ಸರ್ಕಾರಿ ಶಾಲೆಯಲ್ಲಿ ಓದಿದ ರೈತನ ಮಗಳು ರಾಜ್ಯಕ್ಕೆ ಪ್ರಥಮ; ಎಸ್ಎಸ್ಎಲ್ಸಿ ಟಾಪರ್ ಬೆಳಗಾವಿಯ ರೂಪಾ ಪಾಟೀಲ್ ಸಂದರ್ಶನ
ಆಕೆ ರೈತನ ಮಗಳು, ಓದಿದ್ದು ಸರ್ಕಾರಿ ಶಾಲೆಯಲ್ಲಿ, ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಗಳಿಸಿದ್ದು 625ಕ್ಕೆ 625 ಅಂಕ. ಬೆಳಗಾವಿ ಜಿಲ್ಲೆಯ ರೂಪಾ ಚನ್ನಗೌಡ ಪಾಟೀಲ್ ಎಚ್ಟಿ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಏನೆಲ್ಲಾ ಹೇಳಿದ್ದಾರೆ ನೋಡಿ.

‘ಯಾವುದೇ ವಿಷಯವಾಗಲಿ ಕಷ್ಟಪಟ್ಟು ಓದಬಾರದು, ಇಷ್ಟಪಟ್ಟು ಓದಿದ್ರೆ ಖಂಡಿತ ಪರೀಕ್ಷೆ ಎದುರಿಸೋದು, ಸಾಧನೆ ಮಾಡೋದು ಕಷ್ಟವಲ್ಲ‘ ಎನ್ನುವುದು ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಗಳಿಸಿದ ರೂಪ ಚನ್ನಗೌಡ ಪಾಟೀಲ್ ಅಭಿಪ್ರಾಯ.
ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕು ದೇವಲಾಪುರದವರಾದ ರೂಪಾ ರೈತನ ಮಗಳು. ಇವರ ತಂದೆ ಚನ್ನಗೌಡ ಪಾಟೀಲ್, ತಾಯಿ ಲತಾ. ಸರ್ಕಾರಿ ಪ್ರೌಢಶಾಲೆ ದೇವಲಾಪುರದಲ್ಲಿ ಓದಿರುವ ರೂಪಾಗೆ 625ಕ್ಕೆ 625 ಅಂಕ ಸಿಗಬಹುದು ನಿರೀಕ್ಷೆ ಮೊದಲೇ ಇತ್ತು. ಅದಕ್ಕೆ ಕಾರಣ ಅವರ ಪರೀಕ್ಷಾ ತಯಾರಿ ಹಾಗೂ ಓದಿನ ಕ್ರಮ. ಎಸ್ಎಸ್ಎಲ್ಸಿ ದಿನಗಳು ಹಾಗೂ ತಮ್ಮ ಓದಿನ ಕ್ರಮದ ಬಗ್ಗೆ ಅವರು ಎಚ್ಟಿ (ಹಿಂದೂಸ್ತಾನ್ ಟೈಮ್ಸ್) ಕನ್ನಡದ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.
