ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ - 2025 ಅವಧಿ ಮತ್ತೆ ವಿಸ್ತರಣೆ, ಬೆಂಗಳೂರಲ್ಲಿ ಕಾಣದ ಪ್ರಗತಿ; ಮೇ 29ರ ವರೆಗೂ ನೋಂದಾಯಿಸಲು ಆಯೋಗದ ಅವಕಾಶ
ಕರ್ನಾಟಕದಲ್ಲಿ ಪ್ರಗತಿಯಲ್ಲಿರುವ ಪರಿಶಿಷ್ಟ ಜಾತಿ ಸಮುದಾಯಗಳ ಗಣತಿ ಕಾರ್ಯವನ್ನು ಈ ತಿಂಗಳ ಮೇ 29ರವರೆಗೂ ವಿಸ್ತರಣೆ ಮಾಡಿ ನ್ಯಾ. ನಾಗಮೋಹನದಾಸ್ ಆಯೋಗವು ಆದೇಶಿಸಿದೆ.

ಬೆಂಗಳೂರು:ಕರ್ನಾಟಕದಲ್ಲಿ ಮೇ ತಿಂಗಳಿನಲ್ಲಿ ನಡೆದಿರುವ ಪರಿಶಿಷ್ಟ ಜಾತಿಯ ವಿವಿಧ ಉಪ ಜಾತಿಗಳಿಗೆ ಸೇರಿದವರ ಗಣತಿ ಕಾರ್ಯಕ್ರಮದ ಅವಧಿಯನ್ನು ಎರಡನೇ ಬಾರಿಗೆ ವಿಸ್ತರಣೆ ಮಾಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯ ವಲಯಗಳಲ್ಲಿ ಪರಿಶಿಷ್ಟ ಜಾತಿ ಜನಾಂಗದ ಸಮೀಕ್ಷೆ ಕಾರ್ಯವು ಇನ್ನೂ ಪ್ರಗತಿಯಾಗಬೇಕಾಗಿರುವುದರಿಂದ, ಮಳೆ/ಹವಾಮಾನ ವೈಪರೀತ್ಯ ಕಾರಣಗಳಿಂದಾಗಿ, ಅನೇಕ ಪರಿಶಿಷ್ಟ ಜಾತಿ ಸಂಘಗಳಿಂದ ಮತ್ತು ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಕೋರಿಕೆಯ ಮೇರೆಗೆ ಸಮೀಕ್ಷಾ ಕಾರ್ಯವನ್ನು ಪೂರ್ಣಗೊಳಿಸಲು ಅನುವಾಗುವಂತೆ ದಿನಾಂಕವನ್ನು ವಿಸ್ತರಿಸಲು ನಿರ್ಣಯಿಸಲಾಗಿದೆ.ಮನೆ-ಮನೆ ಭೇಟಿ ನೀಡಿ ಸಮೀಕ್ಷೆಯು 2025ರ ಮೇ 26 ರಿಂದ ಮೇ 29 ರವರೆಗೆ ವಿಸ್ತರಿಸಲಾಗಿದೆ. ವಿಶೇಷ ಶಿಬಿರ (ಸಮೀಕ್ಷಾ ಬ್ಲಾಕ್ ವ್ಯಾಪ್ತಿಯಲ್ಲಿ) - 03 ದಿನಗಳ ಕಾಲ - ಮೇ 30, 31 ಹಾಗೂ 01 ನೇ ಜೂನ್ -2025 ರವರೆಗೆ ಮರು ನಿಗದಿಪಡಿಸಲಾಗಿದೆ ಮತ್ತು ಆನ್ ಲೈನ್ ಮೂಲಕ ಸ್ವಯಂ ಘೋಷಣೆ- ಜೂನ್ 01 ರವರೆಗೆ ಮುಂದುವರೆಯಲಿದೆ ಎಂದು ಏಕ ಸದಸ್ಯ ಆಯೋಗದ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸರ್ಕಾರದ ಆದೇಶ ದಿನಾಂಕ 2024 ನೇ ನವೆಂಬರ್ 12 ರಲ್ಲಿ ರಾಜ್ಯದಲ್ಲಿ ಶಿಕ್ಷಣ ಮತ್ತು ಸರ್ಕಾರಿ ಸೇವೆಗಳಲ್ಲಿ ಪರಿಶಿಷ್ಟ ಜಾತಿಯ ವಿವಿಧ ಉಪ ಜಾತಿಗಳಿಗೆ ಸೇರಿದವರ ಪ್ರಾತಿನಿಧ್ಯತೆ ಕುರಿತು Empirical Data ಪಡೆದು ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಬಗ್ಗೆ ಸೂಕ್ತ ಶಿಫಾರಸ್ಸಿನೊಂದಿಗೆ ವರದಿ ಸಲ್ಲಿಸಲು ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಡಾ: ಹೆಚ್.ಎನ್. ನಾಗಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಏಕ ಸದಸ್ಯ ಆಯೋಗವನ್ನು ರಚಿಸಲಾಗಿದೆ.
ಪರಿಶಿಷ್ಟ ಜಾತಿಯಲ್ಲಿನ 101 ಜಾತಿಗಳ ವೈಜ್ಞಾನಿಕ ವರ್ಗೀಕರಣ ಮಾಡಲು ದತ್ತಾಂಶವನ್ನು (Emperical Data) ಸಂಗ್ರಹಿಸಲು ಹೊಸದಾದ ಸಮೀಕ್ಷೆಯನ್ನು ನಡೆಸಲು ದಿನಾಂಕ: 27-03-2025 ರ ಆಯೋಗದ ಮಧ್ಯಂತರ ವರದಿಯಲ್ಲಿ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾದ ಹಿನ್ನೆಲೆಯಲ್ಲಿ ಸಮೀಕ್ಷೆಯನ್ನು ಮೇ 05-ರಿಂದ ಗಣತಿದಾರರು ಮನೆ-ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುವುದರ ಮೂಲಕ ರಾಜ್ಯಾದ್ಯಂತ ಈಗಾಗಲೇ ಪ್ರಾರಂಭಿಸಲಾಗಿದೆ.