ಪುನೀತ್ರಾಜ್ಕುಮಾರ್ ನನ್ನ ಹೆಮ್ಮೆಯ ನಟ, ವೈದ್ಯಳಾಗಿ ಅವರಂತೆಯೇ ಜನರ ಸೇವೆ ಮಾಡುವೆ: ಎಸ್ಎಸ್ಎಲ್ಸಿ ಟಾಪರ್ ಭಾವನಾ ಮನದಾಳ
ಎಸ್ಎಸ್ಎಲ್ಸಿ ಪರೀಕ್ಷೆ2025 ಟಾಪರ್ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕು ವಿಜಯಪುರದ ಭಾವನಾಗೆ ವೈದ್ಯಳಾಗುವ ಆಸೆ. ಪುನೀತ್ ರಾಜಕುಮಾರ್ ರೀತಿ ಸಹಾಯ ಮಾಡುವ ಮನಸು.

ಬೆಂಗಳೂರು: ನನಗೆ ಪವರ್ಸ್ಟಾರ್ ಪುನೀತ್ ರಾಜಕುಮಾರ್ ಎಂದರೆ ಬಲು ಇಷ್ಟ. ಅವರು ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುತ್ತಿದ್ದ ರೀತಿಯೇ ಯಾವಾಗಲೂ ಇಷ್ಟವಾಗುತ್ತಿತ್ತು. ಅವರಂತೆಯೇ ನಾನು ಮುಂದೆ ಚೆನ್ನಾಗಿ ಓದಿ ಕೆಲಸಕ್ಕೆ ಸೇರಿಕೊಂಡು ದುಡಿದು ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕು ಎನ್ನುವ ಸಂಕಲ್ಪ ಮಾಡಿಕೊಂಡೆ. ಅದೇ ಗುರಿಯೊಂದಿಗೆ ಓದಿ ಎಸ್ಎಸ್ಎಲ್ಸಿಯಲ್ಲಿ ಟಾಪರ್ ಆಗಿದ್ದೇನೆ. ಮನೆಯಲ್ಲಿ ಕಷ್ಟವಿದ್ದರೂ ನನ್ನ ಛಲ ಎಂದಿಗೂ ಕಡಿಮೆಯಾಗೋಲ್ಲ. ಮುಂದೆಯೂ ಹೀಗೆ ಓದುತ್ತೇನೆ. ವೈದ್ಯಳಾಗಬೇಕು ಎನ್ನುವ ಆಸೆಯಿದೆ. ಇದಕ್ಕಾಗಿ ತಯಾರಿಯನ್ನು ಶುರು ಮಾಡಿಕೊಳ್ಳುತ್ತೇನೆ. ಕಷ್ಟಪಟ್ಟು ಓದುವ ಜತೆಗೆ ನಿಗದಿತ ಗುರಿ ಇಟ್ಟುಕೊಂಡು ಓದಿದರೆ ಖಂಡಿತಾ ಯಶಸ್ಸು ಸಾಧಿಸಬಹುದು. ಎಲ್ಲಿಯೂ ಗುರಿ ತಪ್ಪಬಾರದಷ್ಟೇ.
ಇದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ವಿಜಯಪುರ ಪಟ್ಟಣದ ವಿದ್ಯಾರ್ಥಿನಿ, ಈ ಬಾರಿ ಎಸ್ಎಸ್ಎಲ್ಸಿಯಲ್ಲಿ ಟಾಪರ್ ಎನ್ನಿಸಿರುವ ಭಾವನಾ ವಿಶ್ವಾಸದ ನುಡಿ. ವಿಜಯಪುರದಲ್ಲಿಯೇ ವಿದ್ಯುತ್ ಮಗ್ಗದೊಂದಿಗೆ ಬದುಕು ಸಾಗಿಸಿ ಇಬ್ಬರ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿರುವ ತಂದೆ ಚಂದ್ರು, ಗೃಹಿಣಿಯಾಗಿರುವ ತಾಯಿ ಮಾಲಾ ಅವರ ಪುತ್ರಿ ಭಾವನಾ ಓದಿನಲ್ಲಿ ಸದಾ ಮುಂದೆ. ವಿಜಯಪುರ ನೀಲಗಿರೀಶ್ವರ ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿನಿ. ಅಲ್ಲಿಯೇ ಪ್ರಾಥಮಿಕ ಹಂತದಿಂದ ಶಿಕ್ಷಣ ಪಡೆದು ಐದನೇ ತರಗತಿಯಿಂದಲೂ ಶಾಲೆಗೆ ಟಾಪರ್ ಎನ್ನಿಸಿದವಳು. ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆಗೆ ಬರೀ ತನ್ನ ಶಾಲೆಗೆ ಟಾಪರ್ ಆಗಿಲ್ಲ. ಬೆಂಗಳೂರು ಗ್ರಾಮಾಂತರ ಜಿಲ್ಲೆಯೊಂದಿಗೆ ಕರ್ನಾಟಕದ ಟಾಪರ್ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾಳೆ ಭಾವನಾ.
ಶಾಲೆಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಆರಂಭದಿಂದಲೂ ಶಿಕ್ಷಕರು ಯೋಜಿತ ತಯಾರಿ ಮಾಡಿದರು ಬೆಳಿಗ್ಗೆ ಬೇಗನೇ ವಿಶೇಷ ತರಗತಿ ಆರಂಭವಾದೋದು. ಸಂಜೆ ಬಹಳ ಹೊತ್ತಿನವರೆಗೂ ತರಗತಿಗಳು ಇರುತ್ತಿದ್ದವು. ವಿಷಯವನ್ನು ಮನದಟ್ಟು ಮಾಡಿಸುತ್ತಿದ್ದರು. ವಿಷಯ ನಿಮಗೆ ಅರ್ಥವಾದರೆ ಮುಂದೆ ಯಾವುದೇ ಪರೀಕ್ಷೆಯನ್ನು ಎದುರಿಸಿಬಲ್ಲಿರಿ ಎಂದು ಶಿಕ್ಷಕರು ಆತ್ಮವಿಶ್ವಾಸ ತುಂಬೋರು. ಯೂನಿಟ್ ಟೆಸ್ಟ್ ನಡೆಸೋರು. ಹಬ್ಬದ ದಿನವೂ ತರಗತಿಗಳನ್ನು ತೆಗೆದುಕೊಳ್ಳೋರು. ಶಿಕ್ಷಕರ ವಿಶೇಷ ಆಸಕ್ತಿಯಿಂದ ನಮಗೆ ಯಾವುದೂ ಕಷ್ಟ ಎನ್ನಿಸಲಿಲ್ಲ. ಇದರಿಂದಲೇ ಪರೀಕ್ಷೆಯಲ್ಲೂ ಟಾಪರ್ ಆಗಲು ಸಹಕಾರಿಯೂ ಆಯಿತು ಎನ್ನುವುದು ಭಾವನಾ ನುಡಿ.
ಮೊಬೈಲ್ ಅನ್ನು ನಾನು ಅಗತ್ಯದಷ್ಟು ಮಾತ್ರ ಬಳಕೆ ಮಾಡುತ್ತಿದ್ದೆ. ವಾಟ್ಸ್ ಅಪ್ ಮೂಲಕವು ಬಂದ ಮಾಹಿತಿ ಇಂತಿಷ್ಟು ಸಮಯದೊಳಗೆ ನೋಡಿಕೊಳ್ಳುತ್ತಿದ್ದೆ. ಗೂಗಲ್ ಸಹವಾಸಕ್ಕೆ ಹೋಗಲಿಲ್ಲ. ಶಾಲೆಯಲ್ಲಿ ಹೇಳಿಕೊಟ್ಟ ಪಾಠ, ಪಠ್ಯಗಳ ಮರು ಓದು, ಹಳೆಯ ಪ್ರಶ್ನೆ ಪತ್ರಿಕೆಗಳನ್ನು ನಿರಂತರವಾಗಿ ಬಿಡಿಸಿದ್ದು ಖಂಡಿತ ಸಹಕಾರಿಯಾಯಿತು. ಯಾವುದೇ ಪರೀಕ್ಷೆಗೆ ಸಮಯ ಹೊಂದಾಣಿಕೆಯೇ ಸವಾಲು. ಅದನ್ನು ಗೆದ್ದರೆ ಪರೀಕ್ಷೆ ಗೆಲ್ಲಬಹುದು ಎನ್ನುವುದು ಭಾವನಾ ಸಲಹೆ.
