ಮೌಲ್ಯಮಾಪಕರ ಎಡವಟ್ಟು, ಮತ್ತೆ ಮೂರು ಅಂಕ ಪಡೆದು ಕರ್ನಾಟಕಕ್ಕೆ ಟಾಪರ್ ಆದ ಮೈಸೂರು ರಾಮಕೃಷ್ಣ ವಿದ್ಯಾಶಾಲಾ ವಿದ್ಯಾರ್ಥಿ
ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶದ ವೇಳೆ ಕಡಿಮೆ ಅಂಕ ಬಂದು ಮರು ಮೌಲ್ಯಮಾಪನದ ನಂತರ ಕರ್ನಾಟಕಕ್ಕೆ ಟಾಪರ್ ಆಗಿ ಹೊರ ಹೊಮ್ಮಿರುವ ಮೈಸೂರಿನ ರಾಮಕೃಷ್ಣ ವಿದ್ಯಾಶಾಲೆ ವಿದ್ಯಾರ್ಥಿ ತನ್ಮಯ್.

ಮೈಸೂರು: ಮೌಲ್ಯಮಾಪಕರ ಯಡವಟ್ಟಿನಿಂದ 3 ಅಂಕ ಕಳೆದುಕೊಂಡಿದ್ದ ವಿದ್ಯಾರ್ಥಿ ಮರು ಮೌಲ್ಯಮಾಪನದ ಬಳಿಕ 625 ಅಂಕ ಗಳಿಸುವ ಮೂಲಕ ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾನೆ ಮರು ಮೌಲ್ಯ ಮಾಪನದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಮೈಸೂರಿನ ಪ್ರತಿಷ್ಠಿತ ಶ್ರೀರಾಮಕೃಷ್ಣ ವಿದ್ಯಾಶಾಲೆಯ ವಿದ್ಯಾರ್ಥಿ ಎಂ ಎನ್ ತನ್ಮಯ್ ಮೈಸೂರಿನ ಯಾದವಗಿರಿಯಲ್ಲಿರುವ ವಸತಿ ಶಾಲೆಯಾದ ಶ್ರೀರಾಮಕೃಷ್ಣ ವಿದ್ಯಾಶಾಲೆಯ ವಿದ್ಯಾರ್ಥಿ ಎಂ ಎನ್ ತನ್ಮಯ್ ಗೆ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಪ್ರಕಟವಾದಾಗ 622 ಅಂಕಗಳು ಲಭಿಸಿದ್ದವು.625ಕ್ಕೆ 625 ಅಂಕ ಬರುವ ನಿರೀಕ್ಷೆ ಇದ್ದ ತನ್ಮಯ್ ಗೆ ಕನ್ನಡ, ವಿಜ್ಞಾನ, ಸಮಾಜ ವಿಜ್ಞಾನ ವಿಷಯಗಳಲ್ಲಿ ಒಂದೊಂದು ಅಂಕ ಕಡಿಮೆಯಾಗಿ 622 ಅಂಕ ಬಂದಿತ್ತು. 3 ಅಂಕ ಕಡಿಮೆ ಬಂದಿದ್ದರಿಂದ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಇದೀಗ ಮರು ಮೌಲ್ಯಮಾಪನದ ಫಲಿತಾಂಶ ಬಂದಿದ್ದು 625 ಕ್ಕೆ 625 ಅಂಕ ಗಳಿಸಿರುವ ತನ್ಮಯ್ ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಗಳ ಸಾಲಿಗೆ ಸೇರಿದ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ.
ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ತನ್ಮಯ್ ನನ್ನು ಇಂದು ಶ್ರೀರಾಮಕೃಷ್ಣ ವಿದ್ಯಾಶಾಲೆಯಲ್ಲಿ ಸನ್ಮಾನ ಮಾಡಿ ಅಭಿನಂದಿಸಲಾಯಿತು.
ಈ ವೇಳೆ ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷರು ಹಾಗೂ ಬೇಲೂರು ಶ್ರೀರಾಮಕೃಷ್ಣ ಮಠದ ಟ್ರಸ್ಟಿಗಳು ಆಗಿರುವ ಸ್ವಾಮಿ ಮುಕ್ತಿದಾನಂದ ಮಹಾರಾಜ್, ಶ್ರೀರಾಮಕೃಷ್ಣ ವಿದ್ಯಾಶಾಲೆಯ ಮುಖ್ಯಸ್ಥರಾದ ಸ್ವಾಮಿ ಯುಕ್ತೇಶಾನಂದಜೀ ಮಹಾರಾಜ್, ಪ್ರಾಂಶುಪಾಲರಾದ ಟಿ ಕೆ ಚಂದ್ರಶೇಖರ್, ನಿವೃತ್ತ ಪ್ರಾಂಶುಪಾಲ ಬಾಲಾಜಿ ಅವರು ಉಪಸ್ಥಿತರಿದ್ದರು.
ತನ್ಮಯ್ ನ ತಂದೆ ನಿರಂಜನ್, ತಾಯಿ ಸೌಮ್ಯ ಕೂಡ ಹಾಜರಿದ್ದು ಮಗನ ಸನ್ಮಾನವನ್ನು ಕಣ್ತುಂಬಿಕೊಂಡು ಸಂತಸ ಪಟ್ಟರು.