ನೋ ಟ್ಯೂಷನ್, ನೋ ಟೆನ್ಷನ್; ಎಸ್ಎಸ್ಎಲ್ಸಿ ಟಾಪರ್ ಶಿವಮೊಗ್ಗದ ಸಹಿಷ್ಣು ಎನ್ ಸಾಧನೆಯ ಹಾದಿ ಹೀಗಿತ್ತು
ಕರ್ನಾಟಕ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದ ಶಿವಮೊಗ್ಗದ ಸಹಿಷ್ಣು ಎನ್. ತಮ್ಮ ಸಾಧನೆಯ ಕುರಿತ ಖುಷಿಯನ್ನು ಎಚ್ಟಿ ಕನ್ನಡದ ಜೊತೆ ಹಂಚಿಕೊಂಡಿದ್ದಾರೆ. ಪರೀಕ್ಷೆ ಸಮಯದಲ್ಲಿ ಹೇಗಿರಬೇಕು ಎಂಬ ಅವರ ಮಾತುಗಳು ಇಲ್ಲಿವೆ.

‘ನಾನು ಟ್ಯೂಷನ್ಗೆ ಹೋಗಿಲ್ಲ, ಪರೀಕ್ಷೆ ಸಮಯದಲ್ಲಿ ಟೆನ್ಷನ್, ಪ್ರೆಶರ್ ಕೂಡ ತಗೊಂಡಿಲ್ಲ. ಪರೀಕ್ಷೆ ಕೊನೆ ಹಂತದಲ್ಲಿ ಒತ್ತಡ, ಭಯ ಆವರಿಸಿದ್ರೆ ಗೊಂದಲ ಶುರುವಾಗುತ್ತೆ‘ ಎನ್ನುವ ಶಿವಮೊಗ್ಗ ಸಹಿಷ್ಣು ಎನ್. ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಟಾಪರ್ ಆಗಿದ್ದಾರೆ.
ಶಿವಮೊಗ್ಗದ ಶ್ರೀ ಆದಿ ಚುಂಚನಗಿರಿ ಕಾಂಪೊಸಿಟ್ ಇಂಗ್ಲಿಷ್ ಹೈಸ್ಕೂಲ್ನ ವಿದ್ಯಾರ್ಥಿ ಆಗಿರುವ ಸಹಿಷ್ಣು ತಂದೆ–ತಾಯಿ ಇಬ್ಬರೂ ಶಿಕ್ಷಕರು. ತಂದೆ ನಾಗರಾಜ ಎ.ಕೆ. ಹಾಗೂ ತಾಯಿ ಪ್ರತಿಮಾ. ತಂದೆ ಕನ್ನಡ ಶಿಕ್ಷಕರಾದರೆ, ತಾಯಿ ಗಣಿತ ಶಿಕ್ಷಕಿ. ಬಾಲ್ಯದಿಂದಲೂ ಓದಿನಲ್ಲಿ ಮುಂದಿದ್ದ ಸಹಿಷ್ಣು ಬಹಳ ಸುಲಭವಾಗಿ ಔಟ್ ಆಫ್ ಔಟ್ ಸ್ಕೋರ್ ಮಾಡಿದ್ದಾರೆ. ಓದಿನ ಜೊತೆ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದ್ದರು. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿರುವ ಇವರು ತಮ್ಮ ಹತ್ತನೇ ತರಗತಿಯ ದಿನಗಳು, ಪರೀಕ್ಷೆಗೆ ತಯಾರಿ, ಪರೀಕ್ಷೆಯ ಅಂತಿಮ ಹಂತದ ಸಿದ್ಧತೆ ಈ ಎಲ್ಲದರ ಬಗ್ಗೆ ಎಚ್ಟಿ (ಹಿಂದೂಸ್ತಾನ್ ಟೈಮ್) ಕನ್ನಡದ ಜೊತೆ ಮಾತನಾಡಿದ್ದಾರೆ.
