ಎಸ್ಎಸ್ಎಲ್ಸಿ ಟಾಪರ್ ವಿಜಯಪುರ ಜಿಲ್ಲೆಯ ಅಖಿಲ್ ಅಹ್ಮದ್ ನದಾಫ್ಗೆ ಐಐಟಿ ಸೇರುವ ಕನಸು, ಯಶ್ ಕೆಜಿಎಫ್ ಸಿನೆಮಾ ಅಂದ್ರೆ ಬಲು ಇಷ್ಟ
ಎಸ್ಎಸ್ಎಲ್ಸಿ ಪರೀಕ್ಷೆ2025 ಟಾಪರ್ ಆಗಿ ಹೊರ ಹೊಮ್ಮಿದ ವಿಜಯಪುರ ಜಿಲ್ಲೆ ಮುದ್ದೆಬಿಹಾಳ ತಾಲ್ಲೂಕಿನ ಅಖಿಲ್ ಅಹ್ಮದ್ ನದಾಫ್ನ ಮನದಾಳ ಹೀಗಿದೆ.

ವಿಜಯಪುರ: ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶಾಲೆಗೆ ಟಾಪರ್ ಆಗಬಹುದು ಎಂದುಕೊಂಡಿದ್ದೆ. ಆದರೆ ವಿಜಯಪುರ ಜಿಲ್ಲೆಯಲ್ಲದೇ ಕರ್ನಾಟಕ ರಾಜ್ಯಕ್ಕೂ ಟಾಪರ್ ಆಗುತ್ತೇನೆ ಎಂದುಕೊಂಡಿರಲಿಲ್ಲ. ನಾಲ್ಕೈದು ಅಂಕ ಕಡಿಮೆ ಬರಬಹುದು ಎನ್ನುವ ನಿರೀಕ್ಷೆಯಿತ್ತು. ಆದರೆ ಫಲಿತಾಂಶ ಬಂದ ದಿನ ಟಾಪರ್ ಪಟ್ಟಿಯಲ್ಲಿ ನನ್ನ ಹೆಸರೇ ಮೊದಲು ಇರುವುದು ನಿಜಕ್ಕೂ ನಂಬಲಾಗಲಿಲ್ಲ. ಪಟ್ಟಿಯಲ್ಲಿ ಹೆಸರು ಕಂಡು ಖುಷಿಯಾಯಿತು. ಯೋಜನೆ ಮಾಡಿಕೊಂಡು ಓದಿದರೆ, ಸಮಯದ ಲೆಕ್ಕಾಚಾರ ಹಾಕದರೆ ಶ್ರಮ ಹಾಕಿದರೆ ಯಾವುದಲ್ಲಾದರೂ ಯಶಸ್ಸು ಖಂಡಿತ ಎನ್ನುವುದು ನನ್ನ ಅರಿವಿಗೆ ಬಂತು. ಪರಿಶ್ರಮ ಹಾಕಿ ಓದಿದ್ದು ನಿಜಕ್ಕೂ ಸಾರ್ಥಕ ಎನ್ನಿಸಿತು. ನಿಗದಿತ ಸಮಯದಲ್ಲಿ ಓದು, ವಾರದಲ್ಲಿ ಒಂದು ಬಿಡುವಿನ ದಿನದಲ್ಲಿ ಕ್ರಿಕೆಟ್ ಆಟ, ಯಶ್ ಅವರ ಕೆಜಿಎಫ್ ಚಿತ್ರ ನನ್ನ ಒತ್ತಡ ನಿವಾರಣೆ ಮಾಡಿತು. ಮುಂದೆ ಐಐಟಿಯಲ್ಲಿ ಶಿಕ್ಷಣ ಪಡೆಯುವ ಹಂಬಲ ಹೊಂದಿದ್ದೇನೆ.ಅದಕ್ಕೂ ತಯಾರಿ ಮಾಡಿ ಸಾಧಿಸಿಯೇ ತೀರುತ್ತೇನೆ.