ಈ ಬಾರಿ ಎಸ್ಎಸ್ಎಲ್ಸಿ ಪ್ರಶ್ನೆ ಪತ್ರಿಕೆಗಳು ಹೇಗೆ ಬರಬಹುದೋ ಎನ್ನುವ ಆತಂಕವಂತೂ ಇತ್ತು. ತಯಾರಿ ಮಾಡಿದ್ದರಿಂದ ನೋಡಿದರಾಯಿತು. ಹೇಗೆ ಗೊಂದಲ ಮೂಡಿಸುವಂತೆ ಪ್ರಶ್ನೆ ಕೇಳಿದರೂ ಉತ್ತರ ಗೊತ್ತಿದ್ದರೆ ಸಾಕು ಎಂದುಕೊಂಡು ಮಾನಸಿಕವಾಗಿ ಸಿದ್ದಳಾಗಿದ್ದೆ. ಒಂದೆರಡು ಪ್ರಶ್ನೆಗಳು ಪ್ರತಿ ವಿಷಯದಲ್ಲೂ ಟ್ವಿಸ್ಟ್ ಬಂದರೂ ಉತ್ತರ ಮಾತ್ರ ನಾನು ನಿಖರವಾಗಿ ನೀಡಿದ್ದೆ. ಎರಡು ಮೂರು ಅಂಕ ಕಡಿಮೆಯಾಗಬಹುದು ಎಂದುಕೊಂಡಿದ್ದೆ. ಆದರೆ ಕೊಟ್ಟ ಉತ್ತರವೆಲ್ಲ ಸರಿಯಾಗಿ ಟಾಪರ್ ಎನ್ನಿಸಿದ್ದು ಖುಷಿಯ ಕ್ಷಣಎಲ್ಲಾ ವಿಷಯಗಳ ಪ್ರಶ್ನೆಗಳನ್ನು ಮುಗಿಸುವಾಗ ಸಮಯ ಸಾಕಾಗಲಿಲ್ಲ ಎನ್ನಿಸಿತ್ತು. ಆದರೆ ಕನ್ನಡ ವಿಷಯದಲ್ಲಿ ಹದಿನೈದು ನಿಮಿಷ ಮೊದಲೇ ಉತ್ತರ ಮುಗಿದು ಸಮಯ ಉಳಿದಿತ್ತು ಎಂದು ಭಾವನಾ ಹೇಳಿಕೊಂಡಳು.
ನನಗೆ ಕ್ರಿಕೆಟ್ ಇಷ್ಟ. ಐಪಿಎಲ್ ಮ್ಯಾಚ್ಗಳನ್ನು ಒಂದಷ್ಟು ಸಮಯ ನೋಡುವೆ. ಅದೇ ರೀತಿ ಕಬ್ಬಡ್ಡಿ ಎಂದರೂ ಇಷ್ಟ. ಸಿನೆಮಾವನ್ನು ಆಗಾಗ ನೋಡುವೆ. ಎಸ್ಎಸ್ಎಲ್ಸಿ ಪರೀಕ್ಷೆ ವೇಳೆಯೂ ಬಿಡುವು ಸಿಕ್ಕಾಗ ಕ್ರಿಕೆಟ್ ನೋಡಿದ್ದುಂಟು. ಕನ್ನಡದ ನಟ ಪುನೀತ್ ರಾಜಕುಮಾರ್ ಎಂದರೆ ನನಗೆ ಇಷ್ಟ. ಅವರ ಸರಳತನ, ನಡೆ, ನುಡಿ, ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುತ್ತಿದ್ದುದು ಇಷ್ಟವಾಗುವ ಗುಣಗಳು. ನಾನೂ ಮುಂದೆ ಎಂಬಿಬಿಎಸ್ ಮಾಡುವ ಮಹದಾಸೆ ಹೊಂದಿರುವೆ. ಪುನೀತ್ ಅವರಂತೆಯೇ ಜನರಿಗೆ ಸಹಾಯ ಮಾಡುವೆ ಎನ್ನುವುದು ಭಾವನಾ ನುಡಿ.
ನಿಜಕ್ಕೂ ಅವರದ್ದು ಬಡತನದ ಕುಟುಂಬ. ವಿಕಲಚೇತನರಾಗಿದ್ದರೂ ಬದುಕಿನ ಬಂಡಿಯನ್ನು ನಡೆಸುತ್ತಿರುವ ಚಂದ್ರು ಅವರಿಗೆ ಅನೂಚಾನವಾಗಿ ಬಂದಿರುವ ಮಗ್ಗವೇ ಆಸರೆ. ಈಗ ವಿದ್ಯುತ್ ಮಗ್ಗದೊಂದಿಗೆ ಜೀವನ ಕಂಡುಕೊಂಡಿದ್ದಾರೆ. ಆದರೆ ಮಕ್ಕಳನ್ನು ಓದಿಸಬೇಕು ಎನ್ನುವ ಅವರ ಹಂಬಲ, ಇದಕ್ಕೆ ಪೂರಕ ಎನ್ನುವಂತೆ ಮಗಳು ಭಾವನಾ ಟಾಪರ್ ಆಗಿ ಹೊರ ಹೊಮ್ಮಿದ್ದು ಹೆಮ್ಮೆಯ ವಿಚಾರವೇ.ನಮ್ಮ ಶಾಲೆಗೂ ಹೆಮ್ಮೆ ಎಂದು ವಿಜಯಪುರ ನೀಲಗಿರೀಶ್ವರ ವಿದ್ಯಾನಿಕೇತನ ಶಾಲೆಯ ಮುಖ್ಯ ಶಿಕ್ಷಕ ಎಚ್.ಎಸ್.ಸೋಮಶೇಖರ್ ಹೇಳುತ್ತಾರೆ.