ಟ್ಯೂಷನ್ಗೆ ಹೋಗಿಲ್ಲ, ಔಟ್ ಆಫ್ ಔಟ್ ಕಾನ್ಫಿಡೆನ್ಸ್ ಇತ್ತು
‘ನಾನು ಹತ್ತನೇ ತರಗತಿ ಆರಂಭದ ದಿನಗಳಿಂದಲೂ ಓದಲು ಟೈಮ್ ಟೇಬಲ್ ಅಂತೆಲ್ಲಾ ಮಾಡಿಕೊಂಡಿರಲಿಲ್ಲ. ಆದರೆ ಪಾಠ ಮಾಡಿದ್ದನ್ನು ಅಂದಂದೇ ನೋಟ್ಸ್ ಮಾಡಿಟ್ಟುಕೊಳ್ಳುತ್ತಿದ್ದೆ. ಪರೀಕ್ಷೆಗೆ 3 ತಿಂಗಳಿದ್ದಾಗ ಗಮನವಿಟ್ಟು ಓದಲು ಶುರು ಮಾಡಿದೆ. ಪ್ರತಿ ವಿಷಯಕ್ಕೆ ಅನುಗುಣವಾಗಿ ಓದಲು ಸಮಯ ನೀಡುತ್ತಿದ್ದೆ. ಕೆಲವು ಸಬ್ಜೆಕ್ಟ್ಗೆ 45 ನಿಮಿಷ ಕೊಟ್ಟರೆ, ಇನ್ನೂ ಕೆಲವಕ್ಕೆ ಒಂದೂವರೆ ಗಂಟೆ ನೀಡುತ್ತಿದ್ದೆ. ನನಗೆ ಯಾವ ಸಬ್ಜೆಕ್ಟ್ ಕೂಡ ಕಷ್ಟ ಅಂತ ಇರಲಿಲ್ಲ. ಆದರೆ ಸಿಲೇಬಸ್ ಜಾಸ್ತಿ ಇರುವ ಸಬ್ಜೆಕ್ಟ್ಗೆ ಕೊಂಚ ಹೆಚ್ಚು ಸಮಯ ಕೊಡ್ತಾ ಇದ್ದೆ. ಟ್ಯೂಷನ್ಗೆ ನಾನು ಎಂದೂ ಹೋದವನಲ್ಲ. ನನಗೆ ಟ್ಯೂಷನ್ ಬೇಕು ಅಂತಲೂ ಅನ್ನಿಸಿರಲಿಲ್ಲ. ಹತ್ತನೇ ತರಗತಿ ಆರಂಭದಿಂದಲೂ ನನಗೆ ಔಟ್ ಆಫ್ ಔಟ್ ಬರುವ ಆತ್ಮವಿಶ್ವಾಸವಿತ್ತು‘ ಎನ್ನುತ್ತಾರೆ.
ಪಠ್ಯದ ಜೊತೆ ಪಠ್ಯೇತರಕ್ಕೂ ಪೋಷಕರ ಸಹಕಾರ
‘ನನ್ನ ಪೋಷಕರು ನನಗೆ ಎಲ್ಲಾ ವಿಚಾರಗಳಲ್ಲೂ ತುಂಬಾನೇ ಸಪೋರ್ಟ್ ಮಾಡ್ತಿದ್ರು. ಜನವರಿವರೆಗೂ ನಾನು ಬಾಡ್ಮಿಂಟನ್ ಆಡಲು ಹೋಗ್ತಾ ಇದ್ದೆ. ಆಗ ಅಪ್ಪನೇ ನನ್ನನ್ನು ಕರೆದುಕೊಂಡು ಹೋಗಿ ಕರೆದುಕೊಂಡು ಬರುತ್ತಿದ್ದರು. ಅದಕ್ಕೇನು ರಿಸ್ಟಿಕ್ಷನ್ ಮಾಡಿಲ್ಲ. ಇದರ ಜೊತೆ ಕ್ವಿಜ್ ಕಾಂಪಿಟೇಷನ್ ಅಂತೆಲ್ಲಾ ಹೋಗ್ತಿದೆ. ಅದಕ್ಕೂ ಅವರು ಅಡ್ಡಿ ಮಾಡಿರಲಿಲ್ಲ, ಜೊತೆಗೆ ಇಷ್ಟೇ ಮಾರ್ಕ್ಸ್ ತೆಗಿಬೇಕು ಅಂತೆಲ್ಲ ಅವರು ಯಾವತ್ತೂ ಒತ್ತಡ ಹಾಕಿ ಇರಲಿಲ್ಲ. ನನ್ನ ಪಾಡಿಗೆ ನಾನು ಓದ್ತಾ ಇದ್ದೆ‘ ಎಂದು ಪೋಷಕರ ಬೆಂಬಲವೇ ನನ್ನ ಸಾಧನೆಗೆ ಕಾರಣ ಎನ್ನುತ್ತಾರೆ ಸಹಿಷ್ಣು.