ಇದು ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದಿರುವ ಗ್ರಾಮೀಣ ಪ್ರತಿಭೆ, ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕಿನ ನಾಗರಬೆಟ್ಟ ಆಕ್ಸ್ಫರ್ಡ್ಶಾಲೆಯ ವಿದ್ಯಾರ್ಥಿ ಅಖಿಲ್ ಅಹ್ಮದ್ ನದಾಫ್ನ ಆತ್ಮವಿಶ್ವಾಸದ ನುಡಿ. ಕುಟುಂಬದ ಹಿನ್ನೆಲೆ, ಶಿಕ್ಷಣದ ಹಾದಿ, ಎಸ್ಎಸ್ಎಲ್ಸಿ ಪರೀಕ್ಷೆ ತಯಾರಿ, ಟಾಪರ್ ಆಗುವ ಹಿಂದಿರುವ ಕಾರಣಗಳ ಸಹಿತ ತಮ್ಮ ಶೈಕ್ಷಣಿಕ ಯಾನವನ್ನು ಅಖಿಲ್ ಅಹ್ಮದ್ ನದಾಫ್ ಹಿಂದೂಸ್ತಾನ್ ಟೈಂಸ್ ಕನ್ನಡದೊಂದಿಗೆ ಹಂಚಿಕೊಂಡಿದ್ದು ಹೀಗೆ.
ನಮ್ಮ ಮನೆಯಲ್ಲಿ ಅಪ್ಪ ಅಮ್ಮ ಇಬ್ಬರೂ ಶಿಕ್ಷಕರೇ. ಅಪ್ಪ ನಸೀರ್ ಆಲಿ ಪಿಂಜಾರ್ ಪ್ರೌಢಶಾಲೆ ಶಿಕ್ಷಕರು. ಅಮ್ಮ ಶಾಹೀನಾ ಬೇಗಂ ಪ್ರಾಥಮಿಕ ಶಾಲೆ ಶಿಕ್ಷಕರು. ಇದರಿಂದ ಮನೆಯಲ್ಲಿ ಮೊದಲಿನಿಂದಲೂ ಓದಿನ ವಾತಾವರಣವಿದೆ. ಮುದ್ದೆಬಿಹಾಳದಲ್ಲೇ ಓದುತ್ತಿದ್ದೆ. ನವೋದಯದಲ್ಲಿ ಅವಕಾಶ ಸಿಕ್ಕು ಆಲಮಟ್ಟಿಯಲ್ಲೂ ಮೂರು ವರ್ಷ ವ್ಯಾಸಂಗ ಮಾಡಿದೆ. ಆನಂತರ ಆಕ್ಸ್ಫರ್ಡ್ ಶಾಲೆಗೆ ಒಂಬತ್ತನೇ ತರಗತಿಗೆ ಸೇರಿಕೊಂಡೆ. ಬೆಳಿಗ್ಗೆ 6ಕ್ಕೆ ಶಾಲೆಗೆ ಹೊರಟರೆ ಮನೆಗೆ ಬರುವುದು ರಾತ್ರಿ 9 ಗಂಟೆ ಆಗೋದು. ಅಲ್ಲಿಯೇ ತರಗತಿ ಜತೆಗೆ ಬೆಳಿಗ್ಗೆ ಹಾಗೂ ಸಂಜೆ ವಿಶೇಷ ತರಗತಿಗಳು ಇರೋವು. ಸಾಕಷ್ಟು ಪೂರ್ವಭಾವಿ ಪರೀಕ್ಷೆಗಳನ್ನು ನಡಸೋರು. ನಮಗೆ ಏನೇ ಅನುಮಾನ ಬಂದರೂ ಬಗೆಹರಿಸೋರು. ಇದರಿಂದ ಎಲ್ಲಿಯೂ ಗೊಂದಲ ಆಗಲೇ ಇಲ್ಲ. ವಿಷಯವನ್ನು ಮನದಟ್ಟು ಮಾಡಿಸಿ ಅದರ ಕುರಿತಾಗಿ ಶಿಕ್ಷಕರು ತಿಳಿಸಿಕೊಡೋರು. ಇದರಿಂದ ವರ್ಷವಿಡೀ ಒಂದು ಕ್ಷಣವನ್ನೂ ಅನಗತ್ಯ ಕಳೆಯದೇ ವ್ಯವಸ್ಥಿತ ಓದಿಗೆ ಇದು ಸಾಧ್ಯವಾಯಿತು.
