ನಿದ್ದೆಗೆಟ್ಟು ಓದಿಲ್ಲ, ಟ್ಯೂಷನ್ಗೂ ಹೋಗಿಲ್ಲ, ಆಟ ಬಿಟ್ಟಿಲ್ಲ; ಎಸ್ಎಸ್ಎಲ್ಸಿ ಟಾಪರ್ ನಂದನ್ ಕಲಿಕಾ ಕ್ರಮವೇ ಡಿಫರೆಂಟ್
ಎಸ್ಎಸ್ಎಲ್ಸಿ ಟಾಪರ್ ಸಂದರ್ಶನ: ಚಿತ್ರದುರ್ಗದ ಹಿರಿಯೂರು ಬಳಿಯ ರಾಷ್ಟ್ರೀಯ ಅಕಾಡೆಮಿ ಇಂಗ್ಲಿಷ್ ಮೀಡಿಯಾಂ ಹೈಸ್ಕೂಲ್ ವಿದ್ಯಾರ್ಥಿ ಈ ಬಾರಿಯ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಕರ್ನಾಟಕಕ್ಕೆ ಟಾಪರ್ ಆಗಿದ್ದಾರೆ. ನಂದನ್ ಎಚ್ಒ ಕಲಿಕಾ ಕ್ರಮವೇ ವಿಭಿನ್ನ ಮತ್ತು ಸ್ಪೂರ್ತಿದಾಯಕ . ಇವರು ನಿದ್ದೆಗೆಟ್ಟು ಓದಿಲ್ಲ, ಟ್ಯೂಷನ್ಗೂ ಹೋಗಿಲ್ಲ, ಆಟ ಬಿಟ್ಟಿಲ್ಲ...

ಎಸ್ಎಸ್ಎಲ್ಸಿ ಟಾಪರ್ ಸಂದರ್ಶನ: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಟಾಪರ್ ಆಗಬೇಕಿದ್ರೆ ಊಟನಿದ್ರೆ ಬಿಟ್ಟು ಹಗಲು ರಾತ್ರಿ ಎನ್ನದೆ ನಿರಂತರವಾಗಿ ಓದಬೇಕೆಂದು ಸಾಕಷ್ಟು ಜನರು ಹೇಳುತ್ತಿರಬಹುದು. ಆದರೆ, ಕರ್ನಾಟಕ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಟಾಪರ್ ಆಗಿರುವ ಚಿತ್ರದುರ್ಗದ ನಂದನ್ ಎಚ್ಒ ಕಲಿಕಾ ಕ್ರಮವೇ ವಿಭಿನ್ನ ಮತ್ತು ಸ್ಪೂರ್ತಿದಾಯಕ. ಹಿಂದೂಸ್ತಾನ್ ಟೈಮ್ಸ್ ಕನ್ನಡ ನಡೆಸಿದ ಸಂದರ್ಶನದಲ್ಲಿ ನಂದನ್ ಎಚ್ಒ ತನ್ನ ಎಸ್ಎಸ್ಎಲ್ಸಿ ಸಾಧನೆಯ ಕುರಿತು ಮಾತನಾಡಿದ್ದಾರೆ. ಇವರು ಚಿತ್ರದುರ್ಗದ ಹಿರಿಯೂರು ಬಳಿಯ ರಾಷ್ಟ್ರೀಯ ಅಕಾಡೆಮಿ ಇಂಗ್ಲಿಷ್ ಮೀಡಿಯಾಂ ಹೈಸ್ಕೂಲ್ ವಿದ್ಯಾರ್ಥಿ.
ಕಾನ್ಸೆಪ್ಟ್ ಅರ್ಥ ಮಾಡಿಕೊಳ್ಳಲು ಆದ್ಯತೆ
"ವೇಳಾಪಟ್ಟಿ ಅಂತ ಏನೂ ಇರಲಿಲ್ಲ. ನಮಗೆ ಡೈಲಿ ಟೆಸ್ಟ್ ಇರುತ್ತಿತ್ತು. ಅದಕ್ಕೆ ಸಿದ್ಧತೆ ನಡೆಸುತ್ತಿದ್ದೇವು. ಕಾನ್ಸೆಪ್ಟ್ ಮೇಲೆ ಹೆಚ್ಚು ಫೋಕಸ್ ಮಾಡುತ್ತಿದ್ದೇವು. ಎಷ್ಟು ಗಂಟೆ ಓದಿದ್ದೇವು ಎನ್ನುವುದಕ್ಕಿಂತ ಒಂದೊಂದು ಕಾನ್ಸೆಪ್ಟ್ ಅರ್ಥ ಮಾಡಿಕೊಳ್ಳಲು ಆದ್ಯತೆ ನೀಡುತ್ತಿದ್ದೇವು. ಒಂದು ಕಾನ್ಸೆಪ್ಟ್ ಕ್ಲಿಯರ್ ಆದ ಬಳಿಕ ಮುಂದಕ್ಕೆ ಹೋಗುತ್ತಿದ್ದೇವು. ಗಂಟೆಗಟ್ಟಲೆ ಕಳೆದರೂ ಕಾನ್ಸೆಪ್ಟ್ ಕ್ಲಿಯರ್ ಆಗಿಲ್ಲ ಅಂದ್ರೆ ನಾನು ಅರ್ಧ ಗಂಟೆ ಓದೋದು, ಆಮೇಲೆ ಹತ್ತು ನಿಮಿಷ ಬ್ರೇಕ್ ತೆಗೆದುಕೊಳ್ಳುವುದು, ಆಮೇಲೆ ಸ್ವಲ್ಪ ಓದುವುದು ಹೀಗೆ ಮಾಡುತ್ತಿದ್ದೆ. ಮಧ್ಯೆ ಮಧ್ಯೆ ಬ್ರೇಕ್ ಇದ್ದಾಗ ಓದಿದ್ದನ್ನು ರಿವೈಸ್ ಮಾಡುತ್ತಿದ್ದೆ." ಎಂದು ನಂದನ್ ಹೇಳಿದ್ದಾರೆ.