ಶಾಲೆಯಿಂದ ನಾಲ್ಕೈದು ಪ್ರಿಪರೇಟರಿ ಪರೀಕ್ಷೆ
ಶಾಲೆಯಲ್ಲಿ ಎಲ್ಲಾ ಟೀಚರ್ಗಳು ತುಂಬಾ ಸಪೋರ್ಟ್ ಮಾಡ್ತಾ ಇದ್ರು. ಕೊನೆಯ ಒಂದೂವರೆ ತಿಂಗಳಿದ್ದಾಗ ಸಾಕಷ್ಟು ಪ್ರಶ್ನೆಪತ್ರಿಕೆಗಳನ್ನು ಬಿಡಿಸಿದ್ರು. ಇದರಿಂದ ನಮಗೆ ಪರೀಕ್ಷೆಗೆ ಸಿದ್ಧತೆ ಮಾಡಲು ನೆರವಾಗಿತ್ತು. ಶಾಲೆಯಿಂದ ನಾಲ್ಕೈದು ಪ್ರಿಪರೇಟರಿ ಪರೀಕ್ಷೆ ಮಾಡಿಸಿದ್ರು. ಈ ಎಲ್ಲವೂ ಪರೀಕ್ಷೆ ಹೇಗೆ ಇರಬಹುದು, ಯಾವ ರೀತಿ ಪ್ರಶ್ನೆಗಳು ಬರಬಹುದು, ಅದಕ್ಕೆ ನಾವು ಹೇಗೆ ಉತ್ತರ ಬರಿಬೇಕು ಎಂಬುದನ್ನು ತಿಳಿದುಕೊಳ್ಳಲು ಸಹಾಯ ಮಾಡಿದ್ದವು.
ಸಹಿಷ್ಣು ಪರೀಕ್ಷಾ ತಯಾರಿ ಹೀಗಿತ್ತು
ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳನ್ನು ವೆಬ್ಸೈಟ್ನಿಂದ ಹುಡುಕಿ ಡೌನ್ಲೋಡ್ ಮಾಡಿಕೊಂಡು ಬಿಡಿಸಿ, ಪರೀಕ್ಷೆಗೆ ಎರಡು ವಾರ ಇದ್ದಾಗ ಕೀ ಅನ್ಸರ್ ಎಲ್ಲಾ ವಿಮರ್ಶೆ ಮಾಡಿ, ಏನು ಉತ್ತರ ನಿರೀಕ್ಷೆ ಮಾಡಬಹುದು ಎಂಬುದನ್ನೆಲ್ಲಾ ಕಂಡುಕೊಳ್ಳುತ್ತಿದ್ದೆ. ಅದೇ ರೀತಿ ಪ್ರಾಕ್ಟಿಸ್ ಮಾಡಿದ್ದೆ. ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳನ್ನು ಬಿಡಿಸಿದಾಗ ಅವರು ಯಾವ ರೀತಿ ಪ್ರಶ್ನೆ ಕೇಳುತ್ತಿದ್ದಾರೆ, ಅದಕ್ಕೆ ನಾವು ಯಾವ ರೀತಿ ಸಿದ್ಧತೆ ನಡೆಸಬೇಕು ಈ ಎಲ್ಲವೂ ಗೊತ್ತಾಗುತ್ತಿತ್ತು. ಅವರೆಲ್ಲಿ ಪ್ರಶ್ನೆ ಟ್ರಿಕ್ ಮಾಡ್ತಾರೆ, ಸಬ್ಬೆಕ್ಟ್ನ ಯಾವ ಎರಿಯಾದಲ್ಲಿ ಟ್ವಿಸ್ಟ್ ಮಾಡೋಕೆ ಟ್ರೈ ಮಾಡ್ತಾ ಇದಾರೆ ಈ ಎಲ್ಲವೂ ಅರ್ಥವಾಗುತ್ತಿತ್ತು. ಈ ಬಗ್ಗೆ ನಮಗೆ ಒಟ್ಟಾರೆ ಪರೀಕ್ಷೆ ಹೇಗಿರಬಹುದು ಎಂಬ ಐಡಿಯಾ ಸಿಗುತ್ತಿತ್ತು‘ ಎನ್ನುವ ಸಹಿಷ್ಣು ಹಳೆ ಪಶ್ನೆಪತ್ರಿಕೆ ಬಿಡಿಸೋದು ಎಷ್ಟು ಮುಖ್ಯ ಎನ್ನುವುದನ್ನು ತಿಳಿಸುತ್ತಾರೆ.