ಮನೆಗೆ ಬಂದೋನು ಊಟ ಮಾಡಿ ಬೇಗ ಮಲಗಿ ಬಿಡುತ್ತಿದ್ದೆ. ಭಾನುವಾರ ಅರ್ಧದಿನ ಮಾತ್ರ ರಜಾ ಇರೋದು. ಮಧ್ಯಾಹ್ನ ನಿದ್ದೆ ಮಾಡಿ ಸಂಜೆ ಸ್ನೇಹಿತರೊಂದಿಗೆ ತಪ್ಪದೇ ಕ್ರಿಕೆಟ್ ಆಡುತ್ತಿದ್ದೆ. ನಾನು ಅಷ್ಟಾಗಿ ಸಿನೆಮಾ ಅಭಿಮಾನಿಯಲ್ಲ. ಆದರೆ ಕೆಜಿಎಫ್ ಚಿತ್ರ ಮಾತ್ರ ಸ್ನೇಹಿತರೊಂದಿಗೆ ನೋಡಿದ್ದು ಇಷ್ಟವಾಗಿತ್ತು. ಮೊದಲಿನಿಂದಲೂ ಮೊಬೈಲ್ ಅನ್ನು ಮಿತವಾಗಿ ಬಳಕೆ ಮಾಡುತ್ತಿದ್ದೆ. ಶಿಕ್ಷಕರು ಹೇಳಿಕೊಟ್ಟ ನಂತರವೂ ಏನಾದರೂ ಗೊಂದಲವಾದರೆ ಇಲ್ಲವಾದರೆ ಅನುಮಾನ ಬಗೆಹರಿಸಿಕೊಳ್ಳಲು ಗೂಗಲ್ ಬಳಸಿಕೊಂಡಿದ್ದೂ ಇದೆ. ಎಲ್ಲವನ್ನೂ ಅಗತ್ಯಕ್ಕೆ ತಕ್ಕನಾಗಿ ಬಳಸಿದೆ,
ವಿಷಯದ ಜತೆಯಲ್ಲಿ ಪರೀಕ್ಷೆಗೂ ತಯಾರಿ ಮಾಡಿಸೋರು. ಎಲ್ಲಾ ವಿಷಯದಲ್ಲೂ ಪರೀಕ್ಷೆಗಳು ನಿಯಮಿತವಾಗಿ ನಡೆಯೋವು. ಈ ಬಾರಿ ಪರೀಕ್ಷೆ ವೇಳೆಯೂ ಪ್ರಶ್ನೆ ಪತ್ರಿಕೆಗಳು ಸರಳವಾಗಿಯೇ ಇದ್ದವು. ನಾನಂತೂ ಅತ್ಮವಿಶ್ವಾಸದಿಂದಲೇ ಪರೀಕ್ಷೆ ಎದುರಿಸಿದ್ದೆ. ಇಂಗ್ಲೀಷ್ ಮಾಧ್ಯಮವಾದರೂ ನನ್ನದು ಮೊದಲ ಭಾಷೆ ಕನ್ನಡ. ಗಣಿತ, ಇಂಗ್ಲೀಷ್, ವಿಜ್ಞಾನ ವಿಷಯಗಳ ಪ್ರಶ್ನೆಗಳೂ ಸುಲಭವಾಗಿದ್ದವು. ಪರೀಕ್ಷೆ ಮುಗಿಸಿ ಬಂದು ನಾಲ್ಕೈದು ಅಂಕ ಕಡಿಮೆ ಬರಬಹುದು ಬಿಟ್ಟರೆ ಅತ್ಯುತ್ತಮ ಶ್ರೇಣಿಯಲ್ಲೇ ತೇರ್ಗಡೆಯಾಗುವ ವಿಶ್ವಾಸವನ್ನು ಪೋಷಕರ ಬಳಿ ವ್ಯಕ್ತಪಡಿಸಿದ್ದೆ. ಆದರೆ ಟಾಪರ್ ಆಗಿದ್ದು ಖುಷಿ ನೀಡಿತು.
ನನಗೆ ವೈದ್ಯಕೀಯ ಶಿಕ್ಷಣದಲ್ಲಿ ಆಸಕ್ತಿ ಇಲ್ಲ. ಎಂಜಿನಿಯರಿಂಗ್ ಇಲ್ಲವೇ ಐಐಟಿಯಲ್ಲಿ ಶಿಕ್ಷಣ ಪಡೆಯುವ ಆಸಕ್ತಿಯಿದೆ. ನನ್ನ ಓದನ್ನು ರೂಪಿಸಿದವರೇ ತಂದೆ ಹಾಗೂ ತಾಯಿ. ಅವರ ಮಾರ್ಗದರ್ಶನ, ಶಾಲಾ ಶಿಕ್ಷಕರ ಸಹಕಾರದಿಂದ ಈ ಸಾಧನೆ ಸಾಧ್ಯವಾಗಿದ್ದು ಮುಂದೆಯೂ ನನ್ನ ಗುರಿಯನ್ನು ಮುಟ್ಟುವ ಅಚಲ ನಂಬಿಕೆ ಇದೆ ಎನ್ನುವುದು ನದಾಫ್ ನುಡಿ.