಕು ಎಂಬ ನಿಯಮ ಕಡ್ಡಾಯ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಆದಾಗ್ಯೂ, ಎಸ್ಇಪಿ ವರದಿ ಆಧಾರದ ಮೇಲೆ ಮಗು ಎಲ್ಕೆಜಿ, ಯುಕೆಜಿ ಕಲಿಕೆ ಮಾಡಿದ್ದು, ಮಗುವಿಗೆ 5 ವರ್ಷ 5 ತಿಂಗಳಾಗಿದ್ದರೆ ಈ ಬಾರಿ ಒಂದನೇ ಕ್ಲಾಸ್ಗೆ ಪ್ರವೇಶ ಪಡೆಯಬಹುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಕರ್ನಾಟಕ ಶಾಲಾ ಪ್ರವೇಶ ನಿಯಮ; 1ನೇ ತರಗತಿ ಸೇರ್ಪಡೆಗೆ ಈ ಬಾರಿ ವಯೋಮಿತಿ ಸಡಿಲಿಕೆ
ಮುಂದಿನ ಶೈಕ್ಷಣಿಕ ವರ್ಷದಿಂದ ಮಗುವಿಗೆ ಕಡ್ಡಾಯವಾಗಿ 6 ವರ್ಷ ತುಂಬಿರಬೇಕು. ಹಾಗಿದ್ದರೆ ಮಾತ್ರವೇ 1ನೇ ತರಗತಿಗೆ ಪ್ರವೇಶಾವಕಾಶ ಸಿಗಲಿದೆ. ಈ ಬಾರಿ, ಎಲ್ಕೆಜಿ, ಯುಕೆಜಿ ಆಗಿದ್ದರೆ ಮಾತ್ರ ಒಂದನೇ ತರಗತಿಗೆ ಪ್ರವೇಶ ನೀಡಬಹುದು. ಆದರೆ, ಮಕ್ಕಳಿಗೆ 5 ವರ್ಷ 5 ತಿಂಗಳಾಗಿರಬೇಕು. ಪೋಷಕರ ಒತ್ತಾಯದ ಮೇರೆಗೆ ಇದೊಂದು ವರ್ಷ ಮಾತ್ರ ಅವಕಾಶ ನೀಡಲಾಗುತ್ತಿದೆ ಎಂದು ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದರು.
ಆರು ವರ್ಷ ಕಡ್ಡಾಯ ಸುತ್ತೋಲೆ
ಕರ್ನಾಟಕ ಶಿಕ್ಷಣ ಇಲಾಖೆ 2022ರ ಜುಲೈನಲ್ಲಿ ಪ್ರಕಟಿಸಿದ ಸುತ್ತೋಲೆ ಪ್ರಕಾರ, ಒಂದನೇ ತರಗತಿಗೆ ಪ್ರವೇಶ ಪಡೆಯಬೇಕಾದರೆ ಮಗುವಿಗೆ 6 ವರ್ಷ ಆಗಿರಬೇಕು. ಇದು 2023-24ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಜಾರಿಗೆ ಬರಬೇಕಾಗಿತ್ತು. ಆದರೆ ಪೋಷಕರ ವಿರೋಧ, ವ್ಯಾಪಕ ಆಕ್ಷೇಪ ವ್ಯಕ್ತವಾದ ಕಾರಣ ನಿಯಮ ಜಾರಿಗೆ ಬರಲಿfಲಲ. ಸಣ್ಣಪುಟ್ಟ ಬದಲಾವಣೆಯೊಂದಿಗೆ 2025-26ರಿಂದ ಜಾರಿಗೊಳಿಸುವುದಾಗಿ ಸರ್ಕಾರ ಘೋಷಿಸಿತ್ತು. ಅದರಂತೆ ಈ ವರ್ಷದಿಂದ ಈ ನಿಯಮ ಜಾರಿಗೆ ಬಂದಿದೆ. ಆದರೆ ಈ ಸಲವೂ ಪೋಷಕರ ಒತ್ತಡದ ಕಾರಣ ನಿಯಮದಲ್ಲಿ ಸಡಿಲಿಕೆ ತೋರಿದೆ.
ಕರ್ನಾಟಕದಲ್ಲಿ 1ನೇ ತರಗತಿ ಸೇರ್ಪಡೆಗೆ ವಯೋಮಿತಿ ವಿಚಾರದಲ್ಲಿ ಪೋಷಕರು ಗೊಂದಲದಲ್ಲಿರುವುದು ಬೇಡ. ಭಾರತದ ಎಲ್ಲ ರಾಜ್ಯಗಳಲ್ಲಿ ಕೂಡ ಒಂದನೇ ತರಗತಿಗೆ ಸೇರ್ಪಡೆಗೆ 6 ವರ್ಷ ವಯೋಮಿತಿ ಇದೆ. ಇದರಲ್ಲಿ ಎರಡು ತಿಂಗಳು ಹೆಚ್ಚು ಕಡಿಮೆ ಮಾಡಬಹುದು. ಎಸ್ಇಪಿ ಅನುಸರಿಸುತ್ತಿರುವ ಕಾರಣ, ಮಕ್ಕಳು ಸಣ್ಣ ವಯಸ್ಸಿನಲ್ಲೇ ಶಾಲೆಗೆ ಸೇರ್ಪಡೆಯಾಗುತ್ತಿದ್ದಾರೆ. ಮಕ್ಕಳನ್ನು ಯಂತ್ರಗಳಂತೆ ಕಾಣಬೇಡಿ. ಅವರ ಮೇಲೆ ಓದುವ ವಿಚಾರದಲ್ಲಿ ಒತ್ತಡ ಹೇರಬೇಡಿ. ವಯೋಮಿತಿ ಬಗ್ಗೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿರುವ ಪೋಷಕರು ಮಕ್ಕಳ ಕಲಿಕೆಯ ಬಗ್ಗೆ ಆಸಕ್ತಿ ತೋರಿಸಿ. ಆದರೆ ಅವರ ಮೇಲೆ ಒತ್ತಡ ಹೇರಬೇಡಿ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಮನವಿ ಮಾಡಿದರು.