ಕೊನೆ ಕ್ಷಣದ ತಯಾರಿ
ಪರೀಕ್ಷೆಯ ಹಿಂದಿನ ದಿನ ರಾತ್ರಿ ತನಕ ಓದ್ತಿದ್ದೆ. ಬೆಳಗೆದ್ದು ಟಿವಿಯಲ್ಲಿ ಮ್ಯಾಚ್ ಹೈಲೈಟ್ಸ್ ನೋಡಿ ಪರೀಕ್ಷೆ ಬರಿಯೋಕೆ ಹೋಗ್ತಾ ಇದ್ದೆ. ಒಂದ್ ಸಲ ಓದಿ ಕಾನ್ಫಿಡೆನ್ಸ್ ಇದೆ ಅಂದರೆ ಸುಮ್ಮನೆ ಹೋಗಿ ಪರೀಕ್ಷೆ ಬರಿಬೇಕು. ಮತ್ತೆ ಮತ್ತೆ ಓದಿದ್ರೆ ಗೊಂದಲ ಆಗಬಹುದು. ಕೊನೆ ಕ್ಷಣದಲ್ಲಿ ಓದಿದ್ರೆ ಗೊಂದಲಗಳು ಹೆಚ್ಚಾಗುವ ಸಾಧ್ಯತೆಯೂ ಇದೆ. ಈ ಪ್ರಶ್ನೆಗೆ ಇದೇನಾ ಉತ್ತರ, ಇದಕ್ಕೆ ಬೇರೆ ಉತ್ತರ ಬರಿಬೇಕಾ ಅಂತೆಲ್ಲಾ ಅನುಮಾನ ಶುರುವಾಗುತ್ತೆ. ನಾನು ಪರೀಕ್ಷೆ ಚೆನ್ನಾಗಿ ಮಾಡಿದ್ದೆ, ಎಲ್ಲವನ್ನೂ ಬರೆದಿದ್ದೆ. ಆದರೆ ಎಲ್ಲಾದರೂ ಒಂದು ಕಡೆ ನನ್ನ ಅವಲೋಕನದಲ್ಲಿ ಎಲ್ಲಾದ್ರೂ ಮಿಸ್ ಕಡೆ ತಪ್ಪಾಗಿರಬಹುದು ಅನ್ನಿಸ್ತಾ ಇತ್ತು, ಒಂದೆರಡು ಮಾರ್ಕ್ ಹೋಗಬಹುದು ಅಂದ್ಕೊಂಡಿದ್ದೆ. ಆದರೆ ಆ ರೀತಿ ಆಗಿಲ್ಲ. ಅದೇ ಖುಷಿ‘ ಎಂದು 625ಕ್ಕೆ 625 ಅಂಕ ಗಳಿಸಿದ ಖುಷಿ ಹಂಚಿಕೊಳ್ಳುತ್ತಾರೆ.