‘ನಾನು ಹತ್ತನೇ ತರಗತಿ ಮೊದಲ ದಿನದ ತರಗತಿ ಆರಂಭವಾದಾಗಿನಿಂದಲೂ ಪ್ರತಿದಿನ ತಪ್ಪದೇ 2 ಗಂಟೆ ಹೊತ್ತು ಓದುತ್ತಿದ್ದೆ. ಆಯಾಯ ದಿನ ಮಾಡಿದ ಪಾಠವನ್ನು ನೋಟ್ಸ್ ಮಾಡಿ ಇಟ್ಟುಕೊಳ್ಳುತ್ತಿದ್ದೆ. ರಾತ್ರಿ ಅಥವಾ ಬೆಳಗ್ಗೆ ಬೇಗ ಎದ್ದು ಗಮನವಿಟ್ಟು ಓದುತ್ತಿದ್ದೆ. ಎಲ್ಲಾ ವಿಷಯಗಳ ಮೇಲೆ ಪಾಯಿಂಟ್ಸ್ ಕೂಡ ಮಾಡಿ ಇಟ್ಟುಕೊಳ್ಳುತ್ತಿದ್ದೆ. ನನಗೆ ಎಲ್ಲಾ ಸಬ್ಜೆಕ್ಟ್ ಕೂಡ ಸುಲಭ ಅನ್ನಿಸ್ತಾ ಇತ್ತು. ಯಾವುದೂ ಕಷ್ಟ ಅಂತ ಇರಲಿಲ್ಲ. ಆದರೂ ಮೊದಲ ದಿನದಿಂದಲೂ ಸಾಕಷ್ಟು ಗಮನ ಕೊಟ್ಟು ಓದುತ್ತಿದ್ದೆ. ಪರೀಕ್ಷೆಗೆ 2 ತಿಂಗಳು ಇದ್ದಾಗ ಟ್ಯೂಷನ್ಗೂ ಹೋಗಿದ್ದೆ. ಯಾವುದೇ ಸಬ್ಜೆಕ್ಟ್ನಲ್ಲಿ ಗೊಂದಲ ಹೆಚ್ಚಿದ್ದರೆ ಆ ವಿಷಯ ಅಥವಾ ಪಾಠದ ಮೇಲೆ ಹೆಚ್ಚು ಗಮನ ಹರಿಸಿ ಓದುತ್ತಿದ್ದೆ. ಟ್ಯೂಷನ್ಗೆ ಹೋಗಿದ್ದು ಕೂಡ ನನಗೆ ಸಹಾಯವಾಗಿತ್ತು‘ ಎಂದು ಓದಿನ ಬಗ್ಗೆ ಮಾಹಿತಿ ನೀಡಿದ್ದಾರೆ.
ನೀನು ಓದಿನ ಮೇಲಷ್ಟೇ ಗಮನ ಹರಿಸು ಎಂದ ಪೋಷಕರು
‘ನನ್ನ ತಂದೆ–ತಾಯಿ ಹಾಗೂ ಮನೆಯವರು ನಾನು ಎಸ್ಎಸ್ಎಲ್ಸಿಗೆ ಬಂದ ಮೇಲೆ ನನಗೆ ಓದೋಕೆ ತುಂಬಾ ಫ್ರಿ ಕೊಟ್ಟಿದ್ರು, ಅವರು ನನ್ನ ಮೇಲೆ ಯಾವುದೇ ರೀತಿಯ ಒತ್ತಡ ಹಾಕಿರಲಿಲ್ಲ. ನೀನು ನಿನ್ನ ಓದು, ಫಲಿತಾಂಶದ ಬಗ್ಗೆ ಗಮನ ಕೊಡು ಎಂದು ಹೇಳ್ತಿದ್ರು. ಪೋಷಕರ ಸಹಕಾರವೂ ನನ್ನ ಸಾಧನೆಯಲ್ಲಿ ಬಹುಮುಖ್ಯ ಭಾಗ‘ ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ ರೂಪಾ.
ಶಾಲೆಯಲ್ಲಿ ಮೆಡಿಟೇಷನ್ ಮಾಡಿಸ್ತಾ ಇದ್ರು
ನಮ್ಮ ಶಾಲೆಯಲ್ಲಿ ಮಕ್ಕಳಲ್ಲಿ ಗಮನಶಕ್ತಿ ಹೆಚ್ಚಬೇಕು ಎನ್ನುವ ಕಾರಣಕ್ಕೆ ಪ್ರತಿದಿನ ಬೆಳಿಗ್ಗೆ ಧ್ಯಾನ ಮಾಡಿಸ್ತಾ ಇದ್ರು. ಕ್ಲಾಸ್ ಶುರುವಾದಾಗ ಎಲ್ಲಾ ಟೀಚರ್ಗಳು ಮುಖ್ಯವಾದ ಪಾಯಿಂಟ್ಸ್ಗಳನ್ನು ನೋಟ್ಸ್ ಮಾಡಿಸುತ್ತಿದ್ದರು. ಹಿಂದಿನ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳನ್ನು ತಂದು ಬಿಡಿಸುತ್ತಿದ್ದರು. ಲೈಬ್ರರಿಯಿಂದ ಪುಸಕ್ತಗಳನ್ನು ತಂದುಕೊಡುತ್ತಿದ್ದರು. ಹೀಗೆ ಒಟ್ಟಾರೆ ನಮಗೆ ಓದಲು ಬೇಕಾಗುವ ಹಾಗೂ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಲು ನೆರವಾಗುವ ಎಲ್ಲಾ ರೀತಿಯ ಸಹಾಯಗಳನ್ನು ಮಾಡುತ್ತಿದ್ದರು ಎಂದು ಶಾಲೆಯ ಶಿಕ್ಷಕರ ಸಹಕಾರವನ್ನು ನೆನೆಯುವುದನ್ನು ಮರೆಯಲಿಲ್ಲ ರೂಪಾ.
ಜನವರಿಯಿಂದ ರಿವಿಷನ್ ಆರಂಭಿಸಿದ್ರು ರೂಪಾ
‘ನಾನು ಜನವರಿ ತಿಂಗಳಿಂದ ರಿವಿಷನ್ ಆರಂಭಿಸಿದ್ದೆ. ವಾರಕ್ಕೆ ಒಮ್ಮೆ ಆದ್ರೂ ಎಲ್ಲಾ ವಿಷಯಗಳನ್ನು ರಿವಿಷನ್ ಮಾಡುತ್ತಿದ್ದೆ. 9ನೇ ತರಗತಿ ಮುಗಿದ ತಕ್ಷಣ ಹಿಂದಿನ ಏಳೆಂಟು ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಕಲೆಕ್ಟ್ ಮಾಡಲು ಶುರು ಮಾಡಿದ್ದೆ. ಹಳೆ ಪ್ರಶ್ನೆಪತ್ರಿಕೆಗಳನ್ನು ಬಿಡಿಸಿದ್ದು ನನಗೆ ತುಂಬಾ ಸಹಾಯವಾಗಿತ್ತು. ಒಟ್ಟು ಏಳೆಂಟು ವರ್ಷಗಳ ಹಳೆ ಪ್ರಶ್ನೆಪತ್ರಿಕೆಗಳನ್ನು ಬಿಡಿಸಿದ್ದೆ, ಇದರಿಂದ ಪ್ರಶ್ನೆಗಳು ಯಾವ ರೀತಿ ಇರುತ್ತವೆ ಎಂದು ತಿಳಿದುಕೊಳ್ಳಲು ಸಹಾಯವಾಗಿತ್ತು. ನಮ್ಮ ಸ್ಕೂಲ್ನಲ್ಲಿ ಪಾಠ ಮುಗಿದ ಕೂಡಲೇ ಯುನಿಟ್ ಟೆಸ್ಟ್ ಮಾಡ್ತಾ ಇದ್ರು. ಅಲ್ಲದೇ 3 ಬಾರಿ ಪ್ರಿಪರೇಟರಿ ಪರೀಕ್ಷೆ ಮಾಡಿಸಿದ್ರು. ಈ ಎಲ್ಲವೂ ನನಗೆ ಪರೀಕ್ಷೆಯಲ್ಲಿ ಔಟ್ ಆಫ್ ಔಟ್ ಮಾರ್ಕ್ಸ್ ತೆಗೆಯಲು ನೆರವಾಯ್ತು ಎಂದು ಖುಷಿ ಹಂಚಿಕೊಳ್ಳುತ್ತಾರೆ.
ಪರೀಕ್ಷೆಗೆ ಕೊನೆ ಕ್ಷಣದ ತಯಾರಿ ಹೀಗಿತ್ತು
ಎಲ್ಲಾ ವಿಷಯದ ಪರೀಕ್ಷೆಗಳ ನಡುವೆ 2 ದಿನಗಳ ಕಾಲ ಗ್ಯಾಪ್ ಇರ್ತಾ ಇತ್ತು, ನಾನು ಆಗ ಎಲ್ಲಾ ಪಾಠಗಳ ಮೇಲೆ ಒಮ್ಮೆ ಕಣ್ಣಾಡಿಸಿ, ಅನುಮಾನ ಇದ್ದರೆ ಇನ್ನೊಮ್ಮೆ ಓಡಿ ತಿಳಿದುಕೊಳ್ಳುತ್ತಿದ್ದೆ. ಪರೀಕ್ಷೆಯ ದಿನ ಪರೀಕ್ಷಾ ಕೊಠಡಿ ಬಳಿ ಹೋದಾಗ ದೀರ್ಘವಾಗಿ ಉಸಿರಾಡಿ ಒತ್ತಡ ನಿಯಂತ್ರಣ ಮಾಡಿಕೊಳ್ಳುತ್ತಿದ್ದೆ, ಅಲ್ಲಿನ ಪರಿಸ್ಥಿತಿಗೆ ಮನಸ್ಸನ್ನು ಹೊಂದಿಸುತ್ತಿದ್ದೆ. ನಾನು ಯಾವುದೇ ಕಾರಣಕ್ಕೂ ಗೊಂದಲ ಮಾಡಿಕೊಳ್ಳುತ್ತಿರಲಿಲ್ಲ. ಒತ್ತಡ ತೆಗೆದುಕೊಂಡು ಕೊನೆಕ್ಷಣದಲ್ಲಿ ಪುಸ್ತಕ ತಡಕಾಡುವುದು ಇದೆಲ್ಲಾ ಮಾಡುತ್ತಿರಲಿಲ್ಲ ಎಂದು ಅಂತಿಮ ಹಂತದ ತಯಾರಿ ಬಗ್ಗೆ ಹೇಳುತ್ತಾರೆ.
ಡಾಕ್ಟರ್ ಆಗುವ ಕನಸು ಹೊತ್ತಿರುವ ರೂಪಾ
ಪರೀಕ್ಷೆ ಬರೆದ ನಂತರ ನನಗೆ 625ಕ್ಕೆ 625 ಅಂಕ ಬರಬಹುದು ಎನ್ನುವ ಪೂರ್ಣ ವಿಶ್ವಾಸವಿತ್ತು. ಆದರೂ ಎಲ್ಲೋ ಒಂದು ಕಡೆ ಒಂದೆರಡು ಅಂಕ ತೆಗೆಯಬಹುದು ಎನ್ನುವ ಭಯವೂ ಇತ್ತು ಎನ್ನುವ ರೂಪಾರ ಆತ್ಮವಿಶ್ವಾಸದಂತೆ ಆಕೆ ಎಸ್ಎಸ್ಎಲ್ಸಿಯಲ್ಲಿ ಔಟ್ ಆಫ್ ಔಟ್ ಮಾರ್ಕ್ಸ್ ತೆಗೆದಿದ್ದಾರೆ. ಮುಂದೆ ಡಾಕ್ಟರ್ ಆಗುವ ಕನಸು ಹೊತ್ತಿರುವ ರೂಪಾಗೆ ತನ್ನ ತಾಲ್ಲೂಕು, ಮಾತ್ರವಲ್ಲ ಜಿಲ್ಲೆಗೆ ಮೊದಲು ಬಾರಿ 625ಕ್ಕೆ 625ಕ್ಕೆ ಅಂಕ ತನ್ನಿಂದ ಸಿಕ್ಕಿದೆ ಎಂಬ ಖುಷಿ, ಹೆಮ್ಮೆ ಎರಡೂ ಇದೆ.
ಸೋಷಿಯಲ್ ಮಿಡಿಯಾಗಳಿಂದ ದೂರವಿರಿ
ತಾನು ಮಾಡಿರುವ ಸಾಧನೆಯ ಬಗ್ಗೆ ಹೆಮ್ಮೆಯಿಂದ ಮಾತನಾಡುವ ಜೊತೆಗೆ ತನ್ನ ಕಿರಿಯರಿಗೆ ಓದಿನ ಬಗ್ಗೆ ಸಲಹೆ ನೀಡುವ ರೂಪಾ ಕಷ್ಟಪಟ್ಟು ಓದಬೇಡಿ, ಇಷ್ಟಪಟ್ಟು ಓದಿ ಎನ್ನುತ್ತಾರೆ. ಮಾತ್ರವಲ್ಲ ಹತ್ತನೇ ತರಗತಿಯಂತಹ ವಿದ್ಯಾರ್ಥಿ ಜೀವನದ ಮುಖ್ಯಘಟ್ಟದಲ್ಲಿ ಸೋಷಿಯಲ್ ಮಿಡಿಯಾ, ಮೊಬೈಲ್ನಂತಹ ಮಾಧ್ಯಮಗಳಿಂದ ಸಾಧ್ಯವಾದಷ್ಟು ದೂರವಿರಿ. ಮೊದಲ ದಿನದಿಂದಲೇ ಓದಲು ಶುರು‘ ಎನ್ನುತ್ತಾರೆ.
ಮಗಳ ಸಾಧನೆಯ ಬಗ್ಗೆ ಪೋಷಕರ ಹೆಮ್ಮೆಯ ಮಾತು
‘ನಮ್ಮ ಮಗಳ ಸಾಧನೆ ನಿಜಕ್ಕೂ ಅಸಮಾನ್ಯ. ಈ ಬಗ್ಗೆ ಪೋಷಕರಾಗಿ ನಮಗೆ ತುಂಬಾ ಹೆಮ್ಮೆ ಇದೆ. ಅವಳ ಸಾಧನೆಗೆ ನಮ್ಮ ತಾಲೂಕು, ಜಿಲ್ಲೆಯಲ್ಲಿ ಎಲ್ಲರೂ ಶಹಬ್ಬಾಸ್ ಹೇಳುತ್ತಿದ್ದಾರೆ. ನನಗೆ ಅವಳು ಶೇ 98, 99 ಗಳಿಸುತ್ತಾಳೆ ಎಂಬ ನಂಬಿಕೆ ಇತ್ತು. ಅವಳು ನಮ್ಮ ನಂಬಿಕೆಯನ್ನೂ ಹುಸಿ ಮಾಡಿ 625ಕ್ಕೆ 625 ಅಂಕ ಪಡೆದು ನಮ್ಮ ಗೌರವ, ಖುಷಿ ಹೆಚ್ಚಿಸಿದ್ದಾಳೆ. ಆಕೆ ತುಂಬಾ ಶಾಂತ ಸ್ವಭಾವ ಹುಡುಗಿ. ಈಗಿನ ಕಾಲದ ಮಕ್ಕಳ ರೀತಿ ಅವಳ ವರ್ತನೆ ಇಲ್ಲ. ನಾವು ಡೇಟಾ ಇರುವ ಮೊಬೈಲ್ ಕೊಟ್ರು ತನಗೆ ಏನು ಕಂಟೆಂಟ್ ಬೇಕು ಅದನ್ನ ಮಾತ್ರ ತೆಗೆದುಕೊಂಡು ನಮಗೆ ಮರಳಿಸುತ್ತಿದ್ದಳು. ನಮ್ಮ ಮಕ್ಕಳು ಸಮಾಜಕ್ಕೆ ಮಾದರಿಯಾಗಬೇಕು. ಮಕ್ಕಳು ತಮ್ಮ ಕಾಲ ಮೇಲೆ ತಾವು ನಿಂತು ಆರ್ಥಿಕವಾಗಿ ಇಂಡಿಪೆಂಡೆಂಟ್ ಆಗಬೇಕು. ಮಕ್ಕಳಿಗೆ ಪೋಷಕರು ಸ್ಫೂರ್ತಿ ನೀಡಬೇಕು. ಕೇವಲ ಶಾಲೆಯನ್ನೂ ದೂರುತ್ತಾ ಕೂರಬಾರದು, ಮಕ್ಕಳಿಗೆ ಮನೆಯಲ್ಲೂ ಅಂತಹ ವಾತಾವರಣ ಕಲ್ಪಿಸಬೇಕು. ಓದಿನ ವಾತಾವರಣ ಕಲ್ಪಿಸಿದಾಗ ಮಕ್ಕಳು ವಿಶೇಷ ಸಾಧನೆ ಮಾಡಲು ಸಾಧ್ಯ. ಶಿಕ್ಷಕರು –ಪಾಲಕರ ಕೊರ್ಡಿನೇಷನ್ನಿಂದ ಮಾತ್ರ ಮಕ್ಕಳ ಸಾಧನೆ ಮಾಡಲು ಸಾಧ್ಯ‘ ಎಂದು ಮಗಳು ರೂಪಾಳ ಸಾಧನೆ ಬಗ್ಗೆ ಹೆಮ್ಮೆಯಿಂದ ಮಾತನಾಡುವ ಜೊತೆಗೆ ಮಕ್ಕಳನ್ನು ಹೇಗೆ ಬೆಳೆಸಬೇಕು ಎಂಬ ಸಲಹೆಯನ್ನೂ ನೀಡುತ್ತಾರೆ ರೂಪಾಳ ದೊಡ್ಡಪ್ಪ ಗಂಗನಗೌಡ ಪಾಟೀಲ್.