"ನಾನು ಎಸ್ಎಸ್ಎಲ್ಸಿ ಮಾತ್ರವಲ್ಲ, ಯಾವುದೇ ಎಕ್ಸಾಂಗೂ ಅರ್ಧ ಗಂಟೆ ಓದುವುದು, ಬ್ರೇಕ್ ತೆಗೆದುಕೊಳ್ಳುವುದು... ಹೀಗೆ ಓದುತ್ತಿದ್ದೆ. ಇಷ್ಟು ಚಾಪ್ಟರ್ ಇಷ್ಟೇ ದಿನಕ್ಕೆ ಮುಗಿಯಬೇಕು ಎಂದು ಹಠದಲ್ಲಿ ಓದುತ್ತಾ ಇರಲಿಲ್ಲ. ನಾನು ಯಾವುದಾದರೂ ಒಂದು ಸಬ್ಜೆಕ್ಟ್ ಓದಿದರೆ, ಅದೇ ರೀತಿಯ ಕಾನ್ಸೆಪ್ಟ್ ಇರುವ ಬೇರೆ ಚಾಪ್ಟರ್ಗೂ ಅದನ್ನು ಲಿಂಕ್ ಮಾಡುತ್ತಾ ಓದುತ್ತಿದ್ದೆ. ಸೋಷಿಯಲ್, ಲಿಟರೇಚರ್, ಹಿಸ್ಟರಿ... ಒಂದಕ್ಕೊಂದು ಕನೆಕ್ಟ್ ಮಾಡುತ್ತಾ ಅರ್ಥ ಮಾಡಿಕೊಳ್ಳುತ್ತಿದ್ದೆ" ಎಂದನು.
ಸಂಕ್ಷಿಪ್ತ ರೂಪದಲ್ಲಿ ನೆನಪಿಟ್ಟುಕೊಳ್ಳುತ್ತಿದ್ದೆ
"ಲಾಂಗ್ ಲಾಂಗ್ ವಿಷಯಗಳನ್ನು ಓದಲು ಅಕ್ರೋನಿಯಮ್ಸ್ (ಸಂಕ್ಷಿಪ್ತ ರೂಪಗಳು) ಬಳಸುತ್ತಾ ಇದ್ದೆ. ನಾನು ಪರ್ಸನಲ್ ಅದನ್ನು ಬಳಸುತ್ತಿದ್ದೆ. ಉದಾಹರಣೆಗೆ ಹತ್ತು ಪಾಯಿಂಟ್ಗಳು ಇದೆ ಎಂದಾದ್ರೆ ಎಲ್ಲಾ ವಾಕ್ಯಗಳ ಮೊದಲ ಅಕ್ಷರಗಳನ್ನು ತೆಗೆದುಕೊಂಡು ಒಂದು ಸೆಂಟೆನ್ಸ್ ಮಾಡುತ್ತಿದ್ದೆ. ಪರೀಕ್ಷೆಯಲ್ಲಿ ಆ ಸೆಂಟೆನ್ಸ್ ನೆನಪು ಬಂದರೆ ಆ ಹತ್ತು ಪಾಯಿಂಟ್ಗಳು ನೆನಪಿಗೆ ಬರುತ್ತಿದ್ದವು" ಎಂದು ನಂದನ್ ಹೇಳಿದ್ದಾನೆ.
ನಿದ್ದೆಗೆಟ್ಟು ಓದುವ ಅಭ್ಯಾಸವಿಲ್ಲ
"ಈ ರೀತಿ ಟಾಪರ್ ಆಗಲು ಬೆಳಗ್ಗೆ ನಾಲ್ಕು ಗಂಟೆಗೆ ಎದ್ದೇಳೋದು, ರಾತ್ರಿ ಹನ್ನೊಂದು ಹನ್ನೆರಡು ಗಂಟೆ ತನಕ ಓದುವುದು... ಹೀಗೆ ಶೆಡ್ಯೂಲ್ ಹಾಕಿಕೊಂಡು ಓದುತ್ತಿದ್ದೇಯಾ ಎಂಬ ಪ್ರಶ್ನೆಗೆ ನಂದನ್ ಜೋರಾಗಿ ನಗುತ್ತ ಹೀಗೆ ಉತ್ತರಿಸಿದ್ದಾನೆ. "ಅಷ್ಟೆಲ್ಲ ಬೇಗ ಎದ್ದಾಳ್ತಾ ಇರಲಿಲ್ಲ. ಎಂಟು ಗಂಟೆಗೆ ಸ್ಕೂಲ್ ಇದ್ರೆ, ಏಳು ಆರು ಗಂಟೆಗೆಲ್ಲ ಎದ್ದೇಳ್ತಾ ಇದ್ದೆ. ಪ್ರತಿದಿನ ರಾತ್ರಿ ಸ್ವಲ್ಪ ಓದಿ ಮಲಗುತ್ತಿದ್ದೆ. ನಿದ್ದೆ ಬಿಟ್ಟು ಓದುತ್ತಿರಲಿಲ್ಲ." ಎಂದು ನಂದನ್ ಹೇಳಿದ್ದಾನೆ.
"ನಾನು ಸ್ಟ್ರಿಕ್ಟ್ ಆಗಿ ಇಷ್ಟು ಗಂಟೆಗೆ ಎದ್ದೇಳಬೇಕು, ರಾತ್ರಿ ಇಷ್ಟರ ತನಕ ಓದಬೇಕು ಎಂದು ಓದಿಲ್ಲ. ನಾನು ಸಾಯಂಕಾಲ ಆಡಲು ಹೋಗುತ್ತಿದ್ದೆ. ಫ್ರೆಂಡ್ಸ್ ಜತೆ ಹೋಗುತ್ತಿದ್ದೆ. ಸಂಡೆ ಬಂತೆಂದ್ರೆ ಬೆಳಗ್ಗೆ ಫುಟ್ಬಾಲ್ ಆಡಲು ಹೋಗುತ್ತಿದ್ದೆ" ಎಂದು ನಂದನ್ ಹೇಳಿದ್ದಾನೆ. ಎಲ್ಲಾ ವಿಷಯಗಳನ್ನೂ ಸರಿಯಾಗಿ ಅರ್ಥ ಮಾಡಿಕೊಂಡಿದ್ದರೆ ನಿರ್ದಿಷ್ಟ ಓದುವ ಶೆಡ್ಯೂಲ್ ಇಲ್ಲದೆ ಇದ್ದರೂ, ನಿದ್ದೆಗೆಟ್ಟು ಓದದೆ ಇದ್ದರೂ ಯಶಸ್ಸು ಪಡೆಯಬಹುದೆಂದು ನಂದನ್ ಹೇಳಿದ್ದಾನೆ.
ಟ್ಯೂಷನ್ಗೂ ಹೋಗಿಲ್ಲ
"ಎಸ್ಎಸ್ಎಲ್ಸಿಯಲ್ಲಿ ಟ್ಯೂಷನ್ಗೆ ಹೋಗಿಲ್ಲ. ಗೊತ್ತಾಗದ ವಿಚಾರಗಳು ಇದ್ದರೆ ಟೀಚರ್ಸ್ ಬಳಿ ಕೇಳಿ ಬಗೆಹರಿಸಿಕೊಳ್ಳುತ್ತಿದ್ದೆ. ಸ್ಪೆಷಲ್ ಕ್ಲಾಸ್ಗಳು ನಡೆದಿವೆ. ಎಂಟನೇ ತರಗತಿಯಲ್ಲಿ ಟ್ಯೂಷನ್ಗೆ ಹೋಗಿದ್ದೆ. ಎಸ್ಎಸ್ಎಲ್ಸಿಯಲ್ಲಿ ಅದರ ಅಗತ್ಯ ಬಿದ್ದಿಲ್ಲ. ಟೀಚರ್ಸ್ ನಮಗೆ ಡೈಲಿ ಟೆಸ್ಟ್ ಮಾಡಿದ ಬಳಿಕ ಕೇರ್ಫುಲ್ ಆಗಿ ಕರೆಕ್ಷನ್ ಮಾಡುತ್ತಿದ್ರು. ಪ್ರತಿಯೊಂದು ಪ್ರಶ್ನೆಗೂ ಸರಿಯಾಗಿ ಕರೆಕ್ಷನ್ ಹಾಕುತ್ತಿದ್ದರು, ಈ ರೀತಿ ಉತ್ತರ ಬರೆಯಬೇಕೆಂದು ವಿವರಿಸುತ್ತಿದ್ದರು" ಎಂದು ನಂದನ್ ತನ್ನ ಯಶಸ್ಸಿನ ಗುಟ್ಟು ತಿಳಿಸಿದ್ದಾನೆ.
"ತುಂಬಾ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಸ್ಟಡಿ ಮಾಡಿಲ್ಲ. ಒಂದೆರಡು ವರ್ಷದ್ದು ಮಾತ್ರ ಸ್ಟಡಿ ಮಾಡಿದ್ದೇನೆ. ತುಂಬಾ ಹಳೆಯದ್ದನ್ನು ಸ್ಟಡಿ ಮಾಡುವುದು ಅರ್ಥವಿಲ್ಲ, ಏಕೆಂದರೆ ಈಗ ಸಾಕಷ್ಟು ಬದಲಾವಣೆಯಾಗಿರುತ್ತದೆ. ಸರಕಾರ ಈ ವರ್ಷ ಬಿಡುಗಡೆ ಮಾಡಿದ ಮಾದರಿ ಪ್ರಶ್ನೆ ಪತ್ರಿಕೆ ಸ್ಟಡಿ ಮಾಡಿದ್ದೆ. ಮಿಡ್ ಟರ್ಮ್ ಎರಡು ಬಾರಿ ಪ್ರಿಪರೇಟರಿ ಪರೀಕ್ಷೆ ಬರೆಸಿದ್ದಾರೆ. ನಾವು ಡೈಲಿ ಟೆಸ್ಟ್ ಇರುತ್ತಿತ್ತು" ಎಂದರು.
ಲಾಸ್ಟ್ ಮಿನಿಟ್ ಎಕ್ಸಾಂ ಪ್ರಿಪರೇಷನ್ ಹೇಗಿರುತ್ತಿತ್ತು? ಎಂಬ ಪ್ರಶ್ನೆಗೆ ನಂದನ್ ಉತ್ತರ ಹೀಗಿತ್ತು. "ಎಕ್ಸಾಂಗೆ ಹೋಗ್ತಾ ಇದ್ದೀನಿ ಅಂದ್ರೆ ಪುಸ್ತಕವನ್ನೇ ಮುಟ್ಟುತ್ತಿರಲಿಲ್ಲ. ಒಂದು ಒಂದೂವರೆ ಗಂಟೆ ಮುಂಚೆನೇ ಎಕ್ಸಾಂ ಸೆಂಟರ್ಗೆ ಹೋಗುತ್ತಿದ್ದೆ. ಅಲ್ಲಿ ಫ್ರೆಂಡ್ಸ್ ಜತೆ ಕಾಲ ಕಳೆಯುತ್ತಿದ್ದೆ. ಅಲ್ಲಿ ಎಲ್ಲಾದರೂ ಸ್ನೇಹಿತರು ಯಾರಾದರೂ ಸಂದೇಹ ಕೇಳಿದ್ರೆ ನನಗೆ ಗೊತ್ತಿರುವುದನ್ನು ಅವರಿಗೆ ಹೇಳುತ್ತಿದ್ದೆ. ನನಗೆ ಡೌಟ್ ಬಂದ್ರೆ ಅವರಲ್ಲಿ ಕೇಳುತ್ತಿದ್ದೆ.ಮುಂದೆ ನಾನು ಏರೋನಾಟಿಕಲ್ ಎಂಜಿನಿಯರ್ ಆಗಬೇಕೆಂದಿದ್ದೇನೆ. ಅದಕ್ಕೆ ಸಂಬಂಧಪಟ್ಟದ್ದನ್ನು ಓದಿ ಆ ಕನಸು ಈಡೇರಿಸಿಕೊಳ್ಳುವೆ. "
ಅಂದಹಾಗೆ ನಂದನ್ಗೆ ಮೌಲ್ಯ ಎಚ್.ಒ. ಮತ್ತು ಚಿತ್ತಾರ ಎಚ್ಒ ಎಂಬ ಸಹೋದರಿಯರಿದ್ದಾರೆ. ಇವರಿಬ್ಬರು ಎಂಬಿಬಿಎಸ್ ಓದುತ್ತಿದ್ದಾರೆ. ತನ್ನ ಯಶಸ್ಸಿನ ಹಿಂದೆ ತಂದೆ ಓಂಕಾರೇಶ್ವರ ಎಚ್ಪಿ ಮತ್ತು ತಾಯಿ ಕೆಂಚಮ್ಮ ಡಿಆರ್ ಪಾತ್ರವೂ ಸಾಕಷ್ಟಿದೆ ಎಂದು ನಂದನ್ ಹೇಳಿದ್ದಾರೆ.