ಐಐಟಿ ಸೇರುವ ಕನಸು
ನನಗೆ ಮುಂದೆ ಜೆಇಇ ಅಡ್ವಾನ್ಸ್ ಬರೆದು ಐಐಟಿಯಲ್ಲಿ ಪ್ರವೇಶ ಪಡೆಯಬೇಕು ಅನ್ನೋದು ನನ್ನ ಕನಸು. ಮೊದಲಿನಿಂದಲೂ ನನಗೆ ಐಐಟಿಯಲ್ಲಿ ಸೇರಬೇಕು ಅನ್ನೋದು ಆಸೆ‘ ಎಂದು ಭವಿಷ್ಯದ ಕನಸನ್ನು ಬಿಚ್ಚಿಡುತ್ತಾರೆ.
ನೋ ಟೆನ್ಷನ್, ಪರೀಕ್ಷೆಯ ಕ್ಷಣಗಳು ಹೀಗಿರಲಿ
‘ಪರೀಕ್ಷೆ ಸಮಯದಲ್ಲಿ ಎಷ್ಟೇ ಒತ್ತಡ ಇದ್ರೂ ಒತ್ತಡ ತಗೋಬಾರದು, ಒತ್ತಡ ಕಡಿಮೆ ಮಾಡಿಕೊಳ್ಳಬೇಕು, ಮನಸ್ಸನ್ನು ರಿಲ್ಯಾಕ್ಸ್ ಆಗಿ ಇರಿಸಿಕೊಳ್ಳಬೇಕು. ಪರೀಕ್ಷೆ ಬರೆಯುವ ದಿನ, ಪರೀಕ್ಷೆಯ ಹಿಂದಿನ ದಿನ ಶಾಂತ ಮನಸ್ಸಿನಿಂದ ಇರಬೇಕು. ಒತ್ತಡ ಹೆಚ್ಚಿಸಿಕೊಂಡರೆ ಓದಿದ್ದು ನೆನಪು ಹೋಗಬಹುದು. ಬೋರ್ಡ್ ಎಕ್ಸಾಂಗಳಿಗೆ ಓದಿಕೊಂಡು ಹೋದರೆ ಸಾಲುವುದಿಲ್ಲ. ಪ್ರಶ್ನೆಪತ್ರಿಕೆಗಳನ್ನು ಅನಾಲಿಸಿಸ್ ಮಾಡಬೇಕು. ಕೀ ಅನ್ಸರ್ ನೋಡಬೇಕು. ಪ್ರಶ್ನೆಪತ್ರಿಕೆ ವ್ಯಾಲುವೇಟ್ ಮಾಡುವವರು ಏನು ನಿರೀಕ್ಷೆ ಮಾಡ್ತಾರೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ನಿಮ್ಮ ಟೀಚರ್ ಬಳಿ ಹೋಗಿ ಅವರಿಂದ ಸಲಹೆ ಪಡೆಯಬೇಕು. ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ನೀಟಾಗಿ ಬರೆಯುವುದು ಹೇಗೆ ಇದೆಲ್ಲವೂ ಮುಖ್ಯವಾಗುತ್ತದೆ. ಓದಿ ಏನೋ ಬರೆದು ಬರ್ತಿನಿ ಅನ್ನೋಕೆ ಆಗೊಲ್ಲ‘ ಎಂಬ ಸಲಹೆ ನೀಡುತ್ತಾರೆ.
ಮಗನ ಸಾಧನೆ ಬಗ್ಗೆ ಪೋಷಕರ ಮಾತು
‘ನಮಗೆ ಅವನಿಗೆ 625ಕ್ಕೆ 625 ಅಂಕ ಬರಬಹುದು ಎಂಬ ನಿರೀಕ್ಷೆ ಇತ್ತು, ಅವನು ಸಣ್ಣ ವಯಸ್ಸಿನಿಂದಲೂ ಓದಿನಲ್ಲಿ ಚುರುಕಾಗಿದ್ದ. ನಾನು ಅವನಿಗೆ ಎಸ್ಎಸ್ಎಲ್ಸಿ ಬಂದಾಗ ಹೇಳಿದ್ದೆ. ನಿನ್ನಲ್ಲಿ ಔಟ್ ಆಫ್ ಔಟ್ ತೆಗೆಯುವ ಎಬಿಲಿಟಿ ಇದೆ, ಆದರೆ ನೆಗ್ಲೆಕ್ಟ್ ಮಾಡಬೇಡ, ಸಾಮರ್ಥ್ಯ ಇದೆ ಆದರೆ ನೀನು ಗಮನ ಇಟ್ಟು ಓದಬೇಕು ಎಂದಿದ್ದೆ.ನಾನು ನನ್ನ ಪತ್ನಿ ಇಬ್ಬರೂ ಶಿಕ್ಷಕರಾಗಿರುವ ಕಾರಣ ನಾನು ಅವನಿಗೆ ಜಾಸ್ತಿ ಪುಸ್ತಕಗಳನ್ನು ಓದಲು ಸಲಹೆ ನೀಡಿದ್ದೆ. ಮ್ಯಾಥ್ಸ್ ಕೂಡ ಪುಸ್ತಕ ಓದು ಅಂತ ಸಲಹೆ ನೀಡಿದ್ದೆ. ಮಕ್ಕಳಲ್ಲಿ ಆಳವಾದ ಓದಿನ ಗುಣ ಬೆಳೆದಾಗ ಪ್ರಶ್ನೆ ಯಾವುದಾದ್ರೂ ಪ್ರಶ್ನೆ ಕೇಳಲಿ, ಯಾವುದೇ ವಿಧದಲ್ಲಿ ಪ್ರಶ್ನೆ ಕೇಳಿದ್ರು ಮಕ್ಕಳು ಸರಿಯಾಗಿ ಉತ್ತರ ಹೇಳಲು ಸಾಧ್ಯ. ಯಾವುದೇ ವಿಷಯದ ಬಗ್ಗೆ ಆಳವಾಗಿ ತಿಳಿದುಕೊಂಡಿದ್ದಾಗ ಮಾತ್ರ ಸರಿಯಾದ ಉತ್ತರ ಬರೆಯಲು ಸಾಧ್ಯ. ಇಲ್ಲಾ ಎಂದರೆ ಗೊಂದಲಗಳು ಶುರುವಾಗುತ್ತವೆ. ಓದಿನ ಆಳ ಜಾಸ್ತಿ ಇದ್ದಾಗ ನಿಖರತೆ ಸಾಧ್ಯ‘ ಎಂದು ಮಗನ ಸಾಧನೆಯ ಹೆಮ್ಮೆಯ ಜೊತೆ ಆತ್ಮವಿಶ್ವಾಸವೂ ಇತ್ತು ಎಂದು ಹೇಳುತ್ತಾರೆ ತಂದೆ ನಾಗರಾಜ್.
‘ಮಗನ ಸಾಧನೆ ಬಗ್ಗೆ ತುಂಬಾ ಖುಷಿ ಆಗ್ತಿದೆ. ಪ್ರತಿ ಪೋಷಕರು ತಮ್ಮ ಮಕ್ಕಳು ವಿದ್ಯಾಭ್ಯಾಸದಲ್ಲಿ ಮುಂದುವರಿಬೇಕು ಹೆಚ್ಚು ಸಾಧನೆ ಮಾಡಬೇಕು ಅಂತ ಬಯಸುತ್ತಾರೆ. ಅದು ಈಗ ಈಡೇರಿದೆ. ನಾವಿಬ್ಬರೂ ಶಿಕ್ಷಕರಾಗಿರುವುದರಿಂದ ಎಲ್ಲೋ ಒಂದು ಕಡೆ ನಮ್ಮ ಮಾರ್ಗದರ್ಶನ ಸರಿ ಇದೆ, ಮುಂದೆ ಶಾಲೆಯಲ್ಲಿ ನಾವು ಕಲಿಸುವ ಮಕ್ಕಳಿಗೂ ಅನ್ವಯಿಸಬಹುದು ಎನ್ನುವ ಭರವಸೆ ಮೂಡಿರುತ್ತೆ‘ ಎನ್ನುತ್ತಾರೆ ಅವರು.