ಎಸ್ಎಸ್ಎಲ್‌ಸಿ ಟಾಪರ್‌ ಬೆಂಗಳೂರಿನ ಈ ವಿದ್ಯಾರ್ಥಿನಿಗೆ ನಟ ಸುದೀಪ್‌ ಅಂದ್ರೆ ಇಷ್ಟ, ನಿಗದಿತ ಅವಧಿ ಪರಿಣಾಮಕಾರಿ ಓದೇ ಯಶಸ್ಸಿನ ಗುಟ್ಟು
ಕನ್ನಡ ಸುದ್ದಿ  /  ಕರ್ನಾಟಕ  /  ಎಸ್ಎಸ್ಎಲ್‌ಸಿ ಟಾಪರ್‌ ಬೆಂಗಳೂರಿನ ಈ ವಿದ್ಯಾರ್ಥಿನಿಗೆ ನಟ ಸುದೀಪ್‌ ಅಂದ್ರೆ ಇಷ್ಟ, ನಿಗದಿತ ಅವಧಿ ಪರಿಣಾಮಕಾರಿ ಓದೇ ಯಶಸ್ಸಿನ ಗುಟ್ಟು

ಎಸ್ಎಸ್ಎಲ್‌ಸಿ ಟಾಪರ್‌ ಬೆಂಗಳೂರಿನ ಈ ವಿದ್ಯಾರ್ಥಿನಿಗೆ ನಟ ಸುದೀಪ್‌ ಅಂದ್ರೆ ಇಷ್ಟ, ನಿಗದಿತ ಅವಧಿ ಪರಿಣಾಮಕಾರಿ ಓದೇ ಯಶಸ್ಸಿನ ಗುಟ್ಟು

ಈ ಬಾರಿ ಎಸ್‌ಎಸ್‌ಎಲ್‌ಸಿಯಲ್ಲಿ ಟಾಪರ್‌ಗಳಲ್ಲಿ ಒಬ್ಬಳಾದ ಬೆಂಗಳೂರಿನ ಧನಲಕ್ಷ್ಮಿ ಓದಿದ್ದು ಹೇಗೆ, ಪರೀಕ್ಷೆ ತಯಾರಿ ಹಿಂದಿನ ಖುಷಿಗಳು ಹೇಗಿದ್ದವು ಎನ್ನುವುದನ್ನು ಹಂಚಿಕೊಂಡಿದ್ದಾಳೆ.

ಎಸ್‌ಎಸ್‌ಎಲ್‌ಸಿಯಲ್ಲಿ ಟಾಪರ್‌ ಆದ ಬೆಂಗಳೂರಿನ ಧನಲಕ್ಷ್ಮಿ ಅಪ್ಪ ಅಮ್ಮನ ಜತೆ
ಎಸ್‌ಎಸ್‌ಎಲ್‌ಸಿಯಲ್ಲಿ ಟಾಪರ್‌ ಆದ ಬೆಂಗಳೂರಿನ ಧನಲಕ್ಷ್ಮಿ ಅಪ್ಪ ಅಮ್ಮನ ಜತೆ

ಬೆಂಗಳೂರು: ನಾನು ಹೆಚ್ಚು ಎಲ್ಲಾ ವಿಷಯಗಳನ್ನು ಓದುತ್ತಿರಲಿಲ್ಲ. ಒಂದೊಂದು ವಿಷಯವನ್ನು ಇಂತಿಷ್ಟೇ ಸಮಯ ಓದಲೇಬೇಕು ಎಂದು ಗುರಿ ನಿಗದಿಪಡಿಸಿಕೊಂಡೂ ಅಭ್ಯಾಸ ಮಾಡುತ್ತಿರಲಿಲ್ಲ. ನಿತ್ಯ ಐದಾರು ಗಂಟೆಯ ಸಮಯವನ್ನು ಓದಿಗೆ ಮೀಸಲಿಡುತ್ತಿದ್ದೆ. ಆ ಸಮಯವನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಂಡೆ. ಹೆಚ್ಚು ಹೆಚ್ಚು ಸಮಯ ಕೊಟ್ಟು ಓದುವುದಕ್ಕಿಂತ ಓದಿದ ಸಮಯವನ್ನೇ ಸಮರ್ಪಕವಾಗಿ ಬಳಕೆ ಮಾಡಿಕೊಂಡು ಪರಿಣಾಮಕಾರಿಯಾಗಿ ಓದಿದರೆ ಯಾವುದೇ ಪರೀಕ್ಷೆಯನ್ನು ಪಾಸು ಮಾಡಬಹುದು. ಎಂಥದ್ದೇ ಕಠಿಣ ವಿಷಯವನ್ನು ಗೆಲ್ಲಬಹುದು. ಇದು ನನ್ನ ಮೂರು ವರ್ಷದ ಶಿಕ್ಷಣ ಜೀವನದ ಅನುಭವ. ಅದರಲ್ಲೂ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಇದೇ ನೀತಿ ನನ್ನ ಕೈಹಿಡಿಯಿತು. 625 ಕ್ಕೆ 625 ಅಂಕ ಪಡೆದು ಟಾಪರ್‌ ಆಗಲು ನೆರವಾಯಿತು.

ಇವು ಬೆಂಗಳೂರು ಉತ್ತರ ವಲಯದ ಮಾಗಡಿ ಮುಖ್ಯ ರಸ್ತೆ ವಿಶ್ವನೀಡಂನ ಕೆಂಪೇಗೌಡ ನಗರದಲ್ಲಿರುವ ಸೆಂಟ್‌ ಯಶ್‌ ಶಾಲೆಯಲ್ಲಿ ಓದಿ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಸಂಪೂರ್ಣ ಅಂಕ ಪಡೆದಿರುವ ಧನಲಕ್ಷ್ಮಿ ಯಶಸ್ಸಿನ ಹಿಂದಿನ ನುಡಿಗಳು.

ಹದಿನಾರು ವರ್ಷದ ಈ ಬಾಲಕಿ ಹಿಂದೂಸ್ತಾನ್‌ ಟೈಂಸ್‌ ಕನ್ನಡ ಜತೆಗೆ ತನ್ನ ಪರೀಕ್ಷೆಯ ಅನುಭವವನ್ನು ಹಂಚಿಕೊಂಡಳು. ಅರಳು ಹುರಿದಂತೆಯೇ ಎಲ್ಲಾ ಪ್ರಶ್ನೆಗಳಿಗೆ ಆತ್ಮವಿಶ್ವಾಸದಿಂದಲೇ ಉತ್ತರ ನೀಡಿದಳು ಧನಲಕ್ಷ್ಮಿ.

ಎಸ್ಎಸ್ಎಲ್‌ ಮುಖ್ಯ ಪರೀಕ್ಷೆಗೂ ಮುನ್ನಾ ನಡೆಸಲಾದ ಹಲವು ಪೂರ್ವಭಾವಿ ಪರೀಕ್ಷೆಗಳಲ್ಲಿ ನಾನೂ ಪೂರ್ಣ ಅಂಕ ಪಡೆಯಲು ಆಗಿರಲಿಲ್ಲ. ಒಂದೊಂದು ಪರೀಕ್ಷೆಯಲ್ಲಿ ಎರಡು ಮೂರು ಅಂಕ ಕಡಿಮೆ ಬರುತ್ತಿತ್ತು. ಎಲ್ಲಿ ತಪ್ಪು ಮಾಡಿದೆ ಎಂದು ನೋಡಿಕೊಳ್ಳುತ್ತಿದ್ದೆ. ಮುಖ್ಯ ಪರೀಕ್ಷೆಯಲ್ಲೂ ಪೂರ್ಣ ಅಂಕ ಪಡೆಯಬೇಕು ಎನ್ನುವ ಅಳುಕಿನಿಂದಲೇ ಎಲ್ಲ ವಿಷಯಗಳನ್ನು ಎದುರಿಸಿದ್ದೆ. ಈ ಬಾರಿ ಪ್ರಶ್ನೆ ಪತ್ರಿಕೆಗಳಲ್ಲಿ ಎಲ್ಲಿಯೂ ಗೊಂದಲ ಇರಲಿಲ್ಲ. ನೇರ ಪ್ರಶ್ನೆಗಳಿದ್ದವು. ಓದಿದ್ದನ್ನು ಮನದಟ್ಟು ಮಾಡಿಕೊಂಡು ಬರೆದೆ. ಪೂರ್ಣ ಅಂಕ ಬರುತ್ತವೋ ಇಲ್ಲವೋ ಎನ್ನುವ ಅನುಮಾನ ಇತ್ತು. ಕೊನೆಗೂ ಬಂದೇ ಬಿಟ್ಟಿತು. ಫಲಿತಾಂಶ ನೋಡಿದಾಗ ಶ್ರಮಕ್ಕೆ ಸಿಕ್ಕ ಫಲ ಎಂದು ಖುಷಿಯಾಯಿತು ಎನ್ನುವುದು ಧನಲಕ್ಷ್ಮಿ ಮನದಾಳದ ನುಡಿ.

ನಮ್ಮದು ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಪಟ್ಟ ಊರು ಸಂಕನಹಳ್ಳಿ. ನಮ್ಮ ತಂದೆ ಮೋಹನ್‌ ಆಗಲೇ ಬೆಂಗಳೂರಿಗೆ ಬಂದು ಹಲವು ವರ್ಷಗಳಾಗಿವೆ.ಇದರಿಂದ ನನ್ನ ಓದು ಆಗಿದ್ದು ಬೆಂಗಳೂರಿನಲ್ಲಿಯೇ. ಅಪ್ಪ ಓದಿರುವುದು ಹತ್ತನೇ ತರಗತಿ. ಅಮ್ಮ ವೀಣಾ ಪಿಯುಸಿ ಮುಗಿಸಿದ್ದಾರೆ. ಸಣ್ಣ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಡುವ ತಂದೆ,ಗೃಹಿಣಿಯಾದ ತಾಯಿ ನನ್ನೆಲ್ಲ ಓದಿನ ಬೆನ್ನ ಹಿಂದಿರುವ ಶಕ್ತಿ. ಶಾಲೆಯಲ್ಲೂ ಶಿಕ್ಷಕರು ನನ್ನ ಆಸಕ್ತಿ ಗುರುತಿಸಿ ಇನ್ನಿಲ್ಲದಂತೆ ಪ್ರೋತ್ಸಾಹ ನೀಡಿದರು.ಆಯಾ ದಿನದ ವಿಷಯವನ್ನು ಅಂದೇ ಓದಿ ಮನದಟ್ಟು ಮಾಡಿಕೊಳ್ಳುತ್ತಿದ್ದೆ. ಶಾಲೆಯಲ್ಲೂ ವಿಶೇಷ ತರಗತಿ ಇರುತ್ತಿದ್ದವು. ಗೊಂದಲ ಎನ್ನಿಸಿದ ವಿಷಯವನ್ನು ಶಿಕ್ಷಕರು ತಿಳಿಸಿಕೊಡೋರು. ನಾನು ಏಳನೇ ತರಗತಿವರೆಗೂ ಓದಿನಲ್ಲಿ ಅಷ್ಟಾಗಿ ಆಸಕ್ತಿ ಇಟ್ಟುಕೊಂಡಿರಲಿಲ್ಲ.ಎಂಟನೇ ತರಗತಿ ಸೇರಿದ ಮೇಲೆ ಶಿಕ್ಷಕರು ನೀಡುತ್ತಿದ್ದ ಮಾರ್ಗದರ್ಶನಗಳು ನನ್ನನ್ನು ಚೆನ್ನಾಗಿ ಓದಿಸಲು ಪ್ರೇರೇಪಿಸಿದವು. ಈಗ ಈ ಸಾಧನೆ ಮಾಡಲು ಇದೇ ಕಾರಣ ಎಂದರು ಧನಲಕ್ಷ್ಮಿ.

ನಾನು ಮೊಬೈಲ್‌ ಕೂಡ ಬಳಸುತ್ತೇನೆ. ಏನಾದರೂ ಅನುಮಾನ ಬಂದರೆ ಯುಟೂಬ್‌ ಹಾಗೂ ಗೂಗಲ್‌ ಕೂಡ ಬಳಸಿಕೊಂಡು ಮಾಹಿತಿ ಪಡೆದುಕೊಂಡಿದ್ದೇನೆ. ಹಾಗೆಂದು ಮೊಬೈಲ್‌ಗೆ ದಾಸಳಾಗಿಲ್ಲ. ಅರ್ಧ ಗಂಟೆ ಮಾತ್ರ ಸ್ಕ್ರೀನಿಂಗ್‌ ಮಾಡಿ ನಂತರ ತೆಗೆದಿಡುತ್ತಿದ್ದೆ. ಮೊಬೈಲ್‌ ಅನ್ನು ಮಿತವಾಗಿಯೇ, ನಿಗದಿತ ವಿಷಯಕ್ಕೆ ಮಾತ್ರ ಬಳಸುತ್ತಿದ್ದೆ. ಬಿಡುವಿನ ಸಮಯದಲ್ಲಿ ಟಿವಿ ನೋಡುತ್ತಿದ್ದೆ. ಸಿನೆಮಾ, ಹಾಡುಗಳನ್ನು ವೀಕ್ಷಿಸುವುದು ನನ್ನ ಹವ್ಯಾಸ. ಇವೆಲ್ಲವೂ ಖಂಡಿತವಾಗಿಯೂ ಒತ್ತಡ ತಗ್ಗಿಸುವಂತವು. ಅದರಲ್ಲೂ ಸುದೀಪ್‌ ನನ್ನ ನೆಚ್ಚಿನ ನಟ. ಅವರ ಹಾಡು ಕೇಳುತ್ತೇನೆ. ಸಿನೆಮಾ ಕೂಡ ನೋಡುವೆ. ಎಲ್ಲವನ್ನೂ ಬಿಟ್ಟು ಬರೀ ಪುಸ್ತಕದ ಹಿಂದೆ ನಾನು ಬಿದ್ದವಳಲ್ಲ. ಸ್ನೇಹಿತರೊಂದಿಗೂ ಒಳ್ಳೆಯ ಸಮಯ ಕಳೆದು ಪರೀಕ್ಷೆಯನ್ನು ಸಹಜವಾಗಿಯೆ ಎದುರಿಸಿದೆ. ಇವೆಲ್ಲವೂ ಪರೀಕ್ಷೆ ಮಾತ್ರವಲ್ಲ. ಬದುಕಿನ ಯಶಸ್ಸಿನ ಮಾರ್ಗಗಳೂ ಎಂಬುದು ಧನಲಕ್ಷ್ಮಿ ನುಡಿ.

ಧನಲಕ್ಷ್ಮಿ ಈಗ ವಾಣಿಜ್ಯ ವಿಷಯದಲ್ಲಿ ಪಿಯುಸಿ ಮುಗಿಸಿ ನಂತರ ಪದವಿಯೊಂದಿಗೆ ಸಿಎ ಕೋರ್ಸ್‌ ಮಾಡುವ ಗುರಿ ಇಟ್ಟುಕೊಂಡಿದ್ದಾರೆ. ಒಳ್ಳೆಯ ಚಾರ್ಟೆಡ್‌ ಅಕೌಂಟೆಂಟ್‌ ಆಗಬೇಕು ಎನ್ನುವುದು ಬದುಕಿನ ಗುರಿ. ಅದು ಇನ್ನಷ್ಟೇ ಆರಂಭವಾಗಬೇಕಿದೆ